Friday, October 16, 2020

ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕರಾಗಿ ಕೂಡ್ಲಿಗೆರೆ ಎಸ್. ಹಾಲೇಶ್ ನೇಮಕ

ಕೂಡ್ಲಿಗೆರೆ ಎಸ್. ಹಾಲೇಶ್
ಭದ್ರಾವತಿ, ಅ. ೧೬: ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೂಡ್ಲಿಗೆರೆ ಎಸ್ ಹಾಲೇಶ್‌ರವರನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯ ಅಧಿಕಾರೇತರ ನಿರ್ದೇಶಕರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
      ಕೂಡ್ಲಿಗೆರೆ ಹಾಲೇಶ್‌ರವರು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಜೊತೆಗೆ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಅಲ್ಲದೆ ರೋಟರಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಇದೀಗ ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯ ಅಧಿಕಾರೇತರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.




೯ ದಿನಗಳ ದಸರಾ ಆಚರಣೆಗೆ ನಗರಾಡಳಿತ ಸಿದ್ದತೆ : ಶಾಸಕರಿಗೆ ಆಹ್ವಾನ

ನಾಡಹಬ್ಬ ದಸರಾ ಆಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೌರಾಯುಕ್ತ ಮನೋಹರ್ ಆಮಂತ್ರಣ ನೀಡುವ ಮೂಲಕ ಆಹ್ವಾನಿಸಿದರು.
ಭದ್ರಾವತಿ, ಅ. ೧೬: ಕೊರೋನಾ ಸಂಕಷ್ಟದ ನಡುವೆಯೂ ೯ ದಿನಗಳ ನಾಡಹಬ್ಬ ದಸರಾ ಆಚರಣೆಗೆ ನಗರಸಭೆ ಆಡಳಿತ ಮುಂದಾಗಿದ್ದು, ಮಾಜಿ ಸೈನಿಕ ಸುಬೇದಾರ್ ಎಲ್.ಡಿ ಅಶೋಕ್ ಅ.೧೭ರ ಶನಿವಾರ ಚಾಲನೆ ನೀಡಲಿದ್ದಾರೆ.
      ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ  ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಆಚರಣೆಗೆ ಚಾಲನೆ ದೊರೆಯಲಿದ್ದು, ಈ ನಡುವೆ ನಗರದ ವಿವಿಧ ದೇವಾಲಯಗಳಲ್ಲಿ ೯ ದಿನಗಳ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ದೇವಾಲಯಗಳ ಸಮಿತಿಗಳು ಸರ್ಕಾರದ ಮಾರ್ಗಸೂಚಿಗಳಂತೆ ಸರಳ ಆಚರಣೆಗೆ ಮುಂದಾಗಿವೆ.
        ಶಾಸಕರಿಗೆ ಆಹ್ವಾನ:  
    ನಾಡಹಬ್ಬ ದಸರಾ ಆಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೌರಾಯುಕ್ತ ಮನೋಹರ್ ಆಮಂತ್ರಣ ನೀಡುವ ಮೂಲಕ ಆಹ್ವಾನಿಸಿದರು.
ನಗರಸಭೆ ಆಡಳಿತದ ಪರವಾಗಿ ಶಾಸಕರ ನಿವಾಸಕ್ಕೆ ತೆರಳಿದ ಮನೋಹರ್ ನೇತೃತ್ವದ ತಂಡ ದಸರಾ ಆಚರಣೆ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿತು.
       ಕಂದಾಯಾಧಿಕಾರಿ ರಾಜ್‌ಕುಮಾರ್, ಲೇಖಾಧಿಕಾರಿ ಸೈಯದ್  ಮಹಬೂಬ್ ಆಲಿ, ಮಂಜುನಾಥ್, ಸತ್ಯನಾರಾಯಣ, ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನೆ ಬಾಡಿಗೆ ಹೆಚ್ಚಳ, ಕುಡಿಯುವ ನೀರು ಅಸಮರ್ಪಕ ಪೂರೈಕೆ ವಿರುದ್ಧ ಪ್ರತಿಭಟನೆ

ವಿಐಎಸ್‌ಎಲ್ ನಗರಾಡಳಿತದಿಂದ ಬೇಡಿಕೆ ಈಡೇರಿಕೆಗೆ ಭರವಸೆ

ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಭದ್ರಾವತಿ, ಅ. ೧೬ :  ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
         ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ  ಅಧಿಕ ಬಾಡಿಗೆ ನಿಗದಿಪಡಿಸಿರುವುದು ಸರಿಯಲ್ಲ.  ವಾಸಕ್ಕೆ ಯೋಗ್ಯವಲ್ಲದ ಹಾಳಾದ ಮನೆಗಳನ್ನು ಸುಮಾರು ೫-೬ ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಪಡಿಸಿಕೊಂಡು ವಾಸಿಸುತ್ತಿದ್ದು,  ನಿವೃತ್ತಿ ಹಣವನ್ನು  ಬಹುತೇಕ ವ್ಯಯ ಮಾಡಿದ್ದಾರೆ.  ಇದೀಗ  ಇದೀಗ ಶೇಕಡ ನೂರರಷ್ಟು ಮನೆ ಬಾಡಿಗೆ ಹೆಚ್ಚಳ ಮಾಡಿರುವುದು ನಿವೃತ್ತ ಕಾರ್ಮಿಕರನ್ನು ಮತ್ತಷ್ಟು  ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಈ ನಡುವೆ  ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ.  ಬೆಳಿಗ್ಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.  ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಕಾರ್ಖಾನೆಯ ನಗರಾಡಳಿತ ಯಾವುದೇ ರೀತಿಯಲ್ಲಿ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.


ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
      ಶಾಸಕ ಬಿ.ಕೆ ಸಂಗಮೇಶ್ವರ,  ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಿಎಸ್‌ಎಸ್ ಮುಖಂಡ ಸತ್ಯ, ಮುಖಂಡರಾದ ಗೋವಿಂದ ಸ್ವಾಮಿ, ಕಾಂತರಾಜು, ವಿಲ್ಸನ್ ಬಾಬು, ಕಬಡ್ಡಿ ಕೃಷ್ಣೇಗೌಡ, ಎನ್, ರಾಮಕೃಷ್ಣ, ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಮುಕುಂದಯ್ಯ, ವೆಂಕಟೇಶ್, ಕೀರ್ತಿ ಗುಜ್ಜಾರ್, ಚನ್ನಪ್ಪ, ವಿಶ್ವನಾಥಗಾಯಕ್‌ವಾಡ್, ಗಿರಿನಾಯ್ಡು, ಎಎಪಿ ಪಕ್ಷದ ಪ್ರಮುಖರಾದ ಜಿಲ್ಲಾಧ್ಯಕ್ಷ ರವಿಕುಮಾರ್, ಪರಮೇಶ್ವರಾಚಾರ್, ಜಯಶ್ರೀ ವೃತ್ತ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ದೊಡ್ಡಯ್ಯ, ಲಾಜರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಸೇರಿದಂತೆ ನಿವೃತ್ತ ಕಾರ್ಮಿಕರ ಕುಟುಂಬ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
      ಪ್ರತಿಭಟನೆಗೆ ಮಣಿದ ವಿಐಎಸ್‌ಎಲ್ ನಗರಾಡಳಿತ:
      ಪ್ರತಿಭಟನೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಹಿರಿಯ ಅಧಿಕಾರಿಗಳು ಉಕ್ಕು ಪ್ರಾಧಿಕಾರದ ಮುಖ್ಯ ಆಡಳಿತ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸುವ  ಮೂಲಕ ಮುಂದಿನ ೬ವರ್ಷಗಳ ವರೆಗೆ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಳ ಮಾಡುವುದಿಲ್ಲ. ಮುಂದಿನ ಒಂದು ವಾರದ ನಂತರ ಸಮರ್ಪಕವಾಗಿ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.