Thursday, May 7, 2020

ಗ್ರಾಮೀಣ ಭಾಗದಲ್ಲಿ ಕಡು ಬಡವರು, ವಿಕಲಚೇತನರಿಗೆ ಆಹಾರ ಸಾಮಗ್ರಿ ವಿತರಣೆ

ಭದ್ರಾವತಿ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಮೇ. ೭: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕಡು ಬಡವರು, ನಿರಾಶ್ರಿತರು, ಕೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು, ವಿಕಲಚೇತನರು ಸೇರಿದಂತೆ ಶ್ರೀಸಾಮಾನ್ಯರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯನ್ನು ಅರಿತುಕೊಂಡಿರುವ ಕೆಲವು ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು,  ದಾನಿಗಳು ನೆರವಿಗೆ ಮುಂದಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಪ್ರತಿನಿಧಿಸುವ ಸ್ವಕ್ಷೇತ್ರ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ. ಅನುರಾಧ ಪಟೇಲ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮಾಜಿ ಸದಸ್ಯ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೮೦೦ ರಿಂದ ೧೦೦೦ ಮಂದಿಗೆ ಆಹಾರ ಸಾಮಾಗ್ರಿ  ವಿತರಿಸಲಾಯಿತು. 

ಮದ್ಯ ವ್ಯಸನಿಗಳಾದಿರಿ : ಜನಜಾಗೃತಿ ವೇದಿಕೆ ಮನವಿ

ಜಿ. ಆನಂದಕುಮಾರ್ 
ಭದ್ರಾವತಿ: ರಾಜ್ಯದಲ್ಲಿ ಕಳೆದ ಸುಮಾರು ೪೦ ದಿನಗಳಿಂದ ಮದ್ಯ ಮಾರಾಟವಿಲ್ಲದ ಕಾರಣ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ದಿನ ಕಳೆದಿವೆ. ಇದೀಗ ಪುನಃ ಮದ್ಯ ಮಾರಾಟ ಆರಂಭವಾಗಿದ್ದು, ನೆಮ್ಮದಿ ಕಂಡಿದ್ದ ಕುಟುಂಬಗಳಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಪುನಃ ಮದ್ಯ ವ್ಯಸನಿಗಳಾಗದಂತೆ ಎಚ್ಚರ ವಹಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಎಂದು ಅಖಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಜಿ. ಆನಂದಕುಮಾರ್ ಮನವಿ ಮಾಡಿದ್ದಾರೆ.
ಸುಮಾರು ೪೦ ದಿನಗಳ ವರೆಗೆ ಮದ್ಯ ಮಾರಾಟವಿಲ್ಲದ ಕಾರಣ ಕುಟುಂಬದಲ್ಲಿ ನೆಮ್ಮದಿ ಲಭಿಸಿದೆ ಎಂಬುದು ಶೇ.೮೯ರಷ್ಟು ಜನರ ಅಭಿಪ್ರಾಯವಾಗಿದೆ. ಕುಟುಂಬದಲ್ಲಿ ಆರೋಗ್ಯ ಸುಧಾರಿಸಿದೆ, ಖರ್ಚು ಕಡಿಮೆಯಾಗಿದೆ, ಯಾವುದೇ ಸಮಸ್ಯೆ ಎದುರಾಗಿಲ್ಲ. ಈ ನಡುವೆ ಪುನಃ ಮದ್ಯ  ಮಾರಾಟ ಆರಂಭಗೊಂಡಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದೆ. ಶಾಶ್ವತವಾಗಿ ಮದ್ಯಪಾನದಿಂದ ದೂರು ಉಳಿಯುವ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ. ಮದ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಇದು ಮಹಾತ್ಮಗಾಂಧಿ ಅವರ ಕನಸು ಸಹ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶಯ ಸಹ ಆಗಿದೆ. ಈ ಹಿನ್ನಲೆಯಲ್ಲಿ ಪುನಃ ಮದ್ಯ ವ್ಯಸನಿಗಳಾಗಿದಿರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.