Saturday, March 29, 2025

ಎಂಪಿಎಂ ನಿವೃತ್ತ ಕಾರ್ಮಿಕರ ಪಿಂಚಣಿ ಹೆಚ್ಚಿಸಿ : ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಇಪಿಎಸ್-೯೫ ಪಿಂಚಣಿಯನ್ನು ಕನಿಷ್ಠ ೭೫೦೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಇಪಿಎಸ್-೯೫ ಪಿಂಚಣಿಯನ್ನು ಕನಿಷ್ಠ ೭೫೦೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರಸ್ತುತ ನಿವೃತ್ತ ಕಾರ್ಮಿಕರಿಗೆ ಬರುತ್ತಿರುವ ಪಿಂಚಣಿ ಮೊತ್ತ ಅತ್ಯಂತ ಕಡಿಮೆ ಇದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಪಿಂಚಣಿ ೭೫೦೦ ರು. ಗಳಿಗೆ ಹೆಚ್ಚಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ. 
    ಕೇಂದ್ರ ಕಾರ್ಮಿಕ ಸಚಿವರಿಗೆ ಶಿವಮೊಗ್ಗದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು. ವೇದಿಕೆ ಪ್ರಮುಖರಾದ  ಟಿ.ಜಿ ಬಸವರಾಜಯ್ಯ, ಗೋವಿಂದಪ್ಪ, ಡಿ.ಮರಿಯಪ್ಪ, ಎಚ್. ಚನ್ನೇಶಪ್ಪ, ಲೋಕಾನಂದ ರಾವ್, ವೆಂಕಟೇಶಮೂರ್ತಿ, ತಾರಕೇಶ್ವರಪ್ಪ, ಕೆ.ರಾಮಚಂದ್ರ ಸೇರಿದಂತೆ ಸುಮಾರು ೬೫ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.

ಏ.೧ರಿಂದ ಬೇಸಿಗೆ ಶಿಬಿರ



    ಭದ್ರಾವತಿ : ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಅಪರಂಜಿ ಅಭಿನಯ ಶಾಲೆ ವತಿಯಿಂದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವ ಅಂಗವಾಗಿ ಏ.೧ ರಿಂದ ೧೦ರವರೆಗೆ  ೧೦ದಿನಗಳವರೆಗೆ ಆಯೋಜಿಸಲಾಗಿದೆ. 
    ಪ್ರತಿ ವರ್ಷದಂತೆ ಈ ಬಾರಿ ಸಹ ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್‌ರವರ ನೇತೃತ್ವದಲ್ಲಿ ಶಿಬಿರ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಶಿಬಿರದಲ್ಲಿ ೫ ರಿಂದ ೧೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. 
    ಡ್ರಾಮಾ ಜ್ಯೂನಿಯರ್, ಅಭಿನಯ ತರಬೇತಿ, ಗೀತಗಾಯನ, ನೃತ್ಯ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಮತ್ತು ಕಲಾಕೃತಿ ರಚನೆ(ಕ್ರಾಫ್ಟ್ ವರ್ಕ್ಸ್) ಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿವೆ. ಶಿಬಿರ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩.೩೦ರವರೆಗೆ ನಡೆಯಲಿದ್ದು, ೨೫ ರಿಂದ ೩೦ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಮೊ: ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹಾಗು ಹೊಸ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು ೧೦ ಕೋ.ರು. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಒಂದೇ ದಿನ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.      
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹಾಗು ಹೊಸ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು ೧೦ ಕೋ.ರು. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಒಂದೇ ದಿನ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.      
      ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಗೆರೆ ಮುಖ್ಯ ರಸ್ತೆಯಿಂದ ಸಿದ್ಧರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಉದಯನಗರ ಗ್ರಾಮದ ಮುಖ್ಯರಸ್ತೆಯಿಂದ ಬದನೆಹಾಳು ಮಾರ್ಗವಾಗಿ ಬಂಡಿ ಗುಡ್ಡಕ್ಕೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ಹಾಗು ಪಾಲಿ ಕ್ಲಿನಿಕ್ ಕಟ್ಟಡ ಉದ್ಘಾಟನೆ ನೆರವೇರಿಸಲಾಯಿತು. 
    ದೊಡ್ಡೇರಿ ಗ್ರಾಮದಲ್ಲಿ ಕೆರೆ ಏರಿ ಮೇಲೆ ಸಿಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ, ಉಕ್ಕುಂದ ಗ್ರಾಮದ ಮುಖ್ಯ ರಸ್ತೆಯಿಂದ ನಗರಕ್ಕೆ ಕೂಡುವ ರಸ್ತೆ ಡಾಂಬರೀಕರಣ, ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿ ಗುಡ್ಡದಿಂದ ಕಾಚಗೊಂಡನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಪುರದಿಂದ ಉಕ್ಕುಂದ  ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗು ಅಂತರಗಂಗೆ ಬೋವಿ ಕಾಲೋನಿಯ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಯಿತು. 


    ಕೆಂಚನಹಳ್ಳಿ ಕಾಲೋನಿಯಿಂದ ಹಡ್ಲಘಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಬಾರಂದೂರು ಮತ್ತು ಮಾವಿನಕೆರೆ ಮುಖ್ಯ ರಸ್ತೆಯಿಂದ ಕೆಂಚನಹಳ್ಳಿ ಮತ್ತು ನೀರುಗುಂಡಿ ಮೊಸರಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಮಾವಿನಕೆರೆ ಕಾಲೋನಿಯಿಂದ ಶಿವಪುರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿಂಗನಹಳ್ಳಿ ಮುಖ್ಯ ರಸ್ತೆಯಿಂದ ಕೆಂಚೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಬಿ.ಎಚ್ ರಸ್ತೆಯಿಂದ ಕೆಂಪೇಗೌಡ ನಗರದ ಮಾರ್ಗವಾಗಿ ಕಾಳಿಂಗನಹಳ್ಳಿ ಕೂಡುವ ರಸ್ತೆ ಕಾಮಗಾರಿ, ಕಾರೇಹಳ್ಳಿ ಭದ್ರಾ ಪ್ಯಾಕೇಜ್ ರಸ್ತೆಯಿಂದ ಬಿ.ಎಚ್ ರಸ್ತೆವರೆಗೆ ಅಭಿವೃದ್ಧಿ ಕಾಮಗಾರಿ, ಹಳೇ ಬಾರಂದೂರು ಮುಖ್ಯ ರಸ್ತೆಯಿಂದ, ಬಿ.ಎಚ್ ರೋಡ್ ಮುಖ್ಯರಸ್ತೆಯವರೆಗೆ ಕಾಂಕ್ರೀಟ್ ರಸ್ತೆ ಮತ್ತು ಬಾಳೇ ಮಾರನಹಳ್ಳಿ ಮುಖ್ಯ ರಸ್ತೆಯಿಂದ ಹಳೇ ಹಿರಿಯೂರು ಚಾನೆಲ್‌ವರಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಜಿಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ಜಿಲ್ಲಾಮಟ್ಟದ ಕ್ರೀಡಾಕೂಟ : ಮಹಿಳಾ ತಂಡಕ್ಕೆ ಹಲವು ಬಹುಮಾನ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ಮಹಿಳಾ ದೈಹಿಕ ಶಿಕ್ಷಣ ಶಿಕ್ಷಕರ ತಂಡ ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ. 
    ಭದ್ರಾವತಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ಮಹಿಳಾ ದೈಹಿಕ ಶಿಕ್ಷಣ ಶಿಕ್ಷಕರ ತಂಡ ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ. 
    ಗುಂಪು ಸ್ಪರ್ಧೆಗಳಾದ ಹ್ಯಾಂಡ್ ಬಾಲ್-ಪ್ರಥಮ ಸ್ಥಾನ ಮತ್ತು ವಾಲಿಬಾಲ್ ಹಾಗೂ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಮುಂಜೀರಾ(ನಾಯಕಿ), ಜ್ಯೋತಿ, ನೂರ್ ಫಾತಿಮಾ, ರತ್ನಮ್ಮ. ರೇವತಿ, ದಿವ್ಯ, ರೇಖಾ, ನಂದಿನಿ, ನಿರ್ಮಲ, ಸವಿತ ಮತ್ತು ಸುನೀತಾಬಾಯಿ ಸೇರಿದಂತೆ ಇನ್ನಿತರರು ತಂಡದಲ್ಲಿ ಭಾಗವಹಿಸಿದ್ದರು. 
    ವೈಯಕ್ತಿಕ ಸ್ಪರ್ಧೆಯಲ್ಲಿ ಪಿ. ಸುಜಾತಾ ಎತ್ತರ ಜಿಗಿತ ಪ್ರಥಮ ಸ್ಥಾನ, ೧೦೦ ಮೀ. ಓಟ ಮತ್ತು ಡಿಸ್ಕಸ್ ಥ್ರೋ ತೃತಿಯ ಸ್ಥಾನ, ಅಮೀರ್ ಉನ್ನಿಸ ಉದ್ದಜಿಗಿತ ಪ್ರಥಮ ಸ್ಥಾನ, ೧೦೦ ಮೀ. ಓಟ ತೃತಿಯ ಸ್ಥಾನ ಮತ್ತು ೮೦೦ ಮೀ. ಓಟ ದ್ವಿತೀಯ ಸ್ಥಾನ, ಫಾತಿಮಾ ಉದ್ದ ಜಿಗಿತ ದ್ವಿತೀಯ ಸ್ಥಾನ ಹಾಗು  ಜಾವಲಿನ್ ಮತ್ತು  ೪೦೦ ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜೇತ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕ, ವ್ಯವಸ್ಥಾಪಕ ಶಿವಲಿಂಗೇಗೌಡ, ಕ್ಷೇತ್ರ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭು. ಪ್ರಮುಖರಾದ ಶ್ರೀಧರ್ ಸಾವಂತ್, ರಾಜಾ ನಾಯ್ಕ, ಶ್ರೀಕಾಂತ್, ಸಿದ್ದಯ್ಯ, ಶಿವರಾಜ್, ಖಚಾಂಚಿ  ಕರಣ ಸಿಂಗ್ ಮತ್ತು ಇತರೆ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದ್ದಾರೆ.