Monday, October 11, 2021

ಯೋಗ ಭಂಗಿಯಲ್ಲಿ ಡಿ. ನಾಗರಾಜ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್

ಭದ್ರಾವತಿ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
    ಭದ್ರಾವತಿ, ಅ. ೧೧: ಆನ್‌ಲೈನ್  ಮೂಲಕ ಬೆಂಗಳೂರಿನ ನಾಗರಭಾವಿಯ ಸೆಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ನಡೆದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಹಾಗು ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್-೨೦೨೧ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಪ್ರಾಸಾರಿತ ಪಾದೋತ್ತಾಸನದ ಯೋಗ ಭಂಗಿಯಲ್ಲಿ ೫ ನಿಮಿಷ ಮಾಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
    ಯೋಗ ಕ್ಷೇತ್ರದಲ್ಲಿನ ನಾಗರಾಜ್ ಅವರ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
    ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಡೈರೆಕ್ಟರ್ ಡಾ. ಸುಬ್ರಮಣಿ, ಸಂಯೋಜಕ ಡಾ. ಕಮಲ್‌ಕಣ್ಣನ್, ಉಪಾಧ್ಯಕ್ಷ ಡಾ. ಮುರುಗನ್, ಯೋಗ ಮಹಾದೇವಾ ಹಾಗು ಡಾ. ಶಿವಪ್ರಕಾಶ್ ಮತ್ತು ಸೋಪಿಯಾ ಕಾನ್ವೆಂಟ್ ಹೈಸ್ಕೂಲ್ ಪ್ರಾಂಶುಪಾಲೆ ಡಾ. ಕಲ್ಪನಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು ೪೭೭ ಯೋಗಪಟುಗಳು ಭಾಗವಹಿಸಿದ್ದರು.

ಇತಿಹಾಸದ ಗರ್ಭ ಸೇರಿದ ಮೈಸೂರು ಕಾಗದ ಕಾರ್ಖಾನೆ : ಬೀಗ ಮುದ್ರೆಗೆ ಆದೇಶ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
    ಭದ್ರಾವತಿ, ಅ. ೧೧: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗಿದೆ. ಪುನಃ ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೂ ನಡೆಸಿಕೊಂಡು ಬಂದ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ.
    ೧೦ ಜೂನ್ ೨೦೧೯ರಂದು ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಅಂತಿಮ ಆದೇಶವನ್ನು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ೭ ಅಕ್ಟೋಬರ್ ೨೦೨೧ರಂದು ಹೊರಡಿಸಿದ್ದಾರೆ.
    ಕಾರ್ಖಾನೆಯ ಆಡಳಿತ ಮಂಡಳಿ  ಹಾಗು ಎದುರುದಾರರಾದ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಇವುಗಳು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಉಚ್ಛನ್ಯಾಯಾಲಯದ ತೀರ್ಪಿನ ಆದೇಶದಂತೆ ಸುಧೀರ್ಘವಾಗಿ ವಿಚಾರಣೆ ನಡೆಸಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅಂತಿಮ ಆದೇಶ ಹೊರಡಿಸಿದ್ದಾರೆ.
    ಸುಮಾರು ೧೩ ಪುಟಗಳನ್ನು ಒಳಗೊಂಡಿರುವ ಆದೇಶ ಪ್ರತಿಯಲ್ಲಿ ಆಡಳಿತ ಮಂಡಳಿ ಕಾರ್ಖಾನೆಯನ್ನು ಮುಚ್ಚಲು ನೀಡಿರುವ ಸಕಾರಣಗಳನ್ನು ಹಾಗು ಇದಕ್ಕೆ ಪ್ರತಿಯಾಗಿ ಎರಡು ಕಾರ್ಮಿಕ ಸಂಘಟನೆಗಳ ಆಕ್ಷೇಪಣೆಗಳನ್ನು ಸ್ವವಿವರವಾಗಿ ತಿಳಿಸಲಾಗಿದೆ.
ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರವಹಿಸಿದ್ದ, ತನ್ನದೇ ಆದ ಬ್ರಾಂಡ್‌ನೊಂದಿಗೆ ದೇಶೀಯ ಹಾಗು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಬೃಹತ್ ಕಾರ್ಖಾನೆಯೊಂದು ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗುತ್ತಿರುವುದು ದುರಂತದ ಸಂಗತಿಯಾಗಿದೆ.
    ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯನ್ನು ಕೊನೆಗೂ ಉಳಿಸಿಕೊಳ್ಳಲಾಗದಿರುವುದು ಕ್ಷೇತ್ರದ ಕಾರ್ಮಿಕರು, ರೈತರು, ವ್ಯಾಪಾರಸ್ಥರು ಸೇರಿದಂತೆ ಸಮಸ್ತ ನಾಗರೀಕರಲ್ಲಿ ನೋವುಂಟು ಮಾಡಿದೆ.

ಅಂಜುಮನ್ ಸಂಸ್ಥೆ ಹೆಸರು ದುರ್ಬಳಕೆ, ಕಾನೂನು ಬಾಹಿರವಾಗಿ ಅಧ್ಯಕ್ಷರ ಘೋಷಣೆ

ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ


ಭದ್ರಾವತಿ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೋಂದಾಯಿತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಹೊಂದಿರುವ ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆಗೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವುದು ಕಾನೂನು ಬಾಹಿರ ಎಂದು ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
    ಭದ್ರಾವತಿ, ಅ. ೧೧: ನಗರದ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೋಂದಾಯಿತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಹೊಂದಿರುವ ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆಗೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವುದು ಕಾನೂನು ಬಾಹಿರ ಎಂದು ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾನೂನು ಪ್ರಕಾರ ನೋಂದಾಯಿಸಲ್ಪಟ್ಟ ಸಂಸ್ಥೆಯ ಬೈಲಾ ಪ್ರಕಾರ ಅಧ್ಯಕ್ಷರ ಅವಧಿ ೪ ವರ್ಷಗಳಾಗಿವೆ. ನಾನು ಇನ್ನೂ ಒಂದು ವರ್ಷ, ೩ ತಿಂಗಳವರೆಗೆ ಮುಂದುವರೆಯುವ ಅಧಿಕಾರವಿದೆ. ಒಂದು ವೇಳೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲಿ ಮಾತ್ರ ಹೊಸದಾಗಿ ಕಾನೂನು ರೀತಿಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಅವಕಾಶವಿದೆ. ಅಲ್ಲದೆ   ಒಂದು ವೇಳೆ ನನ್ನ ಮೇಲೆ ಗುರುತರವಾದ ಆರೋಪಗಳಿದ್ದಲ್ಲಿ ನೋಟಿಸ್ ನೀಡುವ ಮೂಲಕ ಪ್ರಕ್ರಿಯೆ ಆರಂಭಿಸಿ ಆರೋಪ ಸಾಬೀತಾದಲ್ಲಿ ನನ್ನು ಅಧಿಕಾರದಿಂದ ತೆಗೆದು ಹಾಕಿ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಬಹುದಾಗಿದೆ ಎಂದರು.
    ನೋಂದಾಯಿತ ಸಂಸ್ಥೆಯ ಯಾವುದೇ ನಿಯಮಗಳನ್ನು ಪಾಲಿಸದೆ ಕೆಲ ಸ್ವಯಂ ಘೋಷಿತ ಮುಖಂಡರು ಮುರ್ತುಜಾಖಾನ್ ಎಂಬುವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿಕೊಂಡಿದ್ದಾರೆ. ಇದು ಕಾನೂನು ಬಾಹಿರ ಘೋಷಣೆಯಾಗಿದ್ದು, ಅಲ್ಲದೆ ಈ ಸಂಬಂಧ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಗರದ ಕೆಲವೆಡೆ ನೂತನ ಅಧ್ಯಕ್ಷರಿಗೆ ಶುಭ ಕೋರಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಸುತ್ತೇನೆ ಎಂದರು.
    ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ತುಂಬಾ ಹಳೇಯದಾದ ಈ ಸಂಸ್ಥೆಯನ್ನು ನನ್ನ ಅವಧಿಯಲ್ಲಿ ನೋಂದಾಯಿಸುವ ಮೂಲಕ ಕಾನೂನು ಮಾನ್ಯತೆಯನ್ನು ಪಡೆದುಕೊಂಡಿದ್ದೇನೆ. ಈ ಸಂಸ್ಥೆಗೆ ಕಾನೂನು ರೀತಿಯಲ್ಲಿ ಚುನಾವಣೆ ನಡೆಸಬೇಕಾಗಿದೆ. ಬೇರೆ ಯಾವುದೇ ರೀತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಈ ಸಂಸ್ಥೆ ಹೆಸರಿನಲ್ಲಿ ಯಾರೇ ಅಧ್ಯಕ್ಷರೆಂದು ಘೋಷಿಸಿಕೊಂಡರು ಸಹ ಅಪರಾಧವಾಗುತ್ತದೆ. ಅಲ್ಲದೆ ಬೈಲಾ ಪ್ರಕಾರ ಸಂಸ್ಥೆಗೆ ಅಧ್ಯಕ್ಷರಾಗಲು ಇದರ ವ್ಯಾಪ್ತಿಯಲ್ಲಿರುವ ಯಾವುದಾದರೊಂದು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯಾಗಿರಬೇಕೆಂಬ ನಿಯಮವಿದೆ ಎಂದರು.  
    ನಾನು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಸಂಸ್ಥೆಯಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡು ಅವ್ಯವಹಾರಗಳಿಗೆ ಕಡಿವಾಣ ಹಾಕಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಬಗ್ಗುವ ವ್ಯಕ್ತಿ ನಾನಲ್ಲ. ಪ್ರಸ್ತುತ ಬೆಳವಣಿಗೆ ಬಗ್ಗೆ ವಕ್ಫ್ ಮಂಡಳಿಗೆ ಹಾಗು ನೋಂದಾಣಿ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
    ಇಲಿಯಾಜ್ ಅಹಮದ್, ಹಬೀಬ್‌ಖಾನ್, ಅಲ್ತಾಫ್ ಅಹಮದ್, ಖೈಸರ್ ಷರೀಫ್, ತಬ್ರೇಜ್ ಖಾನ್, ಜಾಫರ್ ವಸೀಂ, ರಿಯಾಜ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಡಜ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ

ಕುಮಾರ್   
ಭದ್ರಾವತಿ, ಅ.೧೧: ಕಳೆದ ಕೆಲವು ದಿನಗಳ ಹಿಂದೆ ಕಡಜದ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. 
ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಕೃಷಿ ಕೂಲಿ ಕಾರ್ಮಿಕ ಕುಮಾರ್(೩೮) ಮೃತಪಟ್ಟಿದ್ದು, ಇವರು ಕೆಂಚಮ್ಮನಹಳ್ಳಿಯ ರಂಗಪ್ಪ ಎನ್ನುವ ತೆಂಗಿನ ತೋಟದಲ್ಲಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಮೊದಲು ನಗರದ ದುರ್ಗಾ ನರ್ಸಿಂಗ್ ಹೋಂಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗಿನ ಜಾವ ಮೃತಪಟ್ಟಿದ್ದಾರೆ. 
ಮೃತ ಕುಮಾರ್ ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
        ಅಕಸ್ಮಿಕ ಸಾವು ಪರಿಹಾರಕ್ಕೆ ವರದಿ ಸಲ್ಲಿಕೆ :
    ಕಡಜ ದಾಳಿಯಿಂದ ಈ ಹಿಂದೆ ಮೃತಪಟ್ಟಿರುವ ಇಬ್ಬರು ವ್ಯಕ್ತಿಗಳು ಸೇರಿದಂತೆ ಆಕಸ್ಮಿಕವಾಗಿ ಮೃತಪಟ್ಟಿರುವ ಒಟ್ಟು ೫ ಮಂದಿಗೆ ಪರಿಹಾರ ನೀಡುವ ಸಂಬಂಧ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂದು ತಹಸೀಲ್ದಾರ್ ಪ್ರದೀಪ್ ಪತ್ರಿಕೆಗೆ ತಿಳಿಸಿದ್ದಾರೆ.