Thursday, January 7, 2021

ಡ್ರೈ ರನ್ ಅನುಷ್ಠಾನಕ್ಕೆ ಉಸ್ತುವಾರಿ ಅಧಿಕಾರಿ, ಮೇಲ್ವಚಾರಕರ ನೇಮಕ

ಭದ್ರಾವತಿ, ಜ. ೭: ತಾಲೂಕಿನಾದ್ಯಂತ ಜ.೮ರಂದು ಕೋವಿಡ್-೧೯ ವ್ಯಾಕ್ಸಿನೇಷನ್ ಡ್ರೈ ರನ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಸ್ತುವಾರಿ ಅಧಿಕಾರಿ ಹಾಗು ಮೇಲ್ವಿಚಾರಕರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್‌ರವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ಹಾಗು ಪೌಷ್ಠಿಕ ಆಹಾರ ವಿಭಾಗದ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮ ಮತ್ತು ಶಿವಮೊಗ್ಗ ನಗರ ಕಾರ್ಯಕ್ರಮ ವ್ಯವಸ್ಥಾಪಕಿ ಮಧುರವರನ್ನು ಮೇಲ್ವಿಚಾರಕರನ್ನಾಗಿ ನೇಮಕಗೊಳಿಸಲಾಗಿದೆ.


ಜಿ+೩ ಗುಂಪು ಮನೆ ಯೋಜನೆ ಮೊದಲನೇ ಕಂತಿನ ಪಾವತಿಗೆ ಅವಕಾಶ

ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಆಶ್ರಮ ಸಮಿತಿ ಸಭೆಯಲ್ಲಿ ತೀರ್ಮಾನ
ಭದ್ರಾವತಿ, ಜ. ೭: ನಗರಸಭೆ ವತಿಯಿಂದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಜಿ+೩ ಗುಂಪು ಮನೆ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ವಂತಿಕೆ ಜಮಾ ಮಾಡಲು ಸೋಮವಾರದಿಂದ ಅವಕಾಶ ಕಲ್ಪಿಸಿಕೊಡಲಾಗಿದೆ.
ಗುರುವಾರ ನಗರಸಭೆ ಪೌರಾಯುಕ್ತರ ಕಛೇರಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಫಲಾನುಭವಿಗಳು ಬ್ಯಾಂಕಿನಲ್ಲಿ ಪ್ರತ್ಯೇಕ ಖಾತೆ ತೆರೆದು ಮೊದಲನೆ ಕಂತಿನ ವಂತಿಕೆ ರು. ೧೦,೦೦೦ ಜಮಾ ಮಾಡಲು ಹಳೇನಗರದ ಬಸವೇಶ್ವರ ವೃತ್ತದಲ್ಲಿ ವ್ಯವಸ್ಥೆ ಕಲ್ಪಿಸಲು ತೀರ್ಮಾನಲಾಗಿದೆ. ಫಲಾನುಭವಿಗಳು ಒಂದೇ ಬಾರಿ ಅಥವಾ ಒಂದು ತಿಂಗಳ ಒಳಗೆ ಮೊದಲ ಕಂತಿನ ವಂತಿಕೆ ಜಮಾ ಮಾಡಬೇಕಾಗಿದೆ. ನಂತರ ಉಳಿದ ಹಣ ಜಮಾ ಮಾಡಲು ೫ ತಿಂಗಳ ಅವಕಾಶ ನೀಡಲಾಗಿದೆ. ಈ ಕುರಿತು ೨-೩ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲೆಡೆ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸದಸ್ಯ ದೇವರಾಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಸದಸ್ಯರಾದ ದೇವರಾಜ್, ಸಂಪತ್‌ರಾಜ್ ಬಾಂಟಿಯಾ, ಗೌರಮ್ಮ, ಸತೀಶ್‌ಕುಮಾರ್ ಹಾಗು ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಉಪಸ್ಥಿತರಿದ್ದರು.

ಚಿತ್ರ: ಡಿ೭-ಬಿಡಿವಿಟಿ೧
ಭದ್ರಾವತಿ ನಗರಸಭೆ ಪೌರಾಯುಕ್ತರ ಕಛೇರಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಗುರುವಾರ ಆಶ್ರಯ ಸಮಿತಿ ಸಭೆ ನಡೆಯಿತು.