ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ
![](https://blogger.googleusercontent.com/img/b/R29vZ2xl/AVvXsEiwYCg6DQiT_S-OKoJtglI-qN8CfucWjQ-tYzbpbBZpDCi6TZuCjFOCrkuN9TGVXL2ULDw2BxLYp5tOFwI-IoshrJrMwIFk_Kh_o2di41GWyX7Y0rLOEzvvb72-9GdnJ7L_FDKgfegb47Af/w640-h304-rw/D30-BDVT-703434.jpg)
ಭದ್ರಾವತಿಯಲ್ಲಿ ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ವತಿಯಿಂದ ಶನಿವಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜ. ೩೦: ಶಿವನ ತ್ರಿನೇತ್ರದಿಂದ ಉದ್ಭವಿಸಿದ ಶ್ರೀ ದೇವಲ ದೇವಾಂಗ ಮಹರ್ಷಿಯವರು ತ್ರಿಮೂರ್ತಿಗಳಿಗೆ ಹಾಗು ಇತರೆ ದೇವತೆಗಳಿಗೆ ವಸ್ತ್ರವನ್ನು ನೇಯ್ದುಕೊಟ್ಟು ಮೂಲ ನೇಕಾರ ಅನಿಸಿಕೊಂಡಿದ್ದಾರೆ. ಮಾನ ಕಾಪಾಡುವ ದೇವಾಂಗ ಜನಾಂಗಕ್ಕೆ ಪ್ರಸ್ತುತ ಸರ್ಕಾರ ಯಾವುದೇ ರೀತಿಯ ಮೀಸಲಾತಿ ಕಲ್ಪಿಸದೆ ಮೂಲೆ ಗುಂಪಾಗಿಸಿದೆ ಎಂದು ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ಅಧ್ಯಕ್ಷ ಧರ್ಮಪಾಲಕ್ಷ ಮತ್ತು ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಎಂ. ಪ್ರಭಾಕರ ಆರೋಪಿಸಿದರು.
ಅವರು ಶನಿವಾರ ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನೇತೃತ್ವವಹಿಸಿ ಮಾತನಾಡಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಕಾಲದಲ್ಲಿ ದೇವಾಂಗ ಸಮಾಜವನ್ನು '೨ಎ' ವರ್ಗಕ್ಕೆ ಸೇರಿಸಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಈ ಸೌಲಭ್ಯಗಳನ್ನು ಪಡೆಯಲು ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಸಮಾಜಗಳ ಅಭಿವೃದ್ದಿಗೆ ಸಾಕಷ್ಟು ಕಾಳಜಿ ವಹಿಸಿದ್ದು, ಈಗಾಗಲೇ ಹಲವು ಹಿಂದುಳಿದ ವರ್ಗಗಳ ಸಮಾಜಗಳಿಗೆ ನಿಗಮ/ಮಂಡಳಿ/ ಪ್ರಾಧಿಕಾರಗಳನ್ನು ರಚನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇವಾಂಗ ಸಮಾಜಕ್ಕೂ ನಿಗಮ ರಚನೆ ಮಾಡುವ ಮೂಲಕ ರು. ೫೦೦ ಕೋ. ಅನುದಾನ ನೀಡಬೇಕು. ಮಹಾರಾಷ್ಟ್ರ ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದಂತೆ ಪ್ರತ್ಯೇಕವಾಗಿ ಶೇ.೨ರಷ್ಟು ಮೀಸಲಾತಿ ನೀಡುವುದು, ಶ್ರೀ ದೇವಲ ಮಹರ್ಷಿಗಳ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು, ಶ್ರೀ ದೇವಲ ಮಹರ್ಷಿ ಮತ್ತು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಪ್ರತಿಮೆಗಳನ್ನು ಬೆಂಗಳೂರು ಹಾಗು ದೇವಾಂಗ ಸಮಾಜದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿಸುವುದು, ಶ್ರೀ ದೇವರ ದಾಮಯ್ಯನವರ ಜನ್ಮ ಸ್ಥಳ ಅಭಿವೃದ್ಧಿಗೆ ಮುದನೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಹೋರಾಟ ಸಮಿತಿ ಸಂಚಾಲಕ ಡಿ.ವಿ ವೇಣು, ಕಾರ್ಯದರ್ಶಿ ಡಿ. ನಾಗರಾಜಪ್ಪ, ದೇವಾಂಗ ಸಮಾಜದ ಕಾರ್ಯದರ್ಶಿ ಬಿ. ಆಂಜನೇಯ, ಪ್ರಮುಖರಾದ ಬಿ.ಕೆ ಚಂದ್ರಪ್ಪ, ಎಸ್.ಬಿ ನಿರಂಜನಮೂರ್ತಿ, ಹೊನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.