Wednesday, May 31, 2023

ವಿಶ್ವ ತಂಬಾಕು ವಿರೋಧಿ ದಿನ : ಜಾಗೃತಿ ಜಾಥಾ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವತಿಯಿಂದ ಬುಧವಾರ ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಯಿತು.
    ಭದ್ರಾವತಿ, ಮೇ. ೩೧: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವತಿಯಿಂದ ಬುಧವಾರ ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಯಿತು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಿಂದ ಪ್ಲೆಕ್ಸ್, ಫಲಕಗಳನ್ನು ಹಿಡಿದು ಜಾಥಾ ನಡೆಸುವ ಮೂಲಕ ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆಯ ಹಿರಿಯ ವೈದ್ಯ ಡಾ. ಡಿ.ಎಸ್ ಶಿವಪ್ರಕಾಶ್ ಸೇರಿದಂತೆ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶಾಲಾ ಪ್ರಾರಂಭೋತ್ಸವ : ಸಂಭ್ರಮದ ಆಚರಣೆ

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಪ್ರೌಢ ಶಾಲಾ ವಿಭಾಗ)ನಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಲಾಯಿತು.  ಸರ್ಕಾರದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು.
    ಭದ್ರಾವತಿ, ಮೇ. ೩೧: ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಪ್ರೌಢ ಶಾಲಾ ವಿಭಾಗ)ನಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು. ಕಾಲೇಜು ಆವರಣ ತಳಿರುತೋರಣಗಳಿಂದ ಕಂಗೊಳಿಸುತ್ತಿತ್ತು. ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಮೊದಲ ದಿನ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಉಪಪ್ರಾಚಾರ್ಯರಾದ ಟಿ.ಎಸ್ ಸುಮನ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕಲಿಕೆಯಲ್ಲಿ ತೊಡಗಲು ಮತ್ತು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಸಾರ್ಥಕ ಗೊಳಿಸಲು ಮಾರ್ಗದರ್ಶನ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮುಂಬಡ್ತಿಪಡೆದು ವರ್ಗಾವಣೆ, ವಯೋನಿವೃತ್ತಿ ಹೊಂದಿದವರಿಗೆ ಬೀಳ್ಕೊಡುಗೆ

ಭದ್ರಾವತಿಯಲ್ಲಿ ಅನೌಪಚಾರಿಕ ಪಡಿತರ ತಾಲೂಕು ಕಛೇರಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ಹಾಗು ಡಿ ಗ್ರೂಪ್ ನೌಕರರ ಸಂಘದ ವತಿಯಿಂದ ಬುಧವಾರ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೩೧ : ಅನೌಪಚಾರಿಕ ಪಡಿತರ ತಾಲೂಕು ಕಛೇರಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ಹಾಗು ಡಿ ಗ್ರೂಪ್ ನೌಕರರ ಸಂಘದ ವತಿಯಿಂದ ಬುಧವಾರ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ಹಲವು ವರ್ಷಗಳಿಂದ ಆಹಾರ ನಿರೀಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಿ. ಗಾಯತ್ರಿ ದೇವಿಯವರು ಆಹಾರ ಇಲಾಖೆ ಶಿರಸ್ತೆದಾರ್ ಹುದ್ದೆಗೆ ಮುಂಬಡ್ತಿ ಹೊಂದಿ ಸಾಗರಕ್ಕೆ ವರ್ಗಾವಣೆಗೊಂಡಿದ್ದಾರೆ.  ಕೆಎಫ್‌ಸಿಎಸ್‌ಸಿ ಮಳಿಗೆ ವ್ಯವಸ್ಥಾಪಕ ಜೆ.ಎಸ್ ಈಶ್ವರಪ್ಪ ಮತ್ತು ಆಹಾರ ಇಲಾಖೆ ಬಿ.ಆರ್ ಓಂಕಾರಯ್ಯ  ವಯೋ ನಿವೃತ್ತಿಗೊಂಡಿದ್ದಾರೆ. ಇವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಾಖೆ ನಗರ ಅಧ್ಯಕ್ಷ ಎಸ್.ಆರ್ ನಾಗರಾಜ್ ಮತ್ತು ಪದಾಧಿಕಾರಿಗಳು, ಅನೌಪಚಾರಿಕ ಪಡಿತರ ಕಛೇರಿ ಸಹಾಯಕ ನಿರ್ದೇಶಕ ವಿ.ಎಸ್ ಅಂಕಯ್ಯ, ಎ.ಟಿ ಬಸವರಾಜ್ ಹಾಗು ಕಛೇರಿ ಸಿಬ್ಬಂದಿ ವರ್ಗದವರು, ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಸ್ವಾಮಿ, ಆರ್‌ಎಸ್‌ಎಸ್‌ಎನ್ ಸೊಸೈಟಿ ಅಧ್ಯಕ್ಷ ಹನುಮಂತಪ್ಪ, ಲಕ್ಷ್ಮೀಕಾಂತ್, ಕೃಷ್ಣಾನಾಯ್ಕ ಹಾಗು ಪಡಿತರ ವಿತರಕರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ಸುಗ್ರಾಮ ಒಕ್ಕೂಟದ ಸಭೆ

ಭದ್ರಾವತಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಸಭೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.  
    ಭದ್ರಾವತಿ, ಮೇ. ೩೧ : ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಸಭೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.  
    ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಕೆಲಸದ ಅನುಭವಿ ನಿಯಮದ ಮೂಲಕ ನಡೆಸಲಾದ ಕೆಲಸಗಳ ಬಗ್ಗೆ, ಗೌರವಧನ, ಸಭಾಬದ್ಧತೆ, ಅನುದಾನದ ಕೊರತೆ ಸೇರಿದಂತೆ ಇತ್ಯಾದಿ ವಿಷಯಗಳನ್ನು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.
    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಮಹಾದೇವ್ ಕೂಡ್ಲಿಗೆರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೀತಾ ಅಂತರಗಂಗೆ, ಖಜಾಂಚಿ ಕವಿತಾ ರುದ್ರೇಶ್, ಒಕ್ಕೂಟದ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಇರುವೆ ಟ್ರಸ್ಟ್ ವತಿಯಿಂದ ಸಾರ್ವಜನಿಕ ಈಜು ಕೊಳ ನಿರ್ಮಿಸಲು ಮನವಿ

ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ಭದ್ರಾವತಿ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೩೧ : ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
   ನಡಿಗೆ, ಓಟ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಖೋ ಖೋ ಸೇರಿದಂತೆ ಮುಂತಾದ ಕ್ರೀಡೆಗಳಿಗೆ ಕ್ರೀಡಾಂಗಣಗಳ ಕೊರತೆ ಇಲ್ಲ. ಆದರೆ ದೇಶದಲ್ಲಿ ಈಜು ಕ್ರೀಡೆಗೆ ಹೆಚ್ಚಿನ ಮಹತ್ವವಿದ್ದರೂ ಈಜು ಕೊಳವಿಲ್ಲದೆ ಈಜು ಉತ್ಸಾಹಿಗಳಿಗೆ ನಿರಾಸೆ ಹುಟ್ಟಿಸಿದೆ. ನಗರದ ಅನೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಈಜು ಕ್ರೀಡಾ ಪ್ರೇಮಿಗಳು ಬೇರೆ ಬೇರೆ ನಗರಗಳಿಗೆ ತೆರಳಿ ಹೆಚ್ಚಿನ ಹಣ ವ್ಯಯ ಮಾಡಿ ಈಜು ಕಲಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಅಳಲು ತೋರ್ಪಡಿಸಲಾಗಿದೆ.
    ಸಾಮಾನ್ಯವಾಗಿ ಈಜು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗದೆ ಅಥವಾ ರಜಾ ದಿನಗಳಲ್ಲಿ ಹೊಳೆ, ನದಿ, ಕೆರೆ, ಚಾನಲ್ ಮತ್ತಿತರೆಡೆ ಈಜು ಕಲಿಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮತ್ತೆ ಕೆಲವರು ಈಜು ಕಲಿತು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.  ನಗರದಲ್ಲಿ ರೈತರ, ಕಾರ್ಮಿಕರ ಹಾಗೂ ಬಡ ವರ್ಗದವರ ಮಕ್ಕಳಿಗೆ ಈಜು ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೂ ಸಹ ಈಜು ಕೊಳವಿಲ್ಲದೆ ಪರಿತಪಿಸಿದ್ದಾರೆ. ಅದೆಷ್ಟೋ ಮಕ್ಕಳು ಈಜು ಕೊಳ ಕಾಣದೆ ಅದೊಂದು ಶ್ರೀಮಂತರ ಕ್ರೀಡೆ ಎಂದೂ ಭಾವಿಸಿದ್ದಾರೆ. ಈ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಕೋರಲಾಗಿದೆ.  
    ಈಜು ಕೊಳ ನಿರ್ಮಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈಜು ಕೊಳ ನಿರ್ಮಿಸುವ ಮೂಲಕ ನಗರವನ್ನು ವಿನೂತನವಾಗಿ ವಿಶಿಷ್ಟವಾಗಿ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
    ಇರುವೆ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಕಿರಣ್‌ಕುಮಾರ್, ಸುಂದರ್‌ಬಾಬು, ಕೀರ್ತಿ, ಬಿಆರ್‌ಪಿ ಹೇಮಂತ್‌ಕುಮಾರ್, ಆರ್. ಮೋಹನ್, ಈಜು ತರಬೇತಿದಾರ ಪ್ರಕಾಶ್, ವೆಂಕಟೇಶ್, ಕೂಡ್ಲಿಗೆರೆ ತಿಪ್ಪೇಸ್ವಾಮಿ, ಅಂತರ ರಾಷ್ಟ್ರೀಯ ಈಜು ಪಟು ಮೋತಿನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.