Friday, May 26, 2023

ಶಾಸಕ ಸಂಗಮೇಶ್ವರ್‌ಗೆ ಕೈ ತಪ್ಪಿದ ಸಚಿವ ಸ್ಥಾನ : ಕ್ಷೇತ್ರದ ಜನತೆಯಲ್ಲಿ ನಿರಾಸೆ

    ಭದ್ರಾವತಿ, ಮೇ. ೨೬ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾದರೂ ಸಹ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಹ ಸಚಿವ ಸ್ಥಾನ ಕೈ ತಪ್ಪಿದ್ದು, ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸರ್ಕಾರ ರಚನೆ ಸಂದರ್ಭದಲ್ಲಿಯೇ ಸಚಿವ ಸ್ಥಾನ ಸಿಗುವ ವಿಶ್ವಾಸ ಹೊಂದಲಾಗಿತ್ತು. ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಚಿವ ಸ್ಥಾನದಿಂದ ವಂಚಿತರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದ ಬಿ.ಕೆ ಸಂಗಮೇಶ್ವರ್ ಇದೀಗ ಬರಿ ಕೈಯಲ್ಲಿ ಹಿಂದಿರುಗುವಂತಾಗಿದೆ.
    ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ  ಸಹ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಕೊನೆ ಹಂತದಲ್ಲಿ  ಇವರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಇದೀಗ ೪ನೇ ಬಾರಿಗೆ ಗೆಲುವು ಸಾಧಿಸಿದ್ದು, ಅಲ್ಲದೆ ಪಕ್ಷದ ವರಿಷ್ಠರು ಈ ಬಾರಿ ಗೆಲುವು ಸಾಧಿಸಿದ್ದಲ್ಲಿ ಸಚಿವರಾಗುವುದು ಖಚಿತ ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಆದರೆ ಇದೀಗ ಸಚಿವ ಸ್ಥಾನದಿಂದ ವಂಚಿತರಾಗಿರುವುದು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸಂಗಮೇಶ್ವರ್‌ಗೆ ಯಾವುದೇ ರಾಜಕೀಯ ಹಿನ್ನಲೆಯೂ ಇಲ್ಲ, ಗುರುಗಳು ಸಹ ಯಾರು ಇಲ್ಲ. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು. ಸ್ವಂತ ಬಲದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಂಡವರು. ತಮ್ಮದೇ ವರ್ಚಸ್ಸನ್ನು ಉಳಿಸಿಕೊಳ್ಳುವ ಜೊತೆಗೆ ಪಕ್ಷ ನಿಷ್ಠೆಯಲ್ಲಿ ಮುಂದುವರೆದವರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಜಿಲ್ಲೆಯಲ್ಲಿಯೇ ಹಿರಿಯರಾಗಿದ್ದು, ೪ ಬಾರಿ ಗೆದ್ದರೂ ಸಹ ಸೂಕ್ತ ಸ್ಥಾನಮಾನ ಸಿಗದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.
    ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣ :
    ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣಗಳಿದ್ದು, ಪ್ರಮುಖರಾಗಿ ಸಂಗಮೇಶ್ವರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾಮಟ್ಟದ ನಾಯಕರಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಸಂಗಮೇಶ್ವರ್ ಪರ ಲಾಭಿ ನಡೆಸಲು ಯಾರು ಇಲ್ಲದಿರುವುದು. ಕ್ಷೇತ್ರದವರೇ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಸಹ ಸಂಗಮೇಶ್ವರ್ ನೇರವಾಗಿ ಹೈಕಮಾಂಡ್ ಸಂಪರ್ಕ ಬೆಳೆಸಿಕೊಳ್ಳದಿರುವುದು. ಹೀಗೆ ಹಲವು ಕಾರಣಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ.

No comments:

Post a Comment