Thursday, April 10, 2025

ಏ.೧೧ರಂದು `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ


    ಭದ್ರಾವತಿ: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ.೧೧ರ ಶುಕ್ರವಾರ `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. 
    ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೪ ಗಂಟೆಗೆ ಮೂಲಸ್ಥಾನದಲ್ಲಿ ಅಭಿಷೇಕ ಪ್ರಾರಂಭ, ೫ ಗಂಟೆಗೆ ಮಹಾಮಂಗಳಾರತಿ, ೮ ಗಂಟೆಗೆ ಬೆಳಗಿನ ಸಂಧಿಪೂಜೆ ಹಾಗು ಪುಣ್ಯತೀರ್ಥ ಅಭಿಷೇಕ, ಬೆಳಿಗ್ಗೆ ೬.೩೦ ರಿಂದ ಮಧ್ಯಾಹ್ನ ೧೨ರವರೆಗೆ ಭಕ್ತರು ಹರಕೆ ಹೊತ್ತು ತರುವ ಪುಣ್ಯತೀರ್ಥ ಮತ್ತು ಕಾವಡಿ ಸಮರ್ಪಣೆ ನಂತರ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಸಂಜೆ ೫.೩೦ಕ್ಕೆ ದೀಪಾರಾಧನೆ ಮತ್ತು ರಾತ್ರಿ ೧೦ಕ್ಕೆ ಅರ್ಧಜಾಮ ಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿ ಕೋರಿದೆ. 

ಮನಸೂರೆಗೊಂಡ "ಒಡಲಾಳ" ನಾಟಕ ಪ್ರದರ್ಶನ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕ ಪ್ರದರ್ಶನದ ದೃಶ್ಯ. 
    ಭದ್ರಾವತಿ: ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಆಶ್ರಯದಲ್ಲಿ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ `ಒಡಲಾಳ' ನಾಟಕ ಪ್ರದರ್ಶನ ಮತ್ತು ರಂಗ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ ಎಸ್.ಪಿ ರಾಕೇಶ್ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್, ಹಿರಿಯ ಕಲಾವಿದರಾದ ಕೆ.ಎಸ್ ರವಿಕುಮಾರ್, ವೈ.ಕೆ ಹನುಮಂತಯ್ಯ, ಬಿ. ಪ್ರವೀಣ್‌ಕುಮಾರ್, ದಿವಾಕರ್, ರತ್ನ, ಶಿಕ್ಷಕರ ವರ್ಗದವರು ಹಾಗು ನೂರಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. 
    ಕಾರ್ಯಕ್ರಮದಲ್ಲಿ ನಾಟಕದ ಅಭಿನಯ ಮಾಡಿದ ಇಂದು ಡಿ. ನೀನಾಸಂ ಅವರನ್ನು ಗೌರವಿಸಲಾಯಿತು. ರಂಗ ಭೂಮಿಯ ಕಲೆ ಗೀಳು, ಕಲೆಯ ಉಳಿವು, ಯುವ ಸಮೂಹದ ಪಾತ್ರ, ಜಾನಪದ ಅಳಿವು-ಉಳಿವು ಹಾಗು ನಾಟಕದಲ್ಲಿನ ಕೆಲ ವಿಚಾರಗಳ ಕುರಿತು ಶಿಕ್ಷಣಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಒಡಲಾಳ ನಾಟಕದ ಪ್ರಮುಖ ಸಾಕವ್ವನ ಪಾತ್ರದಾರಿ ರಂಗ ಕಲಾವಿದೆ ಇಂದು ಡಿ. ನೀನಾಸಂ ಮತ್ತು ತಮಟೆ ಜಗದೀಶ್ ಉತ್ತರಿಸಿದರು.


ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕದ ರಂಗ ಕಲಾವಿದೆ ಇಂದು ಡಿ. ನೀನಾಸಂ ಅವರನ್ನು ಆಡಳಿತಾಧಿಕಾರಿ ಡಾ: ಎಸ್.ಪಿ.ರಾಕೇಶ್ ಗೌರವಿಸಿದರು.  
    ನಾಟಕದ ಸಾರಾಂಶ:  
    ದಲಿತ ಕವಿ ದೇವನೂರು ಮಹಾದೇವರವರ ಕಾದಂಬರಿ "ಒಡಲಾಳ" ಆಯ್ದ ಭಾಗದ ನಾಟಕದಲ್ಲಿ, ಊರಿಗೆ ಹೊಸದಾಗಿ ಆಗಮಿಸಿದ ಪೊಲೀಸ್ ಅಧಿಕಾರಿಗೆ ಊರಿನ ಗೌಡನೋರ್ವ ಭಕ್ಷ್ಯ ಭೋಜನ ಮಾಡಿಸಲು ಕೋಳಿವೊಂದನ್ನು ಕದ್ದು ಅಡಿಗೆ ಮಾಡಿಸಿ ತಿನ್ನಿಸುತ್ತಾನೆ. ಕೆಳ ವರ್ಗದ ಬಡವಿ ಸಾಕವ್ವನಿಗೆ ಸೇರಿದ ಆ ಕೋಳಿ ತಿಂದು ತೇಗಿದ ಉಳ್ಳವರ ಮತ್ತು ಅದರಿಂದ ಕೋಳಿಯ ಒಡತಿ ಸಾಕವ್ವನಿಗಾಗುವ ಅನ್ಯಾಯ, ದಮನಿತರ ಶೋಷಿತ ವರ್ಗದ ಬೆಳಕು ಚೆಲ್ಲುವ ಹಾಗೂ ಪೊಲೀಸರ ದರ್ಪ, ಉಳ್ಳವರ ಅಟ್ಟಹಾಸ ಚಿತ್ರಣದ ಆಯ್ದ ಭಾಗದ ತಿರುಳನ್ನು ಬಲು ತೀಕ್ಷವಾಗಿ ತೆರೆದಿಡುವಲ್ಲಿ ಸಾಕವ್ವನ ಪಾತ್ರ ನೋಡುಗರಿಗೆ ಮನಸೂರೆಗೊಂಡಿತು.

ಏ.೧೧ರಂದು ನಟನಾ ಶಾಲೆ, ಫಿಲಂ ಇನ್‌ಸ್ಟಿಟ್ಯೂಟ್ ಉದ್ಘಾಟನೆ


    ಭದ್ರಾವತಿ : ಹಳೇನಗರದ ತಾಲೂಕು ಕಛೇರಿ ಮುಂಭಾಗದ ಎದುರು ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲಂ ಇನ್‌ಸ್ಟಿಟ್ಯೂಟ್ ಏ.೧೧ರಂದು ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಜಾನಪದ ಮತ್ತು ಚಲನಚಿತ್ರ ಕಲಾವಿದ ಗುರುರಾಜ್ ಹೊಸಕೋಟೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ, ನ್ಯೂಟೌನ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ.ಎಫ್ ಕುಟ್ರಿ, ಚಲನಚಿತ್ರ ಸಂಗೀತ ನಿರ್ದೇಶಕ ಲಯ ಕೋಕಿಲ, ಚಲನಚಿತ್ರ ನಟ ಕುಮಾರ್, ಕಂಚಿನಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಕುಮಾರ್ ಉಡುಪ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ದಿವಾಕರ್, ಗಂಗಾವತಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ್ ಎಸ್. ಸವಡಿ, ಬಸವರಾಜ್ ಮೇಟಿ, ಡಾ. ವರ್ಷ, ಬಿ.ಎಚ್. ಗಿರಿಧರ ಮೂರ್ತಿ, ಶಂಕರ್ ಸೂಗತಿ, ಡಾ. ಸಿ. ರಾಮಚಾರಿ, ಬಸವರಾಜ್ ಸೋದರ್, ಚಂದ್ರಶೇಖರ್ ನಾಯ್ಕ್ ಮತ್ತು ರಾಜೇಶ್ ಸಂಗೊಳ್ಳಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಚಲನಚಿತ್ರ ನಟಿ, ಇನ್‌ಸ್ಟಿಟ್ಯೂಟ್ ಮುಖ್ಯಸ್ಥೆ ಪೂರ್ಣಿಮ ಪಾಟೀಲ್ ಕೋರಿದ್ದಾರೆ. 

ಏ.೧೨ರಂದು ಶ್ರೀ ಅಕ್ಕಮಹಾದೇವಿ ಜಯಂತಿ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಬಳಗದಿಂದ ಏ.೧೨ರಂದು ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ ಶ್ರೀ ಅಕ್ಕಮಹಾದೇವಿಯವರ ಜಯಂತ್ಯೋತ್ಸವ ಸಮಾರಂಭ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. 
    ಶಿವಮೊಗ್ಗ ಬಸವಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಡಾ. ಬಸವಮರುಳಸಿದ್ದ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಪಮ ಚನ್ನೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಮುಖರಾದ ಬಾರಂದೂರು ಪ್ರಕಾಶ್ ಅಕ್ಕಮಹಾದೇವಿಯವರ ಜೀವನ ಸಾಧನೆ ಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.