Friday, June 25, 2021

ಸರ್ಕಾರಿ ನೌಕರರು ಕರ್ತವ್ಯದ ಜೊತೆಗೆ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೫: ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಕೊರೋನಾ ಸೋಂಕಿಗೆ ಒಳಗಾಗದಂತೆ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
   ಅವರು ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ಸರ್ಕಾರಿ ನೌಕರರ ಕೊಡುಗೆ ಅಪಾರವಾಗಿದ್ದು, ನೌಕರರು ಕರ್ತವ್ಯದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದರಲ್ಲೂ ಕೊರೋನಾ ಸೋಂಕಿಗೆ ಒಳಗಾಗದಂತೆ ಹೆಚ್ಚಿನ ಜಾಗೃತಿ ವಹಿಸಬೇಕೆಂದರು.
  ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭಾ ಸದಸ್ಯ ಸುದೀಪ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ವಿದ್ಯಾಸಂಸ್ಥೆ ಛೇರ್‍ಮನ್ ಬಿ.ಎಲ್ ರಂಗಸ್ವಾಮಿ, ಎ.ಜೆ. ರಂಗನಾಥಪ್ರಸಾದ್, ಡಿ.ಎಸ್ ರಾಜಪ್ಪ, ಶ್ರೀಕಾಂತ್, ರಾಜ್‌ಕುಮಾರ್, ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೩೫ ಸೋಂಕು : ಒಬ್ಬರು ಬಲಿ

ಭದ್ರಾವತಿ, ಜೂ. ೨೫: ಲಾಕ್‌ಡೌನ್ ಸಡಿಲಗೊಂಡು ೫ ದಿನ ಕಳೆದಿದ್ದು, ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸೋಂಕಿನ ಪ್ರಮಾಣ ೫೦ರ ಗಡಿ ದಾಟಿಲ್ಲ.
   ಶುಕ್ರವಾರ ೩೫ ಸೋಂಕು ದೃಢಪಟ್ಟಿದ್ದು, ೮೬೭ ಮಾದರಿ ಸಂಗ್ರಹಿಸಲಾಗಿದೆ. ೨೧ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ೭೦೩೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೬೯೩೭ ಮಂದಿ ಗುಣಮುಖರಾಗಿದ್ದಾರೆ. ೯೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.
    ಒಟ್ಟು ೭೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪ್ರದೇಶದಲ್ಲಿ ೨೩ ಕಂಟೈನ್‌ಮೆಂಟ್ ಜೋನ್‌ಗಳಿವೆ. ಇದುವರೆಗೂ ೧೪೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೨೦ ಜೋನ್‌ಗಳಿದ್ದು, ೨೯ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜೀವವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಭದ್ರಾವತಿ ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೀವವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
   ಭದ್ರಾವತಿ, ಜೂ. ೨೫:  ಕರ್ತವ್ಯದ ಸಮಯದಲ್ಲಿ ಕೊರೋನಾ ಸೋಂಕಿನ ಪರಿಣಾಮ ಮೃತಪಟ್ಟ ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ಕುಟುಂಬಕ್ಕೆ ೧ ಕೋ. ರು. ಪರಿಹಾರದ ಜೊತೆಗೆ ಅನಾಥರಾದ ಪ್ರತಿನಿಧಿಗಳ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ಆಗ್ರಹಿಸಲಾಯಿತು.
   ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೀವವಿಮಾ ಪ್ರತಿನಿಧಿಗಳ ಸಂಘದ ಪ್ರಮುಖರು, ಪಾಲಿಸಿದಾರರಿಗೆ ಕೊರೋನಾ ಸಂದರ್ಭದಲ್ಲಿ ಪಾಲಿಸಿ ಪ್ರೀಮಿಯಂ ಮೇಲಿನ ೩ ತಿಂಗಳ ಬಡ್ಡಿಯನ್ನ ಮನ್ನಾ ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಲ್ಯಾಪ್ಸ್ ಆದ ಪಾಲಿಸಿಗಳನ್ನು ಬಡ್ಡಿ ರಹಿತವಾಗಿ ಹಾಗು ಫಾರ್ಮಲಿಟಿ ರಹಿತವಾಗಿ ಪುನರುಜ್ಜೀವನಗೊಳಿಸಬೇಕೆಂದು ಒತ್ತಾಯಿಸಿದರು.
    ಐಆರ್‌ಡಿಎ ನೋಟಿಫಿಕೇಷನ್ ಪ್ರಕಾರ ಕಮಿಷನ್ ಜಾರಿಗೊಳಿಸಬೇಕು. ಆನಂದ ಮುಖಾಂತರ ಮಾಡುವ ಪ್ರತಿ ಪಾಲಿಸಿಗಳಿಗೆ ೧೧೦೦ ರು. ಭತ್ಯೆಯಾಗಿ ನೀಡಬೇಕು. ಏಜೆಂಟ್ಸ್ ರೆಗ್ಯೂಲೇಷನ್ ಆಕ್ಟ್‌ನ ಕೆಲವು ನಿಯಮಗಳು ತಕ್ಷಣವೇ ಬದಲಾವಣೆಯಾಗಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಪಾಲಿಸಿಗಳ ಮೇಲೆ ಪ್ರೀಮಿಯಂನಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪಿಸಿ ೨೦೦ ಕೋ. ರು. ಮೀಸಲಿಡಬೇಕು. ಗುಂಪು ವಿಮೆ ೨೫ ರಿಂದ ೫೦ ಲಕ್ಷದವರೆಗೆ ಅಪಘಾತ ಸಹಿತವಾಗಬೇಕು. ೧ ಲಕ್ಷ ರು. ಕೋವಿಡ್ ಮುಂಗಡ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಉಪಾಧ್ಯಕ್ಷ ಆನಂದ ಪ್ರಕಾಶ್ ರಾವ್, ಕಾರ್ಯದರ್ಶಿ ಸಿ.ಎ ಮುನಿರಾಜು, ಜಂಟಿ ಕಾರ್ಯದರ್ಶಿ ಆರ್. ನರಸಿಂಹಯ್ಯ, ಖಜಾಂಚಿ ಎಚ್.ಕೆ ಶಿವರಾಮು, ನಂಜುಂಡಪ್ಪ, ಟಿ. ರಮೇಶ್, ಪಿ. ಸುರೇಶ್, ಕೆ.ಎಚ್. ಮಂಜುನಾಥನಾಯ್ಕ್, ಬಿ.ಎಂ. ನಂಜುಂಡಪ್ಪ, ಅನಿತಾ ಮಲ್ಲೇಶ್, ಸಂಪತ್‌ಕುಮಾರ್, ವಿ. ಮಂಜುನಾಥ್‌ರಾವ್, ಪಿ.ಎಚ್ ನಾಗರಾಜ್, ಎಸ್. ಸಂಪತ್, ಮಾದೇಶ, ಚಂದ್ರಕಲಾ, ಪ್ರಿಯಾ, ಶೋಭಾ, ಕೆ.ಎಸ್ ನಟರಾಜ್, ಎಂ. ಲಿಂಗರಾಜು, ಜಿ. ಶಿವಕುಮಾರ್, ನರೇಂದ್ರ ಬಾಬು, ಡಿ. ಲಕ್ಷ್ಮೀಕಾಂತ, ಬಿಜಿಸಿ ಕುಮಾರ್, ಎಂ. ಶಿವಮೂರ್ತಿ, ಓ. ರಾಮನಾಯ್ಕ್, ಶ್ರೀನಿವಾಸ್ ರೆಡ್ಡಿ ಮತ್ತು ಆರ್. ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.