Saturday, August 12, 2023

ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು ‘ತೆರೆದ ಮನೆ’ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಸಂಚಾರಿ ಪೊಲೀಸರು

ಭದ್ರಾವತಿ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು 'ತೆರೆದ ಮನೆ' ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಭದ್ರಾವತಿ, ಆ. ೧೨: ಸಮಾಜದಲ್ಲಿ ಪೊಲೀಸ್ ಠಾಣೆ ಎಂದರೆ ಈಗಲೂ ಬಹುತೇಕ ಮಂದಿಗೆ ಭಯ. ಅದರಲ್ಲೂ ಕೆಲವರು ಸಮಸ್ಯೆಗಳು ಎದುರಾದರೂ ಸಹ ಠಾಣೆ ಬಳಿ ಮಾತ್ರ ಸುಳಿಯುವುದಿಲ್ಲ. ಇನ್ನೂ ಮಕ್ಕಳಿಗೆ ಪೊಲೀಸರು ಕಂಡರೇ ಭಯ. ಇಂತಹ ವಾತಾವರಣ ದೂರವಾಗಿಸಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ.
    ತೆರೆದ ಮನೆ ಎಂಬ ಕಾರ್ಯಕ್ರಮದ ಮೂಲಕ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಸಲು ಇಲಾಖೆ ಪ್ರಯತ್ನಿಸುತ್ತಿದೆ. ಪೊಲೀಸ್ ಠಾಣೆಗಳ ಬಗ್ಗೆ ಹೊಂದಿರುವ ಮನೋಭಾವನೆ ದೂರವಾಗಿಸಿ ಅಪರಾಧಗಳ ಕುರಿತು ಹಾಗು ಠಾಣೆಗಳ ಕಾರ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
    ಈ ಹಿಂದೆ ಆರಂಭಗೊಂಡಿದ್ದ ತೆರೆದ ಮನೆ ಕಾರ್ಯಕ್ರಮ ಇದೀಗ ಪುನಃ ಆರಂಭಿಸಲಾಗಿದ್ದು, ನಗರದ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಠಾಣಾ ನಿರೀಕ್ಷಕಿ ಶಾಂತಲ ಹಾಗು ಸಿಬ್ಬಂದಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಕಾಲೇಜಿನ ಪ್ರೌಢಶಾಲೆ ವಿಭಾಗದ ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂವರ ಸೆರೆ : ೧ ಕೆ.ಜಿ ೪೦೮ ಗ್ರಾಂ. ಗಾಂಜಾ ವಶ

    ಭದ್ರಾವತಿ, ಆ. ೧೨: ಇಲ್ಲಿನ ಹಳೇನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ನಗರದ ತರೀಕೆರೆ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗೆ ಮುಬಾರಕ್ ಅಲಿಯಾಸ್ ಡಿಚ್ಚಿ (೨೭), ಬಾಬು (೨೦) ಮತ್ತು ಪರ್ವಿಜ್ (೨೫) ಗಾಂಜಾ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿ ಒಟ್ಟು ೫೦ ಸಾವಿರ ರು. ಮೌಲ್ಯದ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಒಣ ಗಾಂಜಾ ಹಾಗು ೩೦೦ ರು. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
    ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಿರಣ್‌ಕುಮಾರ್, ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆ

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೮ : ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕಿರಣ್‌ಕುಮಾರ್ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಆಯ್ಕೆಯಾದರು.
    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಗೋಕುಲ್ ಕೃಷ್ಣ ಹಾಗು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

ಕೂಡ್ಲಿಗೆರೆ ಗ್ರಾ.ಪಂ ಅಧ್ಯಕ್ಷರಾಗಿ ಎಂ. ಜಯಣ್ಣ, ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧ ಆಯ್ಕೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೧೨: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಪಂಚಾಯಿತಿಯಲ್ಲಿ ನಡೆದ ೨ನೇ ಅವಧಿಗೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಎಂ. ಜಯಣ್ಣ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಮ್ಮ ಆಯ್ಕೆಯಾದರು.
    ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಂಗಣ್ಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಲಕ್ಷ್ಮೀಕಾಂತ್‌, ಕಾರ್ಯದರ್ಶಿ ಸತೀಶ್‌ ಗೌಡ ಉಪಸ್ಥಿತರಿದ್ದರು.
    ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್‌ ಹಾಗು ಕಾಂಗ್ರೆಸ್‌ ಪಕ್ಷದ ಮುಖಂಡರು, ಸ್ಥಳೀಯರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.