Friday, December 20, 2024

ಬಾಯ್ಲರ್ ಸ್ಪೋಟ : ಕೋಟ್ಯಾಂತರ ರು. ಆಸ್ತಿಪಾಸ್ತಿ ನಷ್ಟ

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಾಂಪೌಂಡ್ ಛಿದ್ರಗೊಂಡಿರುವುದು. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸದಿದ್ದರೂ ಸಹ ಹೆಚ್ಚಿನ ಕೋಟ್ಯಾಂತರ ರು. ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. 
    ಸ್ಪೋಟದ ತೀವ್ರತೆಯಿಂದ ಕೋಟ್ಯಾಂತರ ರು. ನಷ್ಟ ಉಂಟಾಗಿದ್ದು, ಬಾಯ್ಲರ್ ಕಬ್ಬಿಣದ ತುಂಡುಗಳು ಸುಮಾರು ಅರ್ಧ ಕಿ.ಮೀ ವ್ಯಾಪ್ತಿವರೆಗೂ ಬಿದ್ದಿವೆ. ಅಲ್ಲದೆ ಸುಮಾರು ೨ ಕಿ.ಮೀ ವರೆಗೂ ಸ್ಟೋಟದ ಕಂಪನ ವ್ಯಾಪಿಸಿದೆ. ಸ್ಪೋಟದಿಂದ ಸಮೀಪದ ಮನೆಗಳಿಗೆ, ಅಂಗಡಿಮುಂಗಟ್ಟುಗಳಿಗೆ ಹಾನಿ ಉಂಟಾಗಿದೆ. ರೈಲ್ ಮಿಲ್ ಆವರಣದಲ್ಲಿದ್ದ ಒಂದು ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಉಳಿದ ಕೆಲವು ಲಾರಿಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೆ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು ೭-೮ ದ್ವಿಚಕ್ರ ವಾಹನಗಳು ಸಹ ಸಂಪೂರ್ಣವಾಗಿ ಜಖಂಗೊಂಡಿವೆ. ರೈಸ್ ಮಿಲ್ ಮೇಲ್ಛಾವಣಿ, ಯಂತ್ರೋಪಕರಣಗಳು, ವಿದ್ಯುತ್ ಪರಿವರ್ತಕ ಹಾಗು ಕಟ್ಟಡ ಬಹುತೇಕ ಹಾನಿಯಾಗಿದ್ದು, ಕೋಟ್ಯಾಂತರ ರು. ನಷ್ಟ ಸಂಭವಿಸಿದೆ. 
    ಅರ್ಧ ಕಿ.ಮೀ ದೂರದ ಆರ್‌ಸಿಸಿ ಮನೆಯ ಮೇಲೆ ಬಿದ್ದ ಕಬ್ಬಿಣ ಭಾರಿ ಗಾತ್ರದ ತುಂಡು: 
    ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಿಂದ ಸ್ಥಳೀಯರು ಹೆಚ್ಚಿನ ಭಯಭೀತರಾಗಿದ್ದಾರೆ. 
    ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಸುಮಾರು ೯ ಗಂಟೆ ಕಾರ್ಯಾಚರಣೆ: 
    ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ತಿಳಿದ ತಕ್ಷಣ ಸುಮಾರು ೭ ಗಂಟೆ ಸಮಯಕ್ಕೆ ಘಟನಾ ಸ್ಥಳಕ್ಕೆ ತೆರಳಿದ್ದು, ಆರಂಭದಲ್ಲಿ ಬಾಯ್ಲರ್ ಸ್ಪೋಟದಿಂದ ಉಂಟಾದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಉಳಿದ ಕಾರ್ಯಾಚರಣೆ ಬೆಳಗಿನ ಜಾವ ಸುಮಾರು ೩.೩೦ರ ವರೆಗೂ ಕೈಗೊಂಡಿದ್ದು, ಈ ಘಟನೆಯಲ್ಲಿ ಸುಮಾರು ೮ ಜನ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ಅಗ್ನಿಶಾಮಕ ವಾಹನ ಕಾರ್ಯಾಚರಣೆಗೆ ಬಳಸಲಾಗಿದ್ದು, ಶಿವಮೊಗ್ಗ ಹಾಗು ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 
    ಮಾಲೀಕರ ವಿರುದ್ಧ ಪ್ರಕರಣ ದಾಖಲು: 
    ಗಣೇಶ್ ರೈಸ್ ಮಿಲ್ ಮಾಲೀಕರಾದ ಗಿರಿರಾಜ್ ಶೆಟ್ಟಿ ಹಾಗು ದೀಪಕ್ ಶೆಟ್ಟಿ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ. 
 

ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ.

ಅಂಬೇಡ್ಕರ್ ಕುರಿತು ಅವಹೇಳನ : ಕೇಂದ್ರ ಗೃಹ ಸಚಿವ ಸದಸ್ಯತ್ವ ವಜಾಗೊಳಿಸಿ

ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ 

ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಷಾರವರ ಸಂಸತ್ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ: ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಷಾರವರ ಸಂಸತ್ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಸಮಿತಿ ಪ್ರಮುಖರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಷಾರವರು ಸಂಸತ್‌ನಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷದ ನಾಯಕರು, ಪದೇ ಪದೇ ಸಂವಿಧಾನ ಮತ್ತು ಅಂಬೇಡ್ಕರ್‌ರವರ ಭಾವಚಿತ್ರಗಳನ್ನು ಪ್ರದರ್ಶಿಸುವುದನ್ನು ಸಹಿಸಿಕೊಳ್ಳದೆ ತಮ್ಮ ಭಾಷಣದಲ್ಲಿ, ಈಗ ಒಂದು ಫ್ಯಾಷನ್ ಶುರುವಾಗಿದೆ ಅಂಬೇಡ್ಕರ್, ಅಂಬೇಡ್ಕರ್ ಎಂದು ಇಷ್ಟು ಸಲ ಹೇಳುವ ಬದಲು ಒಂದು ವೇಳೆ ಭಗವಂತನ ಹೆಸರು ಹೇಳಿದ್ದರೆ ಸ್ವರ್ಗವಾದರೂ ಸಿಗುತ್ತಿತ್ತು ಎಂದು ಹೇಳಿರುವುದು ಮನವಾದಿ ಬಿಜೆಪಿ ಸರ್ಕಾರಕ್ಕೆ ಅಂಬೇಡ್ಕರ್‌ರವರ ಬಗ್ಗೆ ಇರುವ ಸಂಕುಚಿತ ಮನೋಭಾವ ಏನೆಂಬುದು ಅರ್ಥವಾಗುತ್ತದೆ ಎಂದರು.
    ಸಂವಿಧಾನ ಶಿಲ್ಪಿಗೆ ಮನವಾದಿಗಳು ಮಾಡುವ ಅಪಮಾನಗಳು ತಮ್ಮ ಮಾತುಗಳಿಂದ ಬಹಿರಂಗಗೊಂಡಿದೆ. ಪ್ರಜಾಪ್ರಭುತ್ವ ಭಾರತದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಈ ದೇಶದ ಸಂವಿಧಾನದ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಂತಹದರಲ್ಲಿ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಇಡೀ ವಿಶ್ವ ಮೆಚ್ಚುವಂತಹ ದೇಶದಲ್ಲಿನ ೧೩೬ ಕೋಟಿ ಜನರು ಸಾಮಾಜಿಕ ಸಮಾನತೆ ಹಾಗೂ ಬ್ರಾತೃತ್ವದಿಂದ ಜೀವಿಸಲು ಸಮಾನತೆಯ ಸಂದೇಶ ಸಾರಿದ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸುವಂತಹ ಸಂದರ್ಭದಲ್ಲಿ ಸಂವಿಧಾನ ನಿರ್ಮಾಣ ಕರ್ತನನ್ನು ಹೀಯಾಳಿಸುವುದು ಎಷ್ಟು ಸರಿ. ಈತನ ಹೇಳಿಕೆಯು ದೇಶದ್ರೋಹಿ ಕೃತ್ಯಕ್ಕೆ ಸಮ ಆದ್ದರಿಂದ ಈ ರೀತಿ ದೇಶ ದ್ರೋಹದ ಹೇಳಿಕೆ ನೀಡಿರುವ ಅಮಿತ್ ಷಾರವರು ಈ ದೇಶದಲ್ಲಿ ಇರಲು ಯೋಗ್ಯರಲ್ಲ. ಈ ಕೂಡಲೇ ಅಮಿತ್ ಷಾರವರು ದೇಶದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.  
    ತಕ್ಷಣ ಪ್ರಧಾನಿ ನರೇಂದ್ರಮೋದಿಯವರು ಅಮೀತ್ ಷಾರವರನ್ನು ಸಂಪುಟದಿಂದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆಯಬೇಕು ಹಾಗೂ ರಾಷ್ಟ್ರಪತಿಗಳು ಅಮಿತ್ ಷಾರವರ ಸಂಸತ್ ಸದಸ್ಯತ್ವ ಸ್ಥಾನ ವಜಾಗೊಳಿಸುವಂತೆ ಒತ್ತಾಯಿಸಿ ಉಪತಹಸೀಲ್ದಾರ್ ಅರಸುರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 
    ಸಮಿತಿ ಮುಖಂಡರಾದ ಚಿನ್ನಯ್ಯ, ಈಶ್ವರಪ್ಪ, ಪರಮೇಶ್, ಕುಬೇಂದ್ರಪ್ಪ, ಆರ್. ಸಂದೀಪ್, ಕೆ. ರಂಗನಾಥ, ಏಳುಮಲೈ, ಕಾಣಿಕ್‌ರಾಜ್, ಮಣಿ ಜಿಂಕ್‌ಲೈನ್, ಎನ್. ಗೋವಿಂದ, ಸುವರ್ಣಮ್ಮ, ರೇಖಾ, ದಾಸ್, ಧರ್ಮರಾಜ್, ನಗರಸಭೆ ಸದಸ್ಯ ಐ.ವಿ ಸಂತೋಷ್‌ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ  ಅಮೀರ್ ಜಾನ್, ದಿಲ್ದಾರ್, ಲಕ್ಷ್ಮೀದೇವಿ, ಜುಂಜಾನಾಯ್ಕ, ಸಿ.ಜಯಪ್ಪ, ಗೋಪಿ, ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಾಯ್ಲರ್ ಸ್ಪೋಟ ಪ್ರಕರಣ : ಅಪರೇಟರ್ ಸಾವು

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಬಾಯ್ಲರ್ ಸ್ಪೋಟಗೊಂಡ ಸಂದರ್ಭದಲ್ಲಿ ರಘುನಾಥ್ ರಾವ್ ಸಾಳಂಕೆ ಕಣ್ಮರೆಯಾಗಿದ್ದರು. ಇವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಮಧ್ಯ ರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ದೇಹ ಗುರುತಿಸಲಾಗದಷ್ಟು ಸ್ಥಿತಿಯಲ್ಲಿ ಸಿಕ್ಕಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
    ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ : 
    ರಘುನಾಥ್ ರಾವ್ ಸಾಳಂಕೆ ನಿಧನಕ್ಕೆ ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ ಸೂಚಿಸಿದ್ದು, ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗು ಮರಾಠ ಸಮಾಜದ ಮುಖಂಡರು, ಸಮಾಜ ಬಾಂಧವರು ಸೇರಿ ಸಂತಾಪ ಸೂಚಿಸಿದರು. 
    ೩೦ ಲಕ್ಷ ರು. ಪರಿಹಾರ : 
    ಕ್ಷತ್ರಿಯ ಮರಾಠ ಸೇವಾ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಶಿವಕುಮಾರ್ ಹಾಗು ವರ್ತಕರ ಸಂಘದ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆದು ಸಮಾಜ ಭಾಂಧವರ ಸಮ್ಮುಖದಲ್ಲಿ ಮೃತ ರಘುನಾಥ್ ರಾವ್ ಸಾಳಂಕೆಯವರ ಕುಟುಂಬಕ್ಕೆ ೩೦ ಲಕ್ಷ ರು. ಪರಿಹಾರ ಹಣ ವಿತರಿಸಲಾಯಿತು. 
    ರಘುನಾಥ್ ರಾವ್ ಸಾಳಂಕೆ : 
    ಹೊಸಮನೆ ವಾರ್ಡ್ ನಂ.೧೨ರ ಎನ್.ಎಂ.ಸಿ ೫ನೇ ಕ್ರಾಸ್ ನಿವಾಸಿ ರಘುನಾಥ್ ರಾವ್ ಸಾಳಂಕೆ ಹಲವಾರು ವರ್ಷಗಳಿಂದ ಗಣೇರ್ಶ ರೈಸ್ ಮಿಲ್‌ನಲ್ಲಿ ಬಾಯ್ಲರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದು, ಇದೀಗ ಇವರ ನಿಧನದಿಂದ ಪತ್ನಿ, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.  
    ಗುರುವಾರ ರೈಸ್‌ಮಿಲ್‌ನಲ್ಲಿ ಇವರು ಸೇರಿದಂತೆ ಒಟ್ಟು ೬ ಜನ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ೫ ಜನರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಘಟನೆಯಲ್ಲಿ ಪಾದಚಾರಿಯೊಬ್ಬರು ಗಾಯಗೊಂಡಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.