Tuesday, December 14, 2021

ಪರಿಷತ್ ಚುನಾವಣೆ : ಜೆಡಿಯು ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡಗೆ ೩ ಮತ


ಶಶಿಕುಮಾರ್ ಎಸ್ ಗೌಡ
    ಭದ್ರಾವತಿ, ಡಿ. ೧೪: ಸಮಾಜವಾದಿ ಚಿಂತನೆಗಳ ನೆಲೆಗಟ್ಟಿನ ಮೇಲೆ ಈಗಲೂ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸುತ್ತಿರುವ ನಗರದ ಜನ್ನಾಪುರ ಹಾಲಪ್ಪಶೆಡ್ ನಿವಾಸಿ ಶಶಿಕುಮಾರ್ ಎಸ್ ಗೌಡ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ೩ ಮತಗಳನ್ನು ಪಡೆದುಕೊಂಡಿದ್ದಾರೆ.
    ಸಾರ್ವತ್ರಿಕ ಚುನಾವಣೆಗಳಲ್ಲಿ ನೈತಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶದೊಂದಿಗೆ ಶಶಿಕುಮಾರ್ ಎಸ್ ಗೌಡ ಲೋಕಸಭೆ, ವಿಧಾನಸಭೆ, ನಗರಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ವಿಧಾನಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸಿ ಗಮನ ಸೆಳೆದಿದ್ದರು.
    ಜನತಾದಳ(ಸಂಯುಕ್ತ) ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕುಮಾರ್ ಎಸ್ ಗೌಡ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಪ್ರಚಾರ ನಡೆಸಿದ್ದರು.

ಅಕ್ರಮವಾಗಿ ಕೂಡಿಹಾಕಲಾಗಿದ್ದ ೧೬ ಗೋವುಗಳ ರಕ್ಷಣೆ :

ಭದ್ರಾವತಿ ಹಳೇನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ರಕ್ಷಿಸಿರುವುದು.  
     ಭದ್ರಾವತಿ, ಡಿ. ೧೪: ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಇಲ್ಲಿನ ಹಳೇನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ರಕ್ಷಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ತಬ್ರೇಜ್ ಎಂಬುವವರಿಗೆ ಸೇರಿದ ಒಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ಒಟ್ಟು ೧೦ ಗೋವುಗಳನ್ನು ಹಾಗು ಈತನಿಗೆ ಸೇರಿದ ಮತ್ತೊಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಹಾಗು ಜಾಫರ್ ಸಾಧಿಕ್ ಎಂಬುವರ ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಒಟ್ಟು ೧೬ ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
    ಗೋ ಮಾಂಸದ ಉದ್ದೇಶಕ್ಕಾಗಿ ಗೋವುಗಳನ್ನು ಕೂಡಿಹಾಕಲಾಗಿತ್ತು ಎನ್ನುವ ಮಾಹಿತಿಗಳ ಆಧಾರದ ಮೇರೆಗೆ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಬ್ರೇಜ್ ಮತ್ತು ಜಾಫರ್ ಸಾಧಿಕ್ ತಲೆ ಮರೆಸಿಕೊಂಡಿದ್ದಾರೆ.