Wednesday, December 9, 2020

ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರು ಗ್ರಾ.ಪಂ. ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ಸಿಂಗಮನೆ ಗ್ರಾಮ ಪಂಚಾಯಿತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಡಾ. ಎಂ.ಎಲ್ ವೈಶಾಲಿ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಎಲ್ ವೈಶಾಲಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಡಿ. ೯: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮತದಾರರು ಗಂಭೀರವಾಗಿ ಪರಿಗಣಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎಲ್ ವೈಶಾಲಿ ಮನವಿ ಮಾಡಿದರು.
  ಅವರು ಬುಧವಾರ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ೧೮ ವರ್ಷ ತುಂಬಿದ ಪ್ರತಿಯೊಬ್ಬರು ತಮ್ಮ ಮತದಾನ ಹಕ್ಕನ್ನು ಪಡೆದುಕೊಳ್ಳಬೇಕು. ಮತದಾನದಲ್ಲಿ ಯುವ ಸಮುದಾಯ ಹೆಚ್ಚಾಗಿ ಪಾಲ್ಗೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಚುನಾವಣಾ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಲಿದ್ದಾರೆಂದು ಭರವಸೆ ನೀಡಿದರು.
   ಕುವೆಂಪು ವಿಶ್ವವಿದ್ಯಾನಿಲಯದ ಉಪ ಕುಲಪತಿ ವೀರಭದ್ರಪ್ಪ, ರಿಜಿಸ್ಟ್ರಾರ್ ಎಸ್.ಎಸ್ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್,  ಸಿಂಗನಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚೌಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ


ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಭದ್ರಾವತಿ, ಡಿ. ೯: ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಕಾರ್ತಿಕ ದೀಪೋತ್ಸವದ ಅಂಗವಾಗಿ ಕಲಾದುರ್ಗ ಹೋಮ ಹಮ್ಮಿಕೊಳ್ಳಲಾಗಿತ್ತು.
   ಅಮ್ಮನವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೀಪೋತ್ಸವ ನಡೆಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಯುವ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಬಜರಂಗದಳ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ ಹಾಗು ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ

ಸಿ.ಎಸ್ ಷಡಾಕ್ಷರಿ ಹೆಸರಿನಲ್ಲೇ ಎರಡು ಬಣಗಳ ನಡುವೆ ಪೈಪೋಟಿ


ಭದ್ರಾವತಿ, ಡಿ. ೯: ಯಾವುದೇ ಚುನಾವಣೆಗೆ ಕಡಿಮೆ ಇಲ್ಲದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸಹ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಹಾಗು ಪರಿಶೀಲನೆ ಬುಧವಾರ ನಡೆದಿದ್ದು, ಒಟ್ಟು ೪೦ ನಾಮಪತ್ರಗಳು ಸಲ್ಲಿಕೆಯಾಗಿವೆ.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೆಸರಿನಲ್ಲಿ ಎರಡು ಬಣಗಳು ಪೈಪೋಟಿಗೆ ಮುಂದಾಗಿವೆ. ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ) ಹಾಗು ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
    ತಾಲೂಕು ಸಂಘದ ಒಟ್ಟು ೧೮ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಡಿ.೧೫ರಂದು ನಡೆಯುತ್ತಿದ್ದು, ಈ ಪೈಕಿ ೬ ಸ್ಥಾನಗಳನ್ನು ಮಹಿಳಾ ಶಿಕ್ಷಕಿಯರಿಗೆ ಮೀಸಲಿಡಲಾಗಿದೆ. ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗದಿಂದ ಯು. ಮಹಾದೇವಪ್ಪ, ಎಂ.ಎಸ್ ಮಲ್ಲಿಕಾರ್ಜುನ, ಬಸವಂತರಾವ್ ದಾಳೆ, ಜಬ್ಬಾರ್‌ಖಾನ್, ಮುಕ್ತಿಯಾರ ಅಹಮದ್, ರಾಜಾನಾಯಕ್, ಜಿ.ಎಚ್ ವೇಣುಗೋಪಾಲ್, ಎಂ.ಆರ್ ರೇವಣಪ್ಪ, ಎಸ್.ಎನ್ ರವಿ, ಎ.ಎಸ್ ಜೈಕುಮಾರ್, ಕೆ.ವಿ ತಿಪ್ಪೇಸ್ವಾಮಿ, ಎಚ್.ಎಂ ಜಗದೀಶ್, ಮರ್ಸಿಲಿನ್ ಲೀನಾ ಡಿಮೆಲ್ಲೋ, ಫರೀದುನ್ನೀಸಾ, ಎಂ. ರುದ್ರಮ್ಮ, ಎನ್. ಜ್ಯೋತಿ, ಎಚ್.ಎಸ್ ಸುಮಾ ಮತ್ತು ಜಿ.ಎಸ್ ಜ್ಯೋತಿ ಕಣದಲ್ಲಿದ್ದಾರೆ.
    ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗದಿಂದ ಎಂ.ಎಸ್ ಬಸವರಾಜ್, ಜೆ. ಮೋಹಿದ್ದೀನ್ ಸಾಬ್, ಕೆ.ಆರ್ ಅಶೋಕ್, ಎಸ್.ಕೆ ಮೋಹನ್, ವೈ.ಎನ್ ಶ್ರೀಧರಗೌಡ, ಟಿ. ಪೃಥ್ವಿರಾಜ್, ಪಿ. ಭರತ್‌ಕುಮಾರ್, ಎಂ.ಸಿ ಆನಂದ್, ಎಸ್. ಹನುಮಂತಪ್ಪ, ಕೆ.ಎನ್ ರವಿಕುಮಾರ್, ಎಸ್.ಪಿ ರಾಜು, ಕೆ. ಬದಿಯನಾಯ್ಕ, ಕೆ.ಎಂ ಶಾರದಮ್ಮ, ಸುಮತಿ ಕಾರಂತ್, ಎಸ್. ಚೈತ್ರ, ಎಚ್.ಎಸ್ ಮಾಯಮ್ಮ ಅಸ್ಮಾ ಬೇಗಂ ಮತ್ತು ಎಸ್.ಎಸ್ ಸುರ್ಮಲ ಕಣದಲ್ಲಿದ್ದಾರೆ.
    ಈ ಬಣದ ಎಂ.ಎಸ್ ಬಸವರಾಜ್‌ರವರು ೩ ಬಾರಿ ಆಯ್ಕೆಯಾಗಿ ಸಂಘದ ಅಧ್ಯಕ್ಷರಾಗಿದ್ದು, ೪ನೇ ಬಾರಿಗೆ ಸ್ಪರ್ಧಿಸಿದ್ದಾರೆ.  ಉಳಿದಂತೆ ೪ ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಘದ ಚುನಾವಣೆ ಸುಮಾರು ೧ ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಅದರೆ ಚುನಾವಣಾ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದ ಕಾರಣ ತಡೆ ನೀಡಲಾಗಿತ್ತು.

ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಗೆ ಶಶಿಕುಮಾರ್ ಎಸ್ ಗೌಡ ಸ್ಪರ್ಧೆ

ಶಶಿಕುಮಾರ್ ಎಸ್ ಗೌಡ
ಭದ್ರಾವತಿ, ಡಿ. ೯: ೩ ಬಾರಿ ಲೋಕಸಭಾ ಚುನಾವಣೆ ಹಾಗು ೧ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದ ನಗರದ ನಿವಾಸಿ ಜನತಾದಳ(ಸಂಯುಕ್ತ) ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಇದೀಗ ಒಕ್ಕಲಿಗರ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ೩ ಮತ್ತು ೪ನೇ ಸ್ಥಾನ ಕಾಯ್ದುಕೊಂಡಿದ್ದರು. ಹಲವು ವಿಭಿನ್ನ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಕ್ಕಲಿಗ ಸಮಾಜದ ಮುಖಂಡರಾಗಿ ಶಶಿಕುಮಾರ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಡಿ.೧೦ರಂದು ಹುತ್ತಾಕಾಲೋನಿಯಲ್ಲಿರುವ ಒಕ್ಕಲಿಗರ ಸಂಘದ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.