Sunday, January 3, 2021

ಜ.೪ರಂದು ಜೈನ ಮುನಿಗಳ ತಂಡ ಅಗಮನ

ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ
ಭದ್ರಾವತಿ, ಜ. ೩: ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಜ. ೪ ರಂದು ಬೆಳಿಗ್ಗೆ ೮ ಗಂಟೆಗೆ ನಗರಕ್ಕೆ ಆಗಮಿಸಲಿದೆ.
     ತರೀಕೆರೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿರುವ ತಂಡವನ್ನು ನಗರದ ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಳಿ ಜೈನ ಸಮಾಜದ ವತಿಯಿಂದ ಪ್ರಮುಖರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಿದ್ದು, ಮೂಲತಃ ನಗರದ ಪೂರ್ವಶ್ರಮದ ನಿವಾಸಿಗಳಾದ ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ ಸಹ ತಂಡದಲ್ಲಿ ಆಗಮಿಸುತ್ತಿದ್ದಾರೆ.
    ಈ ಇಬ್ಬರು ನಗರದ ನಿವಾಸಿಗಳಾದ ದಿನೇಶ್ ಕುಮಾರ್ ಜೈನ್ ಹಾಗು ರಾಚೋಲ್ ಜೈನ್ ದಂಪತಿ ಪುತ್ರರಾಗಿದ್ದು, ಈ ಹಿಂದೆ ನಗರಕ್ಕೆ ಆಗಮಿಸಿದ್ದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ರವರ ಧಾರ್ಮಿಕ ಪ್ರವಚನದಿಂದ ಪ್ರಭಾವಿತರಾಗಿ ಸನ್ಯಾಸ ಧೀಕ್ಷೆ ಪಡೆದು ದೇಶದಾದ್ಯಂತ ಧರ್ಮ ಪ್ರಚಾರ ಕೈಗೊಂಡು ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.
     ಹಳೇನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ನಂತರ ಜೈನ ಮಂದಿರಕ್ಕೆ ತಂಡವನ್ನು ಬರಮಾಡಿಕೊಳ್ಳಲಾಗುವುದು.  ಒಂದು ವಾರಗಳ ಕಾಲ ವಾಸ್ತವ್ಯ ಹೂಡುವ ತಂಡ ಧಾರ್ಮಿಕ ಪ್ರವಚನಗಳು ಹಾಗು ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಲಿದೆ.

ಜ.೧೭ರಂದು ಕ್ಷಿಪ್ರ ಕಾರ್ಯ ಪಡೆ ಘಟಕ ಶಿಲಾನ್ಯಾಸಕ್ಕೆ ಗೃಹ ಸಚಿವ ಅಮಿತ್ ಶಾ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ

ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿಯಲ್ಲಿ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕದ ಸ್ಥಳ ಪರಿಶೀಲನೆ ನಡೆಸಿತು.
     ಭದ್ರಾವತಿ, ಜ. ೩: ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ವಲಯದ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ  ಕಾರ್ಯಾರಂಭಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಜ.೧೭ರಂದು ಘಟಕದ ಶಿಲಾನ್ಯಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಲಾನ್ಯಾಸ ನೆರವೇರಿಸಲಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಈಗಾಗಲೇ ಅನುಮೋದನೆಗೊಂಡಿರುವ ನಕ್ಷೆಯಲ್ಲಿನ ಸ್ಥಳದ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ ನಡೆಸಿದ ತಂಡ ಸಮಾರಂಭಕ್ಕೆ ಕೈಗೊಳ್ಳಬೇಕಾಗಿರುವ ಸಿದ್ದತೆಗಳನ್ನು ರೂಪಿಸುವ ಸಂಬಂಧ ಚರ್ಚೆ ನಡೆಸಿತು.
    ಕೇಂದ್ರ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕರಾದ ಮೀನಾ ಮತ್ತು ಸಂಜಯ್, ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರತಾಪ್‌ರೆಡ್ಡಿ, ಗುಪ್ತದಳ ಇಲಾಖೆ ಮಹಾನಿರ್ದೇಶಕ ದಯಾನಂದ್, ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜವಾದದ ಮೂಲ ಆಶಯ ಸಮಾನತೆ, ಶೋಷಣೆ ಮುಕ್ತ ಸಮಾಜ ನಿರ್ಮಾಣ

ಭದ್ರಾವತಿ ಬಿಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲ್ ರವರ ನೆನಪಿನಲ್ಲಿ ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣ ಮಾಜಿ ಶಾಸಕ, ಜೆ.ಎಚ್ ಪಟೇಲ್ ಪುತ್ರ ಮಹಿಮಾ ಜೆ. ಪಟೇಲ್ ಉದ್ಘಾಟಿಸಿದರು.
    ಭದ್ರಾವತಿ, ಜ. ೩: ಸಮಾನತೆ, ಶೋಷಣೆ ಮುಕ್ತ  ಸಮಾಜ ನಿರ್ಮಾಣ ಮಾಡುವ ಪರಿಕಲ್ಪನೆಯೇ ಸಮಾಜವಾದದ ಮೂಲ ಆಶಯವಾಗಿದೆ ಎಂದು ನಗರದ  ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಿ ಧನಂಜಯ ಹೇಳಿದರು.
     ಅವರು ಭಾನುವಾರ ಬಿಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆ ಎಚ್ ಪಟೇಲ್ ರವರ ನೆನಪಿನಲ್ಲಿ ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಲಕಾಲಕ್ಕೆ ತಕ್ಕಂತೆ ಸಮಾಜವಾದಿ ನೆಲೆಗಟ್ಟಿನ ಮೇಲೆ ಸೂಕ್ತ ನಿರ್ಧಾರಗಳನ್ನು ಕೈಗೊಂಡು ಸಮಾನತೆ ಪರಿಕಲ್ಪನೆ ಮೇಲೆ ಆಡಳಿತ ನಡೆಸಿದ ಏಕೈಕ ರಾಜಕಾರಣಿ ಜೆ ಎಚ್ ಪಟೇಲ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
     ಪ್ರಸ್ತುತ ಸಮಾಜದಲ್ಲಿ  ಸಮಾಜವಾದಿ ಪರಿಕಲ್ಪನೆ ಮರೆಯಾಗಿದೆ.  ನಾವುಗಳು ಸಮಾಜವಾದದ ಮೂಲ ಆಶಯಗಳನ್ನು ಅರಿತುಕೊಳ್ಳಬೇಕಾಗಿದೆ. ರಾಜಕಾರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜದ ಏಳಿಗೆಗಾಗಿ ಸಾಧನವಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
    ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಳಿಕಿ ಹಿರೇಮಠ ಮಾತನಾಡಿ,  ರಾಜ್ಯದಲ್ಲಿ  ಸಮಾಜವಾದದ ಸಿದ್ಧಾಂತಗಳನ್ನು  ಕೊಡುಗೆಯಾಗಿ  ನೀಡಿದ ಮಹಾನ್ ಚೇತನ ಜೆ ಎಚ್ ಪಟೇಲ್  ಸ್ಮರಣೆ  ನಿಜಕ್ಕೂ ಅರ್ಥಪೂರ್ಣವಾಗಿದೆ. ಅವರ ಆಶಯದಂತೆ ಸರ್ವರನ್ನು ಸಮಾನತೆಯಿಂದ ಕಾಣುವ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.  
    ಮಾಜಿ ಶಾಸಕ, ಜೆ ಎಚ್ ಪಟೇಲ್ ಪುತ್ರ ಮಹಿಮಾ ಜೆ ಪಟೇಲ್ ಮಾತನಾಡಿ,  ಸಮಾಜವಾದಿ ನೆಲೆಗಟ್ಟಿನಲ್ಲಿ  ನಮ್ಮ ತಂದೆಯವರು ದ್ವೇಷ ರಹಿತ,  ಸ್ನೇಹಮಯ ರಾಜಕಾರಣಕ್ಕೆ ಒತ್ತು ನೀಡಿದರು. ಈ ಹಿನ್ನೆಲೆಯಲ್ಲಿ ಅವರು ಎಲ್ಲಾ ಪಕ್ಷದವರಿಗೂ ಪ್ರೀತಿಪಾತ್ರರಾಗಿದ್ದರು. ಅವರ ಆದರ್ಶತನಗಳನ್ನು, ಸಮಾಜವಾದಿ ಚಿಂತನೆಗಳನ್ನು  ನಾನು   ಸಹ ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದು,  ರಾಜ್ಯದಲ್ಲಿ ಭವಿಷ್ಯದಲ್ಲಿ ಉತ್ತಮ ರಾಜಕಾರಣ  ನಿರ್ಮಾಣ ಮಾಡುವ ಆಶಯ ಹೊಂದಿದ್ದೇನೆ  ಎಂದರು.
ಶಾಸಕ ಬಿ ಕೆ ಸಂಗಮೇಶ್ವರ್ ಮಾತನಾಡಿ, ಜೆ ಎಚ್ ಪಟೇಲ್ ರವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ  ಇಂತಹ ಅಪರೂಪದ  ರಾಜಕಾರಣಿಯನ್ನು ನಾವುಗಳು ಕಾಣಲು ಸಾಧ್ಯವಿಲ್ಲ. ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕೆಂದರು.
     ಮುಖಂಡರಾದ ಎಂ ಎಸ್ ಜನಾರ್ದನ ಅಯ್ಯಂಗಾರ್,  ವಿ. ಕದಿರೇಶ್, ಮಂಗೋಟೆ ರುದ್ರೇಶ್,  ಎಚ್ ಆರ್ ಲೋಕೇಶ್ವರ ರಾವ್, ಎಂ ಶಿವಕುಮಾರ್, ಬಿ.ಎನ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಕಾರ್ಯಕ್ರಮದ ಆಯೋಜಕ ಶಶಿಕುಮಾರ್ ಎಸ್ ಗೌಡ,    ಬಿ.ವಿ ಗಿರೀಶ್, ಸಿದ್ಧಲಿಂಗಯ್ಯ, ಬಿ ಗಂಗಾಧರ, ಲಕ್ಷ್ಮೀಕಾಂತ್, ಎನ್ ಮಂಜುನಾಥ್, ಸಂದೇಶ್ ಗೌಡ, ಜೆ ಎಚ್ ಪಟೇಲ್ ರವರ ಅಭಿಮಾನಿಗಳ ಬಳಗ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.