ಭದ್ರಾವತಿ ದೇವರನರಸೀಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ.
ಭದ್ರಾವತಿ, ಮೇ. ೧೩: ಕೊನೆಗೂ ಜಿಲ್ಲಾಡಳಿತ ತಾಲೂಕಿನಲ್ಲಿ ೨ ಕ್ವಾರಂಟೈನ್ಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಹೊರ ರಾಜ್ಯಗಳಿಂದ ಬಂದ ಸುಮಾರು ೩೪ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.
ಕಳೆದ ೩-೪ ದಿನಗಳ ಹಿಂದೆ ಜಿಲ್ಲಾಡಳಿತ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲು ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್ ತೆರೆಯಲು ನಿರ್ಧರಿಸಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬೇರೆಡೆ ತೆರೆಯುವುದಾಗಿ ಭರವಸೆ ನೀಡಿತ್ತು.
ಮಂಗಳವಾರ ಗ್ರಾಮೀಣ ಭಾಗದ ದೇವರ ನರಸೀಪುರ ಮತ್ತು ಹಂಚಿನ ಸಿದ್ದಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ತೆರೆಯಲಾಗಿದೆ. ಕ್ವಾರಂಟೈನ್ನಲ್ಲಿರುವವರಿಗೆ ಊಟದ ವ್ಯವಸ್ಥೆ ಸೇರಿದಂತೆ ಅವಶ್ಯಕ ಸೌಲಭ್ಯ ಕಲ್ಪಿಸುವುದು ವಸತಿ ಶಾಲೆ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ. ಒಟ್ಟಾರೆ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಹ ತಮಗೆ ವಹಿಸಿರುವ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್ಪೀರ್ ತಿಳಿಸಿದ್ದಾರೆ.
ಪ್ರಸ್ತುತ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಮಿಳು, ಚನ್ನೈ ನಗರಗಳಿಂದ ಆಗಮಿಸಿರುವ ೧೫ ಮಂದಿಯನ್ನು ಹಾಗು ಹಂಚಿನ ಸಿದ್ದಾಪುರದ ವಸತಿ ಶಾಲೆಯಲ್ಲಿ ಗೋವಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಂದ ನಗರಕ್ಕೆ ಬಂದಿರುವ ೨೭ ಮಂದಿಯನ್ನು ಒಟ್ಟು ೩೪ ಮಂದಿಯನ್ನು ನಿಗಾದಲ್ಲಿರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್ರಾಜ್ ತಿಳಿಸಿದ್ದಾರೆ.
ಸಮುದಾಯಕ್ಕೆ ಹರಡದಂತೆ ಎಚ್ಚರ ವಹಿಸಲು ಕ್ವಾರಂಟೈನ್:
ಮೂಲತಃ ತಾಲೂಕಿನ ನಿವಾಸಿಗಳಾಗಿದ್ದು, ವಿವಿಧ ಕಾರಣಗಳಿಂದ ಲಾಕ್ಡೌನ್ ಘೋಷಣೆಯಾಗುವ ಮೊದಲು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರು ಪುನಃ ತಮ್ಮ ತಮ್ಮ ಸ್ವಂತ ಊರುಗಳಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮಹಾಮಾರಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡದಂತೆ ಎಚ್ಚರವಹಿಸಲು ಕ್ವಾರಂಟೈನ್ಗಳನ್ನು ತೆರೆಯಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಬಂದವರು ನೇರವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುವುದರಿಂದ ಒಂದು ವೇಳೆ ಕೊರೋನಾ ವೈರಸ್ ಬಾಧಿತರಿಂದ ಕುಟುಂಬಕ್ಕೆ, ಸಮುದಾಯಕ್ಕೆ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಸ್ಥಳೀಯರು ಇದನ್ನು ತಪ್ಪಗಿ ಭಾವಿಸುವ ಮೂಲಕ ಕ್ವಾರಂಟೈನ್ಗಳನ್ನು ತೆರೆಯಲು ಆಕ್ಷೇಪಿಸುತ್ತಿರುವುದು ಆತಂಕದ ಬೆಳೆವಣಿಗೆಯಾಗಿದೆ ಎಂದು ಕೊರೋನಾ ವೈರಸ್ ನಿರ್ಮೂಲನೆಗಾಗಿ ಹಗಲಿರುಳು ಹೋರಾಟ ನಡೆಸುತ್ತಿರುವವರು ವಿಷಾದ ವ್ಯಕ್ತಪಡಿಸಿದ್ದಾರೆ.