Tuesday, May 9, 2023

ಕಡ್ಡಾಯ ಮತದಾನ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಭಾಗದಲ್ಲಿ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಜಾಥಾ ನಡೆಸಲಾಯಿತು.
    ಭದ್ರಾವತಿ, ಮೇ. ೯: ನಗರಸಭೆ ವ್ಯಾಪ್ತಿಯ ಹೊಸಮನೆ ಭಾಗದಲ್ಲಿ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಜಾಥಾ ನಡೆಸಲಾಯಿತು.
    ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಮತದಾನ ಮಹತ್ವ ಕುರಿತ ಜಾಗೃತಿ ಫಲಕಗಳನ್ನು ಹಿಡಿದು ಕಾಲೇಜಿನ ಆವರಣದಿಂದ ಜಾಥಾ ಆರಂಭಿಸಿದ ವಿದ್ಯಾರ್ಥಿಗಳು ಹೊಸಮನೆ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಕುಸುಮ ಮತ್ತು ನಿಸರ್ಗ ಮತದಾನ ಜಾಗೃತಿ ಘೋಷಣೆಗಳನ್ನು ಹಾಕಿದರು.
    ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಸಕಲೇಶ್ ನೇತೃತ್ವ ವಹಿಸಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪೋಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಭದ್ರಾವತಿ ವಿಧಾನಸಭಾ ಕ್ಷೇತ್ರ : ಕಳೆದ ೪ ಚುನಾವಣೆಗಳಲ್ಲಿ ಶೇ.೭೫ರ ಗುರಿ ತಲುಪದ ಮತದಾನ

    ಭದ್ರಾವತಿ, ಮೇ. ೯ : ಕಳೆದ ೪ ವಿಧಾನಸಭಾ ಚುನಾವಣೆ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಿದೆ. ಈಗಲಾದರೂ ಮತದಾರರು ಎಚ್ಚೆತ್ತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ವಿಶಿಷ್ಟತೆಯಿಂದ ಕೂಡಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ಕುಟುಂಬ ವರ್ಗದವರು, ಅಸಂಘಟಿತ ಕಾರ್ಮಿಕರು, ಕೃಷಿಕರು, ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಬಹುತೇಕ ಮಧ್ಯಮ ಹಾಗು ಬಡ ವರ್ಗದ ಕುಟುಂಬದವರಾಗಿದ್ದು, ಶೈಕ್ಷಣಿಕವಾಗಿ ಸಹ ಸ್ವಲಮಟ್ಟಿ ಹಿಂದುಳಿದಿದ್ದಾರೆ. ಕಳೆದ ೪ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ.
    ೨೦೦೪ರ ಚುನಾವಣೆಯಲ್ಲಿ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೭.೭೬ರಷ್ಟು ಮತ್ತು ೨೦೦೮ರ ಚುನಾವಣೆಯಲ್ಲೂ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೩.೮೧ರಷ್ಟು ಮತದಾನವಾಗಿದೆ. ೨೦೧೩ರ ಚುನಾವಣೆಯಲ್ಲಿ ಒಟ್ಟು ೧೭ ಮಂದಿ ಅಭ್ಯರ್ಥಿಗಳಿದ್ದು, ಶೇ. ೭೨.೦೧ರಷ್ಟು ಹಾಗು ೨೦೧೮ರ ಚುನಾವಣೆಯಲ್ಲಿ  ಒಟ್ಟು ೧೫ ಅಭ್ಯರ್ಥಿಗಳಿದ್ದು, ಶೇ.೭೩.೫೯ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಈ ಬಾರಿ ಹೆಚ್ಚಿನ ಗುರಿ ಸಾಧಿಸಬೇಕೆಂದು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಈ ಕಾರ್ಯಕ್ಕೆ ಹಲವು ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ವಯಂ ಸೇವಕರು ಸಹ ಕೈಜೋಡಿಸಿದ್ದಾರೆ. ಈ ಬಾರಿ ಹೆಚ್ಚಿನ ಮತದಾನ ನಿರೀಕ್ಷಿಸಲಾಗಿದೆ.
ಮಳೆ ಆತಂಕ :
    ಈ ಬಾರಿ ಚುನಾವಣೆಗೆ ಮಳೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಂಗಳವಾರ ಸಂಜೆಯಿಂದ ಮಳೆಯಾಗುತ್ತಿದೆ. ಬುಧವಾರ ಮಳೆ ಪ್ರಮಾಣ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಮತದಾನಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ವಿಧಾನಸಭಾ ಚುನಾವಣೆ : ೨,೧೨,೧೬೫ ಮಂದಿಗೆ ಮತದಾನದ ಹಕ್ಕು, ೨೫೩ ಮತಗಟ್ಟೆಗಳು

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ನಿಯೋಜನೆಗೊಂಡ ಸ್ಥಳಕ್ಕೆ ಬಸ್‌ಗಳ ಮೂಲಕ ತೆರಳಿದರು.
    ಭದ್ರಾವತಿ, ಮೇ. ೯ : ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷೇತ್ರದಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಮಂಗಳವಾರ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಿಂದ ಮತಯಂತ್ರಗಳೊಂದಿಗೆ ತೆರಳಿದರು. ಈ ಬಾರಿ ಕ್ಷೇತ್ರದಲ್ಲಿ ಒಟ್ಟು ೨,೧೨,೧೬೫ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಹಿಂದೆ ಜನವರಿ ತಿಂಗಳಿನಲ್ಲಿ ಒಟ್ಟು ೨,೦೭,೬೦೯ ಅಂತಿಮ ಮತದಾರರನ್ನು ಘೋಷಿಸಲಾಗಿತ್ತು. ೪ ತಿಂಗಳಿನಲ್ಲಿ ಪುನಃ ೪,೫೫೬ ಹೊಸ ಮತದಾರರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.


    ಒಟ್ಟು ೨೫೩ ಮತಗಟ್ಟೆಗಳಿದ್ದು, ಈ ಪೈಕಿ ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡುವ ೨ ಸಖಿ(ಪಿಂಕ್) ಮತಗಟ್ಟೆಗಳು ಸೇರ್ಪಡೆಗೊಂಡಿವೆ. ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ತೆರಳಲು ಒಟ್ಟು ೪೦ ಬಸ್‌ಗಳನ್ನು ನಿಯೋಜನೆಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆಯೇ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯ ಹಾಜರಾಗಿ ಮಧ್ಯಾಹ್ನ ಊಟದ ನಂತರ ನಿಯೋಜನೆಗೊಂಡ ಮತಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ತೆರಳಿದರು.
    ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮದ್ ಅಲಿ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ಸೇರಿದಂತೆ ಒಟ್ಟು ೧೪ ಮಂದಿ ಅಭ್ಯರ್ಥಿಗಳು ಹಾಗು ನೋಟಾ ಸೇರಿದಂತೆ ೧೫ ಆಯ್ಕೆಗಳನ್ನು ಮತಯಂತ್ರಗಳು ಹೊಂದಿವೆ.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದರು.


ಭದ್ರಾವತಿಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದರು.