Friday, January 24, 2025

ಜ.೨೬ರಂದು ೧೨ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ, ಪೌರಕಾರ್ಮಿಕರ ವಸತಿ ಸಮುಚ್ಛಯ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಕಳೆದ ೨ ತಿಂಗಳ ಹಿಂದೆ(ಅಕ್ಟೋಬರ್-೨೦೨೪) ಹಳೇಯ ಪ್ರತಿಮೆ ಬದಲಿಸಿ ಹೊಸ ಪ್ರತಿಮೆ ಪ್ರತಿಷ್ಠಾಪಿಸುವ ಕಾರ್ಯ ಆರಂಭಿಸಲಾಗಿತ್ತು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಹಳೇಯ ಪ್ರತಿಮೆ ಬದಲಿಸಿ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಹಾಗು ನೈಜತೆ ಹೋಲುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಕಂಚಿನ ಪ್ರತಿಮೆ ಉದ್ಘಾಟನೆ ಹಾಗು ಖಾಸಗಿ ಬಸ್ ನಿಲ್ದಾಣದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಮಫಲಕ ಉದ್ಘಾಟನೆ ಮತ್ತು ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿರುವ ವಸತಿ ಸಮುಚ್ಛಯಗಳ ಉದ್ಘಾಟನೆ ಜ.೨೬ರ ಭಾನುವಾರ ಗಣರಾಜ್ಯೋತ್ಸವ ದಿನದಂದು ನಡೆಯಲಿದೆ. 
    ನಗರಸಭೆ ವತಿಯಿಂದ ಒಟ್ಟು ೫೪ ಲಕ್ಷ ರು. ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ.ಬಿ.ಆರ್ ಅಂಬೇಡ್ಕರ್‌ರವರ ಹೊಸ ಪ್ರತಿಮೆ ಮಧ್ಯಾಹ್ನ ೧೨ ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಅಲ್ಲದೆ ಖಾಸಗಿ ಬಸ್ ನಿಲ್ದಾಣದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ ನಾಮಫಲಕ ಅನಾವರಣಗೊಳ್ಳಲಿದೆ. ಇದಕ್ಕೂ ಮೊದಲು ಬೆಳಿಗ್ಗೆ ೮.೩೦ಕ್ಕೆ ಆರ್.ಜಿ.ಆರ್.ಎಚ್.ಸಿ.ಎಲ್ ವತಿಯಿಂದ ಒಟ್ಟು ೫.೬೦ ಕೋಟಿ ರು. ವೆಚ್ಚದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಛಯಗಳ ಉದ್ಘಾಟನೆ ನಡೆಯಲಿದೆ. 
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್ ಜಮೀರ್ ಅಹಮದ್ ಖಾನ್, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿರುವರು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಶಾರದ ಪೂರ್‍ಯಾನಾಯ್ಕ, ಎಸ್.ಎಲ್ ಭೋಜೇಗೌಡ, ಭಾರತಿಶೆಟ್ಟಿ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಷ್ ಬಾನು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರಾದ ಜಿ. ಪಲ್ಲವಿ, ಎಸ್. ಪಲ್ಲವಿ, ಎಸ್. ರವಿಕುಮಾರ್, ಆರ್.ಎಂ ಮಂಜುನಾಥಗೌಡ, ಡಾ. ಅಂಶುಮಂತ್, ಎಚ್.ಎಸ್ ಸುಂದರೇಶ್, ಸಿ.ಎಸ್ ಚಂದ್ರಭೂಪಾಲ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯರಾದ ಜಾರ್ಜ್, ಬಿ.ಎಂ ಮಂಜುನಾಥ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಹಿರಿಯ ಐಎಎಸ್ ಅಧಿಕಾರಿಗಳಾದ  ದೀಪ ಚೋಳನ್, ಪ್ರಭುಲಿಂಗ ಕವಲಿಕಟ್ಟೆ, ಗುರುದತ್ತ ಹೆಗಡೆ, ಕೆಎಎಸ್ ಅಧಿಕಾರಿ ಎನ್. ಸುಶೀಲಮ್ಮ, ಜಿಲ್ಲಾ ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ ಮತ್ತು ನದಾಫ್ ವಹಿದಾ ಬೇಗಂ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 
 

ತರಂಗರಂಗ ಸಭಾಗೃಹ ಉದ್ಘಾಟನೆ : ಕಾರ್ಯದರ್ಶಿ ಎಸ್.ಎನ್ ಸುಭಾಷ್‌ಗೆ ಸನ್ಮಾನ

ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಭದ್ರಾವತಿ ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕಾರ್ಯದರ್ಶಿಯಾಗಿ ಸುಮಾರು ೪ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಎಸ್.ಎನ್ ಸುಭಾಷ್‌ರವರನ್ನು ಶಾಲೆಯ ತರಂಗರಂಗ ಸಭಾಗೃಹದ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕಾರ್ಯದರ್ಶಿಯಾಗಿ ಸುಮಾರು ೪ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಎಸ್.ಎನ್ ಸುಭಾಷ್‌ರವರನ್ನು ಶಾಲೆಯ ತರಂಗರಂಗ ಸಭಾಗೃಹದ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಹಯೋಗದೊಂದಿಗೆ ಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದ್ದು, ಶಿಥಿಲಗೊಂಡಿದ್ದ ಕಟ್ಟಡವನ್ನು ಶಾಸಕರ ಅನುದಾನ ಹಾಗು ಕ್ಲಬ್ ಆರ್ಥಿಕ ನೆರವಿನೊಂದಿಗೆ ನವೀಕರಣಗೊಳಿಸಲಾಗಿದೆ. ಜೊತೆಗೆ ನೂತನವಾಗಿ ತರಂಗರಂಗ ಸಭಾಗೃಹ ನಿರ್ಮಿಸಲಾಗಿದೆ. ಇದರ ಉದ್ಘಾಟನೆಯನ್ನು ನಗರದ ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್ ನೆರವೇರಿಸಿದ್ದು, ಕಾರ್ಯಕ್ರಮದ ಅಂಗವಾಗಿ ಎಸ್.ಎನ್ ಸುಭಾಷ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಶಿವಮೊಗ್ಗದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸುವರ್ಣ ವಿ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಲಯನ್ಸ್ ಕ್ಲಬ್ ಶುಗರ್ ಟೌನ್ ಪ್ರಮುಖರಾದ ಡಾ.ಟಿ ನರೇಂದ್ರ ಭಟ್, ಆರ್. ಉಮೇಶ್, ಅನಂತ ಕೃಷ್ಣ ನಾಯಕ್, ತಾರಾಮಣಿ ಹಾಗು ಟ್ರಸ್ಟ್  ಸದಸ್ಯರು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗಂಗೋಜಿರಾವ್ ನಿಧನ

ಗಂಗೋಜಿರಾವ್ ನಿಧನ 
    ಭದ್ರಾವತಿ : ತಾಲೂಕಿನ ಕಾಚಗೊಂಡನ ಹಳ್ಳಿ ನಿವಾಸಿ, ಸರ್ಕಾರಿ ಪಡಿತರ ವಿತರಕ ಗಂಗೋಜಿರಾವ್(೬೯) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ನಗರಸಭೆ ಮಾಜಿ ಸದಸ್ಯೆ ರೇಣುಕಾ ಸೇರಿದಂತೆ ೩ ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು. 
    ನಗರಸಭೆ ಸದಸ್ಯರಾದ ವಿ. ಕದಿರೇಶ್, ಕೆ. ಸುದೀಪ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.