Tuesday, June 15, 2021

ಉಕ್ಕಿನ ನಗರದಲ್ಲಿ ಇಳಿಕೆಯಾದ ಕೊರೋನಾ : ಕೇವಲ ೩೪ ಸೋಂಕು ಪತ್ತೆ

ಭದ್ರಾವತಿ, ಜೂ. ೧೫: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ತೀರ ಇಳಿಮುಖವಾಗಿದ್ದು, ಮಂಗಳವಾರ ಕೇವಲ ೩೪ ಪ್ರಕರಣಗಳು ಪತ್ತೆಯಾಗಿವೆ.
   ಒಟ್ಟು ೫೬೩ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೩೪ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೫೨ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೬೪೫೦ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೫೪೩೭ ಮಂದಿ ಗುಣಮುಖರಾಗಿದ್ದಾರೆ.
   ಒಟ್ಟು ೧೦೧೩ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ಒಟ್ಟು ೧೭೭ ಮಂದಿ ಮೃತಪಟ್ಟಿದ್ದಾರೆ. ೧೬೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು ೨೩ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ೧೨೦ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೭ ಜೋನ್‌ಗಳು ಸಕ್ರಿಯವಾಗಿದ್ದು, ೧೭ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಕಲಾವಿದರ ನೆರವಿಗೆ ಮುಂದಾಗಿ : ಪೌರಾಯುಕ್ತರಿಗೆ ಮನವಿ

ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರ ನೆರವಿಗೆ ಮುಂದಾಗುವಂತೆ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಭದ್ರಾವತಿ ತಾಲೂಕು ಶಾಖೆ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜೂ. ೧೫: ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರ ನೆರವಿಗೆ ಮುಂದಾಗುವಂತೆ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ತಾಲೂಕು ಶಾಖೆ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಸಂಘದಲ್ಲಿ ಸುಮಾರು ೧೬೦ಕ್ಕೂ ಹೆಚ್ಚು ಕಲಾವಿದರು ಸದಸ್ಯರಾಗಿದ್ದು, ಬಹುತೇಕ ಕಲಾವಿದರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ವಿವಿಧ ವಾದ್ಯ ನುಡಿಸುವ ಕಲಾವಿದರು, ಜಾನಪದ, ಭಾವಗೀತೆ, ಭಕ್ತಿಗೀತೆ ಗಾಯಕ-ಗಾಯಕಿಯರು, ನೃತ್ಯಗಾರರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.
   ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಸುಮಾರು ಒಂದೂವರೆ ವರ್ಷದಿಂದ ಕಲಾವಿದರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಟುಂಬ ನಿರ್ವಹಣೆ ಸಹ ಕಷ್ಟಕರವಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಲಾವಿದರ ನೆರವಿಗೆ ಮುಂದಾಗಬೇಕೆಂದು ಮನವಿ ಮಾಡಲಾಗಿದೆ.
   ಸಂಘದ ಅಧ್ಯಕ್ಷ ಆರ್. ಹರೀಶ್, ಸಂಘಟನಾ ಕಾರ್ಯದರ್ಶಿ ಬಿ. ಚಿದಾನಂದ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಸುರೇಶಪ್ಪ ನಿಧನ

ಮುಖ್ಯ ಶಿಕ್ಷಕ ಸುರೇಶಪ್ಪ
    ಭದ್ರಾವತಿ, ಜೂ. ೧೫: ಹಳೇನಗರದ ಭೂತನಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶಪ್ಪ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳವಾರ ನಿಧನ ಹೊಂದಿದರು.
    ನಗರ ಆಹಾರ ಶಾಖೆಯ ಆಹಾರ ನಿರೀಕ್ಷಕಿ, ಪತ್ನಿ ಡಿ. ಗಾಯತ್ರಿ ದೇವಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಸುರೇಶಪ್ಪ ಮುಖ್ಯ ಶಿಕ್ಷಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ನಗರ ಆಹಾರ ಇಲಾಖೆ ನಿರೀಕ್ಷಕ ಎ.ಟಿ ಬಸವರಾಜ, ಗೋದಾಮು ವ್ಯವಸ್ಥಾಪಕ ಶ್ರೀಕಂಠೇಗೌಡ, ನಾಗರಾಜ್, ವಾಗೀಶ್, ಸತೀಶ್ ಹಾಗು ತಾಲೂಕು ಪಡಿತರ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಸಂಕಷ್ಟದ ಸಮಯದಲ್ಲಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ : ಎಸ್. ರುದ್ರೇಗೌಡ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೫: ಕಷ್ಟಕಾಲದಲ್ಲಿ ಸ್ಪಂದಿಸುವ ಮನೋಭಾವನೆಯೊಂದಿಗೆ ಕೈಗೊಳ್ಳುವ ಸೇವಾ ಕಾರ್ಯಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಕೊರೋನಾ ಪರಿಣಾಮದಿಂದಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಕೈಗೊಳ್ಳುತ್ತಿರುವ ಮಹಾತ್ಕಾರ್ಯಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
     ಅವರು ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಸಂಸದ ಬಿ.ವೈ ರಾಘವೇಂದ್ರ ಕುಟುಂಬ ಸದಸ್ಯರು ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ಹಾಗು ಸೇವಾ ಭಾರತಿ ಸಂಸ್ಥೆಗಳು ಹಲವಾರು ವರ್ಷಗಳಿಂದ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ ಇದೀಗ ಕೈಗೊಳ್ಳುತ್ತಿರುವ ದಿನಸಿ ಸಾಮಗ್ರಿಗಳ ವಿತರಣೆ ಬಹುದೊಡ್ಡ ಕಾರ್ಯವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಸುಮಾರು ೩೫ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಅದರಲ್ಲೂ ಗುಣಮಟ್ಟದ ದಿನಸಿ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ವಿಶೇಷವಾಗಿದೆ. ಸಂಕಷ್ಟದ ಸಮಯದಲ್ಲೂ ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶ ಈ ಮೂಲಕ ತಿಳಿಸಲಾಗುತ್ತಿದೆ. ಇದು ಇತರರಿಗೆ ಸ್ಪೂರ್ತಿದಾಯಕವಾಗಬೇಕು. ಇದೆ ರೀತಿ ಹಲವಾರು ಸಂಘ-ಸಂಸ್ಥೆಗಳು ಎಲೆಮರೆ ಕಾಯಿಯಂತೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ರೀತಿಯ ಸೇವಾ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಗಳ ಸೇವಾ ಕಾರ್ಯಗಳಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್, ನಗರಸಭಾ ಸದಸ್ಯೆ ಶಶಿಕಲಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅವಿನಾಶ್, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೃತ್ತಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣಗೊಳಿಸಿ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ
     ಭದ್ರಾವತಿ ಜೂ. ೧೫ :  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡುವಂತೆ ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷಣ ಹಾಗು ಸ್ನೇಹಿತರು  ಒತ್ತಾಯಿಸಿದ್ದಾರೆ.
    ತಾಲೂಕಿನಾದ್ಯಂತ ಅನೇಕ ಆದರ್ಶಗಳ ವ್ಯಕ್ತಿಗಳ ಹೆಸರಿನಲ್ಲಿ ವೃತ್ತಗಳಿದ್ದು, ಮಹಾನ್ ಸಾಧಕರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಈ  ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಹ ಒಬ್ಬರಾಗಿದ್ದಾರೆ. ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀಗಳ ಪುತ್ಥಳಿಯನ್ನು ಆನಾವರಣಗೊಳಿಸುವ ಜೊತೆಗೆ ಅವರ ಹೆಸರನ್ನು ನಾಮಪಕರಣಗೊಳಿಸುವಂತೆ ನಗರಸಭೆ ಆಡಳಿತಕ್ಕೆ ಕೋರಲಾಗಿದೆ.