ಮಂಗಳವಾರ, ಆಗಸ್ಟ್ 2, 2022

ಪ್ರಸ್ತುತ ಆಂಗ್ಲ ಭಾಷೆ ಕಲಿಕೆ ಬಹುಮುಖ್ಯ : ಬಿ. ಸಿದ್ದಬಸಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಛೇರಿ ಸಹಯೋಗದೊಂದಿಗೆ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್‌ಟೌನ್ ಇಂಗ್ಲೀಷ್ ಟೀಚರ್‍ಸ್ ಪೋರಮ್) ವತಿಯಿಂದ ಆಯೋಜಿಸಲಾಗಿದ್ದ ಆಂಗ್ಲ ಭಾಷಾ ಕಾರ್ಯಾಗಾರದಲ್ಲಿ ಬಿ.ಸಿದ್ದಬಸಪ್ಪ, ಕೆ. ಬಸವರಾಜಪ್ಪ ಮತ್ತು ಎ.ಕೆ ನಾಗೇಂದ್ರಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ, ಆ. ೨: ಪ್ರಸ್ತುತ ಆಂಗ್ಲ ಭಾಷೆ ಕಲಿಕೆ ಬಹುಮುಖ್ಯವಾಗಿದ್ದು, ಭವಿಷ್ಯದಲ್ಲಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು.
    ಅವರು ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಛೇರಿ ಸಹಯೋಗದೊಂದಿಗೆ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್‌ಟೌನ್ ಇಂಗ್ಲೀಷ್ ಟೀಚರ್‍ಸ್ ಪೋರಮ್) ವತಿಯಿಂದ ಆಯೋಜಿಸಲಾಗಿದ್ದ ಆಂಗ್ಲ ಭಾಷಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಇದ್ದ ಎಲ್ಲಾ ತೊಡಕುಗಳು ಇದೀಗ ಬಗೆಹರಿದಿವೆ. ಇಂಗ್ಲೀಷ್ ಕಲಿಕಾ ಚೇತರಿಕೆಯಲ್ಲಿರುವ ಎಲ್ಲಾ ಚಟುವಟಿಕೆಗಳು ಪಠ್ಯ ಪುಸ್ತಕಕ್ಕೆ ಪೂರಕವಾಗಿವೆ. ಒಟ್ಟಾರೆ ಕಲಿಕಾ ನ್ಯೂನತೆಗಳು ಇದರಿಂದ ದೂರವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕ ಕೆ. ಬಸವರಾಜಪ್ಪ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ್ ಎಂ, ಜಯಕುಮಾರ್, ಇಮ್ತಿಯಾಜ್, ಪ್ರಕಾಶ್ ಮತ್ತು ಅಶ್ವಿನಿ ಜಾಧವ್ ಪಾಲ್ಗೊಂಡಿದ್ದರು.

ವಾಹನ ದಟ್ಟಣೆ : ವೇಗ ನಿಯಂತ್ರಕ ಅಳವಡಿಸಿ

ಸಮಾಜಸೇವಕ ಇಬ್ರಾಹಿಂಖಾನ್ ಮನವಿ

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಭದ್ರಾವತಿ, ಆ. ೨: ಇತ್ತೀಚೆಗೆ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಕಂಚಿ ಬಾಗಿಲು ಸಮೀಪ ಪೊಲೀಸ್ ವಸತಿ ಸಮುಚ್ಛಯ, ಆಲ್ ಮಹಮೂದ್ ವಿದ್ಯಾಸಂಸ್ಥೆ, ದರ್ಗಾ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಇದ್ದು, ತಾಲೂಕು ಕಛೇರಿ ರಸ್ತೆಗೆ ಸಂಪರ್ಕಗೊಂಡಿದೆ. ಈ ಭಾಗದಲ್ಲಿ ವಾಹನಗಳ ದಟ್ಟಣೆ ಹಾಗು ಪಾದಚಾರಿಗಳ ಸಂಚಾರ ಅಧಿಕವಾಗಿದ್ದು, ಇತ್ತೀಚೆಗೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡ ನಂತರ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಬಳಿ ಹಾಗು ಕಿಟ್ಟಮ್ಮ ಹಿಟ್ಟಿನ ಗಿರಣಿ ಸಮೀಪ ವೇಗ ನಿಯಂತ್ರಕ ಅಳವಡಿಸುವ ಮೂಲಕ ಸಾರ್ವಜನಿಕರ ಜೀವ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
    ಸಂಚಾರಿ ಪೊಲೀಸ್  ಠಾಣಾಧಿಕಾರಿ ಕವಿತಾ, ನಗರಸಭೆ ಪೌರಾಯುಕ್ತ ಮನುಕುಮಾರ್ ಹಾಗು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಇಬ್ರಾಹಿಂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.

ಅಮೆಚೂರ್ ನ್ಯಾಷನಲ್ ಗೇಮ್ಸ್ : ಕರ್ನಾಟಕ ತಂಡಕ್ಕೆ ಬಹುಮಾನ

ರಾಜಸ್ತಾನದ ಜೈಪುರದ ಪಿಂಕಿ ಸಿಟಿಯಲ್ಲಿ ಜರುಗಿದ ಅಮೆಚೂರ್ ನ್ಯಾಷನಲ್ ಗೇಮ್ಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ೧೫ ಕ್ರೀಡಾಪಟುಗಳ ತಂಡ ಪ್ರತಿನಿಧಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ.
    ಭದ್ರಾವತಿ, ಆ. ೨: ರಾಜಸ್ತಾನದ ಜೈಪುರದ ಪಿಂಕಿ ಸಿಟಿಯಲ್ಲಿ ಜರುಗಿದ ಅಮೆಚೂರ್ ನ್ಯಾಷನಲ್ ಗೇಮ್ಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ೧೫ ಕ್ರೀಡಾಪಟುಗಳ ತಂಡ ಪ್ರತಿನಿಧಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ.
    ವಾಲಿಬಾಲ್‌ನಲ್ಲಿ ಪ್ರಥಮ ಬಹುಮಾನ, ೧,೬೦೦ ಮತ್ತು ೧,೫೦೦ ಮೀ. ಓಟದಲ್ಲಿ ಪ್ರಥಮ, ೧೦೦ ಮೀ. ಮತ್ತು ೮೦೦ ಮೀಟರ್ ಓಟದಲ್ಲಿ ದ್ವಿತೀಯ ಹಾಗು ೪೦೦ ಮೀ. ಓಟದಲ್ಲಿ ತೃತೀಯ ಬಹುಮಾನ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಒಟ್ಟು ೧೧ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ದೊಣಬಘಟ್ಟ ನಿವಾಸಿ ಇಮ್ರಾನ್ ತರಬೇತಿದಾರರಾಗಿದ್ದು, ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಇವರ ಶ್ರಮ ಹೆಚ್ಚಿನದ್ದಾಗಿದೆ. ಎಂಎಸ್‌ಎಂಇ-ಪಿಸಿ ರಾಜ್ಯ ಘಟಕದ ಅಧ್ಯಕ್ಷ, ಉದ್ಯಮಿ ಎಚ್.ಸಿ ರಮೇಶ್ ೧೫ ಕ್ರೀಡಾಪಟುಗಳನ್ನೊಳಗೊಂಡ ತಂಡಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾಗಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ.

ಜೈನ ಗುರುಗಳ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ

ಉದ್ಯಮಿ ಪ್ರಮಿತ್ ಧಾರ್ಮಿಕ ಸೇವೆಗೆ ಸಿಆರ್‌ಟಿಸಿ ಅಭಿನಂದನೆ

ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಜೈನ ಸಮಾಜದ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್ ಮುನಿ ಮಹಾರಾಜ್ ಸೇರಿದಂತೆ ೩೦ ಗುರುಗಳು ಹಾಗು ೧೦೦ ಅನುಯಾಯಿಗಳನ್ನೊಳಗೊಂಡ ತಂಡ ಕಳೆದ ವರ್ಷ ನ.೧೫ರಿಂದ ಬೆಳಗಾವಿಯಿಂದ ರಾಜಸ್ಥಾನದ ಭಗವಾನ್ ಶ್ರೀ ಮಹಾವೀರ್ ಕ್ಷೇತ್ರದ ವರೆಗೂ ಸುಮಾರು ೮ ತಿಂಗಳ ಪಾದಯಾತ್ರೆ ನಡೆಸಿದ್ದು, ಪ್ರತಿದಿನ ಸುಮಾರು ೧೫ ರಿಂದ ೨೦ ಕಿ.ಮೀ ಒಟ್ಟು ೧೮೦೦ ಕಿ.ಮೀ ಯಾತ್ರೆ ಇದಾಗಿದೆ. ಈ ಸಂದರ್ಭದಲ್ಲಿ ಪ್ರಮಿತ್ ಅವರು ಪ್ರತಿ ದಿನ ದಾರಿಯುದ್ದಕ್ಕೂ ಗುರುಗಳ ತಂಡ ಉಳಿದುಕೊಳ್ಳಲು ಶಾಲೆ/ಛತ್ರದ ವ್ಯವಸ್ಥೆ, ಆಹಾರ ತಯಾರಿಕೆಗೆ ಇದ್ದಿಲು ಪೂರೈಕೆ, ಕುಡಿಯಲು ಬಾವಿ ನೀರಿನ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಕೈಗೊಂಡಿದ್ದಾರೆ. ಅಲ್ಲದೆ ಸುಮಾರು ೫ ವರ್ಷಗಳ ಕಾಲ ಜೈನ ಧರ್ಮದ ಪುಣ್ಯ ಕ್ಷೇತ್ರಗಳಾದ ಶ್ರವಣಬೆಳಗೊಳ, ಧರ್ಮಸ್ಥಳ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.  ಇವರ ಧಾರ್ಮಿಕ ಸೇವಾ ಮನೋಭಾವ ಇತರರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಉದ್ದೇಶದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
    ಪ್ರಮಿತ್ ಅವರು ಕೇವಲ ಧಾರ್ಮಿಕ ಸೇವಾ ಕಾರ್ಯ ಮಾತ್ರವಲ್ಲದೆ ರೈಫಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಹಳಷ್ಟು ಸೇವಾ ಕಾರ್ಯಗಳಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ.
    ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಮೂರ್ತಿ, ಕಾರ್ಯದರ್ಶಿ ಎಂ.ಎಸ್ ರವಿ, ಖಜಾಂಚಿ ಅಮಿತ್ ಕುಮಾರ್ ಜೈನ್, ಪ್ರಮುಖರಾದ ಡಿ.ಎನ್ ಅಶೋಕ್, ಸಿ.ಎನ್ ಗಿರೀಶ್, ಜಿ.ಎನ್ ಸತ್ಯಮೂರ್ತಿ, ಕೆ.ಜಿ ರಾಜ್‌ಕುಮಾರ್, ಪಿ.ಸಿ ಜೈನ್, ಮಿಥುನ್, ವೈ. ನಟರಾಜ್,  ಮಂಜುನಾಥ್, ಬಾಲಾಜಿ, ರಾಜು, ಅನ್ನಪೂರ್ಣ ಸತೀಶ್, ಲತಾ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.