Monday, August 3, 2020

ಪುನಃ ೨೯ ಸೋಂಕು ಪತ್ತೆ : ಉಕ್ಕಿನ ನಗರದಲ್ಲಿ ಹೆಚ್ಚಿದ ಆತಂಕ

ಭದ್ರಾವತಿ, ಆ. ೩: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಹೆಚ್ಚಳವಾಗಿದ್ದು, ಸೋಮವಾರ ೨೯ ಪ್ರಕರಣಗಳು ಪತ್ತೆಯಾಗಿವೆ. 
ಭಾನುವಾರ ಒಂದೇ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ನಗರಸಭೆ ವ್ಯಾಪ್ತಿಯಲ್ಲಿ ೧೯ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ೧೦ ಪ್ರಕರಣಗಳು ಪತ್ತೆಯಾಗಿವೆ.
ನಗರಸಭೆ ವ್ಯಾಪ್ತಿಯ ಗಣೇಶ್ ಕಾಲೋನಿಯ ಒಂದೇ ಕುಟುಂಬದ ೪೦ ಹಾಗೂ ೬೬ ವರ್ಷದ ಇಬ್ಬರು ಪುರುಷರು ಮತ್ತು ೬೦ ವರ್ಷದ ಮಹಿಳೆ ಸೇರಿ ೩ ಮಂದಿಗೆ, ಗಾಂಧಿನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ, ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಬ್ಬರಿಗೆ ಹಾಗೂ ಹೊಸಮನೆ ಶಿವಾಜಿ ಸರ್ಕಲ್ ಬಳಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ, ಸಿದ್ಧರೂಢ ನಗರದಲ್ಲಿ ಒಬ್ಬ ವ್ಯಕ್ತಿಗೆ, ಶಂಕರ ಮಠ ಬಳಿ ವ್ಯಕ್ತಿಯೊಬ್ಬರಿಗೆ,  ಬಿ.ಎಚ್ ರಸ್ತೆ ೭ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರಿಗೆ, ಹೊಸಮನೆ ಭಾಗದಲ್ಲಿ ಸೇಂಟ್ ಮೇರಿಸ್ ಶಾಲೆ ಬಳಿ ೭೪ ವರ್ಷದ ವೃದ್ಧನಿಗೆ, ಹೊಸಮನೆ ಚಾನಲ್ ಬಳಿ ಯುವಕನೊಬ್ಬನಿಗೆ ಹಾಗೂ ವಿಜಯನಗರದಲ್ಲಿ ೨೬ ವರ್ಷದ ಯುವಕನಿಗೆ, ಹುತ್ತಾಕಾಲೋನಿ ಒಕ್ಕಲಿಗರ ಸಮುದಾಯ ಭವನದ ಬಳಿ ೩೩ ವರ್ಷದ ವ್ಯಕ್ತಿಗೆ, ವೇಲೂರು ಶೆಡ್‌ನಲ್ಲಿ ೫೫ ವರ್ಷದ ಮಹಿಳೆ ಹಾಗೂ ೨೩ ವರ್ಷದ ಯುವತಿಗೆ, ವಿಶ್ವೇಶ್ವರಾಯ ನಗರದಲ್ಲಿ ೨೯ ವರ್ಷದ ಪುರುಷನಿಗೆ, ಎಂಎಂ ಕಾಂಪೌಂಡ್‌ನಲ್ಲಿ ೪೨ ವರ್ಷದ ವ್ಯಕ್ತಿಗೆ ಹಾಗೂ ಕಬಳಿಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹಾಗೂ ಹಳೇನಗರದ ಬ್ರಾಹ್ಮಣರ ಬೀದಿಯಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ.   
ಉಳಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಅರಳಿಹಳ್ಳಿ ಗ್ರಾಮದಲ್ಲಿ ೬೬ ವರ್ಷದ ವ್ಯಕ್ತಿಗೆ, ಆನವೇರಿ ಶ್ರೀನಿವಾಸಪುರದಲ್ಲಿ ೩೦ ವರ್ಷದ ಪುರುಷನಿಗೆ, ಆಗರದಹಳ್ಳಿಯಲ್ಲಿ ೨೩, ೨೪ ಮತ್ತು ೪೭ ವರ್ಷದ ೩ ಮಂದಿ ಪುರುಷರಿಗೆ, ಬಂಡಿಗುಡ್ಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಮತ್ತು ದೇವರನರಸೀಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. 
ಬ್ಯಾಂಕ್ ಸಿಬ್ಬಂದಿಗೆ ಸೋಂಕು : ೨ ದಿನ ಬಂದ್ 
ನಗರದ ಬಿ.ಎಚ್ ರಸ್ತೆ ಸೌತ್ ಇಂಡಿಯನ್ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ೨ ದಿನ ಮಂಗಳವಾರ ಮತ್ತು ಬುಧವಾರ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಮುನ್ನಚ್ಚರಿಕೆ ಕ್ರಮವಾಗಿ ಬ್ಯಾಂಕ್‌ನಲ್ಲಿ ಸ್ಯಾನಿಟೈಜರ್ ಕೈಗೊಳ್ಳಲಾಗಿದೆ.   
ಸೋಂಕಿತ ತಿರುಗಾಟ : ಸ್ಥಳೀಯರಲ್ಲಿ ಆತಂಕ 
ಹೊಸಮನೆ ವ್ಯಾಪ್ತಿಯ ೪ನೇ ಕ್ರಾಸ್‌ನಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಎಲ್ಲಿಬೇಕೆಂದರಲ್ಲಿ ತಿರುಗಾಡುತ್ತಿದ್ದಾನೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿಯಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 
    ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.


ಪತ್ರಕರ್ತರಿಂದ ಸಮಾಜದಲ್ಲಿ ಎಚ್ಚರಿಸುವ ಕಾರ್ಯ ಶ್ಲಾಘನೀಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ, ಆ. ೩: ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ಶ್ರಮ ಅಪಾರವಾಗಿದ್ದು, ಪತ್ರಕರ್ತರು ಸಮಾಜದಲ್ಲಿ ಎಲ್ಲರನ್ನು ಎಚ್ಚರಿಸುವಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪತ್ರಕರ್ತರು ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು. 
ಪತ್ರಕರ್ತರ ಸಂಘಟನೆಯ ಫಲವಾಗಿ ನಗರದಲ್ಲಿ ಸುಸಜ್ಜಿತವಾದ ಪತ್ರಿಕಾಭವನ ನಿರ್ಮಾಣಗೊಂಡಿದ್ದು, ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮೂಲಕ ಸಮಾಜಕ್ಕೆ ಇದರ ಸೇವೆ ಇನ್ನಷ್ಟು ಲಭಿಸುವಂತಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. 
ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಮಾತನಾಡಿ, ಪತ್ರಕರ್ತರ ಕಾರ್ಯ ವೈಖರಿ ಹಾಗೂ ಪತ್ರಕರ್ತರ ಮಹತ್ವ ಮತ್ತು ಸಮಾಜಕ್ಕೆ ಅವರ ಕೊಡುಗೆ ವಿವರಿಸುವ ಜೊತೆಗೆ ಪ್ರಸ್ತುತ ಸಂಘಟನೆ ಎದುರಿಸುವ ಸವಾಲುಗಳನ್ನು ಮನವರಿಕೆ ಮಾಡಿದರು. 
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ,  ಪತ್ರಿಕಾ ಭವನ ನಿರ್ಮಾಣ ಹಾಗೂ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿ ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡುವ ಜೊತೆಗೆ ಕಾಮಗಾರಿ ಪೂರ್ಣಗೊಳ್ಳಲು ಶಾಸಕರು ನೆರವಾಗಬೇಕೆಂದು ಮನವಿ ಮಾಡಿದರು. 
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಎನ್. ರವಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಸಿದ್ದರು. 
ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಫಿಲೋಮಿನಾ ನಿರೂಪಿಸಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು. 
ಹಿರಿಯ ಪತ್ರಕರ್ತರಾದ ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ಟಿ.ಎಸ್ ಆನಂದಕುಮಾರ್, ನಾರಾಯಣ, ರವೀಂದ್ರನಾಥ್(ಬ್ರದರ್), ಸುದರ್ಶನ್, ಶೈಲೇಶ್ ಕೋಠಿ, ಮೋಹನ್‌ಕುಮಾರ್, ವ್ಯವಸ್ಥಾಪಕ ಸುಬ್ರಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.