Sunday, June 21, 2020

ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ : ಜಾಗೃತಿ ಮೂಡಿಸಿದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ ಮಾಡಿ ಜಾಗೃತಿ ಮೂಡಿಸಿದರು. 
ಭದ್ರಾವತಿ, ಜೂ. ೨೧: ಪ್ರಸ್ತುತ ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆ ಸಾಧಿಸಿದ್ದರೂ ಸಹ ಗ್ರಹಣ ಕುರಿತು ಈಗಲೂ ಬಹುತೇಕ ಮಂದಿಯಲ್ಲಿ ಮೂಡನಂಬಿಕೆ ದೂರವಾಗಿಲ್ಲ. ಜನರಲ್ಲಿರುವ ಮೂಡನಂಬಿಕೆಯನ್ನು ದೂರಮಾಡಬೇಕೆಂದು ಹಲವಾರು ವರ್ಷಗಳಿಂದ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಗರದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಭಾನುವಾರ ಸಹ ಕಂಕಣ ಸೂರ್ಯ ಗ್ರಹಣದ ಸಮಯದಲ್ಲಿ ಉಪಹಾರ ಸೇವಿಸುವ ಮೂಲಕ ಗಮನ ಸೆಳೆದರು. 
ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ, ಪ್ರತಿ ಬಾರಿ ಗ್ರಹಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಕಾಶ ಕಾಯಗಳ ವೀಕ್ಷಣೆಗೆ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಅವಕಾಶ ಕಲ್ಪಿಸಿಕೊಡುವ ಜೊತೆಗೆ ಗ್ರಹಣ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಿದ್ದರೂಢನಗರದ ಶಂಕರ ಮಠದ ಬಳಿ ಇರುವ ನಿವಾಸದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಕೆಲವರು ಸೌರ ಕನ್ನಡಕ ಬಳಸಿ ಗ್ರಹಣ ವೀಕ್ಷಿಸಿದರು. 
 ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಸಾರ್ವಜನಿಕರಿಗೆ ಭಾನುವಾರ ತಮ್ಮ ನಿವಾಸದಲ್ಲಿ ಕಂಕಣ ಸೂರ್ಯ ಗ್ರಹಣವನ್ನು ಸೌರ ಕನ್ನಡಕ ಬಳಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟರು.  
ಪತ್ರಿಕೆಯೊಂದಿಗೆ ಮಾತನಾಡಿದ ಹರೋನಹಳ್ಳಿ ಸ್ವಾಮಿ, ಸಾರ್ವಜನಿಕರು ಸೂರ್ಯಗ್ರಹಣ, ಚಂದ್ರಗ್ರಹಣಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಗ್ರಹಣ ಎಂಬುದು ಆಕಾಶದಲ್ಲಿ ಪ್ರಕೃತಿ ಸಹಜವಾಗಿ ನಡೆಯುವ ನೆರಳು ಬೆಳಕಿನ ಆಟವಷ್ಟೆ. ಆದರೆ ಅನೇಕ ಟಿ.ವಿ ಮಾಧ್ಯಮಗಳು ಗ್ರಹಣಕ್ಕೆ ಸಂಬಂಧಿಸದ ಆಧಾರರಹಿತ ಮಾಹಿತಿಗಳೊಂದಿಗೆ ಮತ್ತಷ್ಟು ಭಯಭೀತರನ್ನಾಗಿಸುತ್ತಿವೆ. ಸಾರ್ವಜನಿಕರು ಎಚ್ಚರಗೊಂಡು ಮೂಡನಂಬಿಕೆಗಳಿಂದ ಹೊರಬರಬೇಕು. ಗ್ರಹಣ ವೀಕ್ಷಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪ್ರಕೃತಿಯ ಅದ್ಭುತ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಬೇಕೆಂದರು. 
ಯಾವುದೇ ಕಾರಣಕ್ಕೂ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು. ವೈಜ್ಞಾನಿಕವಾಗಿ ರೂಪಿಸಲಾದ ಸೌರ ಕನ್ನಡಕ ಬಳಸಿ ವೀಕ್ಷಿಸಬೇಕು ಅಥವಾ ತೆಳುವಾದ ಕಾರ್ಡ್ ಬೋರ್ಡ್‌ನಲ್ಲಿ ಸಣ್ಣ ರಂಧ್ರಮಾಡಿ, ಕನ್ನಡಿಯನ್ನು ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದಾಗಿದೆ ಅಥವಾ ಟೆಲಿಸ್ಕೋಪ್‌ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು. ಈ ವಿಧಾನಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯಲ್ಲೂ ನೇರವಾಗಿ ಗ್ರಹಣವನ್ನು ವೀಕ್ಷಿಸಬಾರದು ಎಂದರು. 

Saturday, June 20, 2020

ಅಕ್ರಮ ಮದ್ಯ ಮಾರಾಟ : ದಾಳಿ

ಭದ್ರಾವತಿ, ಜೂ. ೨೦: ವಾಸದ ಮನೆಯೊಂದರ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
ಹೊಸಮನೆ ಹನುಮಂತ ನಗರದ ನಿವಾಸಿ ಚಿನ್ನರಾಜು ಹಾಗೂ ಈತನ ಪತ್ನಿ ಮುನಿಯಮ್ಮ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಸ್ಥಳದಲ್ಲಿ  ೧೦೫೦ ರು. ಮೌಲ್ಯದ ೨ ಲೀ ೭೦೦ ಎಂ.ಎಲ್ ಪ್ರಮಾಣದ ೯೦ ಎಂ.ಎಲ್‌ನ ಹೇವರ್ಡ್ಸ್ ಚೀರ‍್ಸ್ ವಿಸ್ಕಿ ೩೦ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹುಟ್ಟುಹಬ್ಬ

ಭದ್ರಾವತಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ಹುಟ್ಟುಹಬ್ಬದ ಅಂಗವಾಗಿ ಬಿ.ಕೆ ಮೋಹನ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜೂ. ೨೦: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ನಗರಸಭೆ ಮಾಜಿ ಅಧ್ಯಕ್ಷ, ಬಿ.ಕೆ ಮೋಹನ್ ಹುಟ್ಟುಹಬ್ಬ ಶನಿವಾರ ನಗರದ ವಿವಿಧೆಡೆ ಆಚರಿಸಲಾಯಿತು. 
ಶಾಸಕರ ಗೃಹ ಕಛೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದರು. 
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ಬಿ.ಕೆ ಮೋಹನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಮುಖರಾದ ಯುವ ಮುಖಂಡ ಬಿ.ಎಸ್ ಗಣೇಶ್, ದಿಲ್‌ದಾರ್, ಅಮೀರ್‌ಜಾನ್, ಎಂ. ಶಿವಕುಮಾರ್, ವೆಂಕಟಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಾದಮ್ಮ ನಿಧನ

ಮಾದಮ್ಮ 
ಭದ್ರಾವತಿ, ಜೂ. ೨೦: ನಗರದ ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ಸಂಸ್ಥಾಪಕ ದಿವಂಗತ ಎಚ್. ಲೋಕೇಶಪ್ಪನವರ ಪತ್ನಿ ಮಾದಮ್ಮ(೮೦) ಶನಿವಾರ ಮಧ್ಯಾಹ್ನ ನಿಧನ ಹೊಂದಿದರು.
ಮೃತರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಸಹಕಾರಿ ಧುರೀಣ ಎಚ್.ಎಲ್ ಷಡಾಕ್ಷರಿ ಸೇರಿದಂತೆ ೩ ಗಂಡು, ೨ ಹೆಣ್ಣು ಮಕ್ಕಳು ಹಾಗೂ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೂ.೨೧ರಂದು ಮಧ್ಯಾಹ್ನ ೨ ಗಂಟೆಗೆ ಅರಕೆರೆ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ. ಇವರ ನಿಧನಕ್ಕೆ ನಗರದ ಹಲವು ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಯೋಗ ದಿನಾಚರಣೆ ಅಂಗವಾಗಿ ರಾಷ್ಟ್ರಮಟ್ಟದ ಇ-ಕ್ವಿಜ್

ಭದ್ರಾವತಿ, ಜೂ. ೨೦: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಅರ್ಥಶಾಸ್ತ್ರ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ಎನ್‌ಸಿಸಿ ಘಟಕದ ವತಿಯಿಂದ ರಾಷ್ಟ್ರಮಟ್ಟದ ಇ-ಕ್ವಿಜ್(ರಸ ಪ್ರಶ್ನೆ) ಸ್ಪರ್ಧೆ ಆಯೋಜಿಸಲಾಗಿದೆ. 
ಯೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಆನ್‌ಲೈನ್ ಮೂಲಕ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಶೇ.೫೦ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಇ-ಸರ್ಟಿಫಿಕೇಟ್ ಬಹುಮಾನ ವಿತರಿಸಲಾಗುವುದು. 
ಹೆಚ್ಚಿನ ಮಾಹಿತಿಗೆ ಎಂ.ಡಿ ವಿಶ್ವನಾಥ್, ಮೊ: ೯೯೮೬೮೧೭೩೨೪, ಡಾ. ಜಿ.ಆರ್ ರಾಜಶೇಖರ್, ಮೊ: ೯೬೧೧೪೨೨೧೨೨, ಡಾ. ಟಿ. ಪ್ರಸನ್ನ, ಮೊ: ೯೪೮೧೯೮೯೪೯೮ ಅಥವಾ ಪ್ರೊ. ಎನ್.ಯು ಹೆಗ್ಗಡೆ, ಮೊ: ೮೦೭೩೨೧೫೭೯೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಕೋರಿದ್ದಾರೆ. 


ನಗರದ ವಿವಿದೆಡೆ ಮಾಜಿ ಶಾಸಕ ಎಂಜೆ ಅಪ್ಪಾಜಿ ಹುಟ್ಟುಹಬ್ಬ

ಭದ್ರಾವತಿಯಲ್ಲಿ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಶನಿವಾರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬದ ಜೊತೆಗೆ ಮುಖಂಡ ಧರ್ಮರಾಜ್‌ರವರ ಹುಟ್ಟುಹಬ್ಬ ಸಹ ಆಚರಿಸಿ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜೂ. ೨೦ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೬೭ನೇ ಹುಟ್ಟುಹಬ್ಬ ವಿವಿಧ ಸಂಘಟನೆಗಳಿಂದ ಶನಿವಾರ ಆಚರಿಸಲಾಯಿತು.
      ಬೆಳಿಗ್ಗೆ ತಾಲ್ಲೂಕಿನ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬದ ಜೊತೆಗೆ ಮುಖಂಡ ಧರ್ಮರಾಜ್‌ರವರ ಹುಟ್ಟುಹಬ್ಬ ಸಹ ಆಚರಿಸಿ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡ ಬಿ.ಎಸ್ ನಾರಾಯಣಪ್ಪ ಸೇರಿದಂತೆ ಪ್ರವಾಸಿ ವಾಹನ ಚಾಲಕರು, ಮಾಲಿಕರು, ಖಾಸಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
     ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಂಘದ ವತಿಯಿಂದ ಎಂ.ಜೆ ಅಪ್ಪಾಜಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
      ನ್ಯೂಟೌನ್ ನಗರಸಭೆ ಶಾಖಾ ಕಚೇರಿ ಆವರಣದಲ್ಲಿರುವ ನಿರ್ಗತಿಕರ ಆಶ್ರಯ ತಂಗುದಾಣದಲ್ಲಿ ಮಾದಿಗ ಸಮಾಜ ಮತ್ತು ಕರ್ನಾಟಕ ಜನಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳಿಂದ ನಿರ್ಗತಿಕರಿಗೆ ಊಟ ಬಡಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಗಿತು.
ಎಂ.ಜೆ ಅಪ್ಪಾಜಿ, ಶಾರದ ಅಪ್ಪಾಜಿ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ಜನಸೈನ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮುಖಂಡ ಅಶೋಕ್‌ಕುಮಾರ್, ಐ.ವಿ ಸಂತೋಷ್‌ಕುಮಾರ್, ಕಬ್ಬಡಿ ಸುಬ್ಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಾಗರತ್ನಮ್ಮ ನಿಧನ

ನಾಗರತ್ನಮ್ಮ 
ಭದ್ರಾವತಿ, ಜೂ. ೨೦: ದಿವಂಗತ. ಕೆ.ವಿ ನಾಗಪ್ಪ ಶೆಟ್ಟರ್ ಪತ್ನಿ, ಹಳೇನಗರದ ನಿವಾಸಿ ನಾಗರತ್ನಮ್ಮ( ೯೪)  ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
ಮೃತರು ೩ ಹೆಣ್ಣು, ೫ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.