Monday, April 7, 2025

ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಮಕ್ಕಳು ಪತ್ತೆ

ಭದ್ರಾವತಿ  ತಾಲೂಕಿನ ಕುಮರಿನಾರಾಯಣಪುರದಲ್ಲಿ ಭಾನುವಾರ ಸಂಜೆ ಏಕಾಏಕಿ ನಾಪತ್ತೆಯಾಗಿದ್ದ ೫ ಮಕ್ಕಳು. 
    ಭದ್ರಾವತಿ : ತಾಲೂಕಿನ ಕುಮರಿನಾರಾಯಣಪುರದ ೫ ಮಕ್ಕಳು ಭಾನುವಾರ ಸಂಜೆ ಏಕಾಏಕಿ ಕಾಣೆಯಾಗಿದ್ದರು. ಇಡೀ ರಾತ್ರಿ ಪೊಲೀಸರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ನಡುವೆ ಸೋಮವಾರ ಬೆಳಿಗ್ಗೆ ಸಮೀಪದ ತಳ್ಳಿಕಟ್ಟೆ ಗ್ರಾಮದ ಅಡಕೆ ತೋಟವೊಂದರಲ್ಲಿ ಕಾಣೆಯಾಗಿದ್ದ ಮಕ್ಕಳು ಪತ್ತೆಯಾಗಿದ್ದಾರೆ. 
    ಗ್ರಾಮದ ಧನಂಜಯ(೧೪), ಲೋಹಿತ್(೧೨), ಲಕ್ಷ್ಮೀಶ್(೧೦), ಚರಣ್‌ರಾಜ್(೯) ಮತ್ತು ಭುವನ್(೮) ಸಂಜೆ ಗ್ರಾಮದ ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಇದು ಗ್ರಾಮಸ್ಥರಿಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿ ಬಯ್ಯುತ್ತಾರೆಂಬ ಹೆದರಿಕೆಯಿಂದ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಹಾಗು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. 
    ಮಕ್ಕಳು ನೀರಿನಲ್ಲಿ ಮುಳುಗಿರಬಹುದು ಅಥವಾ ಮಕ್ಕಳನ್ನು ಯಾರಾದರೂ ಅಪಹರಿಸಿರಬಹುದು ಎಂಬ ಭಯ ಕುಟುಂಬಸ್ಥರು ಹಾಗು ಗ್ರಾಮಸ್ಥರಲ್ಲಿ ಉಂಟು ಮಾಡಿತ್ತು. ಈ ನಡುವೆ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರು ಇಡೀ ರೀತಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಕಂಡು ಬಂದಿರಲಿಲ್ಲ. ಮಧ್ಯರಾತ್ರಿ ೧.೩೦ರ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 
    ಕುಮರಿನಾರಾಯಣಪುರದಿಂದ ಸ್ವಲ್ಪ ದೂರದಲ್ಲಿರುವ ತಳ್ಳಿಕಟ್ಟೆ ಗ್ರಾಮದ ದಿನೇಶ್ ಎಂಬುವರ ಅಡಕೆ ತೋಟದಲ್ಲಿ ಮಕ್ಕಳು ಕಂಡು ಬಂದಿದ್ದಾರೆ. ಬೆಳಿಗ್ಗೆ ನೀರು ಬಿಡಲು ತೋಟಕ್ಕೆ ಬಂದಾಗ ಮಕ್ಕಳು ತೋಟದಲ್ಲಿರುವುದು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ತಿಳಿದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. 

ಏ.೧೪ರಂದು ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಜಾಗೃತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
    ಭದ್ರಾವತಿ : ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳಲ್ಲಿರುವ ಸೌಲಭ್ಯಗಳ ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗು ಮಾನವಹಕ್ಕುಗಳ ಮತ್ತು ಸಂವಿಧಾನ ಹಕ್ಕುಗಳ ಬಗ್ಗೆ ಎಲ್ಲಾ ಇಲಾಖೆಗಳಲ್ಲಿ ಜಾಗೃತಿ ಮೂಡಿಸಲು ಏ.೧೪ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿ.ಎಚ್ ರಸ್ತೆ, ರೈಲ್ವೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಪ್ರಗತಿಪರ ಚಿಂತಕ ಡಿ.ಸಿ ಮಾಯಣ್ಣ ಉಪಸ್ಥಿತರಿರುವರು. ಎನ್‌ಆರ್‌ಇಜಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ದಿನಕ್ಕೆ ೫೦೦ ರು. ಸಂಬಳ, ಕುಟುಂಬದಲ್ಲಿ ಇಬ್ಬರಿಗೆ ವರ್ಷಕ್ಕೆ ಪ್ರತಿ ವ್ಯಕ್ತಿಗೆ ೨೦೦ ದಿನ ಕೆಲಸ ನೀಡುವುದು. ಕಟ್ಟಡ ಕಾರ್ಮಿಕರಿಗೆ ನೀಡುವಂತಹ ಹಲವು ಸೌಲಭ್ಯಗಳನ್ನು ಇವರಿಗೂ ವಿಸ್ತರಿಸುವುದು. ೬೦ ವರ್ಷದ ನಿವೃತ್ತಿ ನಂತರ ಪ್ರತಿ ತಿಂಗಳು ಪಿಂಚಣಿ  ನೀಡುವುದು. ಉದ್ಯೋಗ ಖಾತ್ರಿ ಕಾರ್ಮಿಕರ ಮಕ್ಕಳಿಗೆ ಉನ್ನತಮಟ್ಟದ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನದೊಂದಿಗೆ ಭದ್ರತೆ ನೀಡುವುದು ಹಾಗೂ ಗ್ರಾಮಗಳಲ್ಲಿ ಗುಡಿ ಕೈಗಾರಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಬೇಕೆಂದು ಒತ್ತಾಯಿಸುವ ಮನವಿ ಪತ್ರಗಳನ್ನು ಪ್ರತಿ ಗ್ರಾಮಪಂಚಾಯಿತಿ ಪಿಡಿಓರವರ ಮೂಲಕ ಪ್ರಧಾನಮಂತ್ರಿ ಹಾಗು ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಗುವುದು ಎಂದರು. 
    ಗ್ರಾಮಪಂಚಾಯಿತಿಯಲ್ಲಿನ ಇ-ಸ್ವತ್ತು, ಖಾತೆ, ಬಗರ್‌ಹುಕುಂ ಜಮೀನು, ಹಲವು ನಿಗಮಗಳ ಸಾಲ-ಸಬ್ಸಿಡಿ ಯೋಜನೆಗಳ ಬಗ್ಗೆ ಕಾನೂನಿನ ಅರಿವಿನ ಕುರಿತು ಹಾಗು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಕಛೇರಿ, ತಾಲೂಕು ಪಂಚಾಯಿತಿ, ನಗರಸಭೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಪಿಡಬ್ಲ್ಯೂ.ಡಿ. ಇಲಾಖೆ, ಪಶು ಇಲಾಖೆ ಸೇರಿದಂತೆ ಸರ್ಕಾರದ ಅನೇಕ ಇಲಾಖೆಗಳಲ್ಲಿ ಇರುವ ಮಾಹಿತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 
    ಜಾಗೃತಿ ಕಾರ್ಯಕ್ರಮ ಏ.೧೪ ರಿಂದ ಏ.೩೦ರವರೆಗೆ ವಿಶ್ವಮಾನವ ಬಸವಣ್ಣನವರ ಜನ್ಮದಿನದವರೆಗೂ ನಡೆಯಲಿದೆ. ಮೇ ತಿಂಗಳಲ್ಲಿ ಅಂತಿಮವಾಗಿ ವಿಶ್ವಮಾನವ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧುಬಂಗಾರಪ್ಪ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು,  ಸಂಘ-ಸಂಸ್ಥೆಗಳ ಮುಖಂಡರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಐ.ಎಲ್ ಅರುಣ್‌ಕುಮಾರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.