Thursday, January 16, 2025

ಪುರೋಹಿತ ಪ್ರಭಾಕರ ಜೋಯ್ಸ್ ನಿಧನ

    ಭದ್ರಾವತಿ: ನಗರದ ಹೊಸಮನೆ ಎನ್‌ಎಂಸಿ ಬಲಭಾಗ ನಿವಾಸಿ, ಪುರೋಹಿತ ಪ್ರಭಾಕರ ಜೋಯ್ಸ್(೭೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ. 

ಕಿರುಕುಳದಿಂದ ನರ್ಸ್ ಆತ್ಮಹತ್ಯೆ ಯತ್ನ ಆರೋಪ : ಮನನೊಂದು ವೈದ್ಯೆ ಆತ್ಮಹತ್ಯೆ ಯತ್ನ

ವೈಯಕ್ತಿಕ ಕಾರಣವೋ, ಕಿರಿಕುಳವೋ 


    ಭದ್ರಾವತಿ: ತಾಲೂಕಿನ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರ(ಪಿಎಚ್‌ಸಿ)ದ ನರ್ಸ್ ಮತ್ತು ವೈದ್ಯೆ ನಡುವಿನ ಜಗಳ ಆತ್ಮಹತ್ಯೆಯತ್ನದವರೆಗೂ ಸಾಗಿರುವ ಘಟನೆ ಗುರುವಾರ ನಡೆದಿದೆ. 
    ನರ್ಸ್ ಸುಕನ್ಯ ಮತ್ತು ವೈದ್ಯೆ ಡಾ. ಹಂಸವೇಣಿ ಇಬ್ಬರು ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಕನ್ಯ ಮತ್ತು ಡಾ. ಹಂಸವೇಣಿ ನಡುವೆ ಕೆಲವು ತಿಂಗಳಿನಿಂದ ಸಣ್ಣ ಪ್ರಮಾಣದಲ್ಲಿ ಜಗಳ ನಡೆಯುತ್ತಿದ್ದು, ಈ ನಡುವೆ ಡಾ. ಹಂಸವೇಣಿಯವರನ್ನು ಕಳೆದ ಸುಮಾರು ೧ ತಿಂಗಳ ಹಿಂದೆ ತಾಲೂಕಿನ ಸನ್ಯಾಸಿ ಕೋಡಮಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. 
    ನರ್ಸ್ ಸುಕನ್ಯ ಆಸ್ಪತ್ರೆಯಲ್ಲಿಯೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಡಾ. ಹಂಸವೇಣಿ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಮನನೊಂದು ಡಾ. ಹಂಸವೇಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದ್ದು, ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
    ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಹಾಗು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್‌ರವರು ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಕಣ್ಮನ ಸೆಳೆದ ಗೂಳಿಗಳ ಓಟದ ಸ್ಪರ್ಧೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 


       ಪ್ರತಿ ವರ್ಷದಂತೆ ಈ ಬಾರಿ ಸಹ ಮಧ್ಯಾಹ್ನ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದ ಮುಖ್ಯ ರಸ್ತೆಯ ಅಡ್ಡ ರಸ್ತೆಯಲ್ಲಿ ಸ್ಪರ್ಧೆ ಜರುಗಿತು. ಸ್ಪರ್ಧೆ ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ನ್ಯೂಟೌನ್, ಗಣೇಶ್ ಕಾಲೋನಿ, ಜನ್ನಾಪುರ, ಹುಡ್ಕೋ ಕಾಲೋನಿ, ಸುರಗಿತೋಪು, ಜೆಪಿಎಸ್ ಕಾಲೋನಿ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ವೀಕ್ಷಿಸಲು ಮಕ್ಕಳು, ಮಹಿಳೆಯರು, ವಯೋವೃದ್ಧ ಆಗಮಿಸಿದ್ದರು. ಯುವಕರು ಗೂಳಿಗಳ ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ಶಿಕಾರಿಪುರ, ಶಿರಾಳಕೊಪ್ಪ, ಹೊನ್ನಾಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು ೭೫ ಗೂಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅಲಂಕೃತಗೊಂಡ ಗೂಳಿಗಳ ಓಟ ಕಣ್ಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರಿಂದ ಹೆಚ್ಚಿನ ಮುನ್ನಚ್ಚರಿಕೆ ವಹಿಸಲಾಗಿತ್ತು. ಅಲ್ಲದೆ ನ್ಯೂಟೌನ್ ಠಾಣೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ಸ್ಪರ್ಧೆ ಯಶಸ್ವಿಗೊಳ್ಳಲು ಸಹಕರಿಸಿದರು. 


    ಫಲಿತಾಂಶ ವಿವರ: 
    ಹೊನ್ನಾಳಿ ಭೈರವ ಗೂಳಿ ೧೧.೭೫ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಪ್ರಥಮ ಬಹುಮಾನ, ವಿದ್ಯಾಮಂದಿರ ರೇಣುಕಾಂಬ ಎಕ್ಸ್‌ಪ್ರೆಸ್ ಗೂಳಿ ೧೧.೯೧ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ದ್ವಿತೀಯ ಬಹುಮಾನ ಹಾಗು ಜಾನುವಾರುಗಳ ಸಂಘದ ಗಜೇಂದ್ರ ಗೂಳಿ ೧೨.೦೬ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಬಹುಮಾನ ಹಾಗು ರಾಜಾಹುಲಿ(ಸೀನಾ), ಶಿವಮೊಗ್ಗ ವೀರಭದ್ರ ಮತ್ತು ಚೋರಡಿ ಶಿವಲಿಂಗ ಗೂಳಿಗಳು ಸಮಾಧಾನಕರ ಬಹುಮಾನ ಪಡೆದುಕೊಂಡವು. ಶುಕ್ರವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನಗಳ ವಿತರಣೆ ನಡೆಯಲಿದೆ. 

ಹಿರೇಕೆರೆ ವೀಕ್ಷಣೆ ಮಾಡಿ, ಜನ್ನಾಪುರ ಕೆರೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿ

ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್‌ರವರಿಗೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ : ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್‌ರವರಿಗೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಗಿದೆ. 
    ನಗರಸಭೆ ವಾರ್ಡ್ ನಂ.೧೫ರ ಹೊಸಮನೆ ತಮ್ಮಣ್ಣ ಕಾಲೋನಿ ಹಿಂಭಾಗದಲ್ಲಿರುವ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ೫೦ ಎಕರೆ ೨೦ ಗುಂಟೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಹಿರೇಕೆರೆ ಅಭಿವೃದ್ದಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿ ಕೆರೆ ವೀಕ್ಷಣೆ ನಡೆಸುವಂತೆ ಕೋರಲಾಗಿದೆ. 
    ಜನ್ನಾಪುರ ಕೆರೆಗೆ ನೂರಾರು ವರ್ಷಗಳಿಂದ ಕಲ್ಮಶಗೊಂಡಿರುವ ನೀರು ಬಂದು ಸೇರುತ್ತಿದ್ದು, ಇದರಿಂದಾಗಿ ಕೆರೆಯಿಂದ ದುರ್ವಾಸನೆ ಬರುತ್ತಿದೆ. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಹದಗೆಟ್ಟು ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅನ್ನದಾತ, ಶ್ರೇಷ್ಠ ತಂತ್ರಜ್ಞ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಹೆಸರಿನಲ್ಲಿ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಮನವಿ ಮಾಡಲಾಗಿದೆ. 
    ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಹಸೀಲ್ದಾರ್, ನಗರಸಭೆ ಪೌರಾಯುಕ್ತರು, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿ ವರ್ಗದವರು ಹಾಗು ಕೆರೆ ಸಮೀಪದ ರೈತರನ್ನೊಳಗೊಂಡ ಒಂದು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
    ಮನವಿ ಸ್ವೀಕರಿಸಿದ ಎಚ್.ಎಸ್ ಸುಂದರೇಶ್‌ರವರು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆತ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವುದಾಗಿ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರಿಗೆ ಭರವಸೆ ನೀಡಿದ್ದಾರೆ. 
    ತಾಲೂಕಿನ ಕಲ್ಲಹಳ್ಳಿ ಗ್ರಾಮದ ಧರ್ಮಣ್ಣ ಹಾಗೂ ಕೋಡಿಹಳ್ಳಿ ಸತ್ಯ ಉಪಸ್ಥಿತರಿದ್ದರು. 

ಶರಾವತಿ ಸಂತ್ರಸ್ಥರಿಗೆ ಮಂಜೂರಾತಿಯಾದ ಭೂಮಿಯಲ್ಲಿ ಮರಕಡಿತಲೆ ಪ್ರಕರಣ : ಪ್ರತಿಭಟನೆ

- ಮರ ಕಡಿತಲೆ ಮಾಡದೆ ವಿನಾಕಾರಣ ಕಿರುಕುಳ, ಸಂತ್ರಸ್ಥರ ಆರೋಪ 
- ಅಕ್ರಮವಾಗಿ ಮರಗಳ ಕಡಿತಲೆಗೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು, ಜೆಡಿಎಸ್ ಆರೋಪ 

ಭದ್ರಾವತಿ ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
    ಗ್ರಾಮದ ಸರ್ವೇ ನಂ.೮ರಲ್ಲಿ ಶರಾವತಿ ಸಂತ್ರಸ್ಥರಾದ ಸೀತಾರಾಮ ಬಿನ್ ಮಂಜಪ್ಪ ಎಂಬುವರಿಗೆ ಕಂದಾಯ ಭೂಮಿ ಮಂಜೂರು ಮಾಡಲಾಗಿದ್ದು, ಈ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರೂ ಸಹ ಕಳೆದ ೭ ವರ್ಷಗಳಿಂದ ಹಲವಾರು ಬಾರಿ ಮರಕಡಿತಲೆ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಹಲವು ಬಾರಿ ಮರಗಳ ಕಳ್ಳತನ ನಡೆದಿದ್ದು, ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸಹ ವಿನಾಕಾರಣ ದೂರು ನೀಡಿದ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಯಿತು. 
    ಈ ನಡುವೆ ಜ.೧೪ರಂದು ಮರಗಳ ಕಡಿತಲೆ ನಡೆದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಕಡಿತಲೆ ಮಾಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಈ ಸಂಬಂಧ ಪ್ರಕರಣ ಸಹ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. 
    ಮರಗಳನ್ನು ಅಕ್ರಮವಾಗಿ  ಕಡಿದಿದ್ದು,  ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ : 
    ಸಂಕ್ರಾಂತಿ ಹಬ್ಬದ ದಿನದಂದು ಮರ ಕಳ್ಳರು ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿದ್ದು, ಮಾಹಿತಿ ತಿಳಿದಿದ್ದರೂ ಸಹ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸಿದ್ದಾರೆಂದು ಜೆಡಿಎಸ್ ಪಕ್ಷ ಆರೋಪಿಸಿದೆ. 
    ಎಮ್ಮೆಹಟ್ಟಿ ಸರ್ವೇ ನಂ. ೮ರಲ್ಲಿ ಅರಣ್ಯ ಇಲಾಖೆ ಬೆಳಸಿದ್ದ ಸುಮಾರು ೩೫ - ೩೭ ಮರಗಳನ್ನು ಮರ ಕಳ್ಳರು ಕಡಿದಿದ್ದು, ಮರಗಳನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ವಲಯದ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ಇದ್ದಾಗ ನಂತರ ಶಿವಮೊಗ್ಗ ತನಿಖಾದಳಕ್ಕೆ ಮಾಹಿತಿ ನೀಡಲಾಗಿದ್ದಾರೆ.  ಶಿವಮೊಗ್ಗ ತನಿಖಾದಳದ ಸಿಬ್ಬಂದಿಗಳು ಸ್ಥಳಕ್ಕೆ ಹೋಗುವಷ್ಟರಲ್ಲಿ ಸುಮಾರು ೩೦ ಲೋಡ್‌ನಷ್ಟು ಮರಗಳನ್ನು ಸಾಗಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.  ಉಳಿದ ೩ ಲೋಡ್‌ನಷ್ಟು ಮರಗಳನ್ನು ವಶಕ್ಕೆ ಪಡೆಯಲಾಗಿದ್ದು, ವಲಯ ಅರಣ್ಯ ಕಚೇರಿ ಆವರಣದಲ್ಲಿ ಸಂಗ್ರಹಿಸಲಾಗಿದೆ. ಸ್ಥಳೀಯ ಆರಣ್ಯ ಅಧಿಕಾರಿಗಳಿಗೆ ತನಿಖಾ ದಳ ವರದಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ. ಆದರೆ ಸ್ಥಳೀಯ ಅರಣ್ಯ ಅಧಿಕಾರಿಗಳು  ಪ್ರಭಾವಿ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ತಿಪ್ಪೆ ಸಾರಿಸುವ ಕೆಲಸ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದ್ದು, ಅಲ್ಲದೆ ಈ ಸಂಬಂಧ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ತಿಳಿಸಿದೆ.