Tuesday, January 18, 2022

೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ


ರಾಜ್ಯದಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ಹಾಗು ನ್ಯಾಯ ಕೇಳಲು ಸರ್ಕಾರಿ ಕಛೇರಿಗಳಿಗೆ ಬರುವ  ಸಾರ್ವಜನಿಕರ ಮೇಲೆ ಸುಳ್ಳು ದೂರು ದಾಖಲಿಸುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಾತದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಮಂಗಳವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೮: ರಾಜ್ಯದಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ಹಾಗು ನ್ಯಾಯ ಕೇಳಲು ಸರ್ಕಾರಿ ಕಛೇರಿಗಳಿಗೆ ಬರುವ  ಸಾರ್ವಜನಿಕರ ಮೇಲೆ ಸುಳ್ಳು ದೂರು ದಾಖಲಿಸುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಾತದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
    ರಾಜ್ಯದ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಕಂಡು ಬರುತ್ತಿದ್ದು, ತಕ್ಷಣ ಇವರನ್ನು ಬೇರೆಡೆಗೆ ವರ್ಗಾಹಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಸೇವೆಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಅಲ್ಲದೆ ಸಾರ್ವಜನಿಕರು ಸರ್ಕಾರಿ ಸೇವೆ ಮೇಲೆ ಹೊಂದಿರುವ ವಿಶ್ವಾಸ ಕಳೆದುಕೊಳ್ಳುವಂತಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾಹಿಸಬೇಕೆಂದು ಆಗ್ರಹಿಸಲಾಗಿದೆ.
    ನ್ಯಾಯ ಕೇಳುವುದು ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕು ಎಂಬುದನ್ನು ಯಾರು ಸಹ ಮರೆಯಬಾರದು. ಕೆಲವು ಸರ್ಕಾರಿ ಅಧಿಕಾರಿಗಳು ಸಂವಿಧಾನದ ಆಶಯವನ್ನು ಮರೆತು ಹೋರಾಟಗಾರರು ನ್ಯಾಯ ಕೇಳಲು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುತ್ತಿದ್ದಾರೆ. ಅಧಿಕಾರಿ ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ತಕ್ಷಣ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
    ಮುಖಂಡ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಮನವಿ ಸ್ವೀಕರಿಸಿದರು.

ಸರಳವಾಗಿ ಜರುಗಿದ ವಿಐಎಸ್‌ಎಲ್ ೯೯ನೇ ಸಂಸ್ಥಾಪನೆ ದಿನ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು. ಕಾರ್ಖಾನೆಯ ಮುಖ್ಯದ್ವಾರ ಹಾಗು ಶ್ರೀ ವಿನಾಯಕ ಸ್ವಾಮಿ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು.
    ಭದ್ರಾವತಿ, ಜ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು.
    ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ಪ್ರತಿ ವರ್ಷ ವಿಐಎಸ್‌ಎಲ್ ಉತ್ಸವದೊಂದಿಗೆ ಕಾರ್ಖಾನೆಯ ಸಂಸ್ಥಾಪನೆ ದಿನ ಹಾಗು ಸೈಲ್ ಡೇ ಎರಡನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ವಿಐಎಸ್‌ಎಲ್ ಉತ್ಸವ ನಡೆಯದ ಕಾರಣ ಸಂಸ್ಥಾಪನೆ ದಿನ ಹಾಗೂ ಸೈಲ್ ಡೇ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ಕಾರ್ಖಾನೆಯ ಆಡಳಿತ ಕಛೇರಿ ಆವರಣದಲ್ಲಿರುವ ಕಾರ್ಖಾನೆಯ ಸಂಸ್ಥಾಪಕರು, ಶ್ರೇಷ್ಠ ತಂತ್ರಜ್ಞಾನಿ, ಭಾರತರತ್ನ ಸರ್.ಎಂ. ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಅಲ್ಲಿನ ಅಽಕಾರಿಗಳು ಹಾಗು ಸಿಬ್ಬಂದಿಗಳಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಸ್ಥಾಪನೆ ದಿನ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ಅಪರೇಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ಎಸ್ ಸುರೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಸೇರಿದಂತೆ ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿ ಗೃಹದ ಅಧಿಕಾರಿಗಳಾದ ವೀರಣ್ಣ, ಚಂದ್ರಕಾಂತ್, ಸಿಬ್ಬಂದಿಗಳಾದ ಮೋಹನ್, ಪ್ರತಾಪ್, ಪ್ರಭಾಕರ್, ವಿಲ್ಸನ್, ಆದಿನಾರಾಯಣ, ಆಸ್ಲಾಂ, ಸುರೇಶ್, ಸುಜಾತ, ಸಾವಿತ್ರಮ್ಮ, ತುಳಸಿ, ಲಕ್ಷ್ಮಿಬಾಯಿ, ರೂಪ, ಪದ್ಮಮ್ಮ ಮತ್ತು ಪಾರ್ವತಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಿದ್ಯುತ್ ದೀಪಗಳಿಂದ ಅಲಂಕಾರ:
ಕಳೆದ ಕೆಲವು ದಿನಗಳಿಂದ ಕಾರ್ಖಾನೆಯ ಮುಖ್ಯ ದ್ವಾರಕ್ಕೆ  ಹಾಗು ಮುಂಭಾಗದಲ್ಲಿರುವ ವಿಘ್ನ ನಿವಾರಕ ಶ್ರೀ ವಿನಾಯಕ ಸ್ವಾಮಿ ಮಂಟಪಕ್ಕೆ ಸಂಸ್ಥಾಪನೆ ದಿನದ ಅಂಗವಾಗಿ ಬಣ್ಣ ಬಳಿಯುವ ಕಾರ್ಯ ಕೈಗೊಳ್ಳಲಾಗಿತ್ತು. ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಮುಖ್ಯದ್ವಾರ ಹಾಗು ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ಆಕರ್ಷಕವಾಗಿ ಕಂಗೊಳಿಸುತ್ತಿದೆ.


ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು. ಕಾರ್ಖಾನೆಯ ಸಂಸ್ಥಾಪಕರಾದ, ಶ್ರೇಷ್ಠ ತಂತ್ರಜ್ಞಾನಿ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಿ : ಮನವಿ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಬೇಕೆಂದು ಆಗ್ರಹಿಸಿ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಜ. ೧೮: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಬೇಕೆಂದು ಆಗ್ರಹಿಸಿ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರ್ಹ ಬಡವರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳು ಶ್ರೀಮಂತರ ಪಾಲಾಗುತ್ತಿವೆ. ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿರುವ ಶ್ರೀಮಂತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಸತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನಗರಸಭೆ ಹಿರಿಯ ಸದಸ್ಯ
    ಬಿ.ಕೆ ಮೋಹನ್ ಹಾಗು ಗ್ರಾಮದ ವಸತಿ ರಹಿತ ಅರ್ಹ ಬಡವರು ಉಪಸ್ಥಿತರಿದ್ದರು. ಅಂತರಗಂಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಂಗ ಅಭಿನಯದಲ್ಲಿ ಪದಗಳ ಉಚ್ಛಾರಣೆ, ಸಂಭಾಷಣೆ ಸರಿಯಾಗಿದ್ದಾಗ ಮಾತ್ರ ಪ್ರೇಕ್ಷಕರ ಮನ ಮುಟ್ಟಲು ಸಾಧ್ಯ : ಕೆ.ಆರ್ ಸುಬ್ಬರಾವ್

ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಭಾರತಿ ತೀರ್ಥ ಸಮುದಾಯ ಭವನದಲ್ಲಿ  ನಗರದ ನಾಗರೀಕ ವೇದಿಕೆ ಹಾಗು ಶಿವಮೊಗ್ಗ ಹೊಂಗಿರಣ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬೆಳ್ಳಿ ಹೆಜ್ಜೆ ರಂಗ ಪಯಣ-೧೨' ನಂದಿನಿ ಮಲ್ಲಿಕಾರ್ಜುನ್ ಅಭಿನಯದ 'ನಿರಾಕರಣೆ' ೨ನೇ ಪ್ರದರ್ಶನ ಏಕ ವ್ಯಕ್ತಿ ನಾಟಕವನ್ನು ಹಿರಿಯ ರಂಗ ಕಲಾವಿದ, ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.
    ಭದ್ರಾವತಿ, ಜ. ೧೮: ರಂಗ ಅಭಿನಯ ಎಂಬುದು ತುಂಬಾ ಕಷ್ಟದ ಕಲೆ. ಅಭಿನಯಿಸುವಾಗ ಪದಗಳ ಉಚ್ಛಾರಣೆ, ಸಂಭಾಷಣೆ ಸರಿಯಾಗಿರಬೇಕು. ಒಂದೊಂದು ಪದವನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಬೇಕು.  ಆಗ ಪ್ರೇಕ್ಷಕರ ಮನ ಮುಟ್ಟಲು ಸಾಧ್ಯ ಎಂದು ಹಿರಿಯ ರಂಗ ಕಲಾವಿದ, ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಹೇಳಿದರು.
    ಅವರು ಸಿದ್ದಾರೂಢ ನಗರದ ಶ್ರೀ ಭಾರತಿ ತೀರ್ಥ ಸಮುದಾಯ ಭವನದಲ್ಲಿ  ನಗರದ ನಾಗರೀಕ ವೇದಿಕೆ ಹಾಗು ಶಿವಮೊಗ್ಗ ಹೊಂಗಿರಣ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬೆಳ್ಳಿ ಹೆಜ್ಜೆ ರಂಗ ಪಯಣ-೧೨' ನಂದಿನಿ ಮಲ್ಲಿಕಾರ್ಜುನ್ ಅಭಿನಯದ 'ನಿರಾಕರಣೆ' ೨ನೇ ಪ್ರದರ್ಶನ ಏಕ ವ್ಯಕ್ತಿ ನಾಟಕ  ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಆಧುನಿಕ ಸಲಕರಣೆಗಳು ಇರುವ ಕಾರಣ ಹಿಂದಿನ ಕಾಲದ ಹಾಗೆ ಪಾತ್ರದಲ್ಲಿ ಅಭಿನಯಿಸುವುದು ಕಷ್ಟವಲ್ಲ. ಆದರೆ ಪಾತ್ರಕ್ಕೆ ಭಾವಾಭಿನಯ ತುಂಬಿ ಪ್ರದರ್ಶನ ನೀಡುವುದು ಸವಾಲಿನ ಸಂಗತಿ ಎಂದರು.
    ಬೆಂಗಳೂರಿನ ರಂಗಕರ್ಮಿ ಮಲ್ಲಿಕಾರ್ಜುಸ್ವಾಮಿ ಮಹಾಮನೆ ಮಾತನಾಡಿ, ಇಂದು ರಂಗಭೂಮಿ ಕಲೆಯಲ್ಲಿ ಮಹಿಳೆಯರು ಭಾಗವಹಿಸುವುದು ಕಷ್ಟ ಸಾಧ್ಯ ಸಂಗತಿಯಾಗಿದೆ. ಅದರಲ್ಲೂ ಏಕ ವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಅಭಿನಯಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
    ಇಂತಹ ಪ್ರದರ್ಶನದಲ್ಲಿ ಪ್ರಬುದ್ಧ ಕಲಾವಿದರು ಮಾತ್ರ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯ. ಪಾತ್ರ ಹಾಗು ಸನ್ನಿವೇಶಕ್ಕೆ ತಕ್ಕಂತೆ ಹಾವಭಾವಾಭಿನಯ ಪ್ರದರ್ಶಿಸಬೇಕು. ಆಗ ಮಾತ್ರ ನಾಟಕ ಜನರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಪ್ರತಿಭೆ ಇರುವವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಬೇಕು. ಅಂತಹ ಪ್ರತಿಭೆ ನಮ್ಮೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ನಗರಕ್ಕೆ ಹೆಮ್ಮೆಯ ಸಂಗತಿ ಎಂದರು.
    ಪ್ರತಿಮಾ ಸಂಗಡಿಗರು ಪ್ರಾರ್ಥಿಸಿದರು. ಶಾರದಾ ಶ್ರೀನಿವಾಸ್ ಸ್ವಾಗತಿಸಿದರು. ಎಂ.ಎಸ್.ಜನಾರ್ಧನ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎ.ಟಿ.ರವಿ ವಂದಿಸಿದರು. ಸಂಚಾಲಕ ಸಿದ್ದಲಿಂಗಯ್ಯ, ನಗರಸಭಾ ಸದಸ್ಯರಾದ ಬಿ.ಎಂ ಮಂಜುನಾಥ್, ಆರ್. ಶ್ರೇಯಸ್ಸ್(ಚಿಟ್ಟೆ) ಮತ್ತು ಅನುಪಮ ಚನ್ನೇಶ್, ರಂಗಕಲಾವಿದ ವೈ.ಕೆ ಹನುಮಂತಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.