
ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಭದ್ರಾವತಿ: ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಭಂಡಾರಹಳ್ಳಿ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿಬ್ಲಾಕ್ ಶೆಡ್ ನಿವಾಸಿ ಅಜಯ್ ಎಂಬ ಯುವಕ ನೀಡಿದ ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ನಡುವೆ ನಕಲಿ ನೋಟುಗಳು ಕಂಡು ಬಂದಿದ್ದಲ್ಲಿ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಸದ್ಯಕ್ಕೆ ಪೊಲೀಸರು ರಂಗೇಗೌಡನಿಂದ ರು. ೫೦೦ ಮುಖ ಬೆಲೆಯ ೧೩ ನೋಟುಗಳು, ರು. ೨೦೦ ಮುಖ ಬೆಲೆಯ ೧ ನೋಟು, ರು. ೧೦೦ ಮುಖ ಬೆಲೆಯ ೧ ನೋಟು ಮತ್ತು ರು. ೫೦ ಮುಖ ಬೆಲೆಯ ೧ ನೋಟು ವಶಪಡಿಸಿಕೊಂಡಿದ್ದಾರೆ.
ಜೂ. ೧೨ರಂದು ಸಂಜೆ ವೇಳೆ ದ್ವಿಚಕ್ರ ವಾಹನ(ಡಿಸ್ಕವರ್ ಬೈಕ್)ದಲ್ಲಿ ಬಂದ ವ್ಯಕ್ತಿಯೋರ್ವ ರು. ೫೦೦ ಮುಖ ಬೆಲೆಯ ನಕಲಿ ನೋಟು ನೀಡಿ ವ್ಯಾಪಾರ ಮಾಡಿ ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ನಕಲಿ ನೋಟು ನೀಡಿ ವ್ಯವಹರಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡ
ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ ಆರ್ ನಾಗರಾಜ, ಪ್ರಭಾರ ನಗರ ವೃತ್ತ ನಿರೀಕ್ಷಕ ಮಂಜುನಾಥ್ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇ ರವರ ನೇತೃತ್ವದ ಸಿಬ್ಬಂದಿಗಳಾದ ಠಾಣೆಯ ಸಹಾಯಕ ನಿರೀಕ್ಷಕ ಶಿವಸ್ವಾಮಿ , ಸಿಬ್ಬಂದಿಗಳಾದ ನವೀನ್, ಎಚ್. ವೈ ವಿಜಯ್, ಶ್ರೀಧರ್, ಮಾರುತಿ ಪಾಟೀಲ, ಪ್ರಸನ್ನ, ಬಿ.ಎಂ ರಘು, ಬಿ.ಎಚ್ ನಾಗರಾಜಪ್ಪರವರನ್ನೊಳಗೊಂಡ ತನಿಖಾ ತಂಡ ರಚಸಿಲಾಗಿತ್ತು.
ಬಂಧಿತ ರಂಗೇಗೌಡ ಬೇರೆ ಕಡೆ ವ್ಯವಹಾರ ಮಾಡಿರುವುದಾಗಿ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಓಎಫ್ಪಿ ೭೯೦೮೨೯ ಮತ್ತು ೯ಟಿವಿ ೯೭೮೨೦೨ ಈ ನಂಬರಿನ ೫೦೦ ರು. ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ನ್ಯೂಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ಕುಮಾರ್ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.