ಮಳೆಯಲ್ಲಿಯೇ ವ್ಯವಹರಿಸಿದ ಗ್ರಾಹಕರು : ಎಎಪಿ ಮುಖಂಡರಿಂದ ತರಾಟೆ
ಭದ್ರಾವತಿ ಕಾಗದನಗರ ಸ್ಟೇಟ್ ಆಫ್ ಇಂಡಿಯಾ(ಎಸ್ಬಿಐ) ಶಾಖೆಯಲ್ಲಿ ಬ್ಯಾಂಕಿನ ಹೊರಭಾಗ ಕಿಟಕಿ ಪಕ್ಕದಲ್ಲಿಯೇ ನಿಂತು ವ್ಯವಹರಿಸುತ್ತಿರುವ ಗ್ರಾಹಕರು.
ಭದ್ರಾವತಿ, ಜೂ. ೧: ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕಳೆದ ೨ ತಿಂಗಳಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಸಾಮಾನ್ಯರು ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದರೂ ಸಹ ಕೆಲವೆಡೆ ವಿನಾಕಾರಣ ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿನ ಕಾಗದನಗರದಲ್ಲಿರುವ ಸ್ಟೇಟ್ ಆಫ್ ಇಂಡಿಯಾ(ಎಸ್ಬಿಐ) ಶಾಖೆಯಲ್ಲಿ ಅಧಿಕಾರಿಗಳು ಕೊರೋನಾ ವೈರಸ್ ಹರಡುವ ಭೀತಿ ಉಂಟುಮಾಡಿ ಗ್ರಾಹಕರನ್ನು ಬ್ಯಾಂಕಿನ ಒಳಗೆ ಬಿಡದೆ ಹೊರಭಾಗದಿಂದಲೇ ವ್ಯವಹರಿಸುತ್ತಿದ್ದು, ಹೊರಭಾಗದಲ್ಲಿ ಯಾವುದೇ ಸೌಲಭ್ಯಗಳಲ್ಲದೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಮೇಲ್ಛಾವಣಿ ಇಲ್ಲ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಕಿಟಕಿ ಪಕ್ಕದಲ್ಲಿ ನಿಂತುಕೊಂಡೇ ವ್ಯವಹರಿಸಬೇಕಾಗಿದೆ. ಸೋಮವಾರ ಗ್ರಾಹಕರು ಮಳೆಯಲ್ಲಿಯೇ ನಿಂತುಕೊಂಡು ವ್ಯವಹಿಸಿದರು.
ಎಎಪಿ ಮುಖಂಡರಿಂದ ತರಾಟೆ:
ಗ್ರಾಹಕರ ಪರದಾಟ ಮನಕಂಡ ಆಮ್ ಆದ್ಮಿ ಪಾರ್ಟಿ ಮುಖಂಡರು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಎಚ್ಚೆತ್ತುಕೊಂಡ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರಿಗೆ ಒಳ ಭಾಗದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಸರ್ಕಾರ ಸಾರ್ವಜನಿಕರಿಗೆ ಮಾಸ್ಕ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದನ್ನು ಪಾಲಿಸುವ ಗ್ರಾಹಕರಿಗೆ ಬ್ಯಾಂಕಿನ ಒಳಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ಅಧಿಕಾರಿಗಳು ಕೊರೋನಾ ವೈರಸ್ ನೆಪದಲ್ಲಿ ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ ಎಂದು ಎಎಪಿ ಪಕ್ಷದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದಾಗಿ ರಸ್ತೆಯೊಂದರಲ್ಲಿ ನೀರು ನಿಂತುಕೊಂಡಿರುವುದು.
ಎಡಬಿಡದೆ ಸುರಿದ ಮಳೆ:
ಸೋಮವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯ ಎಡಬಿಡದೆ ಮಳೆಯಾಗಿದ್ದು, ನಗರದ ಬಹುತೇಕ ಕಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ರಸ್ತೆಗಳ ಗುಂಡಿಗೊಟರುಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ಕಡೆ ರಸ್ತೆ ಇಕ್ಕೆಲಗಳ ಚರಂಡಿಗಳು ತುಂಬಿಕೊಂಡು ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿರುವುದು ಕಂಡು ಬಂದಿತು. ನಗರ ಭಾಗದಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.