Thursday, January 14, 2021

ರಾಷ್ಟ್ರೀಯ ಖೋ ಖೋ ತರಬೇತಿ ಶಿಬಿರಕ್ಕೆ ಎ. ಮುನಿರ್ ಬಾಷಾ ಆಯ್ಕೆ

ಎ. ಮುನಿರ್ ಬಾಷಾ
ಭದ್ರಾವತಿ, ಜ. ೧೪:  ಪರಿಣತಿ ಹೊಂದಿದ ಪರಿಣಾಮಕಾರಿ ತಂಡ ರೂಪಿಸುವ ನಿಟ್ಟಿನಲ್ಲಿ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ಜ.೧೭ ರಿಂದ ಫೆ.೧೬ರ ವರೆಗೆ ದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಖೋ ಖೋ ತರಬೇತಿ ಶಿಬಿರಕ್ಕೆ ನಗರಕ್ಕೆ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಎ. ಮುನಿರ್ ಬಾಷಾ ಆಯ್ಕೆಯಾಗಿದ್ದಾರೆ.
    ಕರ್ನಾಟಕ ರಾಜ್ಯದಿಂದ ಒಟ್ಟು ೭ ಜನರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಮುನಿರ್ ಬಾಷಾ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಮುನಿರ್ ಬಾಷಾರವರು ಈ ಹಿಂದೆ ೨೦೧೬ರಲ್ಲಿ ನಡೆದ ೧೨ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ಭಾರತ ತಂಡದ ಉಪನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ೨೦೧೯ರಲ್ಲಿ ನಡೆದ ೧೩ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಶ್ರೀಲಂಕ ವಿರುದ್ಧ ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪುನಃ ತಂಡದಲ್ಲಿ ಸ್ಥಾನ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ಎರಡು ದಿನ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ

ಭದ್ರಾವತಿ, ಜ. ೧೪: ಕಳೆದ ಸುಮಾರು ೧೨ ವರ್ಷಗಳಿಂದ ಸಿಎ ತರಬೇತಿಯಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗ ಅಕಾಡೆಮಿ ಇದೀಗ ಬ್ಯಾಂಕಿಂಗ್, ರೈಲ್ವೆ, ಎಲ್‌ಐಸಿ ಮತ್ತು ಜಿಐಸಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲು ಮುಂದಾಗಿದೆ. ಆಕಾಡೆಮಿ ವತಿಯಿಂದ ಜ.೧೭ ಮತ್ತು ೧೮ ಎರಡು ದಿನ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಮಥುರಾ ಪ್ಯಾರಡೈಸ್ ಸಮೀಪದ ವಾತ್ಸಲ್ಯ ಆಸ್ಪತ್ರೆ ಬಳಿ ಇರುವ ಆಕಾಡೆಮಿಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಫೆ.೧ರಿಂದ ತರಬೇತಿಗಳು ಆರಂಭಗೊಳ್ಳಲಿವೆ. ಈಗಾಗಲೇ ನೊಂದಾಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರದ ನಿವಾಸಿ ಜೆಡಿಯು ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ಹಾಗು ಸುಬ್ರಮಣ್ಯ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೯೩೮೦೬೮೫೬೩೫ ಅಥವಾ ೯೩೪೨೪೪೨೩೦೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.