Sunday, August 8, 2021

ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆ ಅಧ್ಯಕ್ಷೆ ಶೋಭಾಪಾಟೀಲ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಆ. ೮: ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆ ಅಧ್ಯಕ್ಷೆ ಶೋಭಾಪಾಟೀಲ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
     ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಪದ್ಮಿನಿರಾವ್ ತಾಲೂಕು ಮೋರ್ಚಾ ಉಪಾಧ್ಯಕ್ಷರಾದ ಗೌರಮ್ಮ, ಅನ್ನಪೂರ್ಣ ಸಾವಂತ್, ಕಾರ್ಯಕಾರಣಿ ಸದಸ್ಯೆ ಆರ್.ಎಸ್ ಶೋಭಾ, ಪ್ರಭಾರಿ ಹೇಮಾವತಿ ವಿಶ್ವನಾಥ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನ ಪ್ರಕಾಶ್, ಕಾರ್ಯದರ್ಶಿ ಸುನಿತಮೋಹನ್, ನಗರಸಭಾ ಸದಸ್ಯರಾದ ಅನುಪಮ ಚೆನ್ನೇಶ್,  ಅನಿತ ಮಲ್ಲೇಶ್ ಮತ್ತು ಶಶಿಕಲಾ ನಾರಾಯಣಪ್ಪ,  ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ, ಸುಜಾತ, ರೇಣು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಪಾಯಕ್ಕೆ ಎಡೆಮಾಡಿಕೊಡುವಂತಿದೆ ಮಾವಿನಕೆರೆ ಕಾಲೋನಿ ಕಿರು ಸೇತುವೆ


ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಕೆರೆ ಕಾಲೋನಿ ಮುಖ್ಯ ರಸ್ತೆಯಲ್ಲಿರುವ ತುಂಬಾ ಹಳೇಯದಾದ ಅಪಾಯಕ್ಕೆ ಎಡೆಮಾಡಿಕೊಡುವಂತಿರುವ ಕಿರಿದಾದ ಸೇತುವೆ.
     ಭದ್ರಾವತಿ, ಆ. ೮: ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಕೆರೆ ಕಾಲೋನಿ ಮುಖ್ಯ ರಸ್ತೆಯಲ್ಲಿ ತುಂಬಾ ಹಳೇಯದಾದ ಕಿರಿದಾದ ಸೇತುವೆ ಇದ್ದು, ಸೇತುವೆ ಎರಡು ಬದಿಯಲ್ಲಿ ಸಣ್ಣದಾದ ತಡೆಗೋಡೆ ನಿರ್ಮಿಸಲಾಗಿದೆ. ಇದು ಅಪಾಯಕ್ಕೆ ಎಡೆ ಮಾಡಿಕೊಡುವಂತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕಾಗಿದೆ.
     ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗ್ರಾಮೀಣ ಪ್ರದೇಶವಾಗಿರುವ ಮಾವಿನಕೆರೆ ಕಾಲೋನಿ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಮಾವಿನ ಕೆರೆ ಗ್ರಾಮಕ್ಕೆ ಸಂಪರ್ಕಗೊಂಡಿರುವ ರಸ್ತೆ ಎರೇಹಳ್ಳಿ, ತಾಷ್ಕೆಂಟ್‌ನಗರದ ಮೂಲಕ ಮಾರುತಿ ನಗರದ ಬಳಿ ಮುಖ್ಯ ಹೆದ್ದಾರಿಗೆ ಸಂಪರ್ಕಗೊಂಡಿದೆ. ಮಾವಿನ ಕೆರೆ ಗ್ರಾಮದಲ್ಲಿ ಮಾತ್ರ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ರಸ್ತೆ ಡಾಂಬರು ಕಾಣದೆ ಕಲ್ಲು ಮಣ್ಣಿನಿಂದ ಕೂಡಿದೆ. ಈ ನಡುವೆ ಈ ಕಿರಿದಾದ ಸೇತುವೆ ಅಪಾಯಕ್ಕೆ ಎಡೆಮಾಡಿಕೊಡುವಂತೆ ಕಂಡು ಬರುತ್ತಿದೆ.
    ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಹಳೇಯದಾದ ಸೇತುವೆ ಬದಲಿ ಹೊಸ ಸೇತುವೆ ನಿರ್ಮಿಸುವ ಮೂಲಕ ಸೇತುವೆ ಎರಡು ಬದಿಯಲ್ಲೂ ಎತ್ತರಕ್ಕೆ ತಡೆಗೋಡೆ ನಿರ್ಮಿಸಬೇಕಾಗಿದೆ. 

ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ದೆಹಲಿಯಲ್ಲಿ ಹೋರಾಟ : ರಾಷ್ಟ್ರೀಯ ಯುವ ಕಾಂಗ್ರೆಸ್ ಬೆಂಬಲ

ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ, ಬೆಂಬಲಿಗರಿಂದ ವಿವಿಧ ಹಂತದ ಹೋರಾಟ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಉಳಿವಿಗಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಚಾಲನೆ ನೀಡಿದರು.
     ಭದ್ರಾವತಿ, ಆ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಉಳಿವಿಗಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಚಾಲನೆ ನೀಡಿದ್ದಾರೆ.
    ಈಗಾಗಲೇ ಬಿ.ಎಸ್ ಗಣೇಶ್ ನೇತೃತ್ವದಲ್ಲಿ ವಿವಿಧ ಹಂತದಲ್ಲಿ ಹೋರಾಟಗಳು ನಡೆಯುತ್ತಿದ್ದು, ಕಳೆದ ಸುಮಾರು ೬ ವರ್ಷಗಳಿಂದ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಯನ್ನು ಪುನಃ ಆರಂಭಿಸುವಂತೆ ಹಾಗು ಹಲವಾರು ವರ್ಷಗಳಿಂದ ರೋಗಗ್ರಸ್ತ ಕಾರ್ಖಾನೆಯಾಗಿರುವ ವಿಐಎಸ್‌ಎಲ್ ಅಭಿವೃದ್ಧಿಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಸೇವ್ ವಿಐಎಸ್‌ಎಲ್ ಸೇವ್ ಭದ್ರಾವತಿ ಫಲಕವನ್ನಿಡಿದು ಹೋರಾಟ ನಡೆಸಲಾಗುತ್ತಿದೆ.
     ಈ ನಡುವೆ ಮೂಲತಃ ಭದ್ರಾವತಿ ನಗರದವರಾದ ಬಿ.ವಿ ಶ್ರೀನಿವಾಸ್, ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ನಂಬಿಕೊಂಡು ಸಾವಿರಾರು ಕಾರ್ಮಿಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಪ್ರಸ್ತುತ ಎರಡು ಕಾರ್ಖಾನೆಗಳಲ್ಲೂ ಉದ್ಯೋಗವಿಲ್ಲದೆ ಕಾರ್ಮಿಕರು ಹಾಗು ಅವರ ಅವಲಂಬಿತರು ಬೀದಿ ಪಾಲಾಗಿದ್ದಾರೆ. ಅಲ್ಲದೆ ಜಿಲ್ಲೆಯ ಆರ್ಥಿಕ ಬೆಳವಣಿಗೆ ಸಹ ಕುಠಿತವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
     ಹೋರಾಟದ ನೇತೃತ್ವ ವಹಿಸಿರುವ ಬಿ.ಎಸ್ ಗಣೇಶ್, ಎರಡು ಕಾರ್ಖಾನೆಗಳ ಉಳಿವಿಗಾಗಿ ನಿರಂತರ ಹೋರಾಟ ನಡೆಯಲಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  

ಪ್ರೇಕ್ಷಕರ ಮನ ಸೂರೆಗೊಂಡ ‘ರಸ ರಾಮಾಯಣ

ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
     ಭದ್ರಾವತಿ, ಆ. ೮:  ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
    ಗಾಯನಕ್ಕೆ ತಕ್ಕಂತೆ ಭಾವಾಭಿನಯ, ವ್ಯಾಖ್ಯಾನ ಇವೆರಡರ ನಡುವೆ ಆಕರ್ಷಕ ಚಿತ್ರಣ ಕಲಾವಿದರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿ ಕಂಡು ಬಂದವು. ಕೋವಿಡ್-೧೯ರ ನಡುವೆಯೂ ಅದ್ಭುತವಾದ ಕಾರ್ಯಕ್ರಮ ಆಯೋಜಿಸುವಲ್ಲಿ ವೇದಿಕೆ ಶ್ರಮ ಹೆಚ್ಚಿನದ್ದಾಗಿದ್ದು,  ಹಲವಾರು ವರ್ಷಗಳಿಂದ ನಿರಂತರವಾಗಿ ವಿಭಿನ್ನವಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಿದ್ದರು.
     ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ, ಮುನಿರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸುಬ್ಬರಾಯ ಭಾಗ್ವತ ಕಪ್ಪೆಕೆರೆ-ಯಕ್ಷ ಧ್ವನಿ, ಶಿವರಾಮ ಭಾಗ್ವತ ಕನಕನಹಳ್ಳಿ-ಗಾನಧ್ವನಿ, ಮಂಜುನಾಥ-ಕಂಚಿಮನೆ ಮೃದಂಗ, ಎನ್.ಜಿ ಹೆಗಡೆ ಕಪ್ಪೆಕೆರೆ-ತಬಲ, ಚಂದ್ರಶೇಖರ ಭಂಡಾರಿ-ಕೀಬೋರ್ಡ್, ನಿರ್ಮಲಾ ಗೋಳಿಕೊಪ್ಪ-ಭಾವಾಭಿನಯ, ಯತೀಶ್ ಯಲ್ಲಾಪುರ-ಚಿತ್ರ ಮತ್ತು ಡಾ. ಡಿ.ಕೆ ಗಾಂವ್ಕರ-ವ್ಯಾಖ್ಯಾನ ಎಲ್ಲಾ ಕಲಾವಿದರಿಂದ ಅದ್ಭುತ ಪ್ರತಿಭೆ ಅನಾವರಣಗೊಂಡಿತು. ಮಹಾಬಲೇಶ್ವರ ಹೆಗಡೆ ಕಪ್ಪೆಕೆರೆ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.