Sunday, May 11, 2025

ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ : ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ


ಇಆರ್‌ಎಸ್‌ಎಸ್-೧೧೨ ವಾಹನದ  ಚಾಲಕ ಸಂತೋಷ್ ಕುಮಾರ್‌
ಭದ್ರಾವತಿ : ತಕ್ಷಣ ಕಾರ್ಯ ಪ್ರವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನನ್ನು ರಕ್ಷಿಸುವಲ್ಲಿ ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಗ್ರಾಮದ ಯುವಕನೋರ್ವ ಚಾಲಕ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಮೇ.೭ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ಯುವಕನ ತಾಯಿ ೧೧೨ ವಾಹನಕ್ಕೆ ತುರ್ತು ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಇಆರ್‌ಎಸ್‌ಎಸ್ ಅಧಿಕಾರಿ, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವಿನಯ್ ಕುಮಾರ್ ಹಾಗು ಚಾಲಕ ಸಂತೋಷ್ ಕುಮಾರ್‌ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ ಆತ್ಮಹತ್ಯೆ ಯತ್ನ ತಡೆದು ಯುವಕನಿಗೆ ಧೈರ್ಯ ತುಂಬಿದ್ದಾರೆ.  


ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ವಿನಯ್ ಕುಮಾರ್ 
    ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅಭಿನಂದಿಸಿದ್ದಾರೆ.  

ವಿಜೃಂಭಣೆಯಿಂದ ಜರುಗಿದ ನರಸಿಂಹ ಜಯಂತಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ೬ ಗಂಟೆಗೆ ನಿರ್ಮಾಲ್ಯ ೮ ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ದೇವಸ್ಥಾನದಿಂದ ಉತ್ಸವ ಮೂರ್ತಿ ಮೆರವಣಿಗೆ ಆರಂಭಗೊಂಡು ಬ್ರಾಹ್ಮಣರ ಬೀದಿ, ರಥ ಬೀದಿ ರಸ್ತೆ,  ತರಿಕೆರೆ ರಸ್ತೆ, ಹಾಗು ಎನ್.ಎಸ್.ಟಿ ರಸ್ತೆ ಮೂಲಕ ಪುನಃ ದೇವಸ್ಥಾನಕ್ಕೆ ಹಿಂದಿರುಗಿತು. 
    ವೇದಘೋಷ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಗೆ ಕಲ್ಯಾಣೋತ್ಸವ ನಡೆಯಿತು. ಮೇ.೧೨ರಂದು ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ರಥೋತ್ಸವ ಜರುಗಲಿದೆ. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಸಹಾಯಕ ಅರ್ಚಕ ಶ್ರೀನಿವಾಸ್ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಭಾರತ ದೇಶ ಯುದ್ಧ ಬಯಸಿಲ್ಲ, ಆರಂಭಿಸಿಲ್ಲ : ಕದನವಿರಾಮ ಪಾಕಿಸ್ತಾನದ ಆಯ್ಕೆ

ಅಮೇರಿಕಾ ದೇಶದ ಮಧ್ಯಸ್ಥಿಕೆ ಭಾರತ ದೇಶಕ್ಕೆ ಅಗತ್ಯವಿಲ್ಲ 

ಜಿ. ಧರ್ಮಪ್ರಸಾದ್, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಲ, ಭದ್ರಾವತಿ 
    ಭದ್ರಾವತಿ : ಭಾರತ ದೇಶ ಪಾಕಿಸ್ತಾನದ ಮೇಲೆ ಯುದ್ಧ ನಡೆಸಿಲ್ಲ. ಈಗಲೂ ಸಹ ಯುದ್ಧ ನಡೆಸಲು ಬಯಸಲ್ಲ. ಭಯೋತ್ಪಾದಕನ್ನು ನಿರ್ಮೂಲನೆ ಮಾಡುವುದು ಭಾರತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆ ಯುದ್ಧದ ರೂಪಕ್ಕೆ ಬದಲಾಗಿದೆ. ಈ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವುಗಳು ಈ ದೇಶದ ಜನರ ನಿಲುವುಗಳಾಗಿವೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ಕೈಗೊಂಡ ನಿಲುವುಗಳಲ್ಲ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ. 
    ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯುದ್ಧ ಕುರಿತು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಯುದ್ಧದ ಸ್ಪಷ್ಟನೆ ಅರಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಭಾರತ ದೇಶ ಭಯೋತ್ಪಾದಕರು ಹಾಗು ಅವರ ಉಗ್ರ ಚಟುವಟಿಕೆಗಳ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಅದು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಈ ವಿಚಾರ ನೇರವಾಗಿ ಭಾರತ ದೇಶ ಪಾಕಿಸ್ತಾನ ತಿಳಿಸಿದೆ. ಆದರೂ ಸಹ ವಿನಾಃಕಾರಣ ಭಾರತ ದೇಶದ ಮೇಲೆ ಯುದ್ದ ನಡೆಸಿದೆ. ಮೇಲ್ನೋಟಕ್ಕೆ ಕದನ ವಿರಾಮ ಎಂದು ಘೋಷಿಸಲಾಗಿದೆಯಾದರೂ ಈ ಯುದ್ಧ ಈಗಲೂ ನಿಂತಿಲ್ಲ ಮುಂದುವರೆಯುತ್ತಿದೆ ಎಂದರು. 
    ಪಾಕಿಸ್ತಾನದ ಮೇಲೆ ಯುದ್ದ ನಿಲ್ಲಿಸಲು ಭಾರತ ಯುದ್ಧ ಆರಂಭಿಸಿಲ್ಲ. ಪಾಕಿಸ್ತಾನವೇ ಯುದ್ಧ ಆರಂಭಿಸಿ ಇದೀಗ ಕದನ ವಿರಾಮಕ್ಕೆ ಮನವಿ ಮಾಡಿದೆ. ಇದಕ್ಕೆ ಭಾರತ ದೇಶ ಸ್ಪಂದಿಸಿದೆ. ಪಾಕಿಸ್ತಾನ ಯುದ್ದ ನಿಲ್ಲಿಸಿದರೆ ಭಾರತವೂ ಯುದ್ಧ ನಿಲ್ಲಿಸುತ್ತದೆ. ಇದು ಸತ್ಯವಾದ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಅಮೇರಿಕಾ ದೇಶದ ಮಧ್ಯಸ್ಥಿಗೆಯಿಂದ ಭಾರತ ದೇಶ ಯುದ್ಧ ನಿಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಕಾಶ್ಮೀರದ ವಿಚಾರವಾಗಲಿ ಅಥವಾ ಯುದ್ಧದ ವಿಚಾರವಾಗಲಿ ಸೂಕ್ತ ನಿರ್ಣಯ ಕೈಗೊಳ್ಳುವ ಶಕ್ತಿ ಭಾರತ ದೇಶ ಹೊಂದಿದೆ. ಪ್ರಸ್ತುತ ಭಾರತ ದೇಶ ಕೈಗೊಂಡಿರುವ ಎಲ್ಲಾ ನಿಲುವುಗಳು ಪರಿಪೂರ್ಣವಾಗಿವೆ, ಸ್ಪಷ್ಟತೆಯಿಂದ ಕೂಡಿವೆ ಎಂದರು. 
    ಯುದ್ಧದ ಸಂದರ್ಭದಲ್ಲಿ ದೇಶದ ಜನರು ಸಾರ್ವಭೌಮತೆಯನ್ನು ಬೆಂಬಲಿಸಬೇಕಾಗಿದೆ. ದೇಶದ ಆಡಳಿತ ನಡೆಸುವ ಸರ್ಕಾರ ಹಾಗು ಅದರ ನೇತೃತ್ವ ವಹಿಸಿರುವ ನಾಯಕನನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಇಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ನಾಯಕನ ಹಿಂಬಾಲಕರಾಗಬೇಕು ಅಷ್ಟೆ. ಇದರ ಯಶಸ್ಸು ಸರ್ಕಾರ ಮತ್ತು ನಾಯಕನಿಗೆ ಸಲ್ಲುತ್ತದೆ. ಅಂದರೆ ಇಡೀ ದೇಶದ ಜನರಿಗೆ ಸಲ್ಲುತ್ತದೆ ಹೊರತು. ಯಾವುದೋ ಪಕ್ಷಕ್ಕೆ ಅಥವಾ ಸಂಸ್ಥೆಗೆ ಸಲ್ಲುವುದಿಲ್ಲ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕೆಂದರು.