Wednesday, August 11, 2021

ಆ.೧೨ ರಿಂದ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ



    ಭದ್ರಾವತಿ, ಅ. ೧೧: ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಸಮಾರಂಭ ಆ.೧೨ ಮತ್ತು ೧೩ರಂದು ಎರಡು ದಿನ ನಡೆಯಲಿದೆ.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.೧೨ರಂದು ಸಂಜೆ ಗಣಪತಿ, ಗಂಗೆ ಪೂಜೆ, ಗೋಪೂಜೆಯೊಂದಿಗೆ ದೇವಾಲಯ ಪ್ರವೇಶ, ಮಂಗಳವಾದ್ಯ ಶುಭ ಮಂಗಳ ಕೆಲಸಗಳೊಂದಿಗೆ ನಾಂದಿ ಪುಣ್ಯಂ ದೇವಾಯ ಸುದ್ದಿ, ವಾಸ್ತು ಪೂಜೆಯೊಂದಿಗೆ ಗಣಹೋಮ ಮತ್ತು ವಾಸ್ತು ಹೋಮ ಜರುಗಲಿವೆ.
    ಆ.೧೩ರಂದು ಬೆಳಿಗ್ಗೆ ೫ ರಿಂದ ಗಂಗಾಪೂಜೆ, ಗಣಪತಿ, ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ದುರ್ಗಾದೇವತಾ, ನಂದಿ, ನವಗ್ರಹ, ಪಂಚಕಲಶ, ಅಶ್ವಧಿಪಾಲಕರು, ರುದ್ರಹೋಮ, ಕುಂಭಾಭಿಷೇಕ, ಅಷ್ಟೋತರ ಮತ್ತು ಮಹಾಮಂಗಳಾರತಿ ಜರುಗಲಿದ್ದು, ೯.೩೦ ರಿಂದ ೧೦.೩೦ರ ವರೆಗೆ ದೇವಾಲಯ ಉದ್ಘಾಟನೆ ಹಾಗು ಧಾರ್ಮಿಕ ಸಮಾರಂಭ ನಡೆಯಲಿದೆ.
    ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಶ್ರೀ ಸಿದ್ದಾರೂಢ ಬಸವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿ ಮುರುಗೇಶ್ ಸ್ವಾಮೀಜಿ ಮತ್ತು ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಲಿದ್ದು, ಶಾರದ ಅಪ್ಪಾಜಿ, ಪೊಲೀಸ್ ಉಮೇಶ್, ಪ್ರಭಾಕರ ಬೀರಯ್ಯ, ಶಿವಗಂಗಯ್ಯ, ಎಸ್. ಕುಮಾರ್, ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮನೋಹರ್, ಕೆ. ಪರಮೇಶ್, ಮೆಡಿಕಲ್ ಆನಂದ್, ತಿಮ್ಮೇಗೌಡ್ರು, ಕೋಟೇಶ್ವರರಾವ್, ಆನಂದ್, ಸತೀಶ್‌ಗೌಡ, ಎ. ಮಾಧು, ಎಚ್. ಮಹಾದೇವ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  

ಭದ್ರಾವತಿಯಲ್ಲಿ ಒಂದೇ ದಿನ ೧೪ ಸೋಂಕು : ಇಬ್ಬರು ಬಲಿ

     ಭದ್ರಾವತಿ, ಆ. ೧೧: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಏರಿಕೆಯಾಗುತ್ತಿದ್ದು, ಒಂದೇ ದಿನ ೧೪ ಸೋಂಕು ಪತ್ತೆಯಾಗುವುದರೊಂದಿಗೆ ಇಬ್ಬರು ಬಲಿಯಾಗಿದ್ದಾರೆ.
     ಮಂಗಳವಾರ ಕೇವಲ ೪ ಸೋಂಕು ಪತ್ತೆಯಾಗಿದ್ದು, ಬುಧವಾರ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ತಲಾ ೭ ರಂತೆ ಒಟ್ಟು ೧೪ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಇದರಿಂದಾಗಿ ಕೊರೋನಾ ೩ನೇ ಅಲೆ ವ್ಯಾಪಿಸಿರುವ ಆತಂಕ ಎದುರಾಗಿದ್ದು, ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.  

ಬೋರಮ್ಮ ಹೊನ್ನಯ್ಯ ನಿಧನ

ಬೋರಮ್ಮ ಹೊನ್ನಯ್ಯ
     ಭದ್ರಾವತಿ, ಆ. ೧೧: ನಗರಸಭೆ ೨೮ನೇ ವಾರ್ಡ್ ನಗರಸಭಾ ಸದಸ್ಯ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್‌ರವರ ತಾಯಿ ಬೋರಮ್ಮ ಹೊನ್ನಯ್ಯ(೭೨) ಬುಧವಾರ ನಿಧನ ಹೊಂದಿದರು.
     ಮೃತರು ಕಾಂತರಾಜ್ ಸೇರಿದಂತೆ ೩ ಗಂಡು ಹಾಗು ೫ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
     ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ನಗರಸಭಾ ಸದಸ್ಯರು ಮತ್ತು ಕುರುಬ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.