Wednesday, October 13, 2021

ಕರಾವೇ ಮಹಿಳಾ ಘಟಕಕ್ಕೆ ನೂತನ ಅಧ್ಯಕ್ಷರುಗಳ ನೇಮಕ

ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಸಂಘಟನಾತ್ಮಕವಾಗಿ ಹೆಚ್ಚು ಬಲಗೊಳ್ಳುತ್ತಿದ್ದು, ಹೆಚ್ಚಿನ ಜವಾಬ್ದಾರಿ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರುಗಳನ್ನು ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ನೇಮಕ ಮಾಡಲಾಯಿತು.
    ಭದ್ರಾವತಿ, ಅ. ೧೩: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿ ಗಂಗಾವತಿ ನೇಮಕಗೊಂಡಿದ್ದಾರೆ.
    ಮಹಿಳಾ ಘಟಕ ಸಂಘಟನಾತ್ಮಕವಾಗಿ ಹೆಚ್ಚು ಬಲಗೊಳ್ಳುತ್ತಿದ್ದು, ಹೆಚ್ಚಿನ ಜವಾಬ್ದಾರಿ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರುಗಳನ್ನು ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ನೇಮಕ ಮಾಡಲಾಗಿದೆ.
    ಶಿವಮೊಗ್ಗ ತಾಲೂಕು ನೂತನ ಅಧ್ಯಕ್ಷರಾಗಿ ಗಂಗಾವತಿ, ಶಿವಮೊಗ್ಗ ನಗರ ಘಟಕದ ನೂತನ ಅಧ್ಯಕ್ಷರಾಗಿ ಜ್ಯೋತಿ ರಂಗನಾಥ್ ಹಾಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವೇದಾ ಅವರನ್ನು ನೇಮಕಗೊಳಿಸಿದ್ದು, ಸಂಘಟನೆಯ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೂಚಿಸಿದ್ದಾರೆ.
    ನೂತನ ಅಧ್ಯಕ್ಷರುಗಳನ್ನು ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ. ಭದ್ರಾವತಿ ತಾಲೂಕು ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷೆ ಗೌರಮ್ಮ, ಸಂಘಟನಾ ಕಾರ್ಯದರ್ಶಿ ನಾಗರತ್ನ. ಜಿಲ್ಲಾ ಕಾರ್ಯದರ್ಶಿ ಪವಿತ್ರ, ರೂಪ, ಸುಮತಿ, ರುಕ್ಮಿಣಿ, ರೇಣುಕಾ, ಯಾಸ್ಮಿನ್, ರೇಖಾ, ಸುಧಾ, ನಳಿನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಲಿತ ಬಾಲಕಿ ಮೇಲೆ ದೌರ್ಜನ್ಯ, ಅತ್ಯಾಚಾರ ಘಟನೆ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದ ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೩: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದ ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು.
    ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, ದಲಿತ ಬಾಲಕಿಯರ ಮೇಲಿನ ದೌರ್ಜನ್ಯ ಹಾಗು ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಲಿತ ಕುಟುಂಬದ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ದೌರ್ಜನ್ಯ ಹಾಗು ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಶಿವಬಸಪ್ಪನವರು, ತಾಲೂಕು ಸಂಚಾಲಕ ಆರ್. ರವಿನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರ ಸಂಚಾಲಕ ಆರ್. ತಮ್ಮಯ್ಯ, ಶಿಕ್ಷಕ ಮಹಾದೇವಪ್ಪ ಮತ್ತು ಸಂಘಟನಾ  ಸಂಚಾಲಕ ಶಿವನಾಯ್ಕ, ನಾಗೇಶ್, ಸೋನಿ ಮೆಲೋಡಿ ಮಾಲೀಕ ಅರ್ ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು, ವನ್ಯ ಜೀವಿ ನೆಲೆಗಳು ಇಲ್ಲಿ ಅನಾವರಣ

ಮೈಸೂರು ದಸರಾ ನಾಡಹಬ್ಬ ಗೊಂಬೆ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ದಂಪತಿ

ಭದ್ರಾವತಿ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ಉಮೇಶ್ ಹಾಗು ಕುಸುಮ ದಂಪತಿ ಈ ಬಾರಿ ಕೈಗೊಂಡಿರುವ ದಸರಾ ಗೊಂಬೆ ಪ್ರದರ್ಶನ ಎಲ್ಲರನ್ನು ಆಕರ್ಷಿಸುತ್ತಿದೆ.

     * ಅನಂತಕುಮಾರ್
     ಭದ್ರಾವತಿ: ವೈಭವದ ಮೈಸೂರು ದಸರಾ ನಾಡಹಬ್ಬ ಪರಂಪರೆ ಕೇವಲ ಗೊಂಬೆ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ. ನಮ್ಮ ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು, ವನ್ಯ ಜೀವಿ ನೆಲೆಗಳನ್ನು ಸಹ ಅನಾವರಣಗೊಳಿಸುವ ಮೂಲಕ ನಗರದ ನಿವಾಸಿಗಳಾದ ಉಮೇಶ್ ಮತ್ತು ಕುಸುಮ ದಂಪತಿ ಜನರ ಗಮನ ಸೆಳೆಯುತ್ತಿದ್ದಾರೆ.
    ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ವೆಸ್ಟೀಜ್ ಹೆಲ್ತ್‌ಕೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಹಾಗು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಸುಮ ದಂಪತಿ ಕಳೆದ ೨೦ ವರ್ಷಗಳಿಂದ ಮೈಸೂರು ದಸರಾ ನಾಡಹಬ್ಬ ಪರಂಪರೆಯನ್ನು ಗೊಂಬೆ ಪ್ರದರ್ಶನದ ಮೂಲಕ ಉಕ್ಕಿನ ನಗರದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಅದರಲ್ಲೂ ಉಕ್ಕಿನ ನಗರದ ಜನತೆಗೆ ಈ ಪರಂಪರೆಯನ್ನು ಪರಿಚಯಿಸುವ ಮೂಲಕ ಸಮಾಜದ ಎಲ್ಲರೂ ಜಾತಿ, ಧರ್ಮ, ಭೇದಭಾವ ಮರೆತು ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
                                                                                                                  - ಉಮೇಶ್, ಭದ್ರಾವತಿ




    ವಿಶೇಷ ಎಂದರೆ ವನ್ಯ ಜೀವಿ ತಾಣಗಳಾದ ಶಿವಮೊಗ್ಗ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರ, ಭದ್ರಾ ಅಭಯಾರಣ್ಯ, ಗುಡವಿ ಪಕ್ಷಿ ಧಾಮ, ಮತ್ಸ್ಯ ಧಾಮ ಹಾಗು ವಿಜಯ ನಗರ, ಚಾಮುಂಡಿ ಬೆಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಡಗುಂಜಿ, ಗಾಣಗಾಪುರ, ಗೋಕರ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಾಗು ಧಾರ್ಮಿಕ ಕ್ಷೇತ್ರಗಳನ್ನು ಆಕರ್ಷಕವಾಗಿ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ ಆಧುನಿಕ ಶೈಲಿಯ ಅಡುಗೆ ಮನೆ ಹಾಗು ಪ್ರಾಚಿನ ಕಾಲದ ಅಡುಗೆ ಮನೆ ಮತ್ತು ನಗರದ ಪದ್ಮನಿಲಯ ಹೋಟೆಲ್ ಸಹ ಇಲ್ಲಿ ತೆರೆದುಕೊಂಡಿವೆ.

ತಾಯಿ ಮನೆಯಿಂದ ರೂಢಿಸಿಕೊಂಡು ಬಂದ ಭವ್ಯಪರಂಪರೆಯ ಈ ಆಚರಣೆಯನ್ನು ಅತ್ತೆಯ ಮನೆಯಲ್ಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿ ವರ್ಷ ವಿಭಿನ್ನತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ವರ್ಷ ನೂರಾರು ಮಂದಿ ಆಗಮಿಸುತ್ತಿದ್ದು, ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡುತ್ತಿದೆ.
                                                                                                                 - ಕುಸುಮ, ಭದ್ರಾವತಿ

    ಉಳಿದಂತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನೊಳಗೊಂಡಂತೆ ನವದುರ್ಗಿಯರು, ಶೃಂಗೇರಿ ಶಾರದಾಂಬೆ, ಆಚಾರ್ಯತ್ರಯರು, ದಶವತಾರ, ವಿಶ್ವರೂಪ, ಶ್ರೀ ತಿರುಪತಿ ವೆಂಕಟೇಶ್ವರ, ಸಪ್ತಋಷಿ, ಸಂಗೀತ ವಾದ್ಯಗಳು, ಬೆಣ್ಣೆಕೃಷ್ಣ, ಲಲಿತಾದೇವಿ ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ ಜೊತೆಗೆ ವಿಶೇಷವಾಗಿ ಸುಮಾರು ೧೫೦ ವರ್ಷ ಹಳೆಯದಾದ ಪಟ್ಟದ ಗೊಂಬೆ ಸಹ ಇದ್ದು ಇವುಗಳನ್ನು ನೋಡಿ ಆನಂದಿಸುವ ಜೊತೆಗೆ ಕಣ್ತುಂಬಿ ಕೊಳ್ಳಬಹುದಾಗಿದೆ. ಇವುಗಳ ನಡುವೆ ದೇಶದ ಬೆನ್ನೆಲುಬು ರೈತನನ್ನು ಈ ದಂಪತಿ ಸ್ಮರಿಸಿರುವುದು ಈ ದಂಪತಿಯ ಮತ್ತೊಂದು ವಿಶೇಷವಾಗಿದೆ.
    ಉಮೇಶ್ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಅವರ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಯಶಸ್ವಿಯಾಗಿ ಈ ಕಾರ್ಯವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳು ಪ್ರತಿ ವರ್ಷ ಇವರ ಮನೆಗೆ ಭೇಟಿ ನೀಡಿ ಗೊಂಬೆ ಪ್ರದರ್ಶನ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.