Tuesday, January 21, 2025

ಜ.23ರಂದು 12ನೇ ವರ್ಷದ ಕ್ರಿಸ್‌ಮಸ್, ನೂತನ ವರ್ಷೋತ್ಸವ




   ಭದ್ರಾವತಿ : ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ 12ನೇ ವರ್ಷದ ಕ್ರಿಸ್‌ಮಸ್ ಮತ್ತು ನೂತನ ವರ್ಷೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.23ರ ಗುರುವಾರ ಸಂಜೆ 5 ಗಂಟೆಗೆ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
  ಸಂಸದ ಬಿ.ವೈ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಜೆ. ಭಾಸ್ಕರ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
  ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ. ಸಂಗಮೇಶ್ವರ್, ಐವಾನ್ ಡಿಸೋಜ, ಬಲ್ಕಿಷ್ ಬಾನು, ನಗರಸಭಾ ಸದಸ್ಯ ಬಿ.ಕೆ.ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ‌. ಬರ್ತಲೋಮ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಕ್ರೈಸ್ತ ಮುಖಂಡರು ಗಳು ಪಾಲ್ಗೊಳ್ಳಲಿದ್ದಾರೆ. ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬೀದಿ ನಾಟಕ

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜೆ.ಸಿ ಬೋಸ್ ಇಕೋ ಕ್ಲಬ್ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಂದ ಬೀದಿ ನಾಟಕ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. 
    ಭದ್ರಾವತಿ : ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜೆ.ಸಿ ಬೋಸ್ ಇಕೋ ಕ್ಲಬ್ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಂದ ಬೀದಿ ನಾಟಕ ಆಯೋಜಿಸಲಾಗಿತ್ತು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಸ್ ಪಂಚಾಕ್ಷರಿ, ಇಕೋ ಕ್ಲಬ್ ನೋಡಲ್ ಅಧಿಕಾರಿ ಗಂಗಾಧರ ಮತ್ತು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  
    ಬೀದಿ ನಾಟಕದಲ್ಲಿ ಕಸ ವಿಂಗಡಣೆಯ ಮಹತ್ವ, ಭೂಕುಸಿತದಂತಹ ಪ್ರಕೃತಿ ವಿಕೋಪಗಳಿಗೆ ಕಾರಣಗಳು, ತಂಬಾಕು ಸೇವನೆಯ ದುಷ್ಪರಿಣಾಮಗಳು, ಸಂಚಾರಿ ಸಮಸ್ಯೆ, ವಾಯುಮಾಲಿನ್ಯ, ನೈರ್ಮಲ್ಯದ ಕೊರತೆಯಿಂದ ಹರಡುವ ರೋಗಗಳು, ಕೃಷಿಯಲ್ಲಿ ಹೆಚ್ಚು ರಾಸಾಯನಿಕಗಳ ಬಳಕೆಯಿಂದ ಎದುರಾಗುತ್ತಿರುವ ಸವಾಲುಗಳು ಇತ್ಯಾದಿ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಸಹ ಶಿಕ್ಷಕ ದಯಾನಂದ ಸಾಗರ್, ನೆಲ್ಲಿಸರರವರ ನಿರ್ದೇಶನದಲ್ಲಿ ಜಾನಪದ ಕಲಾವಿದ ತಮಟೆ ಜಗದೀಶ್‌ರವರ ರಂಗ ಸಜ್ಜಿಕೆ ಹಾಗೂ ಸಂಗೀತದಲ್ಲಿ  ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕಿ ಜಯಲಕ್ಷ್ಮಿಯವರ ನೇತೃತ್ವದಲ್ಲಿ ಬೀದಿ ನಾಟಕ ಜರುಗಿತು.  

ಅಂತರಗಂಗೆ ಗ್ರಾಮದಲ್ಲಿ ಜ.೨೩ರಂದು ಮೊದಲ ವಾರದ ಸಂತೆ

ಭದ್ರಾವತಿ ಅಂತರಗಂಗೆ ಗ್ರಾಮ ಪಂಚಾಯಿತಿ. 
    ಭದ್ರಾವತಿ : ನಗರದ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ತಾಲೂಕಿನ ಕೂಡ್ಲಿಗೆರೆ ಹೋಬಳಿ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾದ ವಾರದ ಸಂತೆ ಆರಂಭಿಸಲಾಗುತ್ತಿದ್ದು, ಜ.೨೩ರಂದು ಮೊದಲ ಸಂತೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಆಯೋಜಿಸಲಾಗಿದೆ. 
    ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೧೦ ಗ್ರಾಮಗಳಿದ್ದು, ಪ್ರಸ್ತುತ ಸುಮಾರು ೧೦ ಸಾವಿರ ಜನಸಂಖ್ಯೆ ಒಳಗೊಂಡಿದೆ. ಅಲ್ಲದೆ ಈ ಗ್ರಾಮ ಪಂಚಾಯಿತಿಗೆ ದೊಡ್ಡೇರಿ, ಎರೇಹಳ್ಳಿ ಹಾಗು ಮಾವಿನಕೆರೆ ಗ್ರಾಮ ಪಂಚಾಯಿತಿಗಳು ಹೊಂದಿಕೊಂಡಿವೆ. ಗ್ರಾಮಸ್ಥರು ವಾರದ ಸಂತೆಗೆ ಪ್ರತಿ ಭಾನುವಾರ ನಗರದ ಪ್ರದೇಶದ ಸುಮಾರು ೧೦ ಕಿ.ಮೀ ದೂರದ ಹೊಸಮನೆ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಗೆ ಬರಬೇಕಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. 
    ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವಾರದ ಸಂತೆ ಆಯೋಜಿಸಬೇಕೆಂಬ ಬೇಡಿಕೆ ಗ್ರಾಮಸ್ಥರದ್ದಾಗಿತ್ತು. ಇದೀಗ ವಾರದ ಆರಂಭಿಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಗ್ರಾಮೀಣ ಭಾಗದ ವ್ಯಾಪಾರಸ್ಥರಿಗೆ, ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 
    ಕಾಡಂಚಿನ ಗ್ರಾಮಗಳು : 
    ಬಹುತೇಕ ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರಾತ್ರಿ ವೇಳೆ ಗ್ರಾಮಸ್ಥರ ಸಂಚಾರ ವಿರಳವಾಗಿದೆ. ಈ ಭಾಗದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಸದಾ ಭಯಭೀತಿಯಲ್ಲಿ ಬದುಕುತ್ತಿರುವ ಗ್ರಾಮಸ್ಥರಿಗೆ ವಾರದ ಸಂತೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ. ದಿನನಿತ್ಯದ ಬಳಕೆ ವಸ್ತುಗಳನ್ನು ವಾರದ ಒಂದೇ ದಿನ ಖರೀದಿಸಿಕೊಂಡು ಬರಬಹುದಾಗಿದೆ.  
    ಮಾರುಕಟ್ಟೆ ಕಲ್ಪಿಸಲು ಕ್ರಮ :
    ಪ್ರಸ್ತುತ ವಾರದ ಸಂತೆಗೆ  ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಗ್ರಾಮ ಪಂಚಾಯಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ರೂಪುರೇಷೆ ಸಿದ್ದಪಡಿಸಿಕೊಂಡಿದೆ.  
 
 
ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಗುರುವಾರ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸ್ಥಳವಕಾಶಗಳಿದ್ದು, ಪ್ರಸ್ತುತ ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮಸ್ಥರು, ವ್ಯಾಪಾರಸ್ಥರು ಗುರುವಾರ ನಡೆಯಲಿರುವ ವಾರದ ಸಂತೆ ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸಬೇಕು. 
          - ನಾಗೇಶ್, ಅಧ್ಯಕ್ಷರು, ಅಂತರಗಂಗೆ ಗ್ರಾಮ ಪಂಚಾಯಿತಿ, ಭದ್ರಾವತಿ. 
 

ತಹಸೀಲ್ದಾರ್‌ಗೆ ಕಾಂಗ್ರೆಸ್ ಹಿಂದುಳಿದ ಘಟಕದಿಂದ ಸನ್ಮಾನ, ಅಭಿನಂದನೆ


ಭದ್ರಾವತಿ ತಾಲೂಕು ದಂಡಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ತಹಸೀಲ್ದಾರ್ ಕೆ. ಪರುಸಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ನಗರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ತಾಲೂಕು ದಂಡಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ತಹಸೀಲ್ದಾರ್ ಕೆ. ಪರುಸಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ನಗರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಕ್ಷೇತ್ರದ ನಾಗರೀಕರು ಉತ್ತಮ ಆಡಳಿತ ನಿರೀಕ್ಷೆ ಎದುರು ನೋಡುತ್ತಿದ್ದು, ತಕ್ಷಣ ನಾಗರೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಪರಿಹರಿಸುವಂತೆ ಮನವಿ ಮಾಡಲಾಯಿತು. 
    ಘಟಕದ ಅಧ್ಯಕ್ಷ ಬಿ. ಗಂಗಾಧರ ನೇತೃತ್ವವಹಿಸಿದ್ದರು. ಉಪಾಧ್ಯಕ್ಷ ಜಯಕಾಂತ್,  ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಸ್ಲೆ, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಎಂ. ಶಿವಕುಮಾರ್, ಮಹಮದ್ ರಫಿ, ಹರೀಶ್ ಕರಟೆ ಮತ್ತು ನಗರಸಭೆ ಮಾಜಿ ಸದಸ್ಯ ಗಂಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.