Wednesday, June 25, 2025

ಎಂಪಿಎಂ ನಿವೃತ್ತ ಕಾರ್ಮಿಕರಿಗೆ ಅನ್ಯಾಯ : ವ್ಯವಸ್ಥಾಪಕರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. 
    ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಹಲವಾರು ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವುದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶಕರು ಬಂದು ೧ ವರ್ಷಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿದ್ದಾರೆ. ಬಹು ಮುಖ್ಯವಾಗಿ ಸೂಪರ್ ಆನ್ಯುಯೇಷನ್ ಹಣದ ಬಗ್ಗೆ ಸುಮಾರು ೫೫೦ ನಿವೃತ್ತ ಕಾರ್ಮಿಕರು ಸಹಿ ಮಾಡಿದ ಲಿಖಿತ ಮನವಿ ಸಲ್ಲಿಸಲಾಗಿದೆ. ಇದನ್ನು ಸಹ ಪರಿಗಣಿಸದೆ ಇದರ ಮಾತನಾಡದೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ರು. ೩೦೦ ರಿಂದ ೧೦೦೦ ವರೆಗೆ ಹಣ ನಿವೃತ್ತ ಕಾರ್ಮಿಕರಿಗೆ ಲಭಿಸದೆ ಅನ್ಯಾಯವಾಗಿದೆ. ೨೦೧೭ರಲ್ಲಿ ಸ್ವಯಂ ನಿವೃತ್ತಿ ಹೊಂದಿದ ಮತ್ತು ಸಹಜ ನಿವೃತ್ತಿ ಹೊಂದಿದ ಕಾರ್ಮಿಕರುಗಳಿಗೆ ಬರಬೇಕಾದ ಬಾಕಿ ಹಣ ಇಲ್ಲಿಯವರೆಗೂ ಲೆಕ್ಕಾಚಾರ ಮಾಡಿ ವಿತರಿಸದೆ ಮೋಸ ಮಾಡಲಾಗಿದೆ. ೨೦೧೨ರ ವೇತನ ಒಪ್ಪಂದಕ್ಕಾಗಿ ನೀಡಿದ್ದ ೩೫ ಕೋ. ರು. ಕಾರ್ಮಿಕರಿಗೆ ಪಾವತಿ ಮಾಡದೆ ಮೋಸ ಮಾಡಿದ್ದು, ಈ ನಡುವೆ ವಿನಾಕಾರಣ ನಿವೃತ್ತ ಕಾರ್ಮಿಕರು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ ಎಂದು ನಿವೃತ್ತ ಕಾರ್ಮಿಕರು ಅಳಲು ತೋರ್ಪಡಿಸಿಕೊಂಡರು. 


ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. 

    ಜೀವವಿಮಾ ನಿಗಮದ ಕಾರ್ಮಿಕರ ಖಾತೆಗೆ ಪ್ರತಿವರ್ಷ ಪಾವತಿಸಬೇಕಾಗಿದ್ದ ಸೂಪರ್ ಅನ್ಯುಯೇಷನ್ ಹಣ ಯಾವುದೇ ಸೈಜ ಕಾರಣಗಳಿಲ್ಲದೆ ಪಾವತಿಯನ್ನು ನಿಲ್ಲಿಸಿ ಸುಮಾರು ಹದಿನೈದು ವರ್ಷಗಳ ನಂತರ ಬಡ್ಡಿಯನ್ನು ಸೇರಿಸದೆ ಪಾವತಿ ಮಾಡಿದ್ದು, ಇದರಿಂದ ಪ್ರತಿಯೊಬ್ಬ ಕಾರ್ಮಿಕರಿಗೆ ೧ ರಿಂದ ೧.೫ ಲಕ್ಷ ರು. ಮೋಸವಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಕಾರ್ಮಿಕರಿಗೆ ತುಟ್ಟಿಭತ್ಯೆ ನೀಡಬೇಕೆಂಬ ತ್ರಿಪಕ್ಷೀಯ ಒಪ್ಪಂದವಿದ್ದರೂ ೨೦೧೨ ಮತ್ತು ೨೦೧೭ರಲ್ಲಿ ತುಟ್ಟಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸದೆ ಕಾಮಿಕರಿಗೆ ಎರಡು-ಮೂರು ಲಕ್ಷ ರು. ನಷ್ಟವನ್ನುಟು ಮಾಡಲಾಗಿದೆ. ಇದನ್ನೆಲ್ಲಾ ಪರಿಹರಿಸಬೇಕಾಗಿರುವ ಕಾರ್ಮಿಕ ಇಲಾಖೆಯವರು ವಿಚಾರಣೆ ನಡೆಸಿ ಫೈಲ್ಯೂರ್ ವರದಿ ಮಾಡಿ ಕಾರ್ಮಿಕರನ್ನು ನ್ಯಾಯಾಲಯಕ್ಕೆ  ಅಲೆಯುವಂತೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ಎಂಪಿಎಂ ಕಂಪನಿಯು ೨೦೧೬ ರಿಂದ ಉತ್ಪಾದನೆ ನಿಲ್ಲಿಸಿ ೨೦೨೧ ರಲ್ಲಿ ಅಂದಿನ ಸರ್ಕಾರದ ಆದೇಶದಂತೆ ಕಂಪನಿ ಮುಚ್ಚಿ (ಕ್ಲೋಸರ್ ಆಗಿ) ೩ ವರ್ಷಗಳಾಗಿವೆ. ಆದರೂ ಇಲ್ಲಿ ಅನಧಿಕೃತ ವ್ಯಕ್ತಿಗಳು ಅಂದರೆ ಸ್ವಯಂನಿವೃತ್ತಿ ಹೊಂದಿದವರು, ನಿವೃತ್ತರು, ೬೮ರ ವಯಸ್ಸು ದಾಟಿರುವವರು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಅಧಿಕಾರ ಅನುಭವಿಸುತ್ತಿದ್ದಾರೆ. ೬೦ ವರ್ಷ ಮೇಲ್ಪಟ್ಟವರು ಮತ್ತು ಸ್ವಯಂ ನಿವೃತ್ತಿ ಹೊಂದಿದವರು ಸರ್ಕಾರದ ಕಂಪನಿಗಳಲ್ಲಿ ಮತ್ತೆ ಮರುನೇಮಕ ಮಾಡಿಕೊಳ್ಳುವಂತಿಲ್ಲ ಎಂಬ ಕಾನೂನು ಇದ್ದರೂ ಈ ಕಂಪನಿಯಲ್ಲಿ ಕೆಲವರು ಯಾವುದೇ ನೇಮಕಾತಿ ಆದೇಶ, ಸಂದರ್ಶನ ಪ್ರಕ್ರಿಯೆ ಇಲ್ಲದೆ ಹಿಂಬಾಗಿಲಿಂದ ಕೆಲಸಕ್ಕೆ ತೂರಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇವರ ನೇಮಕಾತಿಯ ಹಿಂದಿನ ಮರ್ಮ ತಿಳಿಯದಾಗಿದೆ. ಇದನ್ನೆಲ್ಲಾ ಸರಿಪಡಿಸಬೇಕಾದ ವ್ಯವಸ್ಥಾಪಕ ನಿರ್ದೇಶಕರುಗಳು ಅನಧಿಕೃತ ವ್ಯಕ್ತಿಗಳಿಗೆ ಕಂಪನಿಯ ಎಲ್ಲಾ ಆಡಳಿತವನ್ನೂ ಮತ್ತು ಹಣಕಾಸು ವ್ಯವಹಾರವನ್ನೂ ಅಧಿಕೃತವಾಗಿ ಕೊಟ್ಟದ್ದು,  ಈ ಕಂಪನಿಯನ್ನು ಮತ್ತೊಂದು ವಾಲ್ಮೀಕಿ ನಿಗಮದ ಹಗರಣದಂತೆ ಕೋಟ್ಯಾಂತರ ರು. ಹಗರಣವು ಈ ಕಪಟಿಗಳಿಂದ ನಡೆಸುತ್ತಾರೆ. ಇದರ ಬಗ್ಗೆ ವಶಾಸಕರಿಗೆ ಹಾಗೂ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇಲ್ಲಿ ಹಗರಣಗಳ ಸುರಮಾಲೆಯೇ ನಡೆಯುತ್ತಿದೆ. ಸುಮಾರು ೧೫೦೦ ಕ್ಕೂ ಹೆಚ್ಚು ಕಂಪನಿ ವಸತಿಗೃಹಗಳಲ್ಲಿನ ವಸ್ತುಗಳನ್ನೂ ಇಲ್ಲಿನ ಅಧಿಕಾರಿಗಳು ಲೂಟಿ ಮಾಡಿದ್ದಾರೆ. ಕಂಪನಿಯ ಒಳಗಿನ ನೂರಾರು ಕೋಟಿ ಬೆಲೆಬಾಳುವ ಅನೇಕ ವಸ್ತುಗಳನ್ನೂ ಅನಧಿಕೃತ ವ್ಯಕ್ತಿಗಳು ಬಿಕರಿ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವಿಭಾಗದಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆಯ ಅಕೇಶಿಯಾ, ನೀಲಗಿರಿ ಮರಗಳಿದ್ದು ಅದರಲ್ಲಿ ಬಹಳಷ್ಟು ಲೂಟಿ ನಡೆಯುತ್ತಿದೆ. ಈಗಲೂ ಎಂಪಿಎಂ ಸೆಕ್ಯುರಿಟಿ ವಿಭಾಗದಲ್ಲಿ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ ನಿವೃತ್ತ ಕಾರ್ಮಿಕರಿಗೆ ಮತ್ತು ಅವರ ಪತಿ/ಪತ್ನಿಗೆ ಜೀವನ ಪರ್ಯಂತ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಒಪ್ಪಂದವಿದ್ದರೂ ಅದನ್ನು ಪಾಲಿಸದೆ ನಮ್ಮ ಜೀವನದ ಜೊತೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅನಧಿಕೃತ ವ್ಯಕ್ತಿಗಳು ಆಟವಾಡುತ್ತಿದ್ದಾರೆಂದು ನಿವೃತ್ತ ಕಾರ್ಮಿಕರು ಆರೋಪಿಸಿ ಇವೆಲ್ಲವನ್ನೂ ತಡೆಯಬೇಕೆಂದು ಆಗ್ರಹಿಸಿದರು.  
    ಕಾರ್ಖಾನೆಯನ್ನು ಪುನರ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗು ಶಾಸಕರು ಭರವಸೆ ನೀಡಿ ೨ ವರ್ಷಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ಕಾರ್ಖಾನೆ ಪುನರ್ ಆರಂಭಗೊಂಡಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ. ನಗರ ಬೆಳವಣಿಗೆ ಹೊಂದಲಿದ್ದು, ಆರ್ಥಿಕ ವಯಿವಾಟು ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಮನವಿ ಮಾಡಿದರು.  
    ಮನವಿ ಸಲ್ಲಿಸುವ ಮೊದಲು ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯರವರು ನಿವೃತ್ತ ಕಾರ್ಮಿಕರಿಗೆ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ನ್ಯಾಯಯುತವಾಗಿ ಲಭಿಸಬೇಕಾದ ಸೌಲಭ್ಯಗಳು ಹಾಗು ಬಾಕಿ ಕುರಿತು ವಿವರಿಸಿದರು. ಸಂಚಾಲಕರಾದ ವಿ. ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಎನ್. ರಘುನಾಥರಾವ್, ಶಿವಲಿಂಗಯ್ಯ ಮತ್ತು ಆರ್. ಬಾಪು ಉಪಸ್ಥಿತರಿದ್ದರು. ನೂರಾರು ನಿವೃತ್ತ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. 
  ನಂತರ ಮಧ್ಯಾಹ್ನ ೧೨.೪೫ಕ್ಕೆ ಬಸವೇಶ್ವರ ವೃತ್ತದಿಂದ ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ನಂತರ ತಾಲೂಕು ಕಛೇರಿಗೆ ತೆರಳಿ ಉಪ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ನಿವೃತ್ತ ಕಾರ್ಮಿಕರ ಹೋರಾಟಕ್ಕೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.