Tuesday, June 23, 2020

ಮುಂಬೈಯಿಂದ ಬಂದಿದ್ದ ಮಹಿಳೆಗೆ ಕೊರೋನಾ ವೈರಸ್

ಕಾಗದನಗರದ ೬ನೇ ವಾರ್ಡಿನಲ್ಲಿ ಆತಂಕ 

ಭದ್ರಾವತಿ ಕಾಗದನಗರದ ೬ನೇ ವಾರ್ಡಿನ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂಬ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತ ಸಂಚಾರ ನಿರ್ಬಂಧಿಸಿ ಕಟ್ಟೆಚ್ಚರ ಕೈಗೊಂಡಿತು. 
ಭದ್ರಾವತಿ, ಜೂ. ೨೩: ಕೆಲವು ದಿನಗಳ ಹಿಂದೆ ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ಪ್ರಕರಣ ಇದೀಗ ಕಾಗದನಗರಕ್ಕೂ ವಿಸ್ತರಿಸಿಕೊಂಡಿದೆ. ೬ನೇ ವಾರ್ಡಿನ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ವಾರ್ಡಿನ ೩-೪ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 
ಸ್ವಂತ ವಾಹನದಲ್ಲಿ ಮುಂಬೈ ಚಂಬುರೂಗೆ ಜೂ.೫ ರಂದು ಮಗುವಿನೊಂದಿಗೆ ಪ್ರಯಾಣ ಬೆಳೆಸಿದ್ದ ಮಹಿಳೆ ವಾಪಾಸು ರೈಲಿನ ಮೂಲಕ ಬೆಂಗಳೂರು ಮತ್ತು ಕೆ.ಆರ್ ಪೇಟೆಗೆ ತೆರಳಿ ಪುನಃ ಅಲ್ಲಿಂದ ಜೂ.೧೭ರಂದು ನಗರಕ್ಕೆ ಆಗಮಿಸಿದ್ದು, ಮೊದಲು ಜೂ.೧೮ರಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ.  ನಂತರ ಮಹಿಳೆ ಮತ್ತು ಮಗು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. 
ಇಬ್ಬರ ಗಂಟಲು ಮಾದರಿಯನ್ನು ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಸೋಮವಾರ ರಾತ್ರಿ ಮಹಿಳೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಮಗುವಿನಲ್ಲಿ ಯಾವುದೇ ವೈರಸ್ ಪತ್ತೆಯಾಗಿಲ್ಲ.  ಆದರೆ ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಂಗಳವಾರ ಸಂಜೆಯಾದರೂ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. 
ಮುನ್ನಚ್ಚರಿಕೆ ಕ್ರಮವಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಾಗದನಗರ ಪೊಲೀಸರು, ಸ್ಥಳೀಯ ಆಶಾ ಕಾರ್ಯಕರ್ತೆರು ಸೇರಿದಂತೆ ಇನ್ನಿತರನ್ನು ಒಳಗೊಂಡ ತಂಡ ಬೆಳಿಗ್ಗೆ ಮಹಿಳೆ ವಾಸವಿದ್ದ ಮನೆಯ ಸುತ್ತಾಮುತ್ತ ಪರಿಶೀಲನೆ ನಡೆಸಿತು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದೊಂದಿಗೆ ಸ್ಯಾನಿಟೈಸರ್ ಕೈಗೊಂಡರು. 
ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಿದ್ದ ನಂತರ ಸೀಲ್‌ಡೌನ್ ಘೋಷಣೆಯಾಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ.  ಸೀಲ್ ಡೌನ್ ಘೋಷಣೆಯಾದಲ್ಲಿ ಇಲ್ಲಿನ ನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ನಗರಸಭೆ ಪೂರೈಸಲಿದೆ. 



ಜೂ.೨೪ರಂದು ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಭದ್ರಾವತಿ, ಜೂ. ೨೩: ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಕ್ಲಬ್‌ಗೆ ಜೂ.೨೪ರಂದು ಜಿಲ್ಲಾ ಗವರ್ನರ್ ಬಿ.ಎನ್ ರಮೇಶ್ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ. 
ತಾಲೂಕಿನ ಕೋಮಾರನಹಳ್ಳಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಹಾಗೂ ನಗರದ  ರಂಗಪ್ಪ ವೃತ್ತದಲ್ಲಿ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಹಾಯಕ ಜಿಲ್ಲಾ ಗವರ್ನರ್ ಮುರುಳಿ ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ರೋಟರಿ ಕಾರ್ಯದರ್ಶಿ ಅಡವೀಶಯ್ಯ ಕೋರಿದ್ದಾರೆ. 

ಜೂ.೨೪ರಂದು ಬೃಹತ್ ರಕ್ತದಾನ ಶಿಬಿರ

ಭದ್ರಾವತಿ, ಜೂ. ೨೩: ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಜೂ.೨೪ರಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತನಿಧಿ ಘಟಕ ಮೆಗ್ಗಾನ್ ಆಸ್ಪತ್ರೆ ಹಾಗೂ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಬಿ.ಕೆ ಮೋಹನ್, ಮೊ: ೯೪೪೭೩೯೦೭೨, ವಿಜಯ್, ಮೊ: ೭೬೭೬೭೦೯೪೪೫, ಸುಂದರ್ ಬಾಬು, ಮೊ: ೯೪೪೮೧೩೭೩೩೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಬಲವಂತದ ಸಾಲ ವಸೂಲಾತಿ ಕೈ ಬಿಡಿ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮನವಿ

ಜೆಡಿಯು ಯುವ ಘಟಕ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಹೋರಾಟಕ್ಕೆ ಸ್ಪಂದನೆ 

ಭದ್ರಾವತಿಯಲ್ಲಿ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಯಿತು. 
ಭದ್ರಾವತಿ, ಜೂ. ೨೩: ಕೊರೋನಾ ಸಂಕಷ್ಟದ ಹಿನ್ನಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಯಾವುದೇ ಕಾರಣಕ್ಕೂ ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ಅಲ್ಲದೆ ಯಾವುದೇ ರೀತಿ ಕಿರುಕುಳ ನೀಡದಂತೆ ಎಚ್ಚರ ವಹಿಸುವಂತೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮನವಿ ಮಾಡಿದರು. 
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದ ಮಹಿಳೆಯರು ಅನುಭವಿಸುತ್ತಿರುವ ಶೋಷಣೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ನಗರದ ಶಶಿಕುಮಾರ್ ಎಸ್. ಗೌಡ ಅವರ ಮನವಿಗೆ ಸ್ಪಂದಿಸಿ ಮಂಗಳವಾರ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದರು. 
ಇದಕ್ಕೂ ಮೊದಲು ಮಾತನಾಡಿದ ಶಶಿಕುಮಾರ್ ಎಸ್. ಗೌಡ, ಮೈಕ್ರೋ ಪೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಮಹಿಳೆಯರಿಗೆ ಸಾಲ ನೀಡುತ್ತಿವೆ. ಸಾಲದ ಉದ್ದೇಶ ಹಾಗೂ ಸಾಧಕ-ಬಾಧಕಗಳನ್ನು ಅರಿಯದೆ ಮಹಿಳೆಯರಿಗೆ ಸಾಲ ನೀಡುತ್ತಿವೆ. ಒಂದು ಬಾರಿ ಒಂದು ಕಂಪನಿಯಿಂದ ಸಾಲ ಪಡೆದ ಮಹಿಳೆಗೆ ಸಾಲ ಮರುಪಾವತಿಯಾಗುವ ಮೊದಲೇ ಮತ್ತೊಂದು ಕಂಪನಿಯಿಂದ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಮಹಿಳೆಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ನಡುವೆ ಮೈಕ್ರೋ ಫೈನಾನ್ಸ್ ಕಂಪನಿಯವರು ನಿಯಮ ಉಲ್ಲಂಘಿಸಿ ಸಾಲ ವಸೂಲಾತಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು. 
ದೇಶದಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರ ಸಹ ಸಂಕಷ್ಟಕ್ಕೆ ಸ್ಪಂದಿಸಿ ನೆರವಿಗೆ ಮುಂದಾಗಿದೆ. ಆರ್‌ಬಿಐ ಬಲವಂತವಾಗಿ ಸಾಲ ವಸೂಲಾತಿ ಮಾಡದಿರುವಂತೆ ಆದೇಶಿಸಿದೆ. ಆದರೂ ಸಹ ಕಂಪನಿಯವರು ವಿನಾಕಾರಣ ನೋಟಿಸ್ ನೀಡುವುದು, ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲಿಗೆ ಹೋಗಿ ವಸೂಲಾತಿ ಮಾಡುವುದು ಸೇರಿದಂತೆ ಇತ್ಯಾದಿ ಕಾರ್ಯಗಳಲ್ಲಿ ತೊಡಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಮಾತನಾಡಿ, ಕಂಪನಿಗಳಿಂದ ಯಾವುದೇ ರೀತಿ ಕಿರುಕುಳ ನೀಡುತ್ತಿಲ್ಲ. ಯಾವುದೇ ನಿಯಮಗಳನ್ನು ಸಹ ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡರು. ಆರ್‌ಬಿಐ ನಿರ್ದೇಶನದಂತೆ ಸಾಲ ವಸೂಲಾತಿ ಮಾಡಲಾಗುತ್ತಿದ್ದು, ಯಾರಿಂದಲೂ ಬಲವಂತವಾಗಿ ಸಾಲ ವಸೂಲಾತಿ ಮಾಡುತ್ತಿಲ್ಲ. ಮುಂದೆ ಸಹ ಇದೆ ರೀತಿ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.   
ಶಿರಸ್ತೆದಾರ್ ಮಲ್ಲಿಕಾರ್ಜುನಯ್ಯ, ಮಂಜಾನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್, ಮಂಜುನಾಥ್, ಯೋಗೇಶ್, ಕುಮಾರ್, ಕೃಷ್ಣ ಪ್ರಗತಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಡಾಕ್, ನಿರಂತರ, ಉಜ್ಜೀವನ ಸೇರಿದಂತೆ ಇನ್ನಿತರ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಜೆಡಿಯು ಮುಖಂಡ ಬಾಬು ದೀಪಕ್‌ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. 

ಜಮೀನಿನ ಅಕ್ರಮ ಕಲ್ಲುಕಂಬ, ಬೇಲಿ ತೆರವುಗೊಳಿಸಲು ಆಗ್ರಹಿಸಿ ಕುಟುಂಬ ಸಮೇತ ಪ್ರತಿಭಟನೆ

ಜಮೀನಿನ ಅಕ್ರಮ ಕಲ್ಲುಕಂಬ, ಬೇಲಿ ತೆರವುಗೊಳಿಸಲು ಆಗ್ರಹಿಸಿ ಕುಟುಂಬ ಸಮೇತ ಪ್ರತಿಭಟನೆ ಮಂಗಳವಾರ ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಜೂ. ೨೩: ನ್ಯಾಯಾಲಯದ ಆದೇಶವಿದ್ದರೂ ಸಹ ಜಮೀನಿನಲ್ಲಿ ಅಕ್ರಮವಾಗಿ ಹಾಕಿರುವ ಬೇಲಿ ಮತ್ತು ಕಲ್ಲು ಕಂಬ ತೆಗೆದು ಯಥಾಸ್ಥಿತಿ ಮುಂದುವರೆಸುವಲ್ಲಿ ನಿರ್ಲಕ್ಷ್ಯತನ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು. 
ಸುಮಾರು ೫೫ ವರ್ಷಗಳಿಂದ ಪತಿ ಸುಬ್ಬರಾಜು ಹಾಗೂ ಅವರ ಅಣ್ಣ ಪೊನ್ನಯ್ಯರವರು ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಪೈಕಿ ಪತಿ ಸುಬ್ಬರಾಜುರವರ ಹೆಸರಿನಲ್ಲಿ ೩.೦೫ ಗುಂಟೆ ಜಮೀನು ಹಾಗೂ ಪೊನ್ನಯ್ಯ ಹೆಸರಿನಲ್ಲಿ ೩.೧೦ ಗುಂಟೆ ಜಮೀನು ಇದ್ದು, ೨೦೧೮ರಿಂದ ನನಗೆ ತಿಳಿಯದೆ ಪೋಡಿ ಮಾಡಿ ನನ್ನ ಜಮೀನನ್ನು ದುರಸ್ತಿ ಮಾಡಿ ಒತ್ತುವರಿಯಾಗಿದೆ ಎಂದು ಸುಮಾರು ೩೦೦ ಅಡಕೆ ಮರ ಒಳಗೊಂಡದಂತೆ ಜಮೀನಿಗೆ ಅಕ್ರಮವಾಗಿ ಕಲ್ಲು ಕಂಬದೊಂದಿಗೆ ಬೇಲಿ ಹಾಕಿಸಲಾಗಿದೆ. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಅನಿಲ್‌ಕುಮಾರ್, ರಾಜಸ್ವ ನಿರೀಕ್ಷಕ ಜಗದೀಶ್ ಹಾಗೂ ಸಿಬ್ಬಂದಿ ಪೂರ್ಣಿಮಾ ಕಾರಣಕರ್ತರಾಗಿದ್ದರೆಂದು ಆರೋಪಿಸಲಾಯಿತು. 
ಈ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಳೇಯ ಆದೇಶ ರದ್ದು ಪಡಿಸಲಾಗಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶವಿದೆ. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಕಲ್ಲು ಕಂಬ, ಬೇಲಿ ತೆರವುಗೊಳಿಸುವಂತೆ ಮನವಿ ಮಾಡಿಕೊಂಡರೂ ಸಹ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆ ತಕ್ಷಣ ತೆರವು ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು.