Monday, March 17, 2025

ಕ್ಷೇತ್ರದಾದ್ಯಂತ ಪುನೀತ್ ರಾಜ್‌ಕುಮಾರ್ ೫೦ನೇ ಹುಟ್ಟುಹಬ್ಬ ಆಚರಣೆ : ಅಭಿಮಾನಿಗಳಲ್ಲಿ ಸಂಭ್ರಮ

ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯ ನಿರ್ಮಲಾ ಆಸ್ಪತ್ರೆ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ ಅದ್ದೂರಿಯಾಗಿ ಆಚರಿಸಲಾಯಿತು.
    ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಸೋಮವಾರ ಕ್ಷೇತ್ರದ ವಿವಿಧೆಡೆ ಆಚರಿಸಲಾಯಿತು. 
    ವಿವಿಧ ಸಂಘಟನೆಗಳಿಂದ ಹಾಗು ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಹಲವು ವಿಶೇಷತೆಗಳೊಂದಿಗೆ ಆಚರಿಸುವ ಮೂಲಕ ಗಮನ ಸೆಳೆಯಲಾಯಿತು. ಅಪ್ಪು ಅಭಿಮಾನಿಗಳ ಬಳಗದಿಂದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಜರುಗಿದ ಹುಟ್ಟುಹಬ್ಬದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಶಿವಕುಮಾರ್, ಯುವ ಮುಖಂಡರಾದ ಮುರುಗೇಶ್, ಟಿ.ಡಿ ಶಶಿಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    ಕನಕ ಆಟೋ ನಿಲ್ದಾಣ : 
    ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ತಾಲೂಕು ಕಛೇರಿ ರಸ್ತೆಯ ನಿರ್ಮಲಾ ಆಸ್ಪತ್ರೆ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ ಅದ್ದೂರಿಯಾಗಿ ಆಚರಿಸಲಾಯಿತು.
    ಪುನೀತ್ ರಾಜ್‌ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ನೂರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭೆ ಸದಸ್ಯ ಕೋಟೇಶ್ವರರಾವ್, ಮುಖಂಡರಾದ ದಶರಥ್ ಗಿರಿ, ಬಸವಂತಪ್ಪ, ಕೇಸರಿಪಡೆ ಅಧ್ಯಕ್ಷ ಗಿರೀಶ್, ಕುಮಾರ್ ಮಾಸ್ಟರ್, ತಾ. ಪಂ. ಮಾಜಿ ಸದಸ್ಯ ಶ್ರೀನಿವಾಸ್, ನದೀಮ್ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕುವೆಂಪು ಆಟೋ ನಿಲ್ದಾಣ : 
    ನಗರದ ರಂಗಪ್ಪ ವೃತ್ತದ ಕುವೆಂಪು ಆಟೋ ನಿಲ್ದಾಣದಲ್ಲಿ ಚಾಲಕರು ಹಾಗೂ ಮಾಲೀಕರು ಮತ್ತು ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್‌ರವರ ೫೦ನೇ ಹುಟ್ಟುಹಬ್ಬ ಆಚರಿಸಲಾಯಿತು.
ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಸಮಾಜ ಸೇವೆಯನ್ನು ಸ್ಮರಿಸಲಾಯಿತು. ನೂರಾರು ಮಂದಿಗೆ ಅನ್ನ ಸಂತರ್ಪಣೆ ಏರ್ಪ ಡಿಸಲಾಗಿತ್ತು.
    ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ : 
    ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಚಾಮೇಗೌಡ ಏರಿಯಾದ ಡಾ.ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಪವರ್‌ಸ್ವಾರ್ ಪುನೀತ್ ರಾಜ್‌ಕುಮಾರ್ ೫೦ನೇ ಹುಟ್ಟುಹಬ್ಬ ಆಚರಿಸಲಾಯಿತು.
    ವಿಶೇಷ ಎಂದರೆ ಸಂಘಟನೆವತಿಯಿಂದ ಈಗಾಗಲೇ ಲಕ್ಷಾಂತರ ರು. ವೆಚ್ಚದಲ್ಲಿ ಪುನೀತ್‌ರಾಜ್‌ಕುಮಾರ್ ದೇವಾಲಯ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವ್ಯಾಪಾರಸ್ಥರು, ವರ್ತಕರು, ಆಟೋಚಾಲಕರು, ಮಾಲೀಕರು ಹಾಗು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

"ಬ್ರೀತ್ ಬಲ್ ಹೆಲ್ಮೆಟ್" ಅನ್ವೇಷಕ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿ ದಾಮೋದರ್‌ಸಿಂಗ್‌ಗೆ ಸನ್ಮಾನ

ರಜಪೂತ್ ಸಮುದಾಯ, ಸೀಗೆಬಾಗಿ ಗ್ರಾಮಸ್ಥರಲ್ಲಿ ಸಂಭ್ರಮ 

"ಬ್ರೀತ್ ಬಲ್ ಹೆಲ್ಮೆಟ್ ಪ್ರಾಜೆಕ್ಟ್ ವರದಿಯ, ರಿಪಬ್ಲಿಕ್ ಪ್ಲಾನೆರಿ ಸಮಿಟ್-೨೦೨೫ ಇನ್ಕ್ಲೂಸಿವ್ ನೇಷನ್ ಬಿಲ್ಲಿಂಗ್ ಕ್ಯಾಟಗರಿ"ಯಲ್ಲಿ ಪ್ರಥಮ ಸ್ಥಾನಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಒಳಗಾಗಿ ಪ್ರಶಸ್ತಿ ಸ್ವೀಕರಿಸಿರುವ ಬಳ್ಳಾರಿ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿ ದಾಮೋದರ್‌ಸಿಂಗ್ ಅವರನ್ನು ಭದ್ರಾವತಿ ನಗರದ ಸೀಗೆಬಾಗಿ ರಜಪೂತ್ ಸಂಘ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : "ಬ್ರೀತ್ ಬಲ್ ಹೆಲ್ಮೆಟ್ ಪ್ರಾಜೆಕ್ಟ್ ವರದಿಯ, ರಿಪಬ್ಲಿಕ್ ಪ್ಲಾನೆರಿ ಸಮಿಟ್-೨೦೨೫ ಇನ್ಕ್ಲೂಸಿವ್ ನೇಷನ್ ಬಿಲ್ಲಿಂಗ್ ಕ್ಯಾಟಗರಿ"ಯಲ್ಲಿ ಪ್ರಥಮ ಸ್ಥಾನಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಒಳಗಾಗಿ ಪ್ರಶಸ್ತಿ ಸ್ವೀಕರಿಸಿರುವ ಬಳ್ಳಾರಿ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿ ದಾಮೋದರ್‌ಸಿಂಗ್ ಅವರನ್ನು ನಗರದ ಸೀಗೆಬಾಗಿ ರಜಪೂತ್ ಸಂಘ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ದಾಮೋದರ್‌ಸಿಂಗ್ ಬಳ್ಳಾರಿ ಬಿಐಟಿಎಂ ಕಾಲೇಜಿನಲ್ಲಿ ೮ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು "ಬ್ರೀತ್ ಬಲ್ ಹೆಲ್ಮೆಟ್" ಅನ್ವೇಷಣೆ ಮಾಡಿದ್ದು, ಇದು ಕೇಂದ್ರ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಇಲಾಖೆ ಗುರುತಿಸಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗು ರೇಖಾ ಗುಪ್ತರವರು ದಾಮೋದರ್‌ಸಿಂಗ್‌ಗೆ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ. 
    ಈ ಹಿನ್ನಲೆಯಲ್ಲಿ ನಗರದ ರಜಪೂತ್ ಸಮುದಾಯದವರು, ಬಂಧು-ಬಳಗದವರು, ಹಿತೈಷಿಗಳು ಹಾಗು ಗ್ರಾಮಸ್ಥರು ದಾಮೋದರ್‌ಸಿಂಗ್ ಅವರನ್ನು ಸನ್ಮಾಸಿ ಅಭಿನಂದಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ. ದಾಮೋದರ್‌ಸಿಂಗ್ ತಾಲೂಕಿನ ಸೀಗೆಬಾಗಿ ನಿವಾಸಿ, ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾರ್ವತಿದೇವಿ ಕರಣ್‌ಸಿಂಗ್‌ರವರ ಸಹೋದರರಾಗಿದ್ದಾರೆ.  . 
  ನಿವೃತ್ತ ಪೊಲೀಸ್ ಅಧಿಕಾರಿ ಪುಟ್‌ಸಿಂಗ್, ಪಾರ್ವತಿ ಕರಣ್‌ಸಿಂಗ್,  ರಾಷ್ಟ್ರ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ,  ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜ್, ದೇವರಾಜ್, ಉಪಾಧ್ಯಕ್ಷ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಸತೀಶ್ ಐಯರ್, ಸೋಮಣ್ಣ, ನಾಗರಾಜ್ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. 
    ಹಿರಿಯೂರಿನ ಶ್ರೀ ವೇದವರ್ಧನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಬೆಳಗ್ಗೆ ಪಂಚಾಮೃತ ಅಭಿಷೇಕ, ನಂತರ ಶ್ರೀ ವಾದಿರಾಜರ ರಥೋತ್ಸವ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜರಗಿತು. 
    ಮಧ್ಯಾಹ್ನ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು. ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ನಿರಂಜನಾಚಾರ್ಯ, ಪ್ರಮೋದ್ ಕುಮಾರ್ ಉಡುಪ, ಪವನ್ ಕುಮಾರ್, ವಿದ್ಯಾನಂದ ನಾಯಕ್, ಶುಭ ಗುರುರಾಜ್, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸಚಾರ್, ಸತ್ಯನಾರಾಯಣಚಾರ್, ಶ್ರೀ ಕೃಷ್ಣ ಚಂಡಿ ಬಳಗ ಹಾಗೂ ವಿವಿಧ ಭಜನಾ ಮಂಡಳಿಗಳು ಹಾಗು ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಜನನ-ಮರಣ ನಡುವಿನ ಬದುಕಿನ ಸಾಹಿತ್ಯವೇ ಜಾನಪದ : ಯುಗಧರ್ಮ ರಾಮಣ್ಣ

ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಜನನ-ಮರಣ ನಡುವಿನ ಬದುಕಿನ ಸಾಹಿತ್ಯವೇ ಜಾನಪದವಾಗಿದ್ದು, ಇದು ೬೪ ವಿದ್ಯೆಗಳ ತಾಯಿಯಾಗಿದೆ. ಜಾನಪದ ಕಲೆಗಳಲ್ಲಿ ಅದ್ಭುತ ಶಕ್ತಿ ಅಡಗಿವೆ. ಇಂತಹ ಜಾನಪದ ಕಲೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಹೇಳಿದರು. 
    ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಬದುಕಿನಲ್ಲಿ ಅನುಭವಿಸಿರುವ ನೋವು-ನಲಿವು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಬದುಕು-ಬವಣೆ ಒಟ್ಟಾರೆ ಇವುಗಳ ಸಾಹಿತ್ಯವೇ ಜಾನಪದವಾಗಿದ್ದು, ಹುಟ್ಟಿನಿಂದ ಸಾವಿನವರೆಗೂ ಜೊತೆ ಜೊತೆಗೆ ಬಂದಿದೆ. ನಮಗೆ ಸಾವಿದೆ, ಆದರೆ ಜಾನಪದಕ್ಕೆ ಸಾವಿಲ್ಲ. ಜಾನಪದ ಈ ಭೂಮಿ ಮೇಲೆ ಎಂದಿಗೂ ಶಾಶ್ವತವಾಗಿ ಉಳಿಯಲಿದೆ. ಇಂತಹ ಜಾನಪದ ಕಲೆUಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. 
    ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಇಂದಿನವರಿಗೆ ಜಾನಪದ ಕುರಿತು ಅರಿವಿಲ್ಲ. ನಮ್ಮ ಪೂರ್ವಿಕರಿಂದ ಬಂದಿರುವ ಜಾನಪದ ಕಲೆಗಳು ಬದುಕಿನ ಅನುಭವದ ಸಾರಗಳಾಗಿವೆ. ನಾವುಗಳು ನಮ್ಮ ಮಕ್ಕಳಿಗೆ ಜಾನಪದ ಕಲೆಗಳನ್ನು ತಿಳಿಸಿಕೊಡಬೇಕಾಗಿದೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಗಳನ್ನು ಕಲಿಸಿ ಕೊಡಬೇಕಾದ ಅಗತ್ಯವಿದೆ ಎಂದರು. 
    ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ ಆರಂಭವಾದಾಗ ಜಾನಪದ ಕಾರ್ಯಕ್ರಮಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದವು. ೨೦೧೫ರಲ್ಲಿ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕಗೊಳಿಸಿದ ನಂತರ ಜಿಲ್ಲಾದ್ಯಂತ ಜಾನಪದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಎಲ್ಲರಿಂದಲೂ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದ್ದು, ಜಾನಪದ ಕಲೆಗಳ ಮಹತ್ವ ಇಂದಿನವರೆಗೆ ತಿಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. 
    ಸಮ್ಮೇಳನಾಧ್ಯಕ್ಷ ಲಕ್ಷ್ಮಣ್‌ರಾವ್ ಬೋರಾತ್ ಮಾತನಾಡಿ, ಜಾನಪದ ಕಲಾವಿದರನ್ನು ಯಾರು ಸಹ ಗುರುತಿಸುವುದಿಲ್ಲ. ಎಲೆ-ಮರೆ ಕಾಯಿಗಳಂತೆ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಜಾನಪದ ಕಲಾವಿದರಿದ್ದಾರೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕಾಗಿದೆ. ಈ ಹಿಂದೆ ನನ್ನನ್ನು ಯಾರು ಸಹ ಗುರುತಿಸಿರಲಿಲ್ಲ. ಆದರೆ ಡಿ. ಮಂಜುನಾಥ್‌ರವರು ನನ್ನನ್ನು ಗುರುತಿಸಿ ನನ್ನನ್ನು ಪ್ರೋತ್ಸಾಹಿಸಿದರು. ಈ ಹಿನ್ನಲೆಯಲ್ಲಿ ನಾನು ಇಂದು ಈ ವೇದಿಕೆಯಲ್ಲಿ ಬರಲು ಸಾಧ್ಯವಾಯಿತು. ಮೊದಲ ಜಾನಪದ ಸಮ್ಮೇಳನ ಪರಿಷತ್ ತಾಲೂಕು ಶಾಖೆ ಅಧ್ಯಕ್ಷರಾದ ಎಂ.ಆರ್ ರೇವಣಪ್ಪನವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಹಿನ್ನಲೆಯಲ್ಲಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ(ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
    ಗೊಂದಿ ಶ್ರೀ ಪಾಂಡುರಂಗ ಸಾಧಕಾಶ್ರಮದ ಮಾತಾ ಮುಕ್ತಾನಂದಮಯಿ ದಿವ್ಯ ಸಾನಿಧ್ಯವಹಿಸಿದ್ದು, ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಹಿರಿಯೂರು ಹೋಬಳಿ ಘಟಕ ಅಧ್ಯಕ್ಷ ಜಯರಾಂ ಗೊಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಬಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ. ಸುರೇಶ್, ಎಸ್. ರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಹಾಗು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಎಮ್ಮಹಟ್ಟಿ ಅನಿಲ್ ಕುಮಾರ್ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ, ತಾರೀಕಟ್ಟೆ ಶೇಖರ್ ಮತ್ತು ಸಂಗಡಿಗರು ಹಾಗು ಜೆ. ಪ್ರಶಾಂತ್ ಮತ್ತು ಸಂಗಡಿಗರಿಂದ ತಮಟೆ ಕುಣಿತ, ಹೊಸಮನೆ ಲಕ್ಷ್ಮಣ್ ರಾವ್ ಮತ್ತು ಕುಟುಂಬ ಹಾಗು ಕೇಶವ ಮತ್ತು ಸಂಗಡಿಗರಿಂದ ಚೌಡಿಕೆ ಗೊಂದಲಿಗರ ಪದ, ಹಿರಿಯೂರು ನಗರಾಜ್ ಮತ್ತು ಸಂಗಡಿಗರಿಂದ ವೀರಗಾಸೆ, ದಿವಾಕರ್ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ತಿಮ್ಲಾಪುರ ಮಹಾದೇವಿ ಮತ್ತು ಸಂಗಡಿಗರು, ರಮಾ ಮತ್ತು ಸಂಗಡಿಗರು ಹಾಗು ಓಂಕಾರ ಯೋಗ ತಂಡದಿಂದ ಕೋಲಾಟ ನಡೆಯಲಿವೆ.  ಅಲ್ಲದೆ ಪುಟಾಣಿ ಮಕ್ಕಳಿಂದ ಕಂಸಾಳೆ ನೃತ್ಯ, ಲಂಬಾಣಿ ನೃತ್ಯ, ಸುಗ್ಗಿ ಕುಣಿತ ಮತ್ತು ಜಾನಪದ ನೃತ್ಯ ಜರುಗಿದವು. 
    ಇದಕ್ಕೂ ಮೊದಲು ಗ್ರಾಮದಲ್ಲಿ ಜಾನಪದ ಮೆರವಣಿಗೆ ನಡೆಸಲಾಯಿತು. ಪರಿಷತ್ ತಾಲೂಕು ಶಾಖೆಯ ಸಂಘಟನಾ ಕಾರ್ಯದರ್ಶಿ ಬಿ.ಎಚ್ ಪ್ರಶಾಂತ್, ಕಾರ್ಯದರ್ಶಿ ದಿವಾಕರ್, ಕೋಶಾಧ್ಯಕ್ಷೆ ಲತಾ ಪಾಂಡುರಂಗೇಗೌಡ, ಸಲಹಾ ಸಮಿತಿ ಸದಸ್ಯರಾದ ಭಾಗ್ಯ ಮಂಜುನಾಥ್, ಚಂದ್ರಶೇಖರ್ ಚಕ್ರಸಾಲಿ, ಶಿವರಾಜ್, ಸಂಚಾಲಕ ಸಂಪತ್‌ಕುಮಾರ್ ಸೇರಿದಂತೆ ತಾಲೂಕು ನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್ ಸ್ವಾಗತಿಸಿ, ಶಿಕ್ಷಕ ದದಯಾನಂದ ಸಾಗರ್ ನಿರೂಪಿಸಿದರು.
 

ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ(ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ೧.೫ ಲಕ್ಷ ರು. ಆರ್ಥಿಕ ನೆರವು

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಕ್ಷೇತ್ರದಾದ್ಯಂತ ಮುಂದುವರೆಯುತ್ತಿದ್ದು, ತಾಲೂಕಿನ ಯೋಜನೆ-೧ರ ವತಿಯಿಂದ ಅರಳಿಕೊಪ್ಪ ವಲಯದ ಗೊಂದಿ ಗ್ರಾಮದಲ್ಲಿ ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ೧.೫೦ ಲಕ್ಷ ರು. ಆರ್ಥಿಕ ನೆರವು ನೀಡಲಾಯಿತು. 
    ಭದ್ರಾವತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಕ್ಷೇತ್ರದಾದ್ಯಂತ ಮುಂದುವರೆಯುತ್ತಿದ್ದು, ತಾಲೂಕಿನ ಯೋಜನೆ-೧ರ ವತಿಯಿಂದ ಅರಳಿಕೊಪ್ಪ ವಲಯದ ಗೊಂದಿ ಗ್ರಾಮದಲ್ಲಿ ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ೧.೫೦ ಲಕ್ಷ ರು. ಆರ್ಥಿಕ ನೆರವು ನೀಡಲಾಯಿತು. 
    ಯೋಜನೆ-೧ರ ಯೋಜನಾಧಿಕಾರಿ ಪ್ರಕಾಶ್‌ನಾಯ್ಕ ದೇವಸ್ಥಾನ ಆಡಳಿತ ಮಂಡಳಿಗೆ ೧.೫೦ ಲಕ್ಷ ರು. ಮೌಲ್ಯದ ಡಿ.ಡಿ ಚೆಕ್ ವಿತರಿಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಜಯರಾಂ ಗೊಂದಿ, ದೇವಸ್ಥಾನ ಸಮಿತಿ ಪ್ರಮುಖರಾದ ಅಶೋಕ್, ಕೃಷ್ಣಮೂರ್ತಿ, ಮಂಜು, ರಂಗನಾಥ್, ಚಂದ್ರನಾಯ್ಕ ಮತ್ತು ಅರಳಿಕೊಪ್ಪ ವಲಯದ ಮೇಲ್ವಿಚಾರಕ ಮೋಹನ್‌ಕುಮಾರ್, ಸೇವಾಪ್ರತಿನಿಧಿ ಶೃತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪುನೀತ್ ಸೇವಾ ಕಾರ್ಯ ಮೈಗೂಡಿಸಿಕೊಂಡಿರುವ ಅಭಿಮಾನಿ

ರಾಜುನಾಯ್ಕ ಕನ್ನಡಿಗ ವಯೋವೃದ್ಧರು, ನಿರಾಶ್ರಿತರಿಗೆ ಆಸರೆ 

 ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ. 
    * ಅನಂತಕುಮಾರ್ 
    ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಸೋಮವಾರ ಎಲ್ಲೆಡೆ ಆಚರಿಸಲಾಗುತ್ತಿದ್ದು, ಅವರ ಅಭಿಮಾನಿ ಬಳಗದಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ. 
    ಪುನೀತ್‌ರಾಜ್‌ಕುಮಾರ್ ಕೇವಲ ಸಿನಿಮಾ ನಟರಾಗಿ ಬದುಕಿರಲಿಲ್ಲ. ಹಲವಾರು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರೊಬ್ಬ ಸಮಾಜ ಸೇವಕರಾಗಿದ್ದರು ಎಂಬುದು ವಿಶೇಷವಾಗಿದೆ. ವಿಶೇಷ ಎಂದರೆ ಅವರ ನಿಧನ ನಂತರ ಅವರ ಸೇವಾಕಾರ್ಯಗಳು ಬೆಳಕಿಗೆ ಬಂದವು. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಎಲ್ಲಡೆ ಇದ್ದಾರೆ. ಆದರೆ ಅವರ ಅಭಿಮಾನಿಯಾಗಿ ಅವರಂತೆ ಸೇವಾಕಾರ್ಯಗಳನ್ನು ಮೈಗೂಡಿಸಿಕೊಂಡವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದ ಸಂಸ್ಥಾಪಕ ರಾಜುನಾಯ್ಕ ಕನ್ನಡಿಗ ಸಹ ಒಬ್ಬರಾಗಿದ್ದಾರೆ. 
    ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಕತ್ತಲಗೆರೆ ಕವಳಿ ತಾಂಡ ಎಂಬ ಚಿಕ್ಕ ಗ್ರಾಮದಲ್ಲಿ ಒಬ್ಬ ಬಡ ರೈತನ ಮಗನಾಗಿ ಜನಿಸಿರುವ ರಾಜುನಾಯ್ಕರವರು ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಸುಮಾರು ೯ ವರ್ಷಗಳ ಹಿಂದೆ  ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ಆರಂಭಿಸುವ ಮೂಲಕ ವಯೋವೃದ್ಧರು, ನಿರಾಶ್ರಿತರಿಗೆ ಆಸರೆಯಾಗಿದ್ದಾರೆ. 


ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದಲ್ಲಿರುವ ವಯೋವೃದ್ಧರು, ನಿರಾಶ್ರಿತರು. 
      ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಆರಂಭಿಸಲು ರಾಜುರವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಶಿವಮೊಗ್ಗ ಸೋಮಿನಕೊಪ್ಪದ ಆದರ್ಶನಗರದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ನಿರ್ಮಿತಿ ಕೇಂದ್ರದಿಂದ ಕಟ್ಟಿರುವ ಪಾಳು ಬಿದ್ದಿರುವ ಒಂದು ಕಟ್ಟಡ ಇವರಿಗೆ ಲಭಿಸಿತ್ತು. ಇದನ್ನು ಸ್ವಚ್ಛಗೊಳಿಸಿ ೨೦೧೬ರಲ್ಲಿ ಆಶ್ರಮ ಪ್ರಾರಂಭಿಸಿದರು. ಆರಂಭದಲ್ಲಿ ಇವರ ಕಾರ್ಯಕ್ಕೆ ಮತ್ತೊಬ್ಬ ಸಮಾಜ ಸೇವಕ ಕೈಜೋಡಿಸಿದ್ದರು. ೨೦೧೮ರಿಂದ ಇವರೊಬ್ಬರೇ ಆಶ್ರಮ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ನಿರ್ಮಿತಿ ಕೇಂದ್ರದ ವೈಕ್ತಿಯೋರ್ವ ಏಕಾಏಕಿ ಇವರನ್ನು ಹೊರಹಾಕಿದ್ದು, ರಸ್ತೆಯಲ್ಲಿ ಬಿದ್ದಿರುವ ನಿರಾಶ್ರಿತರನ್ನು ರಕ್ಷಿಸಿ ಸಲಹಲು ರಾಜುರವರು ತಮ್ಮ  ಆಸ್ತಿಯನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಯಿತು. ಆದರೂ ಧೈರ್ಯ ಕಳೆದುಕೊಳ್ಳದೆ ತಮ್ಮ ಸೇವಾ ಕಾರ್ಯ ಮುಂದುವರೆಸಿದ್ದಾರೆ. 
    ಶಿವಮೊಗ್ಗದಿಂದ ಸ್ಥಳಾಂತರಗೊಂಡು ನಗರದ ಬೊಮ್ಮನಕಟ್ಟೆ ತಿಮ್ಲಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಸಹಾಯದೊಂದಿಗೆ ಆಶ್ರಮ ಮುಂದುವರೆಸಿದ್ದಾರೆ. ಯಾವುದೇ ಆದಾಯ ಮೂಲ ಹೊಂದಿರುದ ರಾಜುರವರು ತಮ್ಮ ಸ್ವಂತ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ.  ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳದೆ ಸ್ಥಳೀಯರು, ದಾನಿಗಳು ಹಾಗು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಶ್ರಮ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಕೆಲವು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜಸೇವಕರಂತೆ ಮುಖವಾಡ ಹಾಕಿಕೊಂಡವರು ಇದ್ದಾರೆ. ಆದರೆ ರಾಜು ಅವರಂತೆ ಎಲೆ-ಮರೆ ಕಾಯಿಯಾಗಿ ಸೇವೆ ಸಲ್ಲಿಸುವವರು ವಿರಳ. ಇಂತಹವರು ಸಮಾಜಕ್ಕೆ ಮಾದರಿ ಎಂದರೆ ತಪ್ಪಾಗಲಾರದು. 
 

ನಾನು ಪುನೀತ್‌ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಅವರ ಹೆಸರನ್ನು ನಾನು ಎಲ್ಲೂ ದುರ್ಬಳಕೆ ಮಾಡಿಕೊಂಡಿಲ್ಲ. ವಯೋವೃದ್ದರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ನನಗೆ ತೃಪ್ತಿ ನೀಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಭೇಟಿಯಾಗಿಲ್ಲ. ಅವರು ನಿಧನ ಹೊಂದುವ ಒಂದು ವಾರದ ಹಿಂದೆ ನಾನು ಅವರ ಸಹಾಯಕರನ್ನು ಸಂಪರ್ಕಿಸಿದಾಗ ನನಗೆ ಪುನೀತ್ ರಾಜ್‌ಕುಮಾರ್ ಭೇಟಿಯಾಗಲು ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ. 
                                                                                    - ರಾಜುನಾಯ್ಕ ಕನ್ನಡಿಗ, ಸಂಸ್ಥಾಪಕರು, 
ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ
-------------------------------------------------------------------------------------------- 

ರಾಜುನಾಯ್ಕ ಅವರು ಒಬ್ಬ ಮಾನವೀಯತೆ ಉಳ್ಳ ವ್ಯಕ್ತಿಯಾಗಿದ್ದು, ಯಾವುದೇ ಫಲಾಫೇಕ್ಷೆ ಇಲ್ಲದೆ ವಯೋವೃದ್ಧರು, ನಿರಾಶ್ರಿತರ ಸೇವೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಆಶ್ರಮದಲ್ಲಿ ಸುಮಾರು ೪೫ ಜನರಿದ್ದು, ಅವರ ಜೊತೆಯಲ್ಲಿಯೇ ರಾಜು ದಂಪತಿ ಸಹ ವಾಸಿಸುತ್ತಿದ್ದರು. ಇವರ ಈ ಸೇವಾ ಕಾರ್ಯಕ್ಕೆ ನಗರದ ಜನಪ್ರತಿನಿಧಿಗಳು, ದಾನಿಗಳು ನೆರವಾಗಿದ್ದಾರೆ. 
 - ಅಪೇಕ್ಷ ಮಂಜುನಾಥ್, ಕಲಾವಿದರು,  ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಭದ್ರಾವತಿ.