Monday, August 7, 2023

ಬಿಜೆಪಿ, ಸಂಘ ಪರಿವಾರದಿಂದ ಕೋಮು ದ್ವೇಷ : ಆರೋಪ

ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

ಭದ್ರಾವತಿಯಲ್ಲಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)  ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಆ. 7 : ಸಂಘ ಪರಿವಾರ ಹರಡಿದ ದ್ವೇಷದ ನಂಜು ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜನಾಂಗೀಯ ಕಲಹ, ಕೋಮು ದ್ವೇಷ ದೇಶವನ್ನು ಹೊತ್ತಿ ಉರಿಸುತ್ತಿದೆ ಎಂದು ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಮುಖಂಡರು ಆರೋಪಿಸಿದರು.
    ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, ದಕ್ಷಿಣ ಕನ್ನಡದಲ್ಲಿ ಆ.5ರಂದು ಸಂಘ ಪರಿವಾರ ಹರಡಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಕಲಹ, ಹರಿಯಾಣದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ನಾನಾ ಭಾಗಗಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘ ಪರಿವಾರದ ದ್ವೇಷದ ರಾಜಕಾರಣವನ್ನು ಖಂಡಿಸುತ್ತೇವೆ ಎಂದರು.
    ಸರ್ಕಾರ ತಕ್ಷಣ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.
    ತಾಲೂಕು ಅಧ್ಯಕ್ಷ ಎಂ.ಡಿ ಗೌಸ್‌, ಜಿಲ್ಲಾ ಕಾರ್ಯದರ್ಶಿ ಎಂ.ಡಿ ಕಲೀಂಮುಲ್ಲಾ, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಪಾಟೀಲ್‌, ತಾಲೂಕು ಉಪಾಧ್ಯಕ್ಷ ಎಂ.ಡಿ ತಾಹೀರ್‌  ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಚಾಲನೆ

ಭದ್ರಾವತಿ ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಆ. 7 : ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ದೇವಾಲಯದಲ್ಲಿ ಕೊಳವೆ ಬಾವಿ ಅಗತ್ಯವಿದ್ದು,  ಮಂಜೂರಾತಿ ಮಾಡಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಗಿತ್ತು.  ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ನಗರಸಭೆ ವತಿಯಿಂದ ಕೊಳವೆ ಬಾವಿ ಮಂಜೂರಾತಿ ಮಾಡಿಸಿ ಕೊಟ್ಟಿದ್ದು,  ಕಾಮಗಾರಿಗೆ ಚಾಲನೆ ನೀಡಲಾಯಿತು.
    ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋನಿ ವಿಲ್ಸನ್ ಕೊಳವೆ ಬಾವಿ ಮಂಜೂರಾತಿಗೆ ಕಾರಣಕರ್ತರಾದ ಶಾಸಕ  ಬಿ. ಕೆ. ಸಂಗಮೇಶ್ವರ, ನಗರಸಭಾ ಸದಸ್ಯರಾದ  ಬಿ. ಕೆ. ಮೋಹನ್  ಹಾಗೂ  ಜಾರ್ಜ್ ರವರಿಗೆ ಧರ್ಮಕೇಂದ್ರದ ಗುರುಗಳ  ಹಾಗೂ ಸಮಸ್ತ ಭಕ್ತಾದಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತ್ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,  ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್ ಕುಮಾರ್, ಸೇಂಟ್ ಚಾರ್ಲ್ಸ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜೆಸಿಂತಾ, ಸಿಸ್ಟರ್ ಆಡ್ಲಿನ್, ಆರ್ಥಿಕ ಸಮಿತಿ ಕಾರ್ಯದರ್ಶಿ ಪಾಟ್ರಿಕ್, ವೀನ್ಸoಟ್ ದೆ ಪಾಲ್ ಅಧ್ಯಕ್ಷ  ಅಲ್ವಿನ್, ಪೀಟರ್, ಡೇವಿಡ್,  ಸೆಲಿನ್ ಮತ್ತು  ಮೇರಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೃಷಿಕ ನಂಜೇಗೌಡ ನಿಧನ

ನಂಜೇಗೌಡ
    ಭದ್ರಾವತಿ, ಆ. 7: ಕಾಗದನಗರ 6ನೇ ವಾರ್ಡ್‌ ನಿವಾಸಿ, ಕೃಷಿಕ ನಂಜೇಗೌಡ(90) ಸೋಮವಾರ ನಿಧನ ಹೊಂದಿದರು.
    ಪತ್ನಿ, ಪುತ್ರ ಎಂಪಿಎಂ ಪಿ.ಯು ಕಾಲೇಜಿನ ಕ್ಲರ್ಕ್‌ ಶಂಕರಲಿಂಗ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ಮಂಗಳವಾರ ನಡೆಯಲಿದೆ.

ವಸಂತ ರಾಜ್ ನಿಧನ

ವಸಂತರಾಜ್‌ ನಿಧನ
    ಭದ್ರಾವತಿ, ಆ. 7 : ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ ವಸಂತ ರಾಜ್(೮೩) ನಿಧನ ಹೊಂದಿದರು.
    ಪತ್ನಿ ಸಂಗೀತ ಶಿಕ್ಷಕಿ ವಿಶಾಲಾಕ್ಷಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅವರ ಮಗಳ ಮನೆಯಲ್ಲಿ ವಾಸವಾಗಿದ್ದರು. ಇವರ ನಿಧನಕ್ಕೆ  ಮಹಿಳಾ ಸೇವಾ ಸಮಾಜ ಸಂತಾಪ ಸೂಚಿಸಿದೆ.