ಭಾನುವಾರ, ಸೆಪ್ಟೆಂಬರ್ 7, 2025

ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶತನ ಮುಂದಿನ ಪೀಳಿಗೆಗೂ ಸಾಗಲಿ : ಎಸ್.ಎಚ್ ರವಿಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ  ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ : ಮೌಡ್ಯ, ಕಂದಾಚಾರಗಳಿಂದ ಮುಕ್ತವಾದ, ಸರ್ವಸಮಾನತೆಯಿಂದ ಕೂಡಿರುವ ಸಮಾಜ ನಿರ್ಮಾಣವಾಗಬೇಕೆಂಬ ಆಶಯ ಬ್ರಹ್ಮಶ್ರೀ ನಾರಾಯಣಗುರುಗಳು ಹೊಂದಿದ್ದರು. ಇಂತಹ ಆದರ್ಶ ವ್ಯಕ್ತಿಯ ಆದರ್ಶತನಗಳು ಮುಂದಿನ ಪೀಳಿಗೆಗೂ ಸಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನ ಹರಿಸಬೇಕಾಗಿದೆ ಎಂದು ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಹೇಳಿದರು. 
    ಅವರು ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
    ಜನರಲ್ಲಿನ ಮೌಢ ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದ ಮೂಲಕ ಉದ್ಯೋಗ, ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ. ಜಾತ್ಯಾತೀತ ಮನೋಭಾವ  ಬೆಳೆಸಿಕೊಂಡು ಸಾಮರಸ್ಯದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಚಿಂತನೆಗಳನ್ನು ಹೊಂದಿದ್ದ ನಾರಾಯಣ ಗುರುಗಳ ಹಲವಾರು ಅಂಶಗಳು ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದರು.
    ಸಮಾಜ ಸುಧಾರಕರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಲು ಸರ್ಕಾರ ಜಯಂತಿಗಳನ್ನು  ಆಚರಿಸುತ್ತಿದೆ. ಆದರೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಯುವಕರುಗಳೇ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ದೊಡ್ಡ ದುರಂತ. ಡಾ. ಬಿ.ಆರ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ನಾರಾಯಣಗುರುಗಳಂತಹ ಮಹನೀಯರು ಒಂದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಇವರು ಎಲ್ಲಾ ಸಮುದಾಯಗಳ, ಸಮಾಜದ ಉದ್ದಾರಕರು. ಇಂತಹ ಮಹನೀಯರ ಜಯಂತಿಗಳಿಗೆ ಎಲ್ಲಾ ಸಮುದಾಯದ ಜನರು ಸೇರಬೇಕು. ಅವರ ತತ್ವ ಆದರ್ಶಗಳನ್ನು ತಿಳಿದುಕೊಂಡು ಇನ್ನಿತರರಿಗೆ ತಿಳಿಸುವ ಕೆಲಸ ಆದಾಗ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯವಾಗುತ್ತದೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಾರಾಯಣಗುರುಗಳ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಈಡಿಗ ಸಮುದಾಯಕ್ಕೆ ಕ್ಷೇತ್ರದ ಶಾಸಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಹಾಗೂ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರ ಪರಿಣಾಮವಾಗಿಯೇ ಜಾತ್ಯಾತೀತ ಮನೋಭಾವದ ಅತ್ಯುತ್ತಮ ಜನನಾಯಕರು ಎನಿಸಿಕೊಂಡರು ಎಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶ್ರೀ ನಾರಾಯಣಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಎನ್. ನಟರಾಜ್, ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಇ.ಬಿ ಗಣೇಶ್,  ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವೇಲಾಂಗಣಿ ಆರೋಗ್ಯ ಮಾತೆಯ ಭವ್ಯ ತೇರಿನ ಮೆರವಣಿಗೆ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅಲಂಕೃತ ಭವ್ಯ ತೇರಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. 
    ಭದ್ರಾವತಿ: ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅಲಂಕೃತ ಭವ್ಯ ತೇರಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. 
    ಕಾಗದನಗರ ಸಂತ ಕಾರ್ಮಿಕರ ದೇವಾಲಯದ ಧರ್ಮಗುರು ಫಾದರ್ ಡೊಮಿನಿಕ್ ಕ್ರಿಸ್ತರಾಜ್ ತೇರಿನ ಮೆರವಣಿಗೆಗೆ ಚಾಲನೆ ನೀಡಿದರು. ಗಾಂಧಿನಗರ, ಸಂತೆ ಮೈದಾನ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ತರೀಕೆರೆ ರಸ್ತೆ, ಗಾಂಧಿವೃತ್ತ ಮಾರ್ಗವಾಗಿ ದೇವಾಲಯಕ್ಕೆ ಹಿಂದಿರುಗಲಾಯಿತು. ಭಕ್ತರು ಮೇಣದಬತ್ತಿಗಳನ್ನು ಹಿಡಿದು ಪ್ರಾರ್ಥಿಸುತ್ತಾ ಮೆರವಣಿಗೆಯಲ್ಲಿ ಸಾಗಿಸಿದರು.
    ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಧರ್ಮಭಗಿನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ಯಶಸ್ವಿಯಾಗಿ ಜರುಗಿದ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ

ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಸಭೆ 

ಭದ್ರಾವತಿ ಹಳೇನಗರದ ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಸಾವಿತ್ರೀ ಪೀಠಾಧೀಶ್ವರ ಜಗದ್ಗುರು ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ ಭಾನುವಾರ ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು. ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 
    ಭದ್ರಾವತಿ : ಹಳೇನಗರದ ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಸಾವಿತ್ರೀ ಪೀಠಾಧೀಶ್ವರ ಜಗದ್ಗುರು ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ ಭಾನುವಾರ ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು. 
    ವಡ್ಡನಹಾಳ್ ಶ್ರೀ ಮಠದ ಗುರುಕುಟೀರದಿಂದ ಬೆಳಿಗ್ಗೆ ಹೊರಟ ಶ್ರೀಗಳು ಭದ್ರಾನದಿಯಲ್ಲಿ ತೀರ್ಥಸ್ನಾನ ನೆರವೇರಿಸಿ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ಭಕ್ತರಿಂದ ಶ್ರೀಗಳ ಪಾದಪೂಜೆ ನೆರವೇರಿತು. 
ಶ್ರೀ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಜರುಗಿದ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿದ್ದ ಶ್ರೀಗಳು ಚಾತುರ್ಮಾಸ ವ್ರತ ಧಾರ್ಮಿಕ ಆಚರಣೆಯ ಮಹತ್ವ ತಿಳಿಸಿದರು.  ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.  
    ವಡ್ಡನಹಾಳ್ ಶ್ರೀ ಮಠದ ಅಧ್ಯಕ್ಷ ಟಿ. ಮಹೇಂದ್ರಚಾರ್, ಶ್ರೀ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಎಲ್ ನಾಗರಾಜ, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ಶ್ರೀ ಗಾಯಿತ್ರಿ ವಿಶ್ವಕರ್ಮ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಭಾಗ್ಯಮ್ಮ ಶಾಂತಾಚಾರ್, ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭಕ್ತರು ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗಸಿದರು. 

ಅಂಧರ ಕೇಂದ್ರದಲ್ಲಿ ೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ



ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ೫ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ೫ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. 
    ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರೊಂದಿಗೆ ಸ್ಥಳೀಯರಾದ ತರುಣ್ ಮತ್ತು ಸ್ನೇಹಿತರು ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯದಲ್ಲಿ ನೆರವಾಗುತ್ತಿರುವುದು ವಿಶೇಷವಾಗಿದೆ. ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ರಾಷ್ಟ್ರೀಯ ಹಬ್ಬ ಹಾಗು ನಾಡಹಬ್ಬಗಳ ಜೊತೆಗೆ ಎಲ್ಲಾ ಧರ್ಮದ ಪ್ರತಿಯೊಂದು ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 
ವಿನಾಯಕ ಮಹೋತ್ಸವ ಆಚರಣೆಯೊಂದಿಗೆ ವಿಕಲಚೇತನರಲ್ಲೂ ಸಂಘಟನೆ ಮಹತ್ವ ಹಾಗು ಧಾರ್ಮಿಕ ಆಚರಣೆಯ ಮೌಲ್ಯಗಳನ್ನು ತಿಳಿಸಿಕೊಡುವ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಒಂದೆಡೆ ಸಂಭ್ರಮ, ಮತ್ತೊಂದೆಡೆ ವಿಕಲಚೇತನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಸಹ ವಿನಾಯಕ ಮಹೋತ್ಸವ ಸಹಕಾರಿಯಾಗಿದೆ. 
    ಈ ಬಾರಿ ವಿಶೇಷವಾಗಿ ಸ್ಥಳೀಯರಾದ ಶಿವಕುಮಾರ್ ಮತ್ತು ಎಸ್. ಭರತ್ ಕುಟುಂಬಸ್ಥರು ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಆಚರಣೆಗೆ ಮತ್ತುಷ್ಟು ವೈಭವ ತಂದು ಕೊಟ್ಟಿದ್ದಾರೆ. ಅರ್ಚಕ ಪ್ರದೀಪ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು. 
    ಈ ಬಾರಿ ಉಗ್ರ ನರಸಿಂಹನ ಪ್ರತಿ ರೂಪವಾಗಿ ಅಕರ್ಷಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಸಿದ್ದಾರೂಢನಗರ ಶಿಲ್ಪ ಕಲಾವಿದರು ನಿರ್ಮಿಸಿದ್ದಾರೆ. ಮೂರ್ತಿ ಸುಮಾರು ೮ ಅಡಿ ಎತ್ತರವಿದ್ದು, ಸೆ.೨೨ರಂದು ಜನ್ನಾಪುರ-ಸಿದ್ದಾಪುರ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ.