Sunday, June 21, 2020

ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ : ಜಾಗೃತಿ ಮೂಡಿಸಿದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ ಮಾಡಿ ಜಾಗೃತಿ ಮೂಡಿಸಿದರು. 
ಭದ್ರಾವತಿ, ಜೂ. ೨೧: ಪ್ರಸ್ತುತ ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆ ಸಾಧಿಸಿದ್ದರೂ ಸಹ ಗ್ರಹಣ ಕುರಿತು ಈಗಲೂ ಬಹುತೇಕ ಮಂದಿಯಲ್ಲಿ ಮೂಡನಂಬಿಕೆ ದೂರವಾಗಿಲ್ಲ. ಜನರಲ್ಲಿರುವ ಮೂಡನಂಬಿಕೆಯನ್ನು ದೂರಮಾಡಬೇಕೆಂದು ಹಲವಾರು ವರ್ಷಗಳಿಂದ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಗರದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಭಾನುವಾರ ಸಹ ಕಂಕಣ ಸೂರ್ಯ ಗ್ರಹಣದ ಸಮಯದಲ್ಲಿ ಉಪಹಾರ ಸೇವಿಸುವ ಮೂಲಕ ಗಮನ ಸೆಳೆದರು. 
ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ, ಪ್ರತಿ ಬಾರಿ ಗ್ರಹಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಕಾಶ ಕಾಯಗಳ ವೀಕ್ಷಣೆಗೆ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಅವಕಾಶ ಕಲ್ಪಿಸಿಕೊಡುವ ಜೊತೆಗೆ ಗ್ರಹಣ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಿದ್ದರೂಢನಗರದ ಶಂಕರ ಮಠದ ಬಳಿ ಇರುವ ನಿವಾಸದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಕೆಲವರು ಸೌರ ಕನ್ನಡಕ ಬಳಸಿ ಗ್ರಹಣ ವೀಕ್ಷಿಸಿದರು. 
 ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಸಾರ್ವಜನಿಕರಿಗೆ ಭಾನುವಾರ ತಮ್ಮ ನಿವಾಸದಲ್ಲಿ ಕಂಕಣ ಸೂರ್ಯ ಗ್ರಹಣವನ್ನು ಸೌರ ಕನ್ನಡಕ ಬಳಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟರು.  
ಪತ್ರಿಕೆಯೊಂದಿಗೆ ಮಾತನಾಡಿದ ಹರೋನಹಳ್ಳಿ ಸ್ವಾಮಿ, ಸಾರ್ವಜನಿಕರು ಸೂರ್ಯಗ್ರಹಣ, ಚಂದ್ರಗ್ರಹಣಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಗ್ರಹಣ ಎಂಬುದು ಆಕಾಶದಲ್ಲಿ ಪ್ರಕೃತಿ ಸಹಜವಾಗಿ ನಡೆಯುವ ನೆರಳು ಬೆಳಕಿನ ಆಟವಷ್ಟೆ. ಆದರೆ ಅನೇಕ ಟಿ.ವಿ ಮಾಧ್ಯಮಗಳು ಗ್ರಹಣಕ್ಕೆ ಸಂಬಂಧಿಸದ ಆಧಾರರಹಿತ ಮಾಹಿತಿಗಳೊಂದಿಗೆ ಮತ್ತಷ್ಟು ಭಯಭೀತರನ್ನಾಗಿಸುತ್ತಿವೆ. ಸಾರ್ವಜನಿಕರು ಎಚ್ಚರಗೊಂಡು ಮೂಡನಂಬಿಕೆಗಳಿಂದ ಹೊರಬರಬೇಕು. ಗ್ರಹಣ ವೀಕ್ಷಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪ್ರಕೃತಿಯ ಅದ್ಭುತ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಬೇಕೆಂದರು. 
ಯಾವುದೇ ಕಾರಣಕ್ಕೂ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು. ವೈಜ್ಞಾನಿಕವಾಗಿ ರೂಪಿಸಲಾದ ಸೌರ ಕನ್ನಡಕ ಬಳಸಿ ವೀಕ್ಷಿಸಬೇಕು ಅಥವಾ ತೆಳುವಾದ ಕಾರ್ಡ್ ಬೋರ್ಡ್‌ನಲ್ಲಿ ಸಣ್ಣ ರಂಧ್ರಮಾಡಿ, ಕನ್ನಡಿಯನ್ನು ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದಾಗಿದೆ ಅಥವಾ ಟೆಲಿಸ್ಕೋಪ್‌ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು. ಈ ವಿಧಾನಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯಲ್ಲೂ ನೇರವಾಗಿ ಗ್ರಹಣವನ್ನು ವೀಕ್ಷಿಸಬಾರದು ಎಂದರು. 

No comments:

Post a Comment