Thursday, August 12, 2021

ಸೆ.೩ರಂದು ವಾರ್ಡ್ ನಂ.೨೯ಕ್ಕೆ ಚುನಾವಣೆ

    ಭದ್ರಾವತಿ, ಆ. ೧೨: ಇಲ್ಲಿನ ನಗರಸಭೆಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನಲೆಯಲ್ಲಿ ರದ್ದು ಮಾಡಲಾಗಿದ್ದ ವಾರ್ಡಿನ ಚುನಾವಣೆ ಸೆ.೩ರಂದು ನಡೆಯಲಿದೆ.
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
    ಇದೀಗ ಪುನಃ ಚುನಾವಣೆ ಘೋಷಿಸಿತ್ತು. ಆ.೧೬ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
     ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

ಶ್ರೀನಿವಾಸ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ೨ ಲಕ್ಷ ರು. ಆರ್ಥಿಕ ನೆರವು

ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಭದ್ರಾವತಿ, ಆ. ೧೨: ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಆಶಯದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳಿಗೆ ಯೋಜನೆವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.
ಗುರುವಾರ ರು.೨ ಲಕ್ಷ ನೆರವಿನ ಚೆಕನ್ನು ದೇವಸ್ಥಾನ ಸಂಕರ್ಷಣ ಧರ್ಮ ಸಂಸ್ಥೆ ಟ್ರಸ್ಟ್‌ಗೆ ಯೋಜನಾಧಿಕಾರಿ ಪ್ರಕಾಶ್ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಸಮ್ಮುಖದದಲ್ಲಿ ವಿತರಿಸಿದರು.
    ವಲಯದ ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಸು ವೇದಮೂರ್ತಿ, ಉಪಾಧ್ಯಕ್ಷ ರಾಘವೇಂದ್ರ, ಸುಬ್ರಮಣ್ಯ, ಎಚ್. ಮಧುಸೂದನ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೩೫ ಲಕ್ಷ ರು. ವೆಚ್ಚದ ಕುರುಹಿನಶೆಟ್ಟಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಆ. ೧೨: ನಗರದ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಸಂಘದ ಅಧ್ಯಕ್ಷ ಎನ್.ಆರ್ ಜಯರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥಶೆಟ್ಟಿ, ಸಹಕಾರ್ಯದರ್ಶಿ ನಿತ್ಯಾನಂದ, ಜಯರಾಜ್, ಎಚ್. ತಿಮ್ಮಪ್ಪ ಸೇರಿದಂತೆ ಸಮಾಜದ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.

Wednesday, August 11, 2021

ಆ.೧೨ ರಿಂದ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ



    ಭದ್ರಾವತಿ, ಅ. ೧೧: ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಸಮಾರಂಭ ಆ.೧೨ ಮತ್ತು ೧೩ರಂದು ಎರಡು ದಿನ ನಡೆಯಲಿದೆ.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.೧೨ರಂದು ಸಂಜೆ ಗಣಪತಿ, ಗಂಗೆ ಪೂಜೆ, ಗೋಪೂಜೆಯೊಂದಿಗೆ ದೇವಾಲಯ ಪ್ರವೇಶ, ಮಂಗಳವಾದ್ಯ ಶುಭ ಮಂಗಳ ಕೆಲಸಗಳೊಂದಿಗೆ ನಾಂದಿ ಪುಣ್ಯಂ ದೇವಾಯ ಸುದ್ದಿ, ವಾಸ್ತು ಪೂಜೆಯೊಂದಿಗೆ ಗಣಹೋಮ ಮತ್ತು ವಾಸ್ತು ಹೋಮ ಜರುಗಲಿವೆ.
    ಆ.೧೩ರಂದು ಬೆಳಿಗ್ಗೆ ೫ ರಿಂದ ಗಂಗಾಪೂಜೆ, ಗಣಪತಿ, ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ದುರ್ಗಾದೇವತಾ, ನಂದಿ, ನವಗ್ರಹ, ಪಂಚಕಲಶ, ಅಶ್ವಧಿಪಾಲಕರು, ರುದ್ರಹೋಮ, ಕುಂಭಾಭಿಷೇಕ, ಅಷ್ಟೋತರ ಮತ್ತು ಮಹಾಮಂಗಳಾರತಿ ಜರುಗಲಿದ್ದು, ೯.೩೦ ರಿಂದ ೧೦.೩೦ರ ವರೆಗೆ ದೇವಾಲಯ ಉದ್ಘಾಟನೆ ಹಾಗು ಧಾರ್ಮಿಕ ಸಮಾರಂಭ ನಡೆಯಲಿದೆ.
    ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಶ್ರೀ ಸಿದ್ದಾರೂಢ ಬಸವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿ ಮುರುಗೇಶ್ ಸ್ವಾಮೀಜಿ ಮತ್ತು ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಲಿದ್ದು, ಶಾರದ ಅಪ್ಪಾಜಿ, ಪೊಲೀಸ್ ಉಮೇಶ್, ಪ್ರಭಾಕರ ಬೀರಯ್ಯ, ಶಿವಗಂಗಯ್ಯ, ಎಸ್. ಕುಮಾರ್, ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮನೋಹರ್, ಕೆ. ಪರಮೇಶ್, ಮೆಡಿಕಲ್ ಆನಂದ್, ತಿಮ್ಮೇಗೌಡ್ರು, ಕೋಟೇಶ್ವರರಾವ್, ಆನಂದ್, ಸತೀಶ್‌ಗೌಡ, ಎ. ಮಾಧು, ಎಚ್. ಮಹಾದೇವ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  

ಭದ್ರಾವತಿಯಲ್ಲಿ ಒಂದೇ ದಿನ ೧೪ ಸೋಂಕು : ಇಬ್ಬರು ಬಲಿ

     ಭದ್ರಾವತಿ, ಆ. ೧೧: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಏರಿಕೆಯಾಗುತ್ತಿದ್ದು, ಒಂದೇ ದಿನ ೧೪ ಸೋಂಕು ಪತ್ತೆಯಾಗುವುದರೊಂದಿಗೆ ಇಬ್ಬರು ಬಲಿಯಾಗಿದ್ದಾರೆ.
     ಮಂಗಳವಾರ ಕೇವಲ ೪ ಸೋಂಕು ಪತ್ತೆಯಾಗಿದ್ದು, ಬುಧವಾರ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ತಲಾ ೭ ರಂತೆ ಒಟ್ಟು ೧೪ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಇದರಿಂದಾಗಿ ಕೊರೋನಾ ೩ನೇ ಅಲೆ ವ್ಯಾಪಿಸಿರುವ ಆತಂಕ ಎದುರಾಗಿದ್ದು, ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.  

ಬೋರಮ್ಮ ಹೊನ್ನಯ್ಯ ನಿಧನ

ಬೋರಮ್ಮ ಹೊನ್ನಯ್ಯ
     ಭದ್ರಾವತಿ, ಆ. ೧೧: ನಗರಸಭೆ ೨೮ನೇ ವಾರ್ಡ್ ನಗರಸಭಾ ಸದಸ್ಯ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್‌ರವರ ತಾಯಿ ಬೋರಮ್ಮ ಹೊನ್ನಯ್ಯ(೭೨) ಬುಧವಾರ ನಿಧನ ಹೊಂದಿದರು.
     ಮೃತರು ಕಾಂತರಾಜ್ ಸೇರಿದಂತೆ ೩ ಗಂಡು ಹಾಗು ೫ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
     ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ನಗರಸಭಾ ಸದಸ್ಯರು ಮತ್ತು ಕುರುಬ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

Tuesday, August 10, 2021

ಅಳಿವಿನಂಚಿನಲ್ಲಿರುವ ಓತಿಕ್ಯಾತ : ಆಕರ್ಷಕ ಚಿತ್ರಗಳು

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಂಡು ಬಂದ ಹಸಿರು ಬಣ್ಣದ ಓತಿಕ್ಯಾತ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿದಿರುವ ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರ.
     ಭದ್ರಾವತಿ, ಆ. ೧೦: ಇತ್ತೀಚಿನ ಕೆಲವು ವರ್ಷಗಳಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳ ಪೈಕಿ ಓತಿಕ್ಯಾತ ಸಹ ಒಂದಾಗಿದೆ. ಇಂತಹ ಅಪರೂಪದ ಜೀವಿಯ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿಯುವ ಮೂಲಕ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆಯ ನೌಕರ ಮಂಜುನಾಥ್ ಗಮನ ಸೆಳೆದಿದ್ದಾರೆ.
     ಬಯಲು ಸೀಮೆಯಲ್ಲಿ ಹೆಚ್ಚಾಗಿ ಕಂಡು ಬರುವ ಸರಿಸೃಪಗಳ ಜಾತಿಗೆ ಸೇರಿದ ಓತಿಕ್ಯಾತ ಕುರಿತು ಇಂದಿನ ಯುವ ಪೀಳಿಗೆಗೆ ಸರಿಯಾದ ಮಾಹಿತಿಯೇ ಇಲ್ಲ. ಇದಕ್ಕೆ ಕಾರಣ ಓತಿಕ್ಯಾತಗಳು ಅಳಿವಿನಂಚಿನಲ್ಲಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಅಪರೂಪವಾಗಿ ಕಂಡು ಬರುವ ಇವುಗಳನ್ನು ವೀಕ್ಷಿಸುವುದೇ ಒಂದು ರೀತಿಯ ವಿಸ್ಮಯವಾಗಿದೆ.
     ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಂಡು ಬಂದ ಹಸಿರು ಬಣ್ಣದ ಓತಿಕ್ಯಾತ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿದಿರುವ ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.