Thursday, July 2, 2020

ಎಂಪಿಎಂ ಆಡಳಿತ ಮಂಡಳಿಯಿಂದ ತಾರತಮ್ಯ ದೂರು

ಸೇವಾ ಭದ್ರತೆ ನೀಡಿ, ಪುನಃ ಕಾರ್ಖಾನೆ ಆರಂಭಿಸಿ ಸಚಿವರಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ ಭೇಟಿ ನೀಡಿದ  ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳಿಂದ, ಪಕ್ಷದ ಮುಖಂಡರಿಂದ ಮನವಿ ಹಾಗೂ ದೂರುಗಳನ್ನು ಸಲ್ಲಿಸಲಾಯಿತು.
ಭದ್ರಾವತಿ, ಜು. ೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರ ಜಾರಿಗೊಳಿಸಿದ ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆ ಆಡಳಿತ ಮಂಡಳಿ ತಾರತಮ್ಯ ವೆಸಗಿದೆ ಎಂದು ಆರೋಪಿಸಿ ಮೈಸೂರು ಕಾಗದ ಕಾರ್ಖಾನೆ ಮಜ್ದೂರು ಸಂಘ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್‌ಶೆಟ್ಟರ್‌ಗೆ ದೂರು ಸಲ್ಲಿಸಿದೆ.
ಬುಧವಾರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ವಿಎಸ್‌ಎಸ್ ಯೋಜನೆ ಜಾರಿಗೊಳಿಸಿ ಸರ್ಕಾರ ತೀರ್ಮಾನಿಸಿರುವ ಆದೇಶಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕಾಯಂ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ವೆಸಗಿದೆ. ಸರ್ಕಾರ ನ.೩೦, ೨೦೧೭ರಂತೆ ೧೦೩೪ ಗುತ್ತಿಗೆ ಕಾರ್ಮಿಕರನ್ನು ವಿಎಸ್‌ಎಸ್ ಯೋಜನೆಗೆ ಒಳಪಡಿಸುವಂತೆ ಸೂಚಿಸಿದೆ ಆದರೆ ಆಡಳಿತ ಮಂಡಳಿ ಯಾರನ್ನು ಸಹ ಪರಿಗಣಿಸಿರುವುದಿಲ್ಲ. ೧೦೩೪ ಮಂದಿಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ಮೃತ ನಿಧಿ ಅಥವಾ ವಿಎಸ್‌ಎಸ್ ಸೌಲಭ್ಯ ಯಾವುದನ್ನು ಸಹ ಕೊಟ್ಟಿರುವುದಿಲ್ಲ.
ಸರ್ಕಾರ ನ.೩೦, ೨೦೧೭ರಂತೆ ಅಂತಿಮ ಸೇವಾ ಅವಧಿ ನಿಗದಿಗೊಳಿಸಿದೆ. ಆದರೆ ಆಡಳಿತ ಮಂಡಳಿ ೨೦೧೫/೨೦೧೬/೨೦೧೭ರ ಸೇವಾ ಅವಧಿ ಮೊಟಕುಗೊಳಿಸಿದೆ. ೧೬೩/೬೬ರಂತೆ ಕನಿಷ್ಠ ವೇತನದ ತುಟ್ಟಿಭತ್ಯೆ ನೀಡುವ ಬದಲು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಲಾಗಿದೆ. ೪೫ ದಿನಗಳ ವೇತನ ಬದಲಾಗಿ ಕೆಲವು ಕಾರ್ಮಿಕರಿಗೆ ೨೨ ೧/೨ ದಿನ ವೇತನ ನೀಡಲಾಗಿದೆ. ೨೦೧೧ ರಿಂದ ೨೦೧೫ರ ಉತ್ಪಾದನೆ ಅವಧಿಯ ಹೆಚ್ಚುವರಿ ಕೆಲಸದ ವ್ಯತ್ಯಾಸ ಹಣ ಕೊಟ್ಟಿರುವುದಿಲ್ಲ. ನ.೩೦, ೨೦೧೭ರಂತೆ ಸೇವಾ ಅವಧಿ ಪರಿಗಣಿಸಿ ಗ್ರಾಚ್ಯುಟಿ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೆ ಆಡಳಿತ ೨೦೧೫, ೨೦೧೬ ಮತ್ತು ೨೦೧೭ರಂತೆ ಮೊಟಕುಗೊಳಿಸಿದೆ ಎಂದು ಆರೋಪಿಸಲಾಗಿದೆ.
  ಸೇವಾ ಭದ್ರತೆ ನೀಡಿ :
  ಕಾರ್ಖಾನೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸದ ಮತ್ತು ೧೦ ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಹೊಂದಿರುವ ಉದ್ಯೋಗಿಗಳಿಗೆ ಸೇವಾ ಭದ್ರತೆ ಅಥವಾ ಎರವಲು ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸಚಿವ ಜಗದೀಶ್‌ಶೆಟ್ಟರ್‌ಗೆ ಒತ್ತಾಯಿಸಿದೆ.
ಪ್ರಸ್ತುತ ಕಾರ್ಖಾನೆಯಲ್ಲಿರುವ ೨೨೦ ಉದ್ಯೋಗಿಗಳ ಪೈಕಿ ಸುಮಾರು ೧೦ ರಿಂದ ೨೦ ವರ್ಷಗಳ ಸೇವಾವಧಿ ಬಾಕಿ ಇರುವ ಎಸ್.ಸಿ/ಎಸ್.ಟಿ ಬ್ಯಾಕ್‌ಲಾಗ್ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತ್ಯಂತ ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ವಿಆರ್‌ಎಸ್ ಯೋಜನೆಯ ಸೌಲಭ್ಯದಿಂದಲೂ ವಂಚಿತರಾಗಿದ್ದು, ಅಲ್ಲದೆ ಕ್ಲೋಸರ್ ಯೋಜನೆಗೆ ಒಳಪಟ್ಟಲ್ಲಿ ಅತ್ಯಂತ ಕಡಿಮೆ ಅಂದರೆ ಸುಮಾರು ೬೦ ರಿಂದ ೭೦ ಸಾವಿರಗಳು ಮಾತ್ರ ಸಿಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಸ್ತುತ ೧೧೭ ಮಂದಿಯನ್ನು ವಿವಿಧ ನಿಗಮ/ಮಂಡಳಿಗಳಿಗೆ ಎರವಲು ಸೇವೆ ಮೇಲೆ ಕಳುಹಿಸಿದೆ. ಉಳಿದ ೧೦೩ ಮಂದಿಯನ್ನು ನಿಯೋಜನೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ೨೨೦ ಉದ್ಯೋಗಿಗಳನ್ನು ವಿವಿಧ ನಿಗಮ/ಮಂಡಳಿಗಳಲ್ಲಿ ನಿಯೋಜಿಸಿ ಅವರ ಸೇವೆ ಪೂರ್ಣಗೊಳ್ಳುವವರೆಗೆ ಸೇವಾ ಭದ್ರತೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದೆ.
ಪುನಃ ಕಾರ್ಖಾನೆ ಆರಂಭಿಸಿ:
೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿರು ಪೀಠ ನ್ಯಾಯಾಲಯದ ಆದೇಶವನ್ನು ನೆಪವಾಗಿಟ್ಟುಕೊಂಡು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ಎಂಪಿಎಂ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ನಗರದ ಆರ್ಥಿಕ ಸ್ಥಿತಿಯನ್ನು ಕುಗ್ಗಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ತಕ್ಷಣ ಪುನಃ ಕಾರ್ಖಾನೆ ಆರಂಭಿಸುವಂತೆ ಆಮ್ ಆದ್ಮಿ ಪಾರ್ಟಿ ಸಚಿವರಿಗೆ ಆಗ್ರಹಿಸಿದೆ.
ಪುನಃ ಕಾರ್ಖಾನೆಯನ್ನು ಆರಂಭಿಸುವ ಜೊತೆಗೆ ನಗರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡಬೇಕು. ನಗರದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕೆಂದು ಒತ್ತಾಯಿಸಿದೆ.

ವೈದ್ಯರ ಸೇವೆ ಎಂದಿಗೂ ಅವಿಸ್ಮರಣೀಯ : ಎನ್. ಕೃಷ್ಣಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜು. ೨: ಜಗತ್ತಿನಾದ್ಯಂತ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು. 
ಅವರು ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
ಕೊರೋನಾ ವೈರಸ್ ನಿರ್ಮೂಲನೆಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ತಾಲೂಕಿನಲ್ಲಿ ವೈದ್ಯರು ಯಾವುದೇ ಭೀತಿ ಇಲ್ಲದೆ ಪ್ರಾಮಾಣಿಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾಸಂಸ್ಥೆ ವತಿಯಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಮಾತನಾಡಿ, ಜನರು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಂಡಲ್ಲಿ ಮಾತ್ರ ಕೊರೋನಾ ವೈರಸ್ ನಿಮೂರ್ಲನೆ ಸಾಧ್ಯ. ಕೊರೋನಾ ವೈರಸ್‌ಗೆ ಯಾರು ಸಹ ಭೀತಿಪಡುವ ಅಗತ್ಯವಿಲ್ಲ. ಎಲ್ಲರೂ ಜಾಗ್ರತೆಯಿಂದ ನಡೆದುಕೊಳ್ಳಬೇಕೆಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್, ಕಿರಿಯ ಆರೋಗ್ಯ ಸಹಾಯಕ ಎಚ್.ಎಂ ನಾಗರಾಜಪ್ಪ, ಶ್ರೀಕಾಂತ್, ಎಸ್.ಜೆ. ಮಹೇಶ್ವರ, ಪಿ. ಕೃಷ್ಣ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಕೆ ಚಂದ್ರಪ್ಪ, ಉಪಾಧ್ಯಕ್ಷ ಅಶೋಕ್‌ರಾವ್, ಖಜಾಂಚಿ ಎಸ್.ಕೆ ಮೋಹನ್, ರಂಗನಾಥ ಪ್ರಸಾದ್, ಎಂ.ಡಿ ಮಲ್ಲಿಕಾರ್ಜುನ, ಎಂ.ಎಸ್ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.