ಗುರುವಾರ, ಸೆಪ್ಟೆಂಬರ್ 25, 2025

ಚತುಷ್ಪಥ ರಸ್ತೆ ಕಾಮಗಾರಿ ಆರಂಭ : ನೂರಾರು ವರ್ಷಗಳ ಬೃಹತ್ ಮರಗಳ ತೆರವು

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಕಳೆದ ೨ ದಶಕಗಳಿಂದ ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ನಗರದ ಹೃದಯ ಭಾಗದ ರಸ್ತೆಗಳು ಹಾಗು ಬೈಪಾಸ್ ರಸ್ತೆ ಅಗಲೀಕರಣಗೊಳಿಸಲಾಗಿದ್ದು, ನೂರಾರು ವರ್ಷಗಳ ರಸ್ತೆ ಬದಿಯ ಬೃಹತ್ ಮರಗಳನ್ನು ತೆರವುಗೊಳಿಸಲಾಗಿದೆ. ಇದೀಗ ಮತ್ತಷ್ಟು ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಮೀಪದ ಕವಲಗುಂದಿ ಸೇತುವೆಯನ್ನು ಸಹ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ರಸ್ತೆ ಅಗಲೀಕರಣದಿಂದ ಭವಿಷ್ಯದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಸುಮಾರು ೨೫ ವರ್ಷಗಳ ಕಾಲದ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಸಿದ್ದಾರೆ

ನೂತನ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ಥಿತ್ವಕ್ಕೆ

ಸೆ.೨೮ರಂದು ಕೇಂದ್ರ ಕಾರ್ಯಾಲಯ, ನಾಮಫಲಕ ಉದ್ಘಾಟನೆ 

ಭದ್ರಾವತಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ.ವಿನೋದ್ ಮಾತನಾಡಿದರು.      
    ಭದ್ರಾವತಿ : ಸಮಾನ ಮನಸ್ಕ ಬಹುಜನರನ್ನು ಸೆಳೆದುಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಅಲೆಮಾರಿಗಳು, ಶೋಷಿತರು, ದಮನಿತರನ್ನು ಒಟ್ಟಿಗೆ ಬೆಸೆಯುವಂತೆ ಮಾಡಲು ಹಾಗೂ ಕಳಚಿಹೋದ ಕೊಂಡಿಗಳನ್ನು ಬೆಸೆಯಲು ಮತ್ತು ಅನ್ಯಾಯದ ವಿರುದ್ದ ಸ್ವಾಭಿಮಾನದಿಂದ ಸೆಟೆದು ನಿಲ್ಲಲು ನೂತನವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. 
    ಸೆ.೨೮ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಳುವಳಿಯ ಬೀಡಾದ ನಗರದಲ್ಲಿ ನ್ಯಾಯಯುತ ಹಕ್ಕುಗಳಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್‌ರವರ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಯುವ ಹೋರಾಟಗಾರರು, ಪ್ರಗತಿಪರ ಚಿಂತಕರನ್ನು ಒಗ್ಗೂಡಿಸಿಕೊಂಡು ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಪ್ರಸ್ತುತ ಹೊಸ ಸಂಘಟನೆ ಅಗತ್ಯತೆ ಮನಗಂಡು ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದರು. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯಾದ್ಯಕ್ಷ ವಿ.ವಿನೋದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಆರ್.ಟಿ.ಓ ಇಲಾಖೆ ನೌಕರ ದಲಿತ ಮುಖಂಡ ಎನ್. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ, ಶಿಕ್ಷಕ ಎಂ.ಆರ್ ರೇವಣಪ್ಪರವರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ಪ್ರಧಾನ ಹಾಗು ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಶಿಕ್ಷಕಿ ಭಾರತಿ ಗೋವಿಂದಸ್ವಾಮಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಡಿಎಸ್‌ಎಸ್ ಸಂಸ್ಥಾಪಕರಾದ ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ನಾಗತಿಬೆಳಗಲು ತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಎನ್ ನರಸಿಂಹಮೂರ್ತಿ, ಕಾಗದನಗರ ಜಿಯುಎಲ್‌ಪಿಎಸ್ ಶಿಕ್ಷಕ ಸಿ. ಚನ್ನಪ್ಪ, ಶಿಕ್ಷಕಿಯರಾದ ರಾಧಾಬಾಯಿ ಹಾಜ್ಯನಾಯ್ಕ, ಶಾರದ ಪ್ರೇಮ್ ಕುಮಾರ್ ಮತ್ತು ಎಸ್. ಭಾರತಿ ಅವರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ ಎಂದರು. 
    ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಪದಾಧಿಕಾರಿಗಳಾದ ಸುಶೀಲಮ್ಮ, ಜೆ. ಸೆಂದಿಲ್‌ಕುಮಾರ್, ಸುರೇಶ್, ನೇತ್ರಾವತಿ, ಎ. ಮಂಜು, ಗಿರೀಶ್, ಭಾಗ್ಯ, ಮಂಗಳ, ಜಿಲ್ಲಾಧ್ಯಕ್ಷ ಅರುಳ್, ಜಯಶೀಲ, ತಾಲೂಕು ಅಧ್ಯಕ್ಷ ರಾಕೇಶ್, ಗೋವಿಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ದಸರಾ ಆಹ್ವಾನ ಪತ್ರಿಕೆಯಲ್ಲಿ ವಿಎಚ್‌ಪಿ ಸೇವೆ, ಪ್ರತಿನಿಧಿ ಶ್ರಮ ಕಡೆಗಣನೆ

ತಪ್ಪು ಸರಿಪಡಿಸಿಕೊಂಡು ಮರುಮುದ್ರಿಸಲು ನಗರಸಭೆ ಆಡಳಿತಕ್ಕೆ ಮನವಿ 

ಭದ್ರಾವತಿ ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ : ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ನಗರಸಭೆಯಿಂದ ಪ್ರಸ್ತುತ ನಾಡಹಬ್ಬ ದಸರಾ ಆಚರಣೆ ಸಂಪ್ರದಾಯ ಬದ್ಧವಾಗಿ, ವೈಭವಯುತವಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯಾದ ಹಾ. ರಾಮಪ್ಪರವರ ನಿಸ್ವಾರ್ಥ ಸೇವೆ ಹೆಚ್ಚಿನದ್ದಾಗಿದೆ. ಹಬ್ಬ ಆರಂಭದಿಂದ ಹಿಡಿದು ಮುಕ್ತಾಯದವರೆಗೂ ಪ್ರತಿ ಹಂತದಲ್ಲೂ ಸಲಹೆ-ಸಹಕಾರ, ಮಾರ್ಗದರ್ಶನ ನೀಡುವ ಮೂಲಕ ಹಬ್ಬದ ಮಹತ್ವ ಹಾಗು ಪರಂಪರೆ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಪರಿಷತ್ ಇದನ್ನು ಸೇವೆಯ ಒಂದು ಭಾಗವಾಗಿ ಪರಿಗಣಿಸಿದೆ. ಪರಿಷತ್ ಸೇವೆ ಹಾಗು ಪ್ರತಿನಿಧಿಯ ಶ್ರಮ ಕಡೆಗಣಿಸಿರುವುದು ವಿಷಾದನೀಯ. 
    ಈ ಹಿಂದೆ ಸಹ ಇದೆ ರೀತಿಯ ತಪ್ಪು ನಡೆದಿದ್ದು, ಅದನ್ನು ನಾಡಹಬ್ಬ ದಸರಾ ಆಚರಣೆ ಸಮಿತಿಯವರು ಸರಿಪಡಿಸಿಕೊಂಡಿದ್ದರು. ಇದೀಗ ಪುನಃ ಉದ್ದೇಶಪೂರ್ವಕವಾಗಿ ಪರಿಷತ್ ಹಾಗು ಅದರ ಪ್ರತಿನಿಧಿ ಹೆಸರನ್ನು ನಮೂದಿಸದೆ ಸೇವೆ ಹಾಗು ಶ್ರಮ ಕಡೆಗಣಿಸಲಾಗಿದೆ. ತಕ್ಷಣ ತಪ್ಪು ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆಯಲ್ಲಿ ಮರುಮುದ್ರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 
    ವಿಶ್ವ ಹಿಂದೂ ಪರಿಷತ್ ಪ್ರತಿನಿಧಿ ಹಾ. ರಾಮಪ್ಪ, ಬಜರಂಗದಳ ಜಿಲ್ಲಾ ಸಂಚಾಲಕ ರಾಘವನ್ ವಡಿವೇಲು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.