Monday, April 10, 2023

ಹೊಸಮನೆ ಪೊಲೀಸರ ಕಾರ್ಯಾಚರಣೆ : ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ

    ಭದ್ರಾವತಿ, ಏ. ೧೦: ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಏ.೮ರಂದು ಬೆಳಿಗ್ಗೆ ೧೦.೩೦ ಸಮಯದಲ್ಲಿ ತಾಲೂಕಿನ ಕಾಚಗೊಂಡನಹಳ್ಳಿ ವಿಜಯನಗರ ಗ್ರಾಮದ ಸ್ಮಶಾನ ರಸ್ತೆಯಲ್ಲಿ  ಪ್ರಭು ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.
    ಏ.೮ರಂದು ರಾತ್ರಿ ೭.೪೫ರ ಸಮಯದಲ್ಲಿ ನಗರದ ಸಿ.ಎನ್ ರಸ್ತೆ, ಆರ್‌ಎಂಸಿ ಎದುರುಗಡೆ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗದಲ್ಲಿ ಮಂಜುನಾಥ್ ಸೇರಿದಂತೆ ಇನ್ನಿತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ದಾಳಿ ನಡೆಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ : ದಾಳಿ


ಭದ್ರಾವತಿ, ಏ. ೧೦: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿರವರ ನೇತೃತ್ವದ ತಂಡ ಏ.೮ರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದು, ಮದ್ಯ ತುಂಬಿದ ೨೧ ಪೌಚ್‌ಗಳನ್ನು, ೧ ಖಾಲಿ ಪೌಚ್ ಮತ್ತು ೩ ಮದ್ಯಪಾನ ಮಾಡಲು ಬಳಸಿದ ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು


    ಭದ್ರಾವತಿ, ಏ. ೧೦: ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ.
    ಹುತ್ತಾಕಾಲೋನಿಯ ಸ್ನೇಹಿತನ ಮನೆ ಮುಂದೆ ಮಾ.೧೨ರಂದು ರಾತ್ರಿ ಯಮಹಾ ಎಫ್.ಝಡ್ ದ್ವಿಚಕ್ರ ವಾಹನ ನಿಲ್ಲಿಸಲಾಗಿದ್ದು, ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಕಾಗದನಗರದ ನಿವಾಸಿ ರೋಹನ್(೨೩) ಎಂಬುವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.  

ಜಯಕುಮಾರ್ ನಿಧನ

ಜಯಕುಮಾರ್ 
    ಭದ್ರಾವತಿ, ಏ. ೧೦ : ನಗರಸಭೆ ವಾರ್ಡ್ ನಂ.೧೨ರ ಹೊಸಮನೆ ಎನ್‌ಎಂಸಿ ನಿವಾಸಿ, ದಿನ ಪತ್ರಿಕೆ ವಿತರಕ, ಚಿತ್ರಮಂದಿರ ಸಿಬ್ಬಂದಿ ಜಯಕುಮಾರ್(೫೩) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಸುಮಾರು ೩೫ ವರ್ಷಗಳಿಂದ ದಿನ ಪತ್ರಿಕೆ ವಿತರಕರಾಗಿದ್ದರು. ಅಲ್ಲದೆ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದಲ್ಲಿ ಸಿಬ್ಬಂದಿಯಾಗಿದ್ದರು.  ಇವರ ನಿಧನಕ್ಕೆ ನಗರದ ಪತ್ರಿಕಾ ವಿತರಕರು ಸಂತಾಪ ಸೂಚಿಸಿದ್ದಾರೆ.

ಪ್ರಗತಿಪರ ಸಂಘಟನೆಗಳಿಂದ ಏ.೧೪ರಂದು ಅಂಬೇಡ್ಕರ್ ಜಯಂತಿ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನ ಏ.೧೪ರಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಭದ್ರಾವತಿ, ಏ. ೧೦ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನ ಏ.೧೪ರಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅಂಬೇಡ್ಕರ್‌ರವರು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತರಾದ ವ್ಯಕ್ತಿಯಾಗಿಲ್ಲ. ಸಂವಿಧಾನ ರಚಿಸುವ ಮೂಲಕ ಈ ದೇಶಕ್ಕೆ ಸದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿ ಕೊಟ್ಟಿದ್ದಾರೆ. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಇವರ ಜನ್ಮದಿನ ಆಚರಣೆ ಮೊಟಕುಗೊಳಿಸುವುದು ಸರಿಯಲ್ಲ ಎಂದರು.
    ರಾಜಕೀಯ ಹೊರಗಿಟ್ಟು ನಗರದ ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗಟ್ಟಾಗಿ ಅಂಬೇಡ್ಕರ್‌ರವರ ಜನ್ಮದಿನ ಆಚರಿಸುತ್ತಿದ್ದು, ಅಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ‍್ಯಾಲಿ ನಡೆಸಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಬಾಬು, ಮೋಚಿ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ, ಕನ್ನಡ ರಕ್ಷಣಾ ವೇದಿಕೆ ಮುರುಳಿ, ಪ್ರಮುಖರಾದ ಚಂದ್ರಶೇಖರ್, ರಾಜೇಂದ್ರ, ಬಿ. ರಮೇಶ್, ಸಿ. ಜಯಪ್ಪ, ಈ.ಪಿ ಬಸವರಾಜ್, ದೇವದಾನಂ, ಐಸಾಕ್ ಲಿಂಕನ್, ಜಗದೀಶ್, ಟಿ. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.