Friday, June 25, 2021

ಜೀವವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಭದ್ರಾವತಿ ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೀವವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
   ಭದ್ರಾವತಿ, ಜೂ. ೨೫:  ಕರ್ತವ್ಯದ ಸಮಯದಲ್ಲಿ ಕೊರೋನಾ ಸೋಂಕಿನ ಪರಿಣಾಮ ಮೃತಪಟ್ಟ ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ಕುಟುಂಬಕ್ಕೆ ೧ ಕೋ. ರು. ಪರಿಹಾರದ ಜೊತೆಗೆ ಅನಾಥರಾದ ಪ್ರತಿನಿಧಿಗಳ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ಆಗ್ರಹಿಸಲಾಯಿತು.
   ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೀವವಿಮಾ ಪ್ರತಿನಿಧಿಗಳ ಸಂಘದ ಪ್ರಮುಖರು, ಪಾಲಿಸಿದಾರರಿಗೆ ಕೊರೋನಾ ಸಂದರ್ಭದಲ್ಲಿ ಪಾಲಿಸಿ ಪ್ರೀಮಿಯಂ ಮೇಲಿನ ೩ ತಿಂಗಳ ಬಡ್ಡಿಯನ್ನ ಮನ್ನಾ ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಲ್ಯಾಪ್ಸ್ ಆದ ಪಾಲಿಸಿಗಳನ್ನು ಬಡ್ಡಿ ರಹಿತವಾಗಿ ಹಾಗು ಫಾರ್ಮಲಿಟಿ ರಹಿತವಾಗಿ ಪುನರುಜ್ಜೀವನಗೊಳಿಸಬೇಕೆಂದು ಒತ್ತಾಯಿಸಿದರು.
    ಐಆರ್‌ಡಿಎ ನೋಟಿಫಿಕೇಷನ್ ಪ್ರಕಾರ ಕಮಿಷನ್ ಜಾರಿಗೊಳಿಸಬೇಕು. ಆನಂದ ಮುಖಾಂತರ ಮಾಡುವ ಪ್ರತಿ ಪಾಲಿಸಿಗಳಿಗೆ ೧೧೦೦ ರು. ಭತ್ಯೆಯಾಗಿ ನೀಡಬೇಕು. ಏಜೆಂಟ್ಸ್ ರೆಗ್ಯೂಲೇಷನ್ ಆಕ್ಟ್‌ನ ಕೆಲವು ನಿಯಮಗಳು ತಕ್ಷಣವೇ ಬದಲಾವಣೆಯಾಗಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಪಾಲಿಸಿಗಳ ಮೇಲೆ ಪ್ರೀಮಿಯಂನಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪಿಸಿ ೨೦೦ ಕೋ. ರು. ಮೀಸಲಿಡಬೇಕು. ಗುಂಪು ವಿಮೆ ೨೫ ರಿಂದ ೫೦ ಲಕ್ಷದವರೆಗೆ ಅಪಘಾತ ಸಹಿತವಾಗಬೇಕು. ೧ ಲಕ್ಷ ರು. ಕೋವಿಡ್ ಮುಂಗಡ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಉಪಾಧ್ಯಕ್ಷ ಆನಂದ ಪ್ರಕಾಶ್ ರಾವ್, ಕಾರ್ಯದರ್ಶಿ ಸಿ.ಎ ಮುನಿರಾಜು, ಜಂಟಿ ಕಾರ್ಯದರ್ಶಿ ಆರ್. ನರಸಿಂಹಯ್ಯ, ಖಜಾಂಚಿ ಎಚ್.ಕೆ ಶಿವರಾಮು, ನಂಜುಂಡಪ್ಪ, ಟಿ. ರಮೇಶ್, ಪಿ. ಸುರೇಶ್, ಕೆ.ಎಚ್. ಮಂಜುನಾಥನಾಯ್ಕ್, ಬಿ.ಎಂ. ನಂಜುಂಡಪ್ಪ, ಅನಿತಾ ಮಲ್ಲೇಶ್, ಸಂಪತ್‌ಕುಮಾರ್, ವಿ. ಮಂಜುನಾಥ್‌ರಾವ್, ಪಿ.ಎಚ್ ನಾಗರಾಜ್, ಎಸ್. ಸಂಪತ್, ಮಾದೇಶ, ಚಂದ್ರಕಲಾ, ಪ್ರಿಯಾ, ಶೋಭಾ, ಕೆ.ಎಸ್ ನಟರಾಜ್, ಎಂ. ಲಿಂಗರಾಜು, ಜಿ. ಶಿವಕುಮಾರ್, ನರೇಂದ್ರ ಬಾಬು, ಡಿ. ಲಕ್ಷ್ಮೀಕಾಂತ, ಬಿಜಿಸಿ ಕುಮಾರ್, ಎಂ. ಶಿವಮೂರ್ತಿ, ಓ. ರಾಮನಾಯ್ಕ್, ಶ್ರೀನಿವಾಸ್ ರೆಡ್ಡಿ ಮತ್ತು ಆರ್. ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment