Friday, January 8, 2021

ಸರ್ಕಾರ ತಕ್ಷಣ ಪಡಿತರ ವಿತರಕರ ಬಾಕಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲಿ : ಸಿದ್ದಲಿಂಗಯ್ಯ

ಭದ್ರಾವತಿ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೮: ನ್ಯಾಯಬೆಲೆ ಅಂಗಡಿ ವಿತರಕರಿಗೆ ನೀಡಬೇಕಾಗಿರುವ ಕಮಿಷನ್ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸುವ ಮೂಲಕ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಸಿದ್ದಲಿಂಗಯ್ಯ ಮನವಿ ಮಾಡಿದರು.
     ಅವರು ನಗರದ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಕೋವಿಡ್-೧೯ರ ನಡುವೆಯೂ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಸಹ ಪಡಿತರ ವಿತರಕರ ಸಂಕಷ್ಟಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪೂರಕವಾಗಿ ಸ್ಪಂದಿಸದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
   ಕೇಂದ್ರ ಸರ್ಕಾರದಿಂದ ೫ ತಿಂಗಳು ಹಾಗು ರಾಜ್ಯ ಸರ್ಕಾರದಿಂದ ೩ ತಿಂಗಳು ಕಮಿಷನ್ ಬಾಕಿ ಬರಬೇಕಾಗಿದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ವಿತಕರಿಗೆ ಯಾವುದೇ ಪರಿಹಾರ ಸಹ ಲಭಿಸಿರುವುದಿಲ್ಲ. ಈ ಕುರಿತು ಜ.೫ರಂದು ಬೆಂಗಳೂರಿನಲ್ಲಿ ನಡೆದ ಸಂಘದ ಕ್ಯಾಲೆಂಡರ್ ಹಾಗು ಸಮ್ಮೇಳನದ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸಚಿವ ಕೆ. ಗೋಪಾಲಯ್ಯನವರ ಗಮನಕ್ಕೂ ಸಹ ತರಲಾಗಿದೆ ಎಂದರು.
 ಪ್ರಸ್ತುತ ಪಡಿತರ ಇಲಾಖೆಯ ಸಹ ನಿರ್ದೇಶಕರು ಜನವರಿ ತಿಂಗಳಿನಿಂದ ಕೆ.ವೈ.ಸಿ ಕಡ್ಡಾಯಗೊಳಿಸಿದ್ದಾರೆ. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಹಿಂದಿನ ಕೆ.ವೈ.ಸಿ ಬಾಕಿ ಸಹ ಬಂದಿರುವುದಿಲ್ಲ. ಇದರಿಂದಾಗಿ ಪಡಿತರ ವಿತರಕರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಪಡಿತರ ವಿತರಕರಿಗೆ ಬರಬೇಕಾಗಿರುವ ಬಾಕಿ ಬಿಡುಗಡೆಯಾದ ನಂತರ ಕೆ.ವೈ.ಸಿ ಪ್ರಾರಂಭಿಸಬೇಕು. ಸರ್ಕಾರ ಮುಕ್ತ ಮಾರುಕಟ್ಟೆಯ ದಿನಬಳಕೆ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಸೋಪು, ಉಪ್ಪು, ಸಕ್ಕರೆ, ರವೆ, ಮೈದಾಹಿಟ್ಟು, ಅಗರಬತ್ತಿ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪಡಿತರದಾರರು ಸಹ ಸಹಕರಿಸುವಂತೆ ಮನವಿ ಮಾಡಿದರು.  
     ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಪರಮೇಶ್ವರಪ್ಪ ಹಾಗೂ ಕೆ. ಈಶ್ವರಚಾರಿ ಹಾಗೂ ೪ ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಆರ್ ಶಿವರಾಮ್ ಹಾಗು ಭದ್ರಾವತಿ ನಗರ ಘಟಕದ ನೂತನ ಅಧ್ಯಕ್ಷ ಎಸ್.ಆರ್ ನಾಗರಾಜ್ ಹಾಗೂ ಶಿವಮೊಗ್ಗ ನಗರ ಅಧ್ಯಕ್ಷ ನಾಗರಾಜ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.   ವೈ.ವಿ. ಮೋಹನ್‌ಕುಮಾರ್ ಸ್ವಾಗತಿಸಿದರು. ಎಸ್. ವಾಗೀಶ್ ನಿರೂಪಿಸಿದರು.

ಜೈನ ಮುನಿಗಳ ಆಗಮನಕ್ಕೆ ಸಂಭ್ರಮ : ಭಕ್ತರಿಗೆ ಪ್ರಸಾದ ವಿತರಣೆ

ಭದ್ರಾವತಿ, ಜ. ೮: ಶ್ರೀ ರುಷಿಪಾಲ್ ವಿಜಯಜೀ ಹಾಗೂ ಶ್ರೀ ಬಿಮಾ ರತನವಿಜಯಜೀಯವರು ಜೈನ ಧರ್ಮದ ದೀಕ್ಷೆ ಪಡೆದು ೫ ವರ್ಷಗಳ ನಂತರ ನಗರಕ್ಕೆ ಆಗಮಿಸಿರುವ ಸಂಭ್ರಮದ ಹಿನ್ನಲೆಯಲ್ಲಿ ಹಾಗು ಜೈನರ ೨೩ನೇ ತೀರ್ಥಂಕರರಾದ ಪ್ರಭು ಪಾರ್ಶ್ವನಾಥ ಭಗವಾನರ ಜನ್ಮದಿನ ಮತ್ತು ದೀಕ್ಷಾ ಮಹೋತ್ಸವದ ಅಂಗವಾಗಿ ಜೈನ ಸಮಾಜದ ವತಿಯಿಂದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ನಗರದ ಚನ್ನಗಿರಿ ರಸ್ತೆಯ ಸಪ್ನ ಪಾನ್ ಬ್ರೋಕರ‍್ಸ್ ಹಾಗು ಶ್ರೀ ಭೇರು ಕ್ಲಾತ್ ಸೆಂಟರ್ ಮಾಲೀಕರಾದ ದಿನೇಶ್‌ಕುಮಾರ್ ಜೈನ್ ಹಾಗು ರಾಜುಲ್ ಜೈನ್ ದಂಪತಿ ಪುತ್ರರಾದ ರಿಷಬ್‌ಕುಮಾರ್ ಜೈನ್ ತಮ್ಮ ೨೫ನೇ ವಯಸ್ಸಿನಲ್ಲಿ ಮತ್ತು ಜಿನೇಶ್ ಕುಮಾರ್ ಜೈನ್ ೨೩ನೇ ವಯಸ್ಸಿನಲ್ಲಿ ಆಚಾರ್ಯವರ್ಯರಾದ ಶ್ರೀ ಹೀರಚಂದ್ರಸುರೀಶ್ವರಜಿ ಮಹಾರಾಜ್‌ರವರ ಧಾರ್ಮಿಕ ಪ್ರವಚನಗಳಿಂದ ಪ್ರಭಾವಿತರಾಗಿ ೫ ವರ್ಷಗಳ ಹಿಂದೆ ಜೈನ ಧರ್ಮದ ದೀಕ್ಷೆ ಪಡೆದು ಕೊಂಡಿದ್ದರು. ನಂತರ ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು ಕಳೆದ ೫ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಭಕ್ತರಿಗೆ ಸಿಹಿ ವಿತರಿಸುವ ಮೂಲಕ ಜೈನ ಸಮಾಜ ಈ ಸಂಭ್ರಮವನ್ನು ವಿಶೇಷವಾಗಿ ಹಂಚಿಕೊಳ್ಳುತ್ತಿದೆ.



ಭದ್ರಾವತಿಯಲ್ಲಿ ಯಶಸ್ವಿಯಾಗಿ ನಡೆದ ಡ್ರೈರನ್ ಕಾರ್ಯಕ್ರಮ

ಕೋವಿಡ್-೧೯  ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.  
ಭದ್ರಾವತಿ, ಜ. ೮: ಕೋವಿಡ್-೧೯ ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.  
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ನಾಗರಾಜ್ ನಾಯಕ್,  ತಾಲೂಕು ಆರೋಗ್ಯಾಧಿಕಾರಿ ಡಾ.  ಎಂ.ವಿ ಅಶೋಕ್, ಸಾರ್ವಜನಿಕ ಆಸ್ಪತ್ರೆ  ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನೀಲೇಶ್ ರಾಜ್, ಕಿರಣ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಲಸಿಕೆ ಹಾಕಲು ಕೈಗೊಂಡ ಕ್ರಮಗಳು:
     ಆರೋಗ್ಯ ಇಲಾಖೆಯ ೨೫ ಮಂದಿ ಸಿಬ್ಬಂದಿಗಳಿಗೆ ಪೂರ್ವ ಪರಿಶೀಲನಾ ಲಸಿಕೆ ಹಾಕಲಾಯಿತು. ಇದಕ್ಕೂ ಮೊದಲು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಂಡಿರುವವರ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟು ೩ ಮಂದಿ ವ್ಯಾಕ್ಸಿನೇಷನ್  ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು.   ಈ  ಪೈಕಿ ಇಬ್ಬರು ಲಸಿಕೆ ಹಾಕುವ ಅಧಿಕಾರಿಗಳಾಗಿದ್ದರು. ೧ ಕೊಠಡಿಯಲ್ಲಿ  ಲಸಿಕೆ ಹಾಕಲಾಯಿತು. ಮತ್ತೊಂದು ಕೊಠಡಿಯಲ್ಲಿ ಲಸಿಕೆ  ಹಾಕಿದ ನಂತರ ಅರ್ಧ ತಾಸುಗಳ ವರೆಗೆ ಪರಿಶೀಲನೆ ನಡೆಸಲಾಯಿತು.  





ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತ ಸ್ಥಾನ : ಡಿ.ಬಿ ಶಂಕರಪ್ಪ

ಭದ್ರಾವತಿ, ಜ. ೮: ಸಾಮಾನ್ಯ ಕಾರ್ಯಕರ್ತರಾಗಿ ಕನ್ನಡ ಸೇವೆ ಮಾಡಿದ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷ ಗೌರವ ಸಂದಿರುವುದು ನಾಡಿನಪ್ರತಿಯೊಬ್ಬ ಕನ್ನಡ ಸೇವಕನಿಗೂ ಸಲ್ಲುವ ಗೌರವವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
     ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎ.ಪಿ ಕುಮಾರ್‌ರವರನ್ನು ಅಭಿನಂದಿಸಿ ಮಾತನಾಡಿದರು.
    ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತಮಟ್ಟದ ಗೌರವ ಲಭಿಸುತ್ತದೆ ಎಂಬುದಕ್ಕೆ ಎ.ಪಿ ಕುಮಾರ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿವುದು ಸಾಕ್ಷಿಯಾಗಿದೆ. ಯಾವುದನ್ನೂ ನಿರೀಕ್ಷಿಸದೆ ಕನ್ನಡಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು ಸುಮಾರು ೪ ದಶಕಕ್ಕೂ ಹೆಚ್ಚು ಕಾಲ ದುಡಿದಿರುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾಹಿತಿಯಲ್ಲದ ವ್ಯಕ್ತಿಯೊಬ್ಬರನ್ನು ಹಲವು ಆಯಾಮಗಳ ಮೂಲಕ ಗುರುತಿಸುವ ಪ್ರಯತ್ನವನ್ನು ತಾಲೂಕು ಪರಿಷತ್ ಮಾಡುವ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ಪ್ರಮುಖರಾದ ಡಾ.ಬಿ.ಎಂ ನಾಸಿರ್‌ಖಾನ್, ಜಿ.ಎನ್ ಸತ್ಯಮೂರ್ತಿ, ಕೆ. ಮಂದಾರಕುಮಾರ್, ಸಿದ್ದಲಿಂಗಯ್ಯ, ಅರಳೇಹಳ್ಳಿ ಅಣ್ಣಪ್ಪ, ಚಂದ್ರಶೇಖರಪ್ಪ ಚಕ್ರಸಾಲಿ, ಎನ್. ಮಂಜುನಾಥ್, ನಾಗರತ್ನ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜೈನ ಸಮಾಜದ ವತಿಯಿಂದ ಎ.ಪಿ ಕುಮಾರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.