Friday, November 17, 2023

ಮಹೇಶ್ವರ ನಾಯಕ್‌ಗೆ ಗ್ರಂಥಾಲಯ ಇಲಾಖೆ ಸಿಬ್ಬಂದಿ ಸೇವಾ ಪುರಸ್ಕಾರ

ಡಿ. ಮಹೇಶ್ವರ ನಾಯಕ್
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ಹಾಗು ಮಾಹಿತಿ ಸಹಾಯಕರಾದ ಡಿ. ಮಹೇಶ್ವರ ನಾಯಕ್ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
    ಕಲ್ಪನಹಳ್ಳಿ ತಾಂಡ ನಿವಾಸಿಯಾಗಿರುವ ಮಹೇಶ್ವರ ನಾಯಕ್ ಅವರು ಹಲವಾರು ವರ್ಷಗಳಿಂದ ಮೇಲ್ವಿಚಾರಕ ಹಾಗು ಮಾಹಿತಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
    ಸೊರಬದಲ್ಲಿ ನ.೨೦ರಂದು ನಡೆಯಲಿರುವ ಗ್ರಂಥಾಲಯ ಸಪ್ತಾಹ ಆಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಮಹೇಶ್ವರ ನಾಯಕ್ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗು ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.  

ಪೌರಕಾರ್ಮಿಕರಿಗೆ ಸೌಲಭ್ಯ ಒದಗಿಸುವುದು ಎಲ್ಲರ ಜವಾಬ್ದಾರಿ : ಶೃತಿ ವಸಂತಕುಮಾರ್

ಭದ್ರಾವತಿ ಜೈಭೀಮ್ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗು ನಗರಸಭೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಗರಸಭೆ ಠೇವಣಿವಂತಿಕೆ ಕಾಮಗಾರಿಯಡಿ ಜೈಭೀಮ್ ನಗರದಲ್ಲಿ ನಿರ್ಮಾಣಗೊಂಡಿರುವ ಪೌರಕಾರ್ಮಿಕರ ಗೃಹಗಳಿಗೆ ಒಳಚಂರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಉದ್ಘಾಟಿಸಿದರು.
    ಭದ್ರಾವತಿ : ಪೌರಕಾರ್ಮಿಕರು ನಗರಸಭೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದು, ಇವರಿಗೂ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಹೇಳಿದರು.
    ಅವರು ಶುಕ್ರವಾರ ಜೈಭೀಮ್ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗು ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಗರಸಭೆ ಠೇವಣಿವಂತಿಕೆ ಕಾಮಗಾರಿಯಡಿ ನಗರದ ಜೈಭೀಮ್ ನಗರದಲ್ಲಿ ನಿರ್ಮಾಣಗೊಂಡಿರುವ ಪೌರಕಾರ್ಮಿಕರ ಗೃಹಗಳಿಗೆ ಒಳಚಂರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಪೌರಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಮನೆಗಳು ಸಕಲ ಸೌಲಭ್ಯಗಳಿಂದ ಕೂಡಿದ್ದು, ಸುಸಜ್ಜಿತವಾಗಿ ನಿರ್ಮಾಣಗೊಳಿಸಲಾಗಿದೆ. ನಗರದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖ. ಅದೇ ರೀತಿ ಪೌರಕಾರ್ಮಿಕರ ಆರೋಗ್ಯ ಕಾಪಾಡುವುದು ನಗರಸಭೆಯ ಕರ್ತವ್ಯ. ಈ ನಿಟ್ಟಿನಲ್ಲಿ ನಗರಸಭೆ ಹಲವು ಕ್ರಮಗಳನ್ನುಕೈಗೊಂಡಿದೆ ಎಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿ, ಜಿ+ 3 ಗುಂಪು ಮನೆ ಯೋಜನೆಯಡಿ 74 ಪೌರಕಾರ್ಮಿಕರಿಗೆ ಮನೆಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ 71 ಪೌರಕಾರ್ಮಿಕರು ಹೊಸದಾಗಿ ನೇಮಕಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆಗಳನ್ನು ಒದಗಿಸಲಾಗುವುದು ಎಂದರು.
    ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಮಣಿ ಎಎನ್‌ಎಸ್, ಬಸವರಾಜ್ ಬಿ ಆನೇಕೊಪ್ಪ, ಉದಯಕುಮಾರ್, ಜಾರ್ಜ್, ಆರ್. ಮೋಹನ್ ಕುಮಾರ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಮಂಜುಳ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಬಿ.ಎಂ ಮಂಜುನಾಥ್(ಟೀಕು), ರಿಯಾಜ್ ಅಹಮದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್, ಗುತ್ತಿಗೆದಾರ ದೇವೇಂದ್ರ, ನಗರಸಭೆ ಮೇಸ್ತ್ರಿಗಳಾದ ವಿಜಯ್, ದಾನಂ, ನರಸಿಂಹ, ಎನ್. ಗೋವಿಂದ, ಎನ್. ಪ್ರಸನ್ನಕುಮಾರ್, ರಾಜೇಶ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
    ನಗರಸಭೆ ಸದಸ್ಯ ಚನ್ನಪ್ಪ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಹಮದ್ ಗೌಸ್ ನಿರೂಪಿಸಿ, ವಂದಿಸಿದರು. ನಗರಸಭೆ ಪೌರಕಾರ್ಮಿಕರು, ಜೈಭೀಮ್ ನಗರದ ನಿವಾಸಿಗಳು ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.