Thursday, March 24, 2022

ಶ್ರೀ ರಾಮರಾಜ್ಯ ಸಂಘದಿಂದ ‘ಅಪ್ಪು ನಮನ’

ಚಲನಚಿತ್ರ ನಟ, ಸಮಾಜ ಸೇವಕ ದಿವಂಗತ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬ 'ಅಪ್ಪು ನಮನ' ಕಾರ್ಯಕ್ರಮ ಭದ್ರಾವತಿ ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಜನ್ನಾಪುರ ಶ್ರೀ ರಾಮರಾಜ್ಯ ಸಂಘದ ವತಿಯಿಂದ ಆಚರಿಸಲಾಯಿತು.
    ಭದ್ರಾವತಿ, ಮಾ. ೨೪: ಚಲನಚಿತ್ರ ನಟ, ಸಮಾಜ ಸೇವಕ ದಿವಂಗತ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬ 'ಅಪ್ಪು ನಮನ' ಕಾರ್ಯಕ್ರಮ ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಜನ್ನಾಪುರ ಶ್ರೀ ರಾಮರಾಜ್ಯ ಸಂಘದ ವತಿಯಿಂದ ಆಚರಿಸಲಾಯಿತು.
    ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು. ಪುನೀತ್‌ರಾಜ್‌ಕುಮಾರ್‌ರವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗು ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು.
    ನಗರಸಭಾ ಸದಸ್ಯರಾದ ಸವಿತಾ, ನಾಗರತ್ನ, ನಗರಸಭೆ ಮಾಜಿ ಸದಸ್ಯ ಎಂ. ರಾಜು, ಮುಖಂಡರಾದ ಉಮೇಶ್ ಸೇರಿದಂತೆ ಸ್ಥಳೀಯ ಮುಖಂಡರು ಮುಖಂಡರು. ಜನ್ನಾಪುರ, ಗಣೇಶ್ ಕಾಲೋನಿ, ಹುತ್ತಾಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ನಾ ಕಂಡ ಪೌರಾಯುಕ್ತರು ಅಭಿನಂದನ ಕೃತಿ ಬಿಡುಗಡೆ


    ಭದ್ರಾವತಿ, ಮಾ. ೨೪: ರಂಗಕರ್ಮಿ-ಕಿರುತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ ನಾ ಕಂಡ ಪೌರಾಯುಕ್ತರು ಅಭಿನಂದನ ಕೃತಿ ಬಿಡುಗಡೆ ಸಮಾರಂಭ ಮಾ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ಸಿದ್ದರೂಢ ನಗರದ ಶಂಕರಮಠದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಪುಸ್ತಕ ಬಿಡುಗಡೆಗೊಳಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಕೃತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
    ಮಿಸ್ ಸುಪ್ರ ನ್ಯಾಷನಲ್ ೨೦೧೪ ವಿಜೇತೆ, ಚಲನಚಿತ್ರ ನಟಿ ಆಶಾಭಟ್, ನಟ, ನಿರ್ದೇಶಕ ಎಂ.ಡಿ ಕೌಶಿಕ್, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಡಾ. ವಿ. ಸುದೇಶ್, ಚಿಕ್ಕಮಗಳೂರು ಯೋಜನಾ ನಿರ್ದೇಶಕ ಮನೋಹರ್, ಶೃಂಗೇರಿ ಶಂಕರಮಠ ಧರ್ಮದರ್ಶಿ ಕೆ.ಆರ್ ಸುಬ್ಬರಾವ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮತ್ತು ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಾ.೨೫ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


    ಭದ್ರಾವತಿ, ಮಾ. ೨೪: ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಮಾ.೨೫ರಂದು ಸಂಜೆ ೪ ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಉದ್ಘಾಟಿಸಲಿದ್ದು, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶೋಭ ಗಂಗರಾಜ್ ಮತ್ತು ಖಜಾಂಚಿ ಜಯಂತಿ ನಾಗರಾಜ್‌ಶೇಟ್, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮಾಜದ ಹಿರಿಯ ಸದಸ್ಯರಾದ ಭಾಗ್ಯವತಿ ನಿಜಗುಣ, ರೇಣುಕ ಚಂದ್ರಶೇಖರಯ್ಯ ಮತ್ತು ಪುಷ್ಪ ಸುಬ್ರಮಣ್ಯರವರಿಗೆ ಗೌರವ ಸಮರ್ಪಣೆ ನಡೆಯಲಿದೆ.