Sunday, February 9, 2025

ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಯ ಸೋಲು : ಜಿ. ಧರ್ಮಪ್ರಸಾದ್

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು : ವಿಜಯೋತ್ಸವ 

ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. 
    ಭದ್ರಾವತಿ : ಲಿಕ್ಕರ್ ವ್ಯವಹಾರದ ಕೋಟ್ಯಾಂತರ ರು. ವಂಚನೆ ಆರೋಪದಲ್ಲಿ ಜೈಲು ಸೇರಿ ಜೈಲಿನಿಂದಲೇ ಆಡಳಿತ ಮಾಡುವುದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಯ ಸೋಲಾಗಿದೆ. ದೆಹಲಿಯಲ್ಲೂ ಮೋದಿಯವರ ಆಡಳಿತಕ್ಕೆ ಜನಮನ್ನಣೆ ಲಭಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು. 
    ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆ ನೇತೃತ್ವ ವಹಿಸಿ ಅವರು ಮಾತನಾಡಿದರು.
    ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಿಸಲಿರುವ ದೆಹಲಿ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಪಕ್ಷಕ್ಕೆ  ಜನಮನ್ನಣೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ೪೮ ಸ್ಥಾನಗಳನ್ನು ಗೆದ್ದು ೨೭ ವರ್ಷಗಳ ಬಳಿಕ ದೇಶದ ಕೇಂದ್ರ ಭಾಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತಂದಿದೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಪಕ್ಷದ ವಶವಾಗಿದೆ. ಇದು ಭಾರತ ವಿಶ್ವಗುರುವಾಗುವ ಶುಭ ಸೂಚನೆ. ಇಡೀ ಜಗತ್ತು ನರೇಂದ್ರ ಮೋದಿಜಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ ಎಂದರು. 
     ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಮುಖಂಡರಾದ ಎಚ್. ತೀರ್ಥಯ್ಯ, ಎಂ. ಮಂಜುನಾಥ್, ಜೆಡಿಎಸ್ ಪಕ್ಷದ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ,  ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಪ್ರಮುಖರಾದ  ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ,  ಕಾ.ರಾ ನಾಗರಾಜ್, ರಂಗಸ್ವಾಮಿ, ರಾಜಶೇಖರ್ ಉಪ್ಪಾರ್, ಧನುಷ್ ಬೋಸ್ಲೆ, ಸರಸ್ವತಿ, ಸತೀಶ್, ನಿರಂಜನ್ ಗೌಡ, ಪ್ರಸನ್ನ ಕುಮಾರ್, ರಘುರಾವ್, ಅನ್ನಪೂರ್ಣ, ಸಾಗರ್, ಮಂಜುಳಾ, ಉಮಾವತಿ, ಲತಾ ಪ್ರಭಾಕರ್, ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಮಾಜದಲ್ಲಿ ವಿದ್ಯೆ ಜೊತೆಗೆ ಸೇವಾ ಮನೋಭಾವ ಸಹ ಬಹಳ ಮುಖ್ಯ : ಡಾ. ಶರತ್ ಅನಂತಮೂರ್ತಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನ ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಉದ್ಘಾಟಿಸಿದರು. 
    ಭದ್ರಾವತಿ: ಸೇವೆಯನ್ನು ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಡಾ. ಶರತ್ ಅನಂತಮೂರ್ತಿ ಹೇಳಿದರು. 
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಸಮಾಜದಲ್ಲಿ ವಿದ್ಯೆ ಜೊತೆಗೆ ಸೇವಾ ಮನೋಭಾವ ಸಹ ಬಹಳ ಮುಖ್ಯವಾಗಿದೆ. ಇದನ್ನುನಾವೆಲ್ಲರೂ ಅರ್ಥ ಮಾಡಿಕೊಂಡಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದಕಲು ಸಾಧ್ಯ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದರು. 
    ಪ್ರಾಂತೀಯ ಅಧ್ಯಕ್ಷ, ನ್ಯಾಯವಾದಿ ಬಿ.ಎಸ್ ಮಹೇಶ್ ಕುಮಾರ್ ಮಾತನಾಡಿ, ಉಳ್ಳವರು ತಮ್ಮ ಅಲ್ಪ ಪ್ರಮಾಣದ ನೆರವು ಇತರರೊಂದಿಗೆ ಸೇರಿಕೊಂಡು ಹಂಚಿದಾಗ ಅದು ಬೃಹತ್ ಪ್ರಮಾಣದ ಕಾರ್ಯಗಳನ್ನು  ಕೈಗೊಳ್ಳಲು ಸಾಧ್ಯವಾಗಿಸುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ. ಸೇವಾ ಮನೋಭಾವನೆ ಜೊತೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋದಾಗ ಮಾತ್ರ ಏನಾದರೂ ಕಾರ್ಯಗಳನ್ನು ಕೈಗೊಳ್ಳಬಹುದು. ಲಯನ್ಸ್ ಕ್ಲಬ್‌ನಲ್ಲಿ ಪ್ರತಿಯೊಬ್ಬರು ಸಹ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಸಹ ಕೈಗೊಳ್ಳಲು ಅಸಾಧ್ಯವಾಗಿರುವ ಕಾರ್ಯಗಳನ್ನು ಯಶಸ್ವಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು. 
    ಸಮ್ಮೇಳನ ಉದ್ದೇಶ ನಾವು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ತಿಳಿದಾಗ ಅಸಹಾಯಕರು, ಅಶಕ್ತರು ನಮ್ಮಿಂದ ನೆರವನ್ನು ಬಯಸುತ್ತಾರೆ. ಅಲ್ಲದೆ ಲಯನ್ಸ್ ಕ್ಲಬ್ ಒಂದು ರೀತಿ ಸಂವಿಧಾನಾತ್ಮಕ ವ್ಯವಸ್ಥೆಯಂತೆ ತನ್ನದೇ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಇಲ್ಲೂ ಸಹ ರಾಜ್ಯಪಾಲರು, ನಂತರ ಪ್ರಾಂತೀಯ ಅಧ್ಯಕ್ಷರು, ವಲಯ ಅಧ್ಯಕ್ಷರು, ಈ ರೀತಿಯಲ್ಲಿ ಜವಾಬ್ದಾರಿಗಳನ್ನು ನೀಡಿದೆ. ನಮ್ಮ ನಮ್ಮ ಜವಾಬ್ದಾರಿಗಳನ್ನು ಪರಾಮರ್ಶಿಸಿಕೊಳ್ಳುವ ಜೊತೆಗೆ ಪರಸ್ಪರ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವ ಉದ್ದೇಶ ಸಮ್ಮೇಳನ ಹೊಂದಿದೆ ಎಂದರು. 
    ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ ಪುತ್ತುರಾಯ, ೨ನೇ ವಿಡಿಜಿ ರಾಜೀವ್ ಕೊಟಿಯನ್, ವಲಯ ಸಲಹೆಗಾರ, ಪಿಡಿಜಿ ಬಿ. ದಿವಾಕರಶೆಟ್ಟಿ, ಸಮ್ಮೇಳನ ಸಮಿತಿ ಸಂಯೋಜಕ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಹೆಬ್ಬಂಡಿ ನಾಗರಾಜ್, ಖಜಾಂಚಿ ಕೆ.ಎಚ್ ರವಿಕುಮಾರ್, ಪ್ರಾಂತೀಯ ಕಾರ್ಯದರ್ಶಿ ಪರಮೇಶ್ವರಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್, ಖಜಾಂಚಿ ಕೆ.ಜಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅಜಯ್ ನಾರಾಯಣ್ ಮತ್ತು ಎಂ. ರಘುನಾಥ್ ಲಯನ್ಸ್ ಪ್ರಾರ್ಥನೆ ನೆರವೇರಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಪಾಟೀಲ್ ರಾಷ್ಟ್ರ ಧ್ವಜ ಗೌರವ ವಂದನೆ ನೆರವೇರಿಸಿಕೊಟ್ಟರು. ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಡಿ ಪ್ರಭುದೇವ ಸ್ವಾಗತಿಸಿದರು. ಐರೆನ್ ಡಿಸೋಜ ಮತ್ತು ಡಿ ಶಂಕರ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ಪರಮೇಶ್ವರಪ್ಪ ವಂದಿಸಿದರು. 
    ಹಿರಿಯ ಮುಖಂಡ ಬಿ.ಕೆ ಜಗನ್ನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಎನ್‌ಟಿಸಿ ನಾಗೇಶ್, ಪ್ರಮುಖರಾದ ಡಾ. ರವೀಂದ್ರನಾಥ ಕೋಠಿ, ಡಾ. ಜಿ.ಎಂ ನಟರಾಜ್, ಎಚ್.ಬಿ ಸಿದ್ದೇಶ್, ಡಾ. ನವೀನ್ ನಾಗರಾಜ್, ವಿ. ರಾಜು, ಪೂರ್ಣಿಮಾ, ಮಹೇಶ್ ಜಾವಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಲಯನ್ಸ್ ವಲಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.