Saturday, October 17, 2020

ಕೋವಿಡ್ ಸಂಕಷ್ಟದ ನಡುವೆಯೂ ರು.೪೦೦ ಕೋ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ

ಶೀಘ್ರದಲ್ಲಿಯೇ ಕಾಮಗಾರಿಗಳ ಆರಂಭ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿವರಣೆ


ಶನಿವಾರ ಶಾಸಕ ಗೃಹ ಕಛೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಅ. ೧೭: ಕ್ಷೇತ್ರದಲ್ಲಿ ಒಟ್ಟು ಸುಮಾರು ೪೦೦ ಕೋ. ರು. ವೆಚ್ಚದ ಹಲವು ಅಭಿವೃದ್ದಿ ಕಾರ್ಯಗಳಿಗೆ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಂತರ ಗುಣಮುಖರಾಗಿದ್ದು, ಬಿಡುಗಡೆಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಎಲ್ಲಾ ಇಲಾಖೆಗಳಲ್ಲಿ ಸುಮಾರು ೧ ವರ್ಷದಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಸಚಿವರು, ಸಂಸದರನ್ನು ಭೇಟಿ ಮಾಡಿ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
    ಬಹುಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಡುವೆ ಭದ್ರಾ ನದಿಗೆ ತಡೆ ಗೋಡೆ ನಿರ್ಮಾಣ, ವಸತಿ ನಿರ್ಮಾಣ, ಭದ್ರಾ ಜಲಾಶಯ ಮುಂಭಾಗ ಮಿನಿ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೂ ಮಂಜೂರಾತಿ ಪಡೆಯಲಾಗಿದೆ ಎಂದರು.
     ಮಂಜೂರಾತಿ ಪಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳು:
    ರು.೨ ಕೋ. ವೆಚ್ಚದಲ್ಲಿ ಕೋಡಿಹಳ್ಳಿ ಬಳಿ ಚರಂಡಿ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ಸೀತಾರಾಂಪುರದಿಂದ ತಳ್ಳಿಕಟ್ಟೆ, ಕುಮರಿ ನಾರಾಯಣಪುರ ಮಾರ್ಗವಾಗಿ ೫.೫ ಕಿ.ಮೀ ರಸ್ತೆ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ವೀರಾಪುರದಿಂದ ಕೊಮಾರನಹಳ್ಳಿ, ಜಯನಗರ ಕಾಚಗೊಂಡನಹಳ್ಳಿಗೆ ಸಂಪರ್ಕಿಸುವ ೫ ಕಿ.ಮೀ ರಸ್ತೆ ನಿರ್ಮಾಣ, ರು.೪.೨೭ ಲಕ್ಷ ರು. ವೆಚ್ಚದಲ್ಲಿ ಡೈರಿ ಸರ್ಕಲ್ ಬಳಿಯಿಂದ ಮಜ್ಜಿಗೇನಹಳ್ಳಿ, ಕೆರೆಕೋಡಿ ಸರ್ಕಲ್, ಬಿಳಕಿ ರಸ್ತೆ ಮೂಲಕ ನವುಲೆ ಬಸಾಪುರ ಮಾರ್ಗದ ೪.೮ ಕಿ.ಮೀ ರಸ್ತೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ನೆರೆ ಹಾವಳಿಯಿಂದಾಗಿ ಹಾಳಾದ ಕಾಗೆಕೋಡಮಗ್ಗಿ, ತಿಮ್ಲಾಪುರ, ಹೊಸೂರು, ಅರಳಿಹಳ್ಳಿ, ರೆಡ್ಡಿ ಕ್ಯಾಂಪ್ ರಸ್ತೆ ದುರಸ್ತಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ ಎಂದುರು.
    ಸುಮಾರು ರು. ೪೫ ಕೋ. ವೆಚ್ಚದಲ್ಲಿ ಗೋಣಿಬೀಡಿನಿಂದ ಕಂಬದಾಳು ಹೊಸೂರು ಮೂಲಕ ೪೫ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ,  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಡೆ ಹಿಡಿದಿದ್ದ ೮ ಕೋ. ರು. ನುದಾನ, ರು. ೯.೯೯ ಕೋ. ವೆಚ್ಚದಲ್ಲಿ ಗೊಂದಿ ಸೇತುವೆಯಿಂದ ಕರಕುಚ್ಚಿ ಮಾರ್ಗದ ನಾಲೆಗೆ ಸೇತುವೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ಭದ್ರಾ ಜಲಾಶಯ ಮುಂಭಾಗದಲ್ಲಿ ಮಿನಿ ಉದ್ಯಾನವನ ನಿರ್ಮಾಣ, ರು.೪.೫ ಕೋ. ವೆಚ್ಚದಲ್ಲಿ ದೊಣಬಘಟ್ಟ ಏತ ನೀರಾವರಿ ಯೋಜನೆ, ರು.೨೧.೦೬ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಯುಜಿಡಿ ಕಾಮಗಾರಿ,  ರು.೨೫.೪೦ ಕೋ. ವೆಚ್ಚದಲ್ಲಿ ದೊಣಬಘಟ್ಟದಿಂದ ಬಾಬಳ್ಳಿ, ಹೊಳೆಹೊನ್ನೂರು ಸೇತುವೆ ನಿರ್ಮಾಣ, ರು.೧೮ ಕೋ. ಹೆಚ್ಚುವರಿ ಅನುದಾನದಲ್ಲಿ ಸಿದ್ದರೂಢನಗರದ ಅಭಿವೃದ್ಧಿ, ರು.೧.೨೦ ಕೋ. ವೆಚ್ಚದಲ್ಲಿ ಮಾರುತಿನಗರದ ಬಳಿ ಇರುವ ಸೇತುವೆ ಅಗಲೀಕರಣ ಮತ್ತು ರು. ೭೦ ಲಕ್ಷ ವೆಚ್ಚದಲ್ಲಿ ಹೊಳೆಹೊನ್ನೂರು ಕಾಗೆಕೋಡಮಗ್ಗಿ ಬಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ರು. ೬೦ ಲಕ್ಷ ವೆಚ್ಚದಲ್ಲಿ ಬಾರಂದೂರು ಕುಂಬಾರಗುಂಡಿ, ಬೊಮ್ಮೇನಹಳ್ಳಿಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ, ರು.೬೫ ಲಕ್ಷ ವೆಚ್ಚದಲ್ಲಿ ಕೊಮಾರನಹಳ್ಳಿ ಕೆರೆ ಅಭಿವೃದ್ಧಿ, ರು. ೩೫ ಲಕ್ಷ ವೆಚ್ಚದಲ್ಲಿ ಸಿರಿಯೂರು-ಕಲ್ಲಹಳ್ಳಿ-ಹಾಗಲಮನೆ ರಸ್ತೆಯಲ್ಲಿ ಕಿರು ಸೇತುವೆ ಮರು ನಿರ್ಮಾಣ,
    ರು. ೨ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ಜಯಶ್ರೀ ಸರ್ಕಲ್, ಜನ್ನಾಪುರ, ಮಲ್ಲೇಶ್ವರ ಸಮುದಾಯ ಭವನ, ಜಿಂಕ್‌ಲೈನ್ ಮಾರ್ಗವಾಗಿ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ,  ಒಟ್ಟು ರು. ೬೦ ಲಕ್ಷ ವೆಚ್ಚದಲ್ಲಿ ನರಸೀಪುರ ಮತ್ತು ಕಾರೇಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ರು.೨೦ ಲಕ್ಷ ವೆಚ್ಚದಲ್ಲಿ ಎರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ರು.೧ ಕೋ. ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಭದ್ರಾ ಕಾಲೋನಿ, ಕಬಳಿಕಟ್ಟೆ, ಗುಂಡಪ್ಪ ಕ್ಯಾಂಪ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗು ರು. ೧೦ ಕೋ. ವೆಚ್ಚದಲ್ಲಿವಿಶ್ವಸ್ವರೂಪಿಣಿ ಮಾರಿಯಮ್ಮ ದೇವಾಸ್ಥಾನದ ಬಳಿ ಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಾಲಕೃಷ್ಣ, ಬಿ.ಟಿ ನಾಗರಾಜ್, ಅಣ್ಣೋಜಿರಾವ್, ಚನ್ನಪ್ಪ, ರಮೇಶ್‌ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪತ್ರಿಕಾ ವಿತರಕ ಭಾನುಪ್ರಕಾಶ್ ನಿಧನ


ಭಾನುಪ್ರಕಾಶ್
ಭದ್ರಾವತಿ, ಅ. ೧೭: ನಗರದ ಹೊಸಮನೆ ನಿವಾಸಿ, ದಿನ ಪತ್ರಿಕೆಗಳ ವಿತರಕ ಭಾನುಪ್ರಕಾಶ್(೭೦) ಶುಕ್ರವಾರ ರಾತ್ರಿ ನಿಧನ ಹೊಂದಿದರು.
      ಪತ್ನಿ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ನಿಧನಕ್ಕೆ ಪತ್ರಿಕಾವಿತರಕರು ಸಂತಾಪ ಸೂಚಿಸಿದ್ದಾರೆ.

ನಿವೃತ್ತ ಸೈನಿಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ಸುಬೇದಾರ್ ಎಲ್.ಡಿ ಅಶೋಕ್

ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಾಡಹಬ್ಬಕ್ಕೆ ಚಾಲನೆ

ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಚಾಲನೆ ನೀಡಿದರು.
ಭದ್ರಾವತಿ, ಅ. ೧೭:  ದೇಶ ರಕ್ಷಣೆಯಲ್ಲಿ ತೊಡಗಿ ನಿವೃತ್ತಿ ಹೊಂದಿರುವ ಸೈನಿಕರನ್ನು ಗುರುತಿಸುವ ಜೊತೆಗೆ ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಅವರಿಗೆ ಗೌರವ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
        ಅವರು ಶನಿವಾರ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
       ಮಾಜಿ ಸೈನಿಕರನ್ನು ನಿರ್ಲಕ್ಷಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅವರನ್ನು ಗುರುತಿಸುವ ಮೂಲಕ ದಸರಾ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿರುವುದು ತಾಲೂಕಿನ ಎಲ್ಲಾ ಮಾಜಿ ಸೈನಿಕರಿಗೆ ಸಲ್ಲುವ ಗೌರವಾಗಿದೆ. ಪ್ರತಿಯೊಬ್ಬರ ರಕ್ಷಣೆ ಇಂದು ಅಗತ್ಯವಾಗಿದ್ದು, ನಾಡಹಬ್ಬ ದಸರಾ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರನ್ನು ರಕ್ಷಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸಿದರು.
       ವೇದಿಕೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಾಳಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಸುಬೇದಾರ್ ಬೋರೇಗೌಡ, ಹಲ್ದಾರ್‌ಗಳಾದ ವಿನೋದ್‌ಪೂಜಾರಿ, ಪ್ರಸಾದ್, ನಾಯಕ್ ರಾಜೇಶ್, ಮಾಜಿ ಸೈನಿಕ ಗುಳ್‌ಗುಳೇ, ಮುಖಂಡರಾದ ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ನಗರಸಭೆ ಪೌರಾಯುಕ್ತ ಮನೋಹರ್ ಸ್ವಾಗತಿಸಿದರು. ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ದಸರಾ ಉದ್ಘಾಟನೆಗೆ ಆಗಮಿಸಿದ ಸುಬೇದಾರ್ ಎಲ್.ಡಿ ಅಶೋಕ್‌ರವರನ್ನು ಸ್ವಾಗತಿಸಲಾಯಿತು. ಶ್ರೀ ಹಳದಮ್ಮ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವದಲ್ಲಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
   ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೊರೋನಾ ವಾರಿಯರ್ಸ್‌ಗಳಾದ ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ನಿಲೇಶ್‌ರಾಜ್ ಸೇರಿದಂತೆ ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.