ಮಂಗಳವಾರ, ಜುಲೈ 22, 2025

ವೇತನ ಪರಿಷ್ಕರಣೆ ಯಥಾಸ್ಥಿತಿ ಮುಂದುವರೆಸಲು ಒತ್ತಾಯಿಸಿ ಪ್ರತಿಭಟನೆ

ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾವತಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಹಾರುದ್ರ ಮಾತನಾಡಿ,  ಮಾರ್ಚ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಹೊಸ ಪಿಂಚಣಿ ಹಾಗೂ ಹಳೇ ಪಿಂಚಣಿ  ಪರಿಷ್ಕರಣೆ ಮಾಡುವ ವಿಷಯ ಮಂಡಿಸಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಆರ್ಥಿಕ ಬಿಲ್ ಮಂಡಿಸುವಾಗ ೦೧.೦೪.೨೦೨೬ಕ್ಕೆ ಮೊದಲು ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿ ಭತ್ಯೆ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ನಿವೃತ್ತ ನೌಕರರಿಗೆ ಅಘಾತ ಉಂಟುಮಾಡಿದೆ.  ಅಲ್ಲದೆ ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಅವಧಿಯಲ್ಲಿ ನೌಕರಿಯನ್ನೇ ನಂಬಿ ಬಂದವರು. ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ಪ್ರ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸಿರುತ್ತೇವೆ. ಕರ್ತವ್ಯದ ಅವಧಿಯಲ್ಲಿ ಕರ್ತವ್ಯವೇ ದೇವರೆಂದು ನಂಬಿ ಜೀವವನ್ನು ಮುಡುಪಾಗಿಟ್ಟಿದ್ದೇವೆ.  ನಿವೃತ್ತಿಯಾದ ಮೇಲೆ ಬರುವ ಪಿಂಚಣಿಯನ್ನು ನಂಬಿ ಇಳಿವಯಸ್ಸಿನಲ್ಲಿ ಬದುಕು ಕಟ್ಟಿಕೊಂಡವರು. ಇಂತಹ ಹಿರಿಯ ಜೀವಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೀವನೋಪಾಯಕ್ಕೆ ಬೇಕಾದ ಸೌಲತ್ತುಗಳನ್ನು ಕೊಡುವ ಬದಲು ಕತ್ತರಿ ಹಾಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ತಹಸೀಲ್ದಾರ್-ಗ್ರೇಡ್-೨ ಮಂಜಾನಾಯ್ಕರವರ ಮೂಲಕ  ಮನವಿ ಸಲ್ಲಿಸಿಲಾಯಿತು. 
    ಸಂಘದ ಅಧ್ಯಕ್ಷ ಬಿ.ಎಲ್.ರಂಗಸ್ವಾಮಿ ಪ್ರಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಟಿ.ಜಿ ಚಂದ್ರಪ್ಪ, ಶಿವಲಿಂಗಪ್ಪ, ಚಂದ್ರಶೇಖರ ಚಕ್ರಸಾಲಿ, ಕಾಂತಪ್ಪ, ಸಿ. ಜಯಪ್ಪ, ಬಲರಾಮಗಿರಿ, ಶಿವೇಗೌಡ, ಚಿದಾನಂದ, ರಂಗಸ್ವಾಮಿ, ರಾಧಾಕೃಷ್ಣ ಭಟ್, ಮೋಹನ್‌ಕುಮಾರ್, ತಿಪ್ಪಮ್ಮ, ಸರೋಜಮ್ಮ ಸೇರಿದಂತೆ ನಿವೃತ್ತ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. 

ಅನನ್ಯ ಎಜ್ಯುಕೇಷನ್ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ

ಭದ್ರಾವತಿ ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ನೇತ್ರ ತಜ್ಞ ಡಾ. ಅರುಣ್ ನೇತೃತ್ವದಲ್ಲಿ  ನಡೆದ ಶಿಬಿರದಲ್ಲಿ ೩ ರಿಂದ ೧೦ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ನಡೆಸುವ ಜೊತೆಗೆ ಕಣ್ಣಿನ ದೃಷ್ಠಿ ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರನ್ನು ಕರೆಸಿ ಅವರಿಗೆ ಅವರ ಮಕ್ಕಳ ಕಣ್ಣಿನ ದೃಷ್ಠಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. 
    ಡಾ.ಅರುಣ್ ಮಾತನಾಡಿ, ಒಳ್ಳೆಯ ಆಹಾರ ಸ್ವೀಕರಿಸುವುದರಿಂದ ಕಣ್ಣಿನ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮಿತಿಮೀರಿದ ಮೊಬೈಲ್ ವೀಕ್ಷಣೆಯು ನಮ್ಮ ಕಣ್ಣಿಗೆ ಸಮಸ್ಯೆಯುಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ಮೊಬೈಲ್ ವೀಕ್ಷಣೆ ನಿರ್ಧಿಷ್ಟ ಸಮಯಕ್ಕೆ ಮಾತ್ರ ಮೀಸಲಿರಿಸಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. 
    ಅನನ್ಯ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರಾಧಿಕಾ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.  
    ಆಡಳಿತಾಧಿಕಾರಿ ವೇಣುಗೋಪಾಲ್, ಮುಖ್ಯ ಶಿಕ್ಷಕ ಕೆ. ಕಲ್ಲೇಶ್ ಕುಮಾರ್, ಉಪ ಮುಖ್ಯೋಪಾಧ್ಯಾಯಿನಿ ಆರ್. ಸುನಿತಾ, ಅನನ್ಯ ಹ್ಯಾಪಿ ಹಾರ್ಟ್‌ನ ಮುಖ್ಯ ಶಿಕ್ಷಕಿ ತನುಜ ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜು.೨೭ರಂದು ಸಂಗ್ಯಾ-ಬಾಳ್ಯಾ ನಾಟಕ ಪ್ರದರ್ಶನ

    ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ವತಿಯಿಂದ ಸಂಘದ ಸಹಾಯಾರ್ಥ ನಾಟಕ ಪ್ರದರ್ಶನ ಜು.೨೭ರ ಭಾನುವಾರ ಸಂಜೆ ೬ ಗಂಟೆಗೆ ನ್ಯೂಟೌನ್ ಶಾರದ ಮಂದಿರದಲ್ಲಿ ಆಯೋಜಿಸಲಾಗಿದೆ. 
    ರಂಗಕರ್ಮಿ, ಕಿರುತೆರೆ, ಚಲನಚಿತ್ರ ನಟ ಅಪರಂಜಿ ಶಿವರಾಜ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರ ಜಾನಪದ ನಾಟಕ `ಸಂಗ್ಯಾ ಬಾಳ್ಯಾ' ಪ್ರದರ್ಶನಗೊಳ್ಳಲಿದೆ. ಸಂಗ್ಯಾ-ಜೆ. ಭಾನುಪ್ರಕಾಶ್, ಬಾಳ್ಯಾ-ಎ.ಜಿ ಫ್ರಾನ್ಸಿಸ್, ಮೇಟಿತಾಳ-ವಿ. ಹಿರೇಮಠ್, ಈರ್‍ಯಾರಗಳೆ-ಭಾನುಪ್ರಕಾಶ್ ಬಾಬು, ಇರಪಕ್ಷಿ-ಎಸ್.ದೀಪಕ್, ಬಸವಂತ-ಬಿ.ಎಸ್ ಮಲ್ಲಿಕಾರ್ಜುನ್, ಮಾರವಾಡಿ-ಶಿವಮಹಾದೇವ, ಪೋಸ್ಟ್‌ಮ್ಯಾನ್-ಎಂ.ಎ ಬೆನಕೇಗೌಡ, ಬ್ಯಾಗರಿ-ಎಂ.ಕೆ ರಾಘವೇಂದ್ರ, ಆಳು-ಜಗದೀಶ್ವರಚಾರಿ, ಗಂಗಾ-ಪ್ರಿಯಾ ನಾಗರಾಜ್, ಪರಮ್ಮ-ಎಸ್. ಸರೋಜಮ್ಮ ಹಾಗು ಮಾಸ್ಟರ್ ಪ್ರತೀಕ್ ಡಿ. ಪ್ರಾತಧಾರಿಗಳಾಗಿದ್ದಾರೆ. 
    ಬಿ.ಕೆ ಮೋಹನ್ ಕುಮಾರ್ ಮತ್ತು ಡಿ.ಆರ್ ಹರೀಶ್-ಸಂಗೀತ, ಜಗದೀಶ್ವರಚಾರಿ-ಬೆಳಕು, ಎಂ.ಕೆ ರಾಘವೇಂದ್ರ ಮತ್ತು ವಿ. ಹಿರೇಮಠ್-ಅಲಂಕಾರ, ಮೇಳ-ಜಿ. ದಿವಾಕರ, ವಿ.ಎ ಮಾರ್ಟಿನ್, ಕೆ.ಕೆ ಸಾಯಿಕೃಷ್ಣ, ಜಿ.ಆರ್ ಭಾರ್ಗವಿ, ಸಿ.ಎಚ್ ಪುಷ್ಪಲತಾ ಮತ್ತು ಎಚ್.ಆರ್ ಸುಧಾ ಕಾರ್ಯ ನಿರ್ವಹಿಸಲಿದ್ದಾರೆ.  
    ಶಾಸಕ ಬಿ.ಕೆ ಸಂಗಮೇಶ್ವರ್ ನಾಟಕ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಕ ಬಿ.ಎಲ್ ಚಂದ್ವಾನಿ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್. ಉಮೇಶ್, ನವೋದಯ ಕಲಾ ಸಂಘದ ಅಧ್ಯಕ್ಷ ಡಾ. ಜಿ.ಎಂ ನಟರಾಜ್, ಸಮಾಜ ಸೇವಕ ಪೊಲೀಸ್ ಉಮೇಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಿತ್ರ ಕಲಾ ಮಂಡಳಿ ಕೋರಿದೆ.